Advertisement

Ganesh Chaturthi: ದೊಡಬಳ್ಳಾಪುರ ಗಣೇಶೋತ್ಸವಕ್ಕೆ 8 ದಶಕಗಳ ಇತಿಹಾಸ

11:06 AM Sep 18, 2023 | Team Udayavani |

ದೊಡ್ಡಬಳ್ಳಾಪುರ: ಸಾರ್ವಜನಿಕ ಗಣೇಶೋತ್ಸವ ಇಂದು ಸಾಮಾನ್ಯವಾಗಿದ್ದು, ಪೇಟೆ, ಗಲ್ಲಿಗಳಲ್ಲಿ ಗಣೇಶನ ಮೂರ್ತಿಗಳನ್ನು ಸ್ಥಾಪಿಸಿ, ಪೂಜೆ ಸಲ್ಲಿಸಿ ನೀರಿನಲ್ಲಿ ವಿಸರ್ಜಿಸುವುದು ಗಣೇಶೋತ್ಸವದ ಒಂದು ಭಾಗವಾಗಿದೆ. ದೊಡ್ಡಬಳ್ಳಾಪುರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೂ ಸಹ 8 ದಶಕಗಳ ಇತಿಹಾಸವಿದ್ದು, ಈ ಬಗ್ಗೆ ಒಂದು ಮೆಲುಕು ಇಲ್ಲಿದೆ.

Advertisement

ಸಾರ್ವಜನಿಕ ಗಣೇಶೋತ್ಸವ : ಸ್ವಾತಂತ್ರ್ಯ ಪೂರ್ವದಲ್ಲಿ ಮನೆಗಳಲ್ಲಿ ಮಾತ್ರ ಪೂಜೆ ಸಲ್ಲಿಸುತ್ತಿದ್ದ ಗಣೇಶೋತ್ಸವವನ್ನು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್‌ ಅವರು ದೊಡ್ಡ ಸಾರ್ವಜನಿಕ ಕಾರ್ಯಕ್ರಮವಾಗಿ ಪರಿವರ್ತಿಸಿದ್ದು, ಇತಿಹಾಸದಿಂದ ನಮಗೆ ತಿಳಿದು ಬರುತ್ತದೆ. ಬ್ರಿಟಿಷರು ವಿರುದ್ಧ ಹೋರಾಟ ನಡೆಸಲು, ರಾಷ್ಟ್ರೀಯ ಮನೋಭಾವ ಭಾವೈಕ್ಯತೆಗೆ ಸಾರ್ವಜನಿಕ ಗಣೇಶೋತ್ಸವ ಪ್ರೇರಣೆಯಾಗಿ ಜನಸಾಮಾನ್ಯರಿಗೆ ಧಾರ್ಮಿಕ ನೆಲೆಗಟ್ಟಿನಲ್ಲಿ ಸಮಾಗಮಗೊಳ್ಳಲು ಕಾರಣವಾಯಿತು.

