Advertisement

2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಕಟ

11:44 PM Sep 30, 2020 | mahesh |

ಉಪ್ಪಿನಂಗಡಿ ಗ್ರಾಮ ಪಂಚಾಯತ್‌
ಉಪ್ಪಿನಂಗಡಿ: 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಆಯ್ಕೆಯಾಗಿದ್ದು, 5 ಲಕ್ಷ ರೂ. ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಗಳಿಸಿದೆ. ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿ ಜಿಲ್ಲಾ ಪಂಚಾಯತ್‌ ಅಧಿಕಾರಿಗಳು ಖುದ್ದು ನಡೆಸಿದ ಪರಿಶೀಲನೆ, ಮೂಲ ಸೌಕರ್ಯಗಳನ್ನಾಧರಿಸಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗೆಗಿನ ಅಂಕಿ ಅಂಶಗಳಾನ್ನಾಧರಿಸಿ ಈ ಆಯ್ಕೆ ನಡೆಸಿದ್ದಾರೆ.

Advertisement

ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ನ 2019-20ರ ವಾರ್ಷಿಕ ಬೇಡಿಕೆ ರೂ. 32,15,215.00. 2018-19ರ ವಾರ್ಷಿಕ ಸಾಲಿನ ತೆರಿಗೆ ಪೂರ್ಣ ವಸೂಲಾಗಿದೆ. ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ತೆರಿಗೆ ಪರಿಷ್ಕರಣೆಗಾಗಿ ಮನೆ/ಕಟ್ಟಡಗಳ ಅಳತೆ ಮಾಡಲಾದೆ. ವ್ಯಾಪ್ತಿಯಲ್ಲಿ ಯಾವುದೇ ಬಾಲ್ಯ ವಿವಾಹ ನಡೆದಿಲ್ಲ. ಗ್ರಾಮ ಪಂಚಾಯತ್‌ ಸಹಭಾಗಿತ್ವದಲ್ಲಿ ಮಕ್ಕಳಿಗೆ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗ್ರಾ.ಪಂ.ನಿಂದ ಆರೋಗ್ಯ ತಪಾಸಣೆ ಮತ್ತು ಮಾಹಿತಿ ನೀಡಲಾಗಿದೆ. ನಿಯಮಾನುಸಾರ ಸಭೆಗಳನ್ನು ನಡೆಸಲಾಗಿದೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 2019-20ನೇ ಸಾಲಿನಲ್ಲಿ ಶೇ. 103 ಪ್ರಗತಿ ಸಾಧಿಸಿದೆ.

ಮನೆ, ಅಂಗನವಾಡಿ, ಶಾಲೆ ಮತ್ತು ಆಸ್ಪತ್ರೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅಗತ್ಯವಿರುವಷ್ಟು ಬೀದಿ ದೀಪಗಳಿವೆ. ವಸತಿ ರಹಿತರಿಗೆ ಮನೆ ಒದಗಿಸಲಾಗುತ್ತಿದೆ. ಉಪ್ಪಿನಂಗಡಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯತ್‌ ಆಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಮುದಾಯ ಶೌಚಾಲಯಗಳಿವೆ.

ಸ್ವಚ್ಛತೆಗೆ ಆದ್ಯತೆ
ಕಸವನ್ನು ನಿಯಮಿತವಾಗಿ ಸಂಗ್ರಹಿಸುವ, ಸಂಸ್ಕರಿಸುವ ಹಾಗೂ ವಿಲೇವಾರಿ ಮಾಡುವ ವ್ಯವಸ್ಥೆ ಇದೆ. “ಸ್ವಚ್ಛ ಉಬಾರ್‌’ ಎಂಬ ಘೋಷಣೆಯೊಂದಿಗೆ ರಾಮಕೃಷ್ಣ ಮಿಶನ್‌ನ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತದೆ. ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ.

ಗ್ರಾಮ ಪಂಚಾಯತ್‌ ಅಧಿಕಾರಿ ಮತ್ತು ಸಿಬಂದಿಯ ಬಯೋಮೆಟ್ರಿಕ್‌ ಹಾಜರಾತಿಯನ್ನು (ಇ-ಹಾಜರಾತಿ) ನಿರ್ವಹಿಸಲಾಗಿದೆ. ಪ್ರಸ್ತುತ ಫೇಸ್‌ ರೀಡರ್‌ ಮೂಲಕ ಹಾಜರಾತಿ ನೀಡಲಾಗುತ್ತಿದೆ. ಐಪಿ ಆಧಾರಿತ ಸಿಸಿ ಕೆಮರಾ ಅಳವಡಿಸಲಾಗಿದೆ.

