Advertisement

Ganesh Chaturthi ಚೌತಿಗೆ ಕರಾವಳಿಯಲ್ಲಿ ಭರದ ಸಿದ್ಧತೆ

12:31 AM Sep 16, 2023 | Team Udayavani |

ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿಯನ್ನು ಸೆ.19ರಂದು ಆಚರಿಸಲು ಎಲ್ಲೆಡೆ ಸಿದ್ಧತೆ ಆರಂಭವಾಗಿದೆ.

Advertisement

ಉಭಯ ಜಿಲ್ಲೆಯ ವಿವಿಧ ಗಣಪತಿ ದೇವಸ್ಥಾನಗಳ ಸಹಿತ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಮನೆಗಳಲ್ಲಿ ಗಣಪತಿ ವಿಗ್ರಹವನ್ನು ಇಟ್ಟು ಹಬ್ಬ ಆಚರಿಸಲು ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಈಗಾಗಲೇ ಮಾರುಕಟ್ಟೆಗೆ ವಿವಿಧೆಡೆಯಿಂದ ಕಬ್ಬು ಬಂದಿದೆ. ಶನಿವಾರ ವೇಳೆಗೆ ಇನ್ನಷ್ಟು ಕಬ್ಬು ಪೂರೈಕೆಯಾಗುವ ನಿರೀಕ್ಷೆ ಹೊಂದಲಾಗಿದೆ. ಗಣೇಶ ಹಬ್ಬಕ್ಕೆ ಮೊದಲಾಗಿ ಸೆ. 17 ಮತ್ತು 18ರಂದು ವಿವಿಧೆಡೆ ತೆನೆ ಹಬ್ಬ ಕೂಡ ಆಚರಿಸಲಾಗುತ್ತದೆ.

ರಜೆ ಬದಲಾವಣೆ; ಸರಕಾರದ ನಿರ್ಧಾರ ನಿರೀಕ್ಷೆ
ಮಂಗಳೂರು: ಗಣೇಶ ಚತುರ್ಥಿ ಆಚರಣೆಗೆ ದ.ಕ. ಜಿಲ್ಲೆಯಲ್ಲಿ ರಜೆ ದಿನಾಂಕ ಬದಲಾವಣೆ ಕುರಿತ ವಿಚಾರ ಇದೀಗ ಸರಕಾರದ ಅಂಗಳದಲ್ಲಿದೆ.

ಸೆ. 18ರ ಬದಲು ಸೆ. 19ರಂದು ರಜೆ ನೀಡುವ ಬಗ್ಗೆ ಮನವಿಯ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಯವರಿಗೆ ಪತ್ರ ಮೂಲಕ ಸೂಚನೆ ನೀಡಿದ್ದರು. ಇದರಂತೆ ಸರಕಾರದಿಂದ ಅಧಿಕೃತ ಆದೇಶ ಪಡೆಯುವ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಡಳಿತವು ಸರಕಾರವನ್ನು ಕೋರಿದೆ. ಉತ್ತರ ಇನ್ನೂ ಬಂದಿಲ್ಲ.

‘ಉದಯವಾಣಿ’ ಜತೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ರಜೆ ಬದಲಾವಣೆ ಬಗ್ಗೆ ಸರಕಾರ ತೀರ್ಮಾನ ಮಾಡಬೇಕಿದೆ ಎಂದರು.

Advertisement

ಸೆ. 19ರಂದು ರಜೆ ನೀಡಲು ಉಡುಪಿ, ಡಿಸಿ ಕೋರಿಕೆ
ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿಯನ್ನು ಸೆ.19ರಂದು ಸಾರ್ವಜನಿಕರು, ವಿವಿಧ ಸಮಿತಿಗಳು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದು, ಅಂದೇ ಸರಕಾರಿ ರಜೆ ನೀಡುವಂತೆ ಜಿಲ್ಲಾಧಿಕಾರಿ ಕಚೇರಿಯಿಂದ ರಾಜ್ಯ ಸರಕಾರಕ್ಕೆ ಪತ್ರ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ತಿಳಿಸಿದ್ದಾರೆ.