ಬೆಳ್ಳಿ ಗಣಪತಿ : ದೊಡ್ಡಬಳ್ಳಾಪುರದಲ್ಲಿ ಮನೆಗಳಲ್ಲಿ ಸಂಪ್ರದಾಯ ಪಾಲಿಸಿಕೊಂಡು ಬಂದ ಹಲವಾರು ಸಮುದಾಯಗಳು ಗಣೇಶ ಮೂರ್ತಿಯನ್ನು ಕೂಡಿಸುತ್ತಿದ್ದರು. ಸಾರ್ವಜನಿಕವಾಗಿ ಅಂದಿನಿಂದ ಗಣೇಶ ಮೂರ್ತಿ ಕೂಡಿಸಿಕೊಂಡು ಬರುತ್ತಿರುವವರೆಂದರೆ ಬೆಳ್ಳಿ ಗಣಪತಿ ಸೇವಾ ಸಮಿತಿ. 1947 ರಲ್ಲಿ ಸ್ಥಾಪಿತವಾದ ಶ್ರೀಬೆಳ್ಳಿ ಗಣಪತಿ ಸೇವಾ ಸಮಿತಿ ಸಮಿತಿಗೆ ಅಂದು ನೀಲಿ ವೆಂಕಟಾಚಲಯ್ಯ,ನಾರಶಿವಪ್ಪನವರ ರಾಜಣ್ಣ, ಬಸಣ್ಣ ಮೊದಲಾದ ಹಿರಿಯರು ಸಮಿತಿಯನ್ನು ಮುನ್ನೆಡೆಸಿದ್ದರು. ಸಮಿತಿಯ ಬೆಳ್ಳಿ ಹಬ್ಬದ ಅಂಗವಾಗಿ ತರಲಾದ 2 ಅಡಿಗಳ ಬೆಳ್ಳಿ ಗಣಪ ಆಕರ್ಷಣೀಯವಾಗಿದ್ದು , ನಗರದಲ್ಲಿ ಮನೆ ಮಾತಾಗಿದೆ.

ಗಣೇಶ ಚತುರ್ಥಿ ಯಂದು ಪ್ರತಿಷ್ಠಾಪಿಸಿ ಅನಂತ ಚತುರ್ದಷಿಯಂದು ಪೂಜಾ ಕಾರ್ಯಕ್ರಮಗಳು ಮುಕ್ತಾಯವಾಗಿ, ಮಣ್ಣಿನ ಮೂರ್ತಿಯನ್ನು ಮಾತ್ರ ವಿಸರ್ಜಿಸುವ ಸಂಪ್ರದಾಯ ಬೆಳೆದು ಬಂದಿದೆ. ಹಿಂದಿನಿಂದಲೂ ಬೆಳ್ಳಿ ಗಣಪತಿಯನ್ನು ಇಡುವ ಈ ರಸ್ತೆಗೆ ಬೆಳ್ಳಿ ಗಣಪತಿ ರಸ್ತೆ ಎಂದು ಕರೆಯುವ ರೂಢಿಯಿತ್ತು. 2010 ರಲ್ಲಿ ನಗರಸಭೆ ನಿರ್ಣ ಯದಂತೆ ಅಧಿಕೃತವಾಗಿ ಬೆಳ್ಳಿ ಗಣಪತಿ ರಸ್ತೆಯೆಂದು ನಾಮಕರಣ ಮಾಡಲಾಗಿದೆ. ಬೆಳ್ಳಿ ಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಲಾಗುವ ಬೆಳ್ಳಿ ಗಣಪತಿ ಸಹ 76 ವರ್ಷ ಪೂರ್ಣಗೊಳಿಸಿ,77ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ.

ತ್ಯಾಗರಾಜ ನಗರ : ನಗರದ ತ್ಯಾಗರಾಜ ನಗರದಲ್ಲಿನ ವರಸಿದ್ಧಿ ವಿನಾಯಕ ಭಕ್ತ ಮಂಡಲಿ ತನ್ನ 40ನೇ ವಾರ್ಷಿ ಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. 6ರಿಂದ 25ಅಡಿಗಳವರೆಗೂ ಇಲ್ಲಿ ವಿವಿಧ ಭಂಗಿಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. 40ನೇ ವರ್ಷದ ಅಂಗವಾಗಿ, ಸೆ.24 ರವರೆಗೆ ವಿಶೇಷ ಹೋಮ, ಅಲಂಕಾರ ಪೂಜಾ ಕಾರ್ಯಕ್ರಮಗಳಿವೆ.