Advertisement

ಸಕಾಲದಡಿ ಗುರುತಿಸಿರುವ ಸೇವೆಗಳನ್ನು ಕಾಲಮಿತಿಯೊಳಗೆ ನೀಡಲಾಗುತ್ತಿದೆ. ವ್ಯವಸ್ಥಿತವಾದ ಗ್ರಂಥಾಲಯ ವ್ಯವಸ್ಥೆ ಇರುತ್ತದೆ. ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಎಂಬ ಫೇಸ್‌ಬುಕ್‌ ಖಾತೆಯನ್ನು, ಗ್ರಾಮ ವಾಣಿ ಎಂಬ ಪ್ರತ್ಯೇಕ ವಾಟ್ಸಾಪ್‌ ಗುಂಪು ರಚಿಸಿದ್ದು, ಸಾರ್ವಜನಿಕರಿಗೆ ಸಲಹೆ ಮತ್ತು ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಳ್ಳಿ ನೀರು ಸರಬರಾಜು ಹಾಗೂ ಮನೆಗಳಲ್ಲಿ ನೀರಿನ ಮೀಟರ್‌ ಅಳವಡಿಸಲಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಉಪ್ಪಿನಂಗಡಿ ಗ್ರಾ.ಪಂ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ ಎಂದು ಪಿಡಿಒ ವಿಲ್ಫ್ರೆಡ್‌ ಲಾರೆನ್ಸ್‌ ರೋಡ್ರಿಗಸ್‌ ತಿಳಿಸಿದ್ದಾರೆ.

ಸಂತಸದ ವಿಚಾರ
ಗಾಂಧಿ ಪುರಸ್ಕಾರ ಲಭಿಸಿರುವುದು ಸಂತಸದ ವಿಚಾರ. ತೆರಿಗೆ ಕರ ವಸೂಲಿ, ಕಸ ವಿಲೇವಾರಿ, ಸಂಸ್ಕರಣೆ ವಿಧಾನ ಹಾಗೂ ಕಚೇರಿಯಲ್ಲಿ ಸಿಸಿ ಕೆಮರಾ ಅಳವಡಿಕೆ ಮೂಲಕ ಪಾರದರ್ಶಕ ಆಡಳಿತ ನೀಡಲು ಸಿಬಂದಿಯ ಸಹಕಾರದಿಂದ ಸಾಧ್ಯವಾಗಿದೆ.ಈ ಪ್ರಶಸ್ತಿಯನ್ನು ಗ್ರಾಮದ ಜನರಿಗೆ ಅರ್ಪಿಸುತ್ತೇವೆ.
-ವಿಲ್ಫ್ರೆಡ್‌ ಲಾರೆನ್ಸ್‌ ರೋಡ್ರಿಗಸ್‌, ಪಿಡಿಒ

ಎಲ್ಲರ ಸಹಕಾರ
ಗ್ರಾಮ ಪಂಚಾಯತ್‌ಅಭಿವೃದ್ಧಿ ಅಧಿಕಾರಿಗಳ ಸಹಿತ ಸಿಬಂದಿಯ ಸಹಕಾರದಿಂದ ಪುರಸ್ಕಾರ ಲಭಿಸಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಸರಕಾರ ಪುರಸ್ಕರಕ್ಕೆ ಆಯ್ಕೆ ಮಾಡಿದೆ
-ನವೀನ ಭಂಡಾರಿ,
ತಾಲೂಕು ಕಾರ್ಯನಿರ್ವಹಣಾಧಿಕಾರಿ


ಕುಟ್ರಾಪ್ಪಾಡಿ ಗ್ರಾಮ ಪಂಚಾಯತ್‌

ಕಡಬ: ತಾಲೂಕಿನ 21 ಗ್ರಾ.ಪಂ.ಗಳ ಪೈಕಿ ಉತ್ತಮ ಸಾಧನೆಗಾಗಿ ರಾಜ್ಯ ಸರಕಾರದಿಂದ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕುಟ್ರಾಪ್ಪಾಡಿ ಗ್ರಾ.ಪಂ. ಸತತ ಮೂರನೇ ಬಾರಿಗೆ ಆಯ್ಕೆಯಾಗಿದೆ.