ಶಾಸಕರ ಮನವಿ
ಚೌತಿಗೆ ಸರಕಾರ ಸೆ.18ರಂದು ರಜೆ ನೀಡಿದ್ದು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದೆ. ಸರಕಾರ ಈ ಬಗ್ಗೆ ಪುನರ್‌ ಪರಿಶೀಲನೆ ನಡೆಸಿ, ಶಾಲಾ ಕಾಲೇಜು ಸಹಿತ ಸರಕಾರಿ ಕಚೇರಿಗಳಿಗೆ ಸೆ.19ರಂದೇ ರಜೆ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಶಾಸಕ ಯಶ್‌ಪಾಲ್‌ ಮನವಿ ಸಲ್ಲಿಸಿದ್ದಾರೆ.

ಸೆ. 19: ಆನೆಗುಡ್ಡೆ ಶ್ರೀ ವಿನಾಯಕ
ದೇಗುಲದಲ್ಲಿ ವಿನಾಯಕ ಚತುರ್ಥಿ
ತೆಕ್ಕಟ್ಟೆ: ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಶ್ರೀ ವಿನಾಯಕ ಚತುರ್ಥಿ ಹಾಗೂ ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗವು ಸೆ. 19ರ ಮಂಗಳವಾರ ಜರಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೆ. 18 ಸೋಮವಾರ ಮಧ್ಯಾಹ್ನ 3ರಿಂದ ಭಜನೆ, 5ರಿಂದ ತಾಳಮದ್ದಳೆ ಕಾಶ್ಮೀರ ವಿಜಯ ನಡೆಯಲಿದೆ.

ಸೆ. 19 ಮಂಗಳವಾರ ಮಧ್ಯಾಹ್ನ 3ರಿಂದ ಭಜನೆ, 4ರಿಂದ ನೃತ್ಯ ಕಾರ್ಯಕ್ರಮ ಹಾಗೂ 6ರಿಂದ ದಶಾವತಾರ ಸೇವೆಯಾಟ ಕೃಷ್ಣಾರ್ಜುನ ಕಾಳಗ ಪ್ರದರ್ಶನಗೊಳ್ಳಲಿದೆ. ಪರ್ಯಾಯ ಅರ್ಚಕರು ಶ್ರೀದೇವರಿಗೆ 21 ಬಗೆಯ ಖಾದ್ಯಗಳನ್ನು ಸಮರ್ಪಿಸುವುದರಿಂದ ಭಕ್ತರಿಗೆ ಬೆಳಗ್ಗೆಯಿಂದ ಸಂಜೆ ತನಕ ವಿವಿಧ ಪ್ರಸಾದಗಳನ್ನು ವಿತರಿಸಲಾಗುವುದು.ಎಂದು ದೇಗುಲದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸೆ. 18: ಹಟ್ಟಿಯಂಗಡಿಯಲ್ಲಿ
ಗಣೇಶ ಚತುರ್ಥಿ ಆಚರಣೆ
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇಗುಲದಲ್ಲಿ ಸೆ. 18 ರಂದು ಗಣೇಶ ಚತುರ್ಥಿಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸೆ. 18ರಂದು ಬೆಳಗ್ಗೆ 8ರಿಂದ ಶ್ರೀ ಮಹಾಗಣಪತಿ ಹೋಮ ಸಂಕಲ್ಪ, 1008 ತೆಂಗಿನ ಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾಪೂಜೆ, ಮಹಾ ಸಂತರ್ಪಣೆ, ಸಂಜೆ 6ರಿಂದ ರಂಗ ಪೂಜಾದಿ ಸೇವೆಗಳು, ಸೆ. 19ರಂದು ಬೆಳಗ್ಗೆ 10ರಿಂದ 108 ಶ್ರೀ ಸತ್ಯಗಣಪತಿ ವ್ರತ ಹಾಗೂ ಕಥಾ ನಿರೂಪಣೆ, ಮಧ್ಯಾಹ್ನ 1ರಿಂದ ಮಹಾಪೂಜೆ, ಮಹಾ ಮಂಗಳಾರತಿ, ಸೆ. 20ರಂದು ಬೆಳಗ್ಗೆ 9 ರಿಂದ ಲಕ್ಷ ದೂರ್ವಾರ್ಚನೆ, ಸಿಂಧೂರಾರ್ಚನೆ, ಮಧ್ಯಾಹ್ನ 1ರಿಂದ ಮಹಾಪೂಜೆ ಜರಗಲಿದೆ.

