Advertisement

Gangavathi: ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿ‌

06:18 PM Dec 18, 2023 | Team Udayavani |

ಗಂಗಾವತಿ: ವಿಶ್ವದ ಬಹುತೇಕ ದೇಶಗಳು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿವೆ. ಪ್ರವಾಸೋದ್ಯಮ ಬದಲಾಗುತ್ತಿರುವ
ಕ್ಷೇತ್ರವಾಗಿದ್ದು, ಇದಕ್ಕೆ ಭಾರತೀಯ ಪ್ರವಾಸೋದ್ಯಮ ಹೊಂದಿಕೊಂಡರೆ ಮಾತ್ರ ಆರ್ಥಿಕ ಲಾಭವಾಗುತ್ತದೆ. ಕಿಷ್ಕಿಂಧಾ, ಗಂಗಾವತಿ ಪ್ರವಾಸೋದ್ಯಮದಿಂದ ನೇರ ಮತ್ತು ಪರೋಕ್ಷ ಉದ್ಯೋಗ ಲಭಿಸಿ ಆರ್ಥಿಕ ಸದೃಢತೆ ಸಾಧ್ಯವಾಗುತ್ತದೆ ಎಂದು ಪ್ರೊ| ಎಸ್‌. ಕರಿಗೂಳಿ ಹೇಳಿದರು.

Advertisement

ಅವರು ನಗರದ ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಮಿತಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪ್ರವಾಸೋದ್ಯಮ ಮತ್ತು ಭವಿಷ್ಯದ ಗಂಗಾವತಿ ಎನ್ನುವ ವಿಷಯ ಕುರಿತು ಮಾತನಾಡಿದರು.

ಗಂಗಾವತಿ ಐತಿಹಾಸಿಕವಾದ ಹಲವು ಪ್ರವಾಸಿ ತಾಣಗಳನ್ನು ಹೊಂದಿದ್ದು, ಇವುಗಳು ರಾಮಾಯಣ, ಮಹಾಭಾರತ ಸೇರಿದಂತೆ
ಭಾರತದ ಪವಿತ್ರ ಗ್ರಂಥಗಳಲ್ಲಿ ಪ್ರಸ್ತಾಪವಾಗಿರುವ ಸ್ಥಳಗಳಾಗಿವೆ. ಆದ್ದರಿಂದ ವಿಶ್ವದ ಪ್ರವಾಸಿ ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಂಡಿರುವುದರಿಂದ ಹಲವು ದಶಕಗಳಿಂದ ಇಲ್ಲಿಗೆ ದೇಶ ವಿದೇಶದ ಪ್ರವಾಸಿಗರು ಆಗಮಿಸುತ್ತಿದ್ದು, ಇದರಿಂದ ನೇರ, ಪರೋಕ್ಷ ಉದ್ಯೋಗ ಸೃಷ್ಟಿಯಾಗಿ ಆರ್ಥಿಕ ಶಕ್ತಿ ಬರುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಆನೆಗೊಂದಿ ಭಾಗ ಸೇರಿದಂತೆ ಕಿಷ್ಕಿಂಧಾ ಅಂಜನಾದ್ರಿ, ಹೇಮಗುಡ್ಡ, ಹಳೆ ಶಿಲಾಯುಗದ ಮೊರ್ಯರ ಬೆಟ್ಟ, ಕುಮ್ಮಟದುರ್ಗ ಸ್ಥಳಗಳನ್ನು ಅಭಿವೃದ್ಧಿ ಮಾಡುವ ಮೂಲಕ ವಿಶ್ವಕ್ಕೆ ಇನ್ನಷ್ಟು ಮಾಹಿತಿ ನೀಡಬೇಕಿದೆ.

ಪ್ರಾಕೃತಿಕ ಆನೆಗೊಂದಿ, ಸಾಣಾಪುರ ಭಾಗದಲ್ಲಿರುವ ಪ್ರಾಕೃತಿಕ ಬೆಟ್ಟಗಳ ಸೌಂದರ್ಯವನ್ನು ಪ್ರಚಾರ ಪಡಿಸಬೇಕಿದೆ. ತುಂಗಭದ್ರಾ ನದಿಯಲ್ಲಿ ನೈಸರ್ಗಿಕವಾಗಿ ಸೃಷ್ಟಿಯಾಗಿರುವ ಫಾಲ್ಸ್‌ಗಳ ಕುರಿತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಪ್ರಚಾರ ನೀಡಬೇಕಿದೆ ಎಂದರು.

ಪ್ರವಾಸೋದ್ಯಮ ಬೆಳವಣಿಗೆ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ ಒಳಗೊಂಡಂತೆ ರೆಸಾರ್ಟ್‌ಗಳನ್ನು ಆಧುನಿಕವಾಗಿ ಸಿದ್ಧಪಡಿಸಬೇಕಿದೆ. ಅಕ್ರಮವಾಗಿ ನಡೆಯುವ ರೆಸಾರ್ಟ್‌, ಹೋಟೆಲ್‌ ಉದ್ಯಮಗಳನ್ನು ಕಾನೂನು ಬದ್ಧಗೊಳಿಸಿ
ಅಕ್ರಮ ಚಟುವಟಿಕೆ ತಡೆಯಬೇಕಿದೆ. ಇದರಿಂದ ಕಿಷ್ಕಿಂಧಾ, ಅಂಜನಾದ್ರಿ ಸುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ಸಾಧ್ಯವಾಗುತ್ತದೆ.