ಪ್ರಶಸ್ತಿಗೆ ಪೂರಕವಾದ ಸಾಧನೆಗಳು
ಪ.ಜಾ., ಪ.ಪಂ. ಕಾಲನಿ ಮತ್ತು ಇತರ ಜನವಸತಿ ಪ್ರದೇಶಗಳಿಗೆ ಸೋಲಾರ್‌ ಬೀದಿ ದೀಪಗಳನ್ನು ಅಳವಡಿಸಿ ವಿದ್ಯುತ್‌ ಉಳಿತಾಯಕ್ಕೆ ಪ್ರಾಶಸ್ತ್ಯ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಸ್ವತ್ಛ ಕುಟ್ರಾಪ್ಪಾಡಿ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿ ತಿಂಗಳ ಒಂದು ರವಿವಾರ ಸ್ವತ್ಛತಾ ಕಾರ್ಯಕ್ರಮ ಆಯೋಜನೆ, ಸ್ವತ್ಛ ಕುಟ್ರಾಪ್ಪಾಡಿ ಎಂಬ ವಾಟ್ಸಾಪ್‌ ಗ್ರೂಪ್‌ ರಚಿಸಿ ಗ್ರಾಮಸ್ಥರು ಸ್ವಚ್ಛತೆ ಬಗ್ಗೆ ದೂರು ಮತ್ತು ಸಲಹೆ ನೀಡುವ ಅವಕಾಶ, ಸಿಬಂದಿ ಇ-ಹಾಜರಾತಿ ಜಾರಿ, ವಿದ್ಯುತ್‌ ಬೀದಿದೀಪ ಮತ್ತು ಕುಡಿಯುವ ನೀರಿನ ಸ್ಥಾವರ ಪಂಪು ಚಾಲನೆಗೆ ಸ್ವಯಂ ಚಾಲಿತ ವ್ಯವಸ್ಥೆ ಅಳವಡಿಕೆ, ವಿದ್ಯುತ್‌ ಶುಲ್ಕವನ್ನು ನಿಯಮಿತವಾಗಿ ಪಾವತಿ, ಉಳಿಕೆ ಅನುದಾನನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆ, ಕುಡಿಯುವ ನೀರಿನ ಫಲಾನುಭವಿಗಳ ವಿವರ ಗಣಕೀಕರಣಗೊಳಿಸಿ ಬಿಲ್ಲಿಂಗ್‌ ವ್ಯವಸ್ಥೆ ಜಾರಿ, ನಗದು ರಹಿತ ವ್ಯವಹಾರ ಉತ್ತೇಜಿಸುವುದಕ್ಕಾಗಿ ಗ್ರಾ.ಪಂ.ನ ಮನೆ ತೆರಿಗೆ, ನೀರಿನ ಮಾಸಿಕ ಶುಲ್ಕ, ಇತರ ಶುಲ್ಕಕ್ಕೆ ಕ್ಯೂ ಆರ್‌ ಕೋಡ್‌ ಸ್ಕ್ಯಾನರ್‌ ವ್ಯವಸ್ಥೆ, ಸ್ಪೈಪಿಂಗ್‌ ಮೆಶಿನ್‌ ಮೂಲಕ ನೇರವಾಗಿ ಬ್ಯಾಂಕ್‌ ಖಾತೆಗೆ ಪಾವತಿಸುವ ವ್ಯವಸ್ಥೆ ಜಾರಿ, ಕಚೇರಿಯಲ್ಲಿ ಐಪಿ ಬೇಸ್ಡ್ ಸಿಸಿ ಕೆಮರಾ ಮತ್ತು ಟಿವಿ ಅಳವಡಿಕೆ, ಕಚೇರಿಗೆ ಸಂಪೂರ್ಣ ಸೋಲಾರ್‌ ವಿದ್ಯುತ್‌ ಬಳಕೆ, ಪ್ರೊಜೆಕ್ಟರ್‌ ಮತ್ತು ಸ್ಕ್ರೀನ್‌ಅಳವಡಿಕೆ, ಎಲ್ಲ ಶಾಲೆಗಳಲ್ಲಿ ಮಕ್ಕಳು ಮತ್ತು ಪಾಲಕರಿಗೆ ಶೌಚಾಲಯ ಬಳಕೆ, ಪರಿಸರ ಸಂರಕ್ಷಣೆ, ಶಿಕ್ಷಣ, ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪ³ರಿಣಾಮಗಳ ಬಗ್ಗೆ ಸಾಕ್ಷ್ಯ ಚಿತ್ರದ ಪ್ರದರ್ಶನ, ಡಿಜಿಟಲ್‌ ಲೈಬ್ರೆರಿ ಅನುಷ್ಠಾನ ಮಾಡಿ ಆನ್‌ಲೈನ್‌ ಮೂಲಕ ಪುಸ್ತಕಗಳನ್ನು ಓದಿಕೊಳ್ಳುವ ವ್ಯವಸ್ಥೆ, ಗ್ರಾ.ಪಂ.ನ ಸಂಪೂರ್ಣ ಮಾಹಿತಿ ಹೊಂದಿರುವ ಜಾಲತಾಣ ರಚನೆ ಮುಂತಾದ ಅಂಶಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪೂರಕವಾಗಿದ್ದವು.

ಹಲವು ಪುರಸ್ಕಾರಗಳು
2007-08ರಲ್ಲಿ ಕೇಂದ್ರದಿಂದ ನೀಡಲಾಗುವ ನಿರ್ಮಲ ಗ್ರಾಮ ಪುರಸ್ಕಾರ, 2016-17ರಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯತ್‌ ಹೆಗ್ಗಳಿಕೆ, 2017-18 ಮತ್ತು 2018-19 ನೇ ಹಾಗೂ 2019-20ನೇ ಸಾಲಿನಲ್ಲಿ ಉತ್ತಮ ಸಾಧನೆಗಾಗಿ ರಾಜ್ಯ ಸರಕಾರದಿಂದ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರವನ್ನು ಪಡೆದುಕೊಂಡಿರುವ ಕುಟ್ರಾಪ್ಪಾಡಿ ಗ್ರಾ.ಪಂ. 2019ರಲ್ಲಿ ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ ಇವರಿಂದ ಕೊಡಮಾಡಲ್ಪಡುವ ಡಾ| ಶಿವರಾಮ ಕಾರಂತ ಪ್ರಶಸ್ತಿಯನ್ನೂ ಬಗಲಿಗೆ ಹಾಕಿಕೊಂಡಿತ್ತು.

ಜನರ ಸಹಕಾರ
ಸತತವಾಗಿ ಮೂರನೇ ಬಾರಿಗೆ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಗ್ರಾಮ ಪಂಚಾಯತ್‌ನಲ್ಲಿ ಆಡಳಿತಾತ್ಮಕವಾಗಿ ಉತ್ತಮ ಕೆಲಸಗಳು ನಡೆದು ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ದೊರೆತಿದೆ. ಅಧಿಕಾರಿಗಳು, ಸಿಬಂದಿ ಹಾಗೂ ಆಡಳಿತ ಮಂಡಳಿಯ ಹೊಂದಾಣಿಕೆ, ಜನರ ಸಹಕಾರದಿಂದಾಗಿ ಉತ್ತಮ ಕೆಲಸಗಳು ನಡೆದು ಪ್ರಶಸ್ತಿ ದೊರೆತಿದೆ.
-ವಿದ್ಯಾ ಕೆ. ಗೋಗಟೆ, ನಿಕಟಪೂರ್ವಾಧ್ಯಕ್ಷರು, ಕುಟ್ರಾಪ್ಪಾಡಿ ಗ್ರಾಮ ಪಂಚಾಯತ್‌

ಪಾರದರ್ಶಕ ಸೇವೆ
ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ವಿಚಾರ. ಗ್ರಾ.ಪಂ.ನ ಜನಪ್ರತಿನಿಧಿಗಳು, ಸಿಬಂದಿ ಹಾಗೂ ಗ್ರಾಮದ ಜನತೆಯ ಸಹಕಾರದಿಂದ ಇದು ಸಾಧ್ಯವಾಗಿದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಮಸ್ಥರಿಗೆ ಪಾರದರ್ಶಕ ಸೇವೆ ನೀಡುತ್ತಿರುವುದೇ ನಮ್ಮ ಯಶಸ್ಸಿಗೆ ಕಾರಣ. ಮುಂದೆ ಕೇಂದ್ರ ಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳುವ ದೀನ್‌ ದಯಾಳ್‌ ಪ್ರಶಸ್ತಿಯನ್ನು ಪಡೆಯುವ ಪ್ರಯತ್ನ ನಮ್ಮದು.
-ವಿಲ್ಫ್ರೆಡ್‌ ಲಾರೆನ್ಸ್‌ ರೋಡ್ರಿಗಸ್‌, ಪಿಡಿಒ


ಕೊಳ್ನಾಡು ಗ್ರಾಮ ಪಂಚಾಯತ್‌
ವಿಟ್ಲ : ಗಾಂಧಿ ಗ್ರಾಮವೆಂದೇ ಪ್ರಸಿದ್ಧಿ ಹೊಂದಿರುವ ಬಂಟ್ವಾಳ ತಾಲೂಕಿನ ಅತೀ ದೊಡ್ಡ ಪಂಚಾಯತ್‌ ಆಗಿರುವ ಕೊಳ್ನಾಡು ಗ್ರಾಮ ಪಂಚಾಯತ್‌ 2019-20ನೇ ಸಾಲಿನ ಗಾಂ ಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಕೊಳ್ನಾಡು ಗ್ರಾಮ ಪಂಚಾಯತ್‌ಗೆ ಎರಡನೇ ಬಾರಿಗೆ ಈ ಪ್ರಶಸ್ತಿ ಲಭಿಸಿದ್ದು, ಶಿಕ್ಷಣ, ಆರೋಗ್ಯ, ಅಂಗನವಾಡಿಗಳ ಅಂಕಿ ಅಂಶಗಳು, ಸ್ವಂತ ಆದಾಯ, ಗ್ರಾಮಸಭೆ, ವಾರ್ಡ್‌ ಸಭೆ, ಸಾಮಾನ್ಯ ಸಭೆ, ನೈರ್ಮಲ್ಯ, ಕುಡಿಯುವ ನೀರು, ಪಂಚತಂತ್ರ ತೆರಿಗೆ ವಸೂಲಿ, ಉದ್ಯೋಗ ಖಾತರಿ ಇತ್ಯಾದಿ ಪ್ರಗತಿ ಪರಿಶೀಲನೆ ನಡೆಸಿ, ಕಾರ್ಯತತ್ಪರತೆಯನ್ನು ಗಮನಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ. ಕೊಳ್ನಾಡು ಗ್ರಾ.ಪಂ.ನ ಜನಸಂಖ್ಯೆ, ಭೂ ಪ್ರದೇಶ ಹೆಚ್ಚಾಗಿದ್ದರೂ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಜಿಲ್ಲೆಯಲ್ಲೇ ಅತ್ಯುತ್ತಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 31 ಸದಸ್ಯರುಗಳನ್ನೊಳಗೊಂಡ ಈ ಗ್ರಾಮ ಪಂಚಾಯತ್‌ನಲ್ಲಿ ಈ ಅವ ಧಿಯ ಅಧ್ಯಕ್ಷರಾಗಿ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಯಮುನಾ ಲಕ್ಷ್ಮಣ ಗೌಡ, ಪಿಡಿಒ ಆಗಿ ರೋಹಿಣಿ ಬಿ. ಕಾರ್ಯನಿರ್ವಹಿಸಿದ್ದಾರೆ.

ಕೆ.ಸುಭಾಶ್ಚಂದ್ರ ಶೆಟ್ಟಿ ಅವರ ಅಧಿಕಾರದ ಅವಧಿಯಲ್ಲಿ ಸಾಧಿಸಿದ ಪ್ರಗತಿಗೆ ಹಲವು ಪ್ರಶಸ್ತಿ ಲಭಿಸಿದೆ. 2008ರಲ್ಲಿ ರಾಷ್ಟ್ರೀಯ ನಿರ್ಮಲ ಪುರಸ್ಕಾರ, 2012-13ನೇ ಅವ ಧಿಯ ಸಾಧನೆಗೆ ರಾಜ್ಯ ಗಾಂಧಿ  ಪುರಸ್ಕಾರ- 5 ಲಕ್ಷ ರೂ., 2017-18 ಸೇವಾವಧಿ ಪ್ರಗತಿ ನಮ್ಮ ಗ್ರಾಮ ನಮ್ಮ ಯೋಜನೆ ರಾಜ್ಯ ಪುರಸ್ಕಾರ 10 ಲಕ್ಷ ರೂ., 2019-20ರ ಸೇವಾವ ಧಿ ಸಾಧನೆಗೆ- ರಾಜ್ಯ ಗಾಂಧಿ  ಪುರಸ್ಕಾರ 5 ಲಕ್ಷ ರೂ., 2019-20ರ ಸೇವಾವ ಧಿ ಜಿಲ್ಲಾ ಸಾಮುದಾಯಿಕ ಶೌಚಾಲಯ ಅಭಿಯಾನ ಪುರಸ್ಕಾರ, 2017-18, 2018-19ರಲ್ಲಿ ಈ ಗ್ರಾಮ ಪಂಚಾಯತ್‌ 1 ಅಂಕದ ಕೊರತೆಯಾಗಿ 2ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತ್ತು.

ಪ್ರಶಸ್ತಿ ಲಭಿಸಿರುವುದು ತೃಪ್ತಿ ತಂದಿದೆ
ಸೇವಾ ಮನೋಭಾವದಿಂದ ದುಡಿದಿರುವುದಕ್ಕೆ ಪ್ರಶಸ್ತಿ ಲಭಿಸಿರುವುದು ತೃಪ್ತಿ ತಂದಿದೆ. ಇದು ಗ್ರಾಮ ಪಂಚಾಯತ್‌ ಸದಸ್ಯರು, ಕಾರ್ಯದರ್ಶಿ ಮತ್ತು ಸಿಬಂದಿ, ಎಲ್ಲ ಜನಪ್ರತಿನಿ ಧಿಗಳು, ಎಲ್ಲ ಇಲಾಖಾ ಅಧಿ ಕಾರಿಗಳು ಮತ್ತು ಗ್ರಾಮದ ನಾಗರಿಕರ ಸಹಕಾರದಿಂದ ಸಾಧ್ಯವಾಗಿದೆ.
-ಸುಭಾಶ್ಚಂದ್ರ ಶೆಟ್ಟಿ ಕುಳಾಲು, ನಿಕಟಪೂರ್ವ ಅಧ್ಯಕ್ಷರು, ರೋಹಿಣಿ ಬಿ., ಪಿಡಿಒ


ಅಂಡಿಂಜೆ ಗ್ರಾಮ ಪಂಚಾಯತ್‌

ವೇಣೂರು: ಉತ್ತಮ ಆಡಳಿತ ವ್ಯವಸ್ಥೆ ಮತ್ತು ಹೊಸಹೊಸ ಯೋಜನೆಗಳ ಮೂಲಕ ಗಮನ ಸೆಳೆದಿದ್ದ ಅಂಡಿಂಜೆ ಗ್ರಾಮ ಪಂಚಾಯತ್‌ ಇದೀಗ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಸ್ವಚ್ಛತೆ, ಸಂಪನ್ಮೂಲ ಸಂಗ್ರಹ, ಜನಪರ ಆಡಳಿತ, ಅವಿಷ್ಕಾರಗಳು, ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಉದ್ಯೋಗ ಖಾತರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಜಾರಿ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ ವಾರ್ಡ್‌ಸಭೆ, ಗ್ರಾಮಸಭೆ, ಮಹಿಳಾ ಗ್ರಾಮಸಭೆ, ಮಕ್ಕಳ ಗ್ರಾಮಸಭೆಗಳನ್ನು ಕಾಲಕಾಲಕ್ಕೆ ನಡೆಸಿ ನಡವಳಿಗಳನ್ನು ಸಂಬಂಧಪಟ್ಟ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಿರುವುದನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. 2006-07ರಲ್ಲಿ ಕೇಂದ್ರ ಸರಕಾರದ ಮಹತ್ಮಾಕಾಂಕ್ಷಿ ಯೋಜನೆಯಾದ ಸಂಪೂರ್ಣ ಸ್ವತ್ಛತಾ ಆಂದೋಲನದಡಿ ಅಂಡಿಂಜೆ ಗ್ರಾ.ಪಂ. ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿತ್ತು.

ಅಂಡಿಂಜೆ ಗ್ರಾಮ ಪಂಚಾಯತ್‌ ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 26 ಕಿ.ಮೀ. ದೂರದಲ್ಲಿದೆ. ಮಂಡಲ ಪಂಚಾಯತ್‌ ಆಗಿದ್ದ ಅಂಡಿಂಜೆ 1993-94ರಲ್ಲಿ ಗ್ರಾಮ ಪಂಚಾಯತ್‌ ಆಗಿ ಬದಲಾಯಿತು. ಅಂಡಿಂಜೆ ಗ್ರಾ.ಪಂ. ಅಂಡಿಂಜೆ-1, ಅಂಡಿಂಜೆ-2, ಸಾವ್ಯ ಹಾಗೂ ಕೊಕ್ರಾಡಿ ಗ್ರಾಮನ್ನೊಳಗೊಂಡಿದೆ. 2011ರ ಜನಗಣತಿ ಪ್ರಕಾರ 4,973 ಮಂದಿ ಜನಸಂಖ್ಯೆಯನ್ನು ಹೊಂದಿದೆ.

ಅಧ್ಯಕ್ಷರಾಗಿದ್ದ ಮೋಹನ ಅಂಡಿಂಜೆ ಅವರ ವಿಶೇಷ ಚಿಂತನೆಯೊಂದಿಗೆ ಆಡಳಿತ ಮಂಡಳಿ ಅಧಿಕಾರಿಗಳ ಸಹಕಾರದಲ್ಲಿ ಅಭಿವೃದ್ಧಿಗೆ ವಿಶೇಷ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಪ್ರಶಸ್ತಿಗೆ ಆಯ್ಕೆಯಾಗಲು ಪ್ರಮುಖ ಕಾರಣ. ಒಂದೆಡೆ ವೈಜ್ಞಾನಿಕ ರೀತಿಯಲ್ಲಿ ತೆರಿಗೆ ಪರಿಷ್ಕರಿಸಿ ಗ್ರಾಮ ಪಂಚಾಯತ್‌ ಆದಾಯ ಮೂಲವನ್ನು ಹೆಚ್ಚಿಸಿಕೊಂಡಿದ್ದರೆ ಮತ್ತೂಂದೆಡೆ ಗ್ರಾಮ ಪಂಚಾಯತ್‌ ಅಧೀನದಲ್ಲಿರುವ 13.50 ಎಕ್ರೆಯಲ್ಲಿ ಸುಮಾರು 2,000 ಗೇರುಸಸಿಗಳನ್ನು ನೆಡುವ ಮೂಲಕ ಅಂಡಿಂಜೆ ಗ್ರಾ.ಪಂ. ಜಿಲ್ಲೆಯ ಗಮನ ಸೆಳೆದಿತ್ತು.

ಶ್ರಮಕ್ಕೆ ಈಗ ಫಲ ಸಿಕ್ಕಿದಂತಾಗಿದೆ
ಅಂಡಿಂಜೆ ಗ್ರಾಮ ಪಂಚಾಯತ್‌ನ್ನು ಒಂದು ಮಾದರಿಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಶ್ರಮಪಟ್ಟಿದ್ದೆವು. ಆ ಶ್ರಮಕ್ಕೆ ಈಗ ಫಲ ಸಿಕ್ಕಿದಂತಾಗಿದೆ. ಶುದ್ಧ ಕುಡಿಯುವ ನೀರು, ಸರ್ವಋತು ರಸ್ತೆ ನಿರ್ಮಾಣ, ಮನೆಗಳಿಗೆ ವಿದ್ಯುತೀಕರಣ ಸೇರಿದಂತೆ ಸರಕಾರದ ಪ್ರತಿಯೊಂದು ಯೋಜನೆಗಳನ್ನು ಫಲಾನುಭವಿಗಳಿಗೆ ನಿಷ್ಪಕ್ಷವಾಗಿ ಮುಟ್ಟಿಸಿದ್ದೇವೆ. ನಮ್ಮ ಆಡಳಿತ ಮಂಡಳಿ, ಅಭಿವೃದ್ಧಿ ಅಧಿಕಾರಿಯವರ ಜತೆ ಸಿಬಂದಿ ಶ್ರಮಿಸಿದ್ದು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಲು ಕಾರಣ.
– ಮೋಹನ್‌ ಅಂಡಿಂಜೆ, ಮಾಜಿ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next