ಸಾಂಸ್ಕೃತಿಕ ವೈವಿಧ್ಯ
ಸೆ. 18ರಂದು ಬೆಳಗ್ಗೆ 10.30ರಿಂದ ವಿಶೇಷ ವಾದ್ಯ ಗೋಷ್ಠಿ, ಸಂಜೆ 6.30ರಿಂದ ಭರತ ನಾಟ್ಯ ಹಾಗೂ ನೃತ್ಯ ರೂಪಕ, ಸೆ. 19ರಂದು ಸಂಜೆ 6.30ರಿಂದ ನರಕಾಸುರ ವಧೆ ಮತ್ತು ಗರುಡ ಗರ್ವ ಭಂಗ ಗೊಂಬೆಯಾಟ ಪ್ರದರ್ಶನಗೊಳ್ಳಲಿದೆ.
ಸೆ. 20ರಂದು ಸಂಜೆ 6.30ರಿಂದ ಮಾಯಾ ಬಜಾರ್‌ ಯಕ್ಷಗಾನ ನಡೆಯಲಿದೆ ಎಂದು ಧರ್ಮದರ್ಶಿ ಎಚ್‌. ಬಾಲಚಂದ್ರ ಭಟ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶರವು ದೇವಸ್ಥಾನ
ಶ್ರೀ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಆಚರಣೆ ಸೆ.19ರಂದು ನಡೆಯಲಿದೆ. ಬೆಳಗ್ಗೆ ಮಹಾಗಣಪತಿ ದೇವರಿಗೆ ಕಲೊ³àಕ್ತ ಪೂಜೆ ನಡೆಯಲಿದೆ. ಬಳಿಕ ಗಣಪತಿ ಹೋಮ, ಪಲ್ಲಪೂಜೆ, ಮಹಾಪೂಜೆ ನೆರವೇರಲಿದೆ. ಗಣೇಶ ಚತುರ್ಥಿ ದಿನ ಉದಯಕಾಲಕ್ಕೆ ಚೌತಿ ಇರಬೇಕು. ಅಂದರೆ, ಬೆಳಗ್ಗೆ ಪೂಜೆಗೆ ಕುಳಿತುಕೊಳ್ಳುವಾಗ ಮುಹೂರ್ತ ಇರುತ್ತದೆ. ಈ ಸಿದ್ಧಾಂತದಂತೆ ಸೆ.19ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತದೆ.
– ಶರವು ರಾಘವೇಂದ್ರ ಶಾಸ್ತ್ರಿ
ಶಿಲೆಶಿಲೆ ಆಡಳಿತ ಮೊಕ್ತೇಸರ, ಶರವು ಶ್ರೀ ಮಹಾಗಣಪತಿ ದೇವಸ್ಥಾನ

ಸೌತಡ್ಕ: ಸೆ. 19ರಂದು ಶ್ರೀ ಗಣೇಶ ಚತುರ್ಥಿ
ಉಡುಪಿ ಶಾಸ್ತ್ರಸಿದ್ಧ ಶ್ರೀಕೃಷ್ಣ ಪಂಚಾಂಗದಂತೆ ಚೌತಿಯು ಈ ಬಾರಿ ಸೆ.18ರಂದು ಮಧ್ಯಾಹ್ನ ಬಳಿಕ ಇರುವುದರಿಂದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸೆ.19ರಂದು ಚತುರ್ಥಿ ಆಚರಿಸಲಾಗುತ್ತಿದೆ. ಚತುರ್ಥಿಯು ಬೆಳಗ್ಗೆಯಿಂದ ವಿಧಿವಿಧಾನ ನೆರವೇರಿಸಬೇಕಿದೆ ಹಾಗಾಗಿ ಸೋಮವಾರ ಆರಾಧನೆ ಇರುವುದಿಲ್ಲ. ಸೆ.19ರಂದು ಬೆಳಗ್ಗೆ 8ರಿಂದ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ 108 ತೆಂಗಿನಕಾಯಿ ಗಣಹೋಮ ಹಾಗೂ ರಂಗಪೂಜೆ ಅನಂತರ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಜರಗಲಿದೆ.
– ಹರೀಶ್‌ ರಾವ್‌ ಮುಂಡ್ರುಪ್ಪಾಡಿ
ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ

 

Advertisement

Udayavani is now on Telegram. Click here to join our channel and stay updated with the latest news.

Next