Advertisement

ನ.6ರವರೆಗೆ  ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಭೇಟಿಗೆ ಸುಪ್ರೀಂ ಅಸ್ತು

10:43 PM Oct 10, 2022 | Team Udayavani |

ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ, ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್‌ ತಾತ್ಕಾಲಿಕ ರಿಲೀಫ್ ನೀಡಿದೆ. ನವೆಂಬರ್‌ 6ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಲು ಮತ್ತು ತಮ್ಮ ಪುತ್ರಿಯನ್ನು ಭೇಟಿಯಾಗಲು ಸರ್ವೋಚ್ಚ ನ್ಯಾಯಾಲಯ ಸೋಮವಾರ ರೆಡ್ಡಿಗೆ ಅವಕಾಶ ಕಲ್ಪಿಸಿದೆ.

Advertisement

ಇದೇ ವೇಳೆ, ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆಯನ್ನು ದಿನಂಪ್ರತಿ ನಡೆಸಿ, ನ.9ರಿಂದ 6 ತಿಂಗಳೊಳಗಾಗಿ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್‌ನ ನ್ಯಾ. ಎಂ.ಆರ್‌. ಶಾ ಮತ್ತು ನ್ಯಾ.ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿದೆ. ವಿಚಾರಣೆ ಮುಗಿಯುವವರೆಗೂ ಬಳ್ಳಾರಿಯಿಂದ ದೂರ ಇರುವಂತೆ ರೆಡ್ಡಿ ಅವರಿಗೂ ನಿರ್ದೇಶಿಸಿದೆ.

ಇದೇ ವೇಳೆ, ರೆಡ್ಡಿ ಅವರೇನಾದರೂ ವಿಚಾರಣೆಯನ್ನು ವಿಳಂಬ ಮಾಡಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾಗಿರುವ ರೆಡ್ಡಿ ಅವರಿಗೆ 2015ರಲ್ಲಿ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿತ್ತು. ಹುಟ್ಟೂರು ಬಳ್ಳಾರಿ ಮತ್ತು ಆಂಧ್ರದ ಅನಂತಪುರ ಮತ್ತು ಕಡಪಕ್ಕೆ ಭೇಟಿ ನೀಡುವಂತಿಲ್ಲ ಎಂಬ ಷರತ್ತೂ ಅದರಲ್ಲಿ ಸೇರಿತ್ತು. ಇತ್ತೀಚೆಗೆ ರೆಡ್ಡಿ ಅವರ ಪುತ್ರಿ ಹೆಣ್ಣುಮಗುವಿಗೆ ಜನ್ಮ ನೀಡಿರುವ ಹಿನ್ನೆಲೆಯಲ್ಲಿ, ಪುತ್ರಿಯ ಭೇಟಿಗಾಗಿ ಊರಿಗೆ ತೆರಳಲು ಅವಕಾಶ ನೀಡಬೇಕೆಂದು ಕೋರಿ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next