Advertisement

Gadag: ವಚನ ಸಾಹಿತ್ಯದಲ್ಲಿದೆ ಸಮಸ್ಯೆಗಳಿಗೆ ಪರಿಹಾರ

06:28 PM Oct 03, 2023 | Team Udayavani |

ಗದಗ: ಹಿರಿಯರು ಸತತವಾಗಿ ಶರಣ ಚಿಂತನೆಯನ್ನು ತಮ್ಮ ಉಸಿರಾಗಿಸಿಕೊಂಡಿದ್ದಾರೆ. ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ವಚನ ಸಾಹಿತ್ಯದಲ್ಲಿದೆ. ವಚನ ಸಾಹಿತ್ಯ ಬಹಳ ವಿಶಿಷ್ಟವಾದ ಸಾಹಿತ್ಯವಾಗಿದ್ದು, 12ನೇ ಶತಮಾನದ ಬಸವಯುಗ ಎಂದು ಡಾ| ವೀರಣ್ಣ ರಾಜೂರ ಹೇಳಿದರು.

Advertisement

ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌, ಗದಗ ಜಿಲ್ಲಾ ಶರಣ ಸಾಹುತ್ಯ ಪರಿಷತ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೆ.ಆರ್‌. ಲಿಂಗಪ್ಪ ಜಾನಪದ ಪ್ರಶಸ್ತಿ ಪ್ರದಾನ ಹಾಗೂ ಪರಿಷತ್ತಿನ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯ ಅಂದರೆ ಪ್ರಾಣ ಜೀವಾಳ. ವಚನ ಸಾಹಿತ್ಯ ಕರ್ನಾಟಕದ ಕಲ್ಯಾಣದಲ್ಲಿ ನಡೆದ ಮಾನವೋದ್ಧಾರದ ಮಹಾಕ್ರಾಂತಿಯ ಉಪಸೃಷ್ಟಿ. ಬಸವಾದಿ ಶಿವಶರಣರು ವಚನಗಳನ್ನು ಮಾಧ್ಯಮವಾಗಿಟ್ಟುಕೊಂಡು ಕ್ರಾಂತಿ ನಡೆಸುತ್ತಿದ್ದರು. ಮಹಾಕ್ರಾಂತಿಯ ಮಹಾಸೂತ್ರಧಾರಿ ಮಹಾಮಾನವತಾವಾದಿ ಬಸವಣ್ಣನವರು. ಕ್ರಾಂತಿಯಲ್ಲಿ ತಳಸಮುದಾಯದ ಎಲ್ಲ ಕಾಯಕಜೀವಿಗಳು ಒಳಗೊಂಡ ಪರ್ಯಾಯ ಸಂಸ್ಕೃತಿಯನ್ನು ಶರಣರು ಸೃಷ್ಟಿಸಿದ್ದಾರೆ ಎಂದು ಹೇಳಿದರು.

ಡಾ| ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕೆ.ಆರ್‌. ಲಿಂಗಪ್ಪ ಅವರು ನಮ್ಮ ನಾಡಿನ ಹೆಸರಾಂತ ಜಾನಪದ ವಿದ್ವಾಂಸರು. ಕೆ.ಆರ್‌. ಲಿಂಗಪ್ಪ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ. ಜಾನಪದ ಕ್ಷೇತ್ರವನ್ನು ಉಳಿಸಿ ಬೆಳೆಸಿದ ಶ್ರೇಯಸ್ಸು ಕೆ.ಆರ್‌. ಲಿಂಗಪ್ಪ ಮತ್ತು ಗೋರುಚ ಅವರದ್ದು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್‌.ಕೆ. ಪಾಟೀಲ ಮಾತನಾಡಿ, ಶರಣ ಸಾಹಿತ್ಯ ಹೆಚ್ಚಾಗಿ ಭಾಷಣಕ್ಕೆ ಬಳಕೆಯಾಗುತ್ತಿದೆ. ಬದುಕಿನಲ್ಲಿ ಅಳವಡಿಸಿಕೊಳ್ಳುವ ಮಹತ್ತರ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು. ಸಿ. ವೀರಣ್ಣ ಮಾತನಾಡಿ, 12ನೇ ಶತಮಾನದ ನಂತರ 900 ವರ್ಷಗಳ ಅಂತರದಲ್ಲಿ ಶರಣ ಚಳವಳಿ ಈ ನಾಡಿನಲ್ಲಿ ಹೇಗೆ ಬೆಳೆಯಬೇಕಾಗಿತ್ತೋ ಹಾಗೇ ಬೆಳೆದಿಲ್ಲ ಎಂದು ಹೇಳಿದರು.

Advertisement

ಜನಪದ ಗಾಯಕ ಬಿ. ಲಕ್ಷ್ಮಣ ಗುತ್ತೇದಾರ್‌ ಅವರಿಗೆ ಕೆ.ಆರ್‌. ಲಿಂಗಪ್ಪ ಜಾನಪದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಗೋ.ರು.ಚ. ಅವರು ರಚಿಸಿದ “ವಚನ ಸಾಹಿತ್ಯ ನನ್ನ ದೃಷ್ಟಿಯಲ್ಲಿ’ ಮತ್ತು ಡಾ| ಸಿ. ವೀರಣ್ಣ ಅವರು ರಚಿಸಿದ “ಪರ್ಯಾಯ ಸಂಸ್ಕೃತಿ- ವಚನ ಸಂಪುಟ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಅಪ್ಪಾರಾವ ಅಕ್ಕೋಣೆ, ಡಾ| ಗೋ.ರು. ಚನ್ನಬಸಪ್ಪ, ಡಾ| ಸಿ. ವೀರಣ್ಣ, ಬಿ. ಲಕ್ಷ್ಮಣ ಗುತ್ತೇದಾರ್‌, ಪ್ರಕಾಶ ಅಂಗಡಿ, ಚನ್ನಬಸಪ್ಪ ಕಂಠಿ, ಪರಮೇಶ್ವರಗೌಡ ಎರೇಸೀಮಿ, ಎಸ್‌.ಎಸ್‌. ಪಾಟೀಲ ಹಾಗೂ ಪರಿಷತ್ತಿನ ಸರ್ವಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next