Advertisement

ಇನ್ನು ತ್ಯಾಜ್ಯ ವಿಂಗಡಿಸದಿದ್ದರೆ ಮನೆ ಕಸ ಸಂಗ್ರಹವೇ ಸ್ಥಗಿತ !

09:30 PM May 20, 2021 | Team Udayavani |

ಮಹಾನಗರ: ಪಚ್ಚನಾಡಿ ತ್ಯಾಜ್ಯ ದುರಂತದಿಂದ ನ್ಯಾಯಾಲಯದ ಛಾಟಿಗೆ ಗುರಿಯಾಗಿದ್ದ ಮಂಗಳೂರು ಮಹಾನಗರ ಪಾಲಿಕೆ ಇದೀಗ ದಿಟ್ಟ ನಿರ್ಧಾರ ಕೈಗೊಂಡಿದ್ದು, ಹಸಿ ಕಸ ಮತ್ತು ಒಣ ಕಸವನ್ನು ಸಮರ್ಪಕವಾಗಿ ವಿಂಗಡನೆ ಮಾಡದಿದ್ದರೆ ಆ ಮನೆಗಳಿಂದ ಕಸ ಸಂಗ್ರಹ ಮಾಡದಿರಲು ನಿರ್ಧರಿಸಲಾಗಿದೆ.

Advertisement

ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿತ್ತಾದರೂ ಈವರೆಗೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಪಚ್ಚನಾಡಿ ತ್ಯಾಜ್ಯ ದುರಂತದ ಬಳಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದು, ಈ ನಿಯಮ ಪಾಲನೆ ಮಾಡಲಾಗುತ್ತಿದೆಯೇ ಎಂಬುದರ ಬಗ್ಗೆ ನಿಗಾ ಇರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತ್ಯಾಜ್ಯ ವಿಂಗಡಣೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಾಲಿಕೆ ತೀರ್ಮಾನಿಸಿದೆ.

ಇನ್ನು ಮುಂದೆ ಮನೆಗಳಲ್ಲಿ ಕಸ ವಿಂಗಡಣೆ ಮಾಡುವಾಗ ಹಸಿ, ಒಣ ಕಸ, ಸ್ಯಾನಿಟರಿ ತ್ಯಾಜ್ಯ, ಕೋವಿಡ್‌ ತ್ಯಾಜ್ಯ ಎಂದು ವಿಭಾಗ ಮಾಡಬೇಕಾಗುತ್ತದೆ. ಹಸಿ ಕಸಗಳನ್ನು ಶುಕ್ರವಾರ ಹೊರತುಪಡಿಸಿ ಉಳಿದ ದಿನ ನೀಡಲು ಅವಕಾಶ ಇದ್ದು, ಪ್ಲಾಸ್ಟಿಕ್‌ ಚೀಲದಲ್ಲಿ ನೀಡಬಾರದು. ಬದಲಿಗೆ ಕಸದ ಬುಟ್ಟಿಯಲ್ಲಿಯೇ ನೀಡಬೇಕು. ಶುಕ್ರವಾರ ಮಾತ್ರ ಒಣ ಕಸವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ನೀಡಲು ಅವಕಾಶ ಇದೆ. ಸ್ಯಾನಿಟರಿ ತ್ಯಾಜ್ಯ, ಕೋವಿಡ್‌ ತ್ಯಾಜ್ಯವನ್ನು ಪ್ರತ್ಯೇಕ ನಿಯಮದಂತೆ ಪ್ರತೀ ದಿನ ನೀಡಲು ಅವಕಾಶ ನೀಡಲಾಗಿದೆ.

ತರಕಾರಿ, ತರಕಾರಿ ಸಿಪ್ಪೆ, ಹಣ್ಣು-ಹಂಪಲು, ಕೊಳೆತ ಪದಾರ್ಥ, ಮೊಟ್ಟೆಯ ತ್ಯಾಜ್ಯ, ಮಾಂಸ ತ್ಯಾಜ್ಯ, ಮೀನಿನ ತ್ಯಾಜ್ಯ ಹಸಿ ಕಸವಾದರೆ, ಪೇಪರ್‌, ಗ್ಲಾಸ್‌, ಪ್ಲಾಸ್ಟಿಕ್‌, ಕಾರ್ಡ್‌ಬೋರ್ಡ್‌, ರಬ್ಬರ್‌, ಬಟ್ಟೆ, ಲೋಹ, ಆಹಾರ ಪ್ಯಾಕ್‌ ಮಾಡುವಂತಹ ವಸ್ತುಗಳು ಒಣ ಕಸದ ಪಟ್ಟಿಗೆ ಸೇರುತ್ತದೆ. ಅದೇರೀತಿ, ಸ್ಯಾನಿಟರಿ ತ್ಯಾಜ್ಯದಲ್ಲಿ ಮಕ್ಕಳು, ವಯಸ್ಕರ ಡೈಪರ್‌, ಕೂದಲು, ಉಗುರು, ಕಾಂಡಮ್‌ ಮುಂತಾದವು ಸೇರಿವೆ. ಇವುಗಳನ್ನು ಮಾಮೂಲಿ ಕಸದ ಜತೆ ವಿಂಗಡಣೆ ಮಾಡದೆ ಪ್ರತ್ಯೇಕವಾಗಿ ನೀಡಬೇಕು.

ಮಾಸ್ಕ್, ಕೋವಿಡ್‌ ತ್ಯಾಜ್ಯಕ್ಕೆ ಪ್ರತ್ಯೇಕ ನಿಯಮ ;

Advertisement

ಮಾಸ್ಕ್, ಗ್ಲೌಸ್‌, ಫೇಸ್‌ಶೀಲ್ಡ್‌, ಪಿಪಿಇ ಕಿಟ್‌ ಇನ್ನಿತರ ಕೋವಿಡ್‌ ಸಂಬಂಧಿತ ಬಯೋಮೆಡಿಕಲ್‌ ತ್ಯಾಜ್ಯವನ್ನು ಬೇರ್ಪಡಿಸಿ ಹಳದಿ ಬಣ್ಣದ ಎರಡು ಚದರ ಇರುವ ಚೀಲದಲ್ಲಿ ತುಂಬಿಸಿ ವಿಲೇವಾರಿ ಮಾಡಬೇಕು. ಚೀಲದ ಮೇಲೆ “ಕೋವಿಡ್‌ ತ್ಯಾಜ್ಯ’ ಎಂದು ಕಡ್ಡಾಯವಾಗಿ  ಬರೆದಿರಬೇಕು. ಕೋವಿಡ್‌ ತ್ಯಾಜ್ಯವನ್ನು ಬರೀ ಕೈಯಿಂದ ಮುಟ್ಟಬಾರದು. ಇತರ ಕಸದ ಜತೆ ಬೆರೆಸಬಾರದು. ಕೋವಿಡ್‌ ತ್ಯಾಜ್ಯವನ್ನು 48 ಗಂಟೆಗೂ ಅಧಿಕ ಕಾಲ ಸಂಗ್ರಹಿಸಿಡಬಾರದು. ವಿಲೇವಾರಿ ಮಾಡಲು ತಡವಾದಲ್ಲಿ ಚೀಲದ ಮೇಲೆ ಶೇ.1ರಷ್ಟು  ಸೋಡಿಯಂ ಹೈಪೋ ಕ್ಲೋರೈಡ್‌ ದ್ರಾವಣವನ್ನು ಸಿಂಪಡಿಸಬೇಕು. ಕೋವಿಡ್‌ ಅಲ್ಲದ ವ್ಯಕ್ತಿಗಳು ಬಳಸಿದ ಮಾಸ್ಕ್ಗಳನ್ನು ಕತ್ತರಿಸಿ, ಪೇಪರ್‌ ಕವರ್‌ನಲ್ಲಿ ಸಂಗ್ರಹಿಸಿ 72 ಗಂಟೆಗಳ ಅನಂತರ ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು.

ರಸ್ತೆ ಬದಿ ಕಸ ಎಸೆದರೆ 10,000 ರೂ. ದಂಡ ! :

“ಇತ್ತೀಚಿನ ದಿನಗಳಲ್ಲಿ ನಗರದ ರಸ್ತೆ ಬದಿಗಳಲ್ಲಿ ಕಸ ಎಸೆದಿರುವುದು ಕಾಣುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಮನಪಾ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ದುಬಾರಿ ದಂಡ ಪ್ರಯೋಗಕ್ಕೆ ಮುಂದಾಗಿದೆ. ಒಂದು ವೇಳೆ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಕಸ ಎಸೆಯುವುದು/ಹಾಕುವುದು ಕಂಡುಬಂದಲ್ಲಿ ಅವರ ಮೇಲೆ 10,000 ರೂ.ಗಳ ವರೆಗೆ ಭಾರೀ ದಂಡ ವಿಧಿಸ ಲಾಗುವುದು. ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರು ತಿಳಿಸಿದ್ದಾರೆ.

ಮನಪಾ ವ್ಯಾಪ್ತಿಯ ಮನೆಗಳು, ವಸತಿ ಸಮುಚ್ಚಯಗಳಿಂದ ಉತ್ಪತ್ತಿಯಾಗುವ ತಾಜ್ಯಗಳನ್ನು ಮೂಲದಲ್ಲಿಯೇ ಹಸಿ, ಒಣ ಕಸವನ್ನಾಗಿ ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿಗೊಳಿಸುವುದು ಕಡ್ಡಾಯ. ಈ ಕುರಿತಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ನಿಗಾ ಇರಿಸಿದೆ. ಬೇರ್ಪಡಿಸದಿರುವ ಕಸವನ್ನು ಸಂಗ್ರಹಿಸದೆ ತಿರಸ್ಕರಿಸಲು ತೀರ್ಮಾನಿಸಲಾಗಿದೆ. ಪ್ರತೀ ಶುಕ್ರವಾರ ಒಣ, ಉಳಿದ ಎಲ್ಲ ದಿನಗಳಲ್ಲಿ ಹಸಿ ಕಸವನ್ನು ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ನೀಡಬೇಕು. ನಿಯಮ ಉಲ್ಲಂಘಿಸಿದ್ದಲ್ಲಿ ದಂಡ ವಿಧಿಸಲಾಗುವುದು.  – ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

 

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next