Advertisement

ಆಧುನಿಕತೆ ಹೊಡೆತದಿಂದ ಕುಂಬಾರಿಕೆ ನೇಪತ್ಯಕ್