Advertisement

ಮಾರುಕಟ್ಟೆ ಚೌಕ : ಇಲ್ಲಿನ ಕೊಂಗಾಡಿಯಪ್ಪ ಮುಖ್ಯ ರಸ್ತೆಯ ಮಾರುಕಟ್ಟೆ ಶಾಲೆಯ ಪಕ್ಕದ ಶ್ರೀ ವಿನಾಯಕ ಸೇವಾ ಸಮಿತಿ 36ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಮೊದಲು ಮಾರುಕಟ್ಟೆ ಶಾಲೆಯ ಬಳಿಯ ಸಣ್ಣ ಹೋಟೆಲ್‌ನಲ್ಲಿ ಗಣೇಶ ಮೂರ್ತಿಯನ್ನು ಸಿದ್ಧಪಡಿಸಿ ನಂತರ ಪುರಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿತ್ತು. ಇದರ ಉಸ್ತುವಾರಿಯನ್ನು ಅಂದು ಪಾಲಾಕ್ಷಯ್ಯ ವಹಿಸಿಕೊಳ್ಳುತ್ತಿದ್ದರು. 2 ದಶಕಗಳೀಚೆಗೆ ಮಾರುಕಟ್ಟೆ ಶಾಲೆಯ ಪಕ್ಕದಲ್ಲಿ ಕೂಡಿಸಲಾಗುತ್ತಿದೆ.

ಸೆ.18ರಿಂದ ಸೆ.23ರವರೆಗೆ ಪೂಜಾ ಕಾರ್ಯಕ್ರಮಗಳಿವೆ. ಗಣೇಶ ವಿಸರ್ಜನೆ ವೇಳೆ ಅವಘಡ ಗಣೇಶ ವಿಸರ್ಜನೆ ಮಾಡಿ ಹಿಂತಿರುಗುತ್ತಿದ್ದ ಟ್ರಾಕ್ಟರ್‌ನ ಅಲಂಕಾರಿಕ ಕಬ್ಬಿಣದ ಪಲ್ಲಕ್ಕಿಗೆ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ಟ್ರಾಕ್ಟರ್‌ನಲ್ಲಿದ್ದ ಚಾಲಕ ಸೇರಿದಂತೆ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ತಾಲೂಕಿನ ಕನಸವಾಡಿ ಯಲ್ಲಿ 2015ರಲ್ಲಿ ನಡೆದಿತ್ತು.

ಇದರೊಂದಿಗೆ ಗ್ರಾಮಗಳಲ್ಲಿ ಗಣೇಶ ವಿಸರ್ಜನೆ ವೇಳೆ ಗುಂಪು ಘರ್ಷಣೆಗಳು ಸಹ ವರದಿಯಾಗಿತ್ತು. ಈ ಘಟನೆಯಾದ ನಂತರ ಪೊಲೀಸ್‌ ಇಲಾಖೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವುದು ಸೇರಿದಂತೆ ಹಲಾರು ಕಟ್ಟುಪಾಡುಗಳನ್ನು ವಿಧಿಸಿ, ಯಾವುದೇ ಅವಘಡ ನಡೆಯದಂತೆ ಕ್ರಮ ಕೈಗೊಳ್ಳುತ್ತಿದೆ. ಒಟ್ಟಾರೆ ಸಾರ್ವಜನಿಕರ ಗಣೇಶೋತ್ಸವ ಶಾಂತಿ ನೆಮ್ಮದಿ ಯಿಂದ ಜರುಗಬೇಕಿದೆ ಎನ್ನುವುದು ಸಾರ್ವಜನಿಕರ ಅಭಿಮತವಾಗಿದೆ.

ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪನೆ: ಇಂದು ಬಾಲಕರಿಂದ ವಯೋವೃದ್ಧರವರೆಗೆ ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ವಿವಿಧ ಮಾದರಿಯ ಗಣೇಶ ಮೂರ್ತಿಗಳನ್ನು ಪೇಟೆ ಹಾಗೂ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ವಿದ್ಯುತ್‌ ದೀಪಾಲಂಕಾರ, ಹೂವಿನ ಅಲಂಕಾರಗಳಿಂದ ಗಣೇಶ ಮೂರ್ತಿಗಳನ್ನು ಸಿಂಗರಿಸಲಾಗುತ್ತಿದೆ.

ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next