Advertisement

ಪ್ರವಾಸೋದ್ಯಮ ಕ್ಷೇತ್ರಗಳಿಗೆ ರಸ್ತೆ, ರೈಲ್ವೆ,ಸೇರಿದಂತೆ ವಿಮಾನ ಸಂಪರ್ಕ ಜೋಡಿಸಬೇಕಿದೆ. ಈ ಹಿಂದೆ ಅಧಿಕ ಭತ್ತವನ್ನು ಬೆಳೆಯುವ ಮೂಲಕ ಭತ್ತದ ಕಣಜ ಎಂದು ಗಂಗಾವತಿಯನ್ನು ಗುರುತಿಸಲಾಗುತ್ತಿತ್ತು. ಜಾಗತೀಕರಣದ ಪರಿಣಾಮ ಎಲ್ಲೆಡೆ ಭತ್ತ ಬೆಳೆಯಲಾಗುತ್ತಿದೆ. ಆದ್ದರಿಂದ ಗಂಗಾವತಿ ಸುತ್ತಮುತ್ತ ಇದ್ದ 180ಕ್ಕೂ ಹೆಚ್ಚು ರೈಸ್‌ ಮಿಲ್‌ಗ‌ಳು ಮುಚ್ಚುವ ಸ್ಥಿತಿಯಲ್ಲಿದ್ದು, ಮಿಲ್‌ ಗಳನ್ನು ನಂಬಿಕೊಂಡಿದ್ದ ಕಾರ್ಮಿಕ ವಲಯಕ್ಕೆ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.

ಗಂಗಾವತಿ ರೈಲ್ವೆ ನಿಲ್ದಾಣದಿಂದ ಪ್ರವಾಸಿ ತಾಣಗಳ ಪರಿಚಯದ ಫಲಕ ಅಳವಡಿಸಬೇಕು. ಈಗಾಗಲೇ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಆನೆಗೊಂದಿ ಭಾಗವನ್ನು ಜಗತ್ತಿಗೆ ಇನ್ನಷ್ಟು ಪರಿಚಯಿಸುವ ಜೊತೆಗೆ 3 ಸಾವಿರ ವರ್ಷಗಳ ಹಿಂದಿನ ಶಿಲಾಯುಗದ ಜನರ ಮನೆ ಮತ್ತು ಸ್ಮಾರಕಗಳಿರುವ ಹಿರೇಬೆಣಕಲ್‌ ಮೊರ್ಯರ ಬೆಟ್ಟ ವಿಶ್ವ ಪಾರಂಪರಿಕ ಪಟ್ಟಿಗೆ ಸೇರುವ ಸಾಧ್ಯತೆಯಿದೆ. ಇಲ್ಲಿಗೆ ಹೋಗಲು ರಸ್ತೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವ ವಾತಾವರಣ ನಿರ್ಮಿಸಬೇಕು ಎಂದರು.

ಶಾಸಕ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪ್ರವಾಸೋದ್ಯಮಕ್ಕೆ ಗಂಗಾವತಿ ಕ್ಷೇತ್ರದಲ್ಲಿ ವಿಫಲ ಅವಕಾಶಗಳಿವೆ. ಈಗಾಗಲೇ ಈ ಹಿಂದಿನ ಸರಕಾರ ಅಂಜನಾದ್ರಿ ಬೆಟ್ಟಕ್ಕೆ 120 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ರಸ್ತೆ, ಕುಡಿಯುವ ನೀರು ಸೇರಿ ಮೂಲಸೌಕರ್ಯಗಳಿಗೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆಯುವ ಮೂಲಕ ಹಾಲಿ ಶಾಸಕರು ಕಾರ್ಯ ಮಾಡಬೇಕಿದೆ ಎಂದರು.

ಡಿವೈಎಸ್ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್‌ ಮಾತನಾಡಿ, ಪ್ರವಾಸೋದ್ಯಮದ ಮೂಲಕ ವಿಶ್ವದ ಅನೇಕ ದೇಶಗಳು ಆರ್ಥಿಕ ಸದೃಢತೆ ಹೊಂದಿವೆ. ನಮ್ಮ ಭಾಗದಲ್ಲಿಯೂ ಹೋಟೆಲ್‌ ಸೇರಿದಂತೆ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕೆಂದರು.

ನ್ಯಾಯವಾದಿ ನಾಗರಾಜ ಗುತ್ತೇದಾರ ಮತದಾನದ ಮಹತ್ವ ಕುರಿತು ಮಾತನಾಡಿದರು. ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ್‌ ಮೇಗಳಮನಿ, ದಲಿತ ಮುಖಂಡ ಹಂಪೇಶ ಅರಿಗೋಲು, ನಗರಸಭೆ ಸದಸ್ಯ ನವೀನಕುಮಾರ, ಕರವೇ ರಾಜ್ಯಾಧ್ಯಕ್ಷ ಅರ್ಜುನ ನಾಯಕ, ಈರಣ್ಣ ಬಡಿಗೇರ, ಡಾ| ಶಿವಕುಮಾರ್‌ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಸ್ವಾಭಿಮಾನ ಕರವೇ ಅಧ್ಯಕ್ಷ ರಾಜೇಶರೆಡ್ಡಿ ಸೇರಿದಂತೆ ಸಮಿತಿ ಪದಾಧಿಕಾರಿಗಳಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪಡೆದ ವಿಭೂತಿ ಗುಂಡಪ್ಪ, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ. ನಿಂಗಜ್ಜ, ಪೊಲೀಸ್‌ ಅಧಿಕಾರಿ ಶಾರದಮ್ಮ, ಮೈಲಾರಪ್ಪ, ಬಸವರಾಜ್‌, ರಂಗಭೂಮಿ ಕಲಾವಿದರಾದ ಜೀ. ವಂದನಾ, ಪತ್ರಕರ್ತ ನಾಗರಾಜ ಇಂಗಳಿ, ಬಿ. ಅಶೋಕ ಸೇರಿದಂತೆ ಹಲವು ಸಾಧಕರನ್ನುಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next