Advertisement

ಗಂಜಾಂ ನಿಮಿಷಾಂಬ ದೇವಿ 

03:55 AM Jan 21, 2017 | |

ಶ್ರೀರಂಗಪಟ್ಟಣದಿಂದ ಸುಮಾರು 3 ಕಿ.ಮೀ. ಅಂತರದಲ್ಲಿರುವ ಒಂದು ಪಾವನ ಪುಣ್ಯ ಕ್ಷೇತ್ರವೇ ಗಂಜಾಂ. ಹಚ್ಚ ಹಸಿರು ಪ್ರಕೃತಿ ಸೌಂದರ್ಯದ ಮಧ್ಯೆ ಕಾವೇರಿ ನದಿಯ ತಟದಲ್ಲಿ ಜಗನ್ಮಾತೆ ಪಾರ್ವತಿಯ ಅವತಾರವಾದ ನಿಮಿಷಾಂಬಾದೇವಿ ನೆಲೆಸಿದ್ದಾಳೆ. ಇವಳನ್ನು ನಿಮಿಷಾಂಬಿಕೆ ಎಂತಲೂ ಕರೆಯುತ್ತಾರೆ. ಅತ್ಯಂತ ಮಹಿಮೆಯುಳ್ಳ  ಪ್ರಭಾವಶಾಲಿ ದೇವಿ ಇವಳಾಗಿದ್ದು ಶ್ರೀಚಕ್ರ ಸಹಿತ ಈ ಕ್ಷೇತ್ರದಲ್ಲಿ ನೆಲೆಸಿದ್ದಾಳೆ. ಆ ಕಾರಣದಿಂದ ಇದೊಂದು ವಿಶೇಷ ಜಾಗ್ರತ ಸ್ಥಳವಾಗಿದ್ದು, ಈ ದೇವಿಯನ್ನು ಅತ್ಯಂತ  ಭಕ್ತಿ ಹಾಗೂ ಶ್ರದ್ಧೆಯಿಂದ ನೆನೆದರೆ ಶೀಘ್ರದಲ್ಲೇ ವರದಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

Advertisement

ಸುಮಾರು 300 ರಿಂದ 400 ವರ್ಷಗಳ ಹಿಂದೆ ಮೈಸೂರಿನ ಅರಸರಾದ ಮುಮ್ಮಡಿ ಕೃಷ್ಣರಾಜ್‌ ಒಡೆಯರ್‌ ಕಾಲದಲ್ಲಿ ಈ ದೇವಸ್ಥಾನದ ನಿರ್ಮಾಣವಾಯಿತು ಎಂದು ಹೇಳಲಾಗುತ್ತಿದೆ. ನಮ್ಮ ನಾಡಿನ ಜೀವನದಿ ಕಾವೇರಿಯ ತಟದಲ್ಲಿ ನಿರ್ಮಿಸಲಾದ ಅತ್ಯಂತ ಸುಂದರವಾದ ದೇವಸ್ಥಾನ ಇದಾಗಿದ್ದು ಸಾಕಷ್ಟು ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.

ಆಗ ಮೋಕ್ತ ರೀತ್ಯಾ ನಿರ್ಮಿಸಲಾದ ಈ ದೇವಸ್ಥಾನದ ಪ್ರವೇಶದ್ವಾರ ಸುಂದರವಾದ ರಾಜ ಗೋಪುರವನ್ನು ಹೊಂದಿದೆ. ಪ್ರವೇಶದ್ವಾರದ ಬಲಭಾಗದ ಗೋಡೆಯ ಮೇಲೆ  ಲಕ್ಷಿ$¾àಯ ವಿಗ್ರಹ, ಎಡಭಾಗದ ಗೋಡೆಯ ಮೇಲೆ ಸರಸ್ವತಿ ದೇವಿಯ ವಿಗ್ರಹಗಳನ್ನು ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಒಳಗೆ ಪ್ರವೇಶಿಸಿದಾಗ ದೊಡ್ಡದಾದ ಆವರಣ,  ಮಧ್ಯಭಾಗದಲ್ಲಿ ಸುಂದರವಾದ ನಿಮಿಷಾಂಬಾದೇವಿ ದೇವಸ್ಥಾನ. ಒಳ ಪ್ರವೇಶಿಸಿದಂತೆ ಗರ್ಭಗುಡಿಯಲ್ಲಿ ಜಗನ್ಮಾತೆ ನಿಮಿಷಾಂಬಾ ಶ್ರೀಚಕ್ರದೊಂದಿಗೆ ನೆಲೆಸಿದ್ದಾಳೆ.  ಇದೇ ಆವರಣದಲ್ಲಿ ಸೂರ್ಯದೇವ, ಗಣಪತಿ, ಲಕ್ಷಿ$¾àನಾರಾಯಣ ಸ್ವಾಮಿ ಹಾಗೂ ಶಿವ ಇಲ್ಲಿ ಮುಕ್ತಿಕೇಶ್ವರಸ್ವಾಮಿಯಾಗಿ ನೆಲೆಸಿರುವ ಎಲ್ಲ ದೇವರುಗಳ ಸನ್ನಿಧಾನಗಳಿವೆ.

 ಸ್ಥಳ ಪುರಾಣ 
ಬಹಳ ಹಿಂದೆ ಸಮನಸ್ಕ ಎಂಬಾತನು ಲೋಕ ಕಲ್ಯಾಣಕ್ಕಾಗಿ ಶಿವನ ಆಜ್ಞೆಯಂತೆ ಪೌಂಡರೀಕ ಎಂಬ ಯಾಗವನ್ನು ಹಮ್ಮಿಕೊಂಡಿದ್ದನು. ಅಂದಿನ ಕಾಲದಲ್ಲಿ ರಾಕ್ಷಸರ ಉಪಟಳ ಬಹಳವಾಗಿದ್ದು ಯಾಗಕ್ಕೆ ಯಾವುದೇ ವಿಘ್ನ ಬರದಂತೆ ರಕ್ಷಿಸಲು ಋಷಿಗಳಲ್ಲೇ ಅತ್ಯಂತ ಉಗ್ರಸ್ವರೂಪನೂ, ವೀರನು ಆದ ಮುಕ್ತಕ ಋಷಿಯನ್ನು ಯಾಗದ ಉಸ್ತುವಾರಿಗಾಗಿ ಸಮನಸ್ಕ ನೇಮಿಸಿದನು. ಈತನು ಯಾಗ ಮಾಡುತ್ತಿರುವುದನ್ನು ನಾರದ ಮಹರ್ಷಿಗಳಿಂದ ಅರಿತ ಇಬ್ಬರು ರಾಕ್ಷಸ ಸಹೋದರರಾದ ಜಾನು ಮತ್ತು ಸುಮಂಡಲರು ತಮ್ಮ ಗುರುಗಳಾದ ಶುಕ್ರಾಚಾರ್ಯರ ಬಳಿ ಹೋಗಿ ಈ ಯಾಗವನ್ನು ನಾಶಪಡಿಸುವ ತಂತ್ರಗಳನ್ನು ಸಮಾಲೋಚಿಸಿ, ತಮ್ಮ ಮಂತ್ರಿಗಳೊಂದಿಗೆ ಭಾರೀ ಸೈನ್ಯವನ್ನು ಯಾಗ ನಡೆದ ಸ್ಥಳಕ್ಕೆ ಕಳುಹಿಸಿಕೊಟ್ಟರು. ಆಗ ಮುಕ್ತಕ ಋಷಿಗಳಿಗೂ ಮತ್ತು ರಾಕ್ಷಸರಿಗೂ ಭಾರೀ  ಯುದ್ಧವೇ ನಡೆದು ರಾಕ್ಷಸರೆಲ್ಲಾ ನಾಶಹೊಂದಿದರು. ಇದನ್ನರಿತ ಆ ಇಬ್ಬರು ಸಹೋದರರು ತಾವೇ ಯುದ್ಧಕ್ಕೆ ಬರಲು ನಿರ್ಧರಿಸಿ ಅಪಾರ ಸೈನ್ಯದೊಂದಿಗೆ ಯಾಗ ನಡೆದ ಸ್ಥಳಕ್ಕೆ ಬಂದರು. ತಾವು ಯಾವುದೇ ಆಯುಧದಿಂದ ಸಾಯಬಾರದು ಎಂದು ಬ್ರಹ್ಮದೇವನಿಂದ ವರ ಪಡೆದಿದ್ದ ಈ ಇಬ್ಬರು ರಾಕ್ಷಸ ಸಹೋದರರ ಮೇಲೆ ಮುಕ್ತಕ ಋಷಿಯ ಯಾವುದೇ ಆಯುಧ ಉಪಯೋಗಕ್ಕೆ ಬಾರದೇ ಸೋಲುವ ಸ್ಥಿತಿ ಬಂದಾಗ ಈ ಋಷಿಗಳು ಜಗನ್ಮಾತೆ ಪಾರ್ವತಿಯನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಪ್ರಾರ್ಥಿಸತೊಡಗಿದರು. ಇವರ ಪ್ರಾರ್ಥನೆಗೆ ಪ್ರಸನ್ನಳಾದ ಪಾರ್ವತಿ ಅಲ್ಲಿ ನಡೆಯುತ್ತಿರುವ ಯಜ್ಞಕುಂಡದಿಂದಲೇ ಉದ್ಭವವಾದಳು. ಈ ಇಬ್ಬರು ರಾಕ್ಷಸರ ವಿವರವನ್ನು  ಅರಿತಿದ್ದ ದೇವಿ ತನ್ನ ತೇಜೋಮಯವಾದ ಕಣ್ಣುಗಳಿಂದಲೇ ಅವರನ್ನು ದಿಟ್ಟಿಸಿ ನೋಡತೊಡಗಿದಳು. ಆ ದೃಷ್ಟಿ ಎಷ್ಟೊಂದು ಭಯಂಕರವಾಗಿತ್ತೆಂದರೆ ನಿಮಿಷ ಮಾತ್ರದಲ್ಲಿಯೇ ಆ ರಾಕ್ಷಸರಿಬ್ಬರು ಭಸ್ಮವಾಗಿ ಹೋದರು. ಆ ಕಾರಣದಿಂದ ಈ ದೇವಿಯನ್ನು ನಿಮಿಷಾಂಬೆ ಅಥವಾ ನಿಮಿಷಾಂಬಿಕೆ ಎಂತೆಲ್ಲಾ ಕರೆಯಲಾಗುತ್ತದೆ.

ಶ್ರೀಚಕ್ರದ ಮೇಲೆ ನೆಲೆಸಿರುವ ಈ ನಿಮಿಷಾಂಬಾ ದೇವಿಯನ್ನು ಯಾರು ಭಕ್ತಿಯಿಂದ, ಶ್ರದ್ಧೆಯಿಂದ ಪ್ರಾರ್ಥಿಸುತ್ತಾರೋ ಅವರ ಕಷ್ಟಗಳೆಲ್ಲವೂ ನಿಮಿಷಾರ್ಧದಲ್ಲಿ ಕಳೆದುಹೋಗುತ್ತವೆ ಎಂಬ ನಂಬಿಕೆ ಭಕ್ತರದು. ಇನ್ನು ಮದುವೆಯಾಗದವರಿಗೆ ಕಂಕಣಭಾಗ್ಯ, ಮಕ್ಕಳಾಗದವರಿಗೆ ಸಂತಾನಭಾಗ್ಯ, ಆರ್ಥಿಕ ತೊಂದರೆಯಲ್ಲಿರುವವರಿಗೆ ದವಸ ಧಾನ್ಯ ಭಾಗ್ಯ, ಅನಾರೋಗ್ಯದಿಂದ ಕೂಡಿರುವವರಿಗೆ ಆರೋಗ್ಯಭಾಗ್ಯ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಎಲ್ಲವನ್ನೂ ಕರುಣಿಸುತ್ತಾಳೆ ಈ ನಿಮಿಷಾಂಬಾ ದೇವಿ ಎನ್ನುವ ನಂಬಿಕೆ ಇದೆ.   ಇಲ್ಲಿಗೆ ಬರುವ ಭಕ್ತಾದಿಗಳು ದೇವಿ ದರ್ಶನಕ್ಕೂ ಮುಂಚೆ ಕಾವೇರಿ ನದಿಯಲ್ಲಿ ಮಿಂದು ನಂತರ ದೇವಸ್ಥಾನಕ್ಕೆ ಬರುವುದೇ ವಾಡಿಕೆ. ಇನ್ನು ಮಾಘ ಪೂರ್ಣಿಮೆ ಇಲ್ಲಿ ವಿಶೇಷದಿನ. ಆ ದಿನ ದೇವಿ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತದೆ. ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗೋಸ್ಕರ ನಿಂಬೆಹಣ್ಣಿನ ತಿರುಳಲ್ಲಿ ದೀಪ ಬೆಳಗಿಸಿ ದೇವಿಗೆ ಪ್ರಾರ್ಥಿಸುವುದೇ ಇಲ್ಲಿನ ವಾಡಿಕೆ. ಈ ದೇವಸ್ಥಾನದಲ್ಲಿ ದೀಪ ಹಚ್ಚಿದರೆ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಭಕ್ತರದು. ಆ ಕಾರಣದಿಂದ ಇವಳಿಗೆ ಇಷ್ಟವಾದ ನಿಂಬೆಹಣ್ಣಿನಿಂದ ಆರತಿ ಮಾಡಲಾಗುತ್ತದೆ. ನಿಂಬೆ ಹಾರವೂ ಕೂಡ ನಿಮಿಷಾಂಬೆಗೆ ಇಷ್ಟ. ಆ ಕಾರಣದಿಂದ ದೇವಸ್ಥಾನದ ಹೊರಗಡೆ ನಿಂಬಿಹಣ್ಣಿನ ಹಾರಗಳೂ ದೊರೆಯುತ್ತವೆ. 

Advertisement

ಮೈಸೂರು ಹಾಗೂ ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಸಾಕಷ್ಟು ಬಸ್ಸುಗಳ ಸೌಕರ್ಯವಿದ್ದು ಅಲ್ಲಿಂದ ಬಾಡಿಗೆ ಕಾರು ಅಥವಾ ರಿಕ್ಷಾಗಳ ಮೂಲಕ ಈ ದೇವಸ್ಥಾನಕ್ಕೆ ತೆರಳಬಹುದು. 

ಆಶಾ ಎಸ್‌. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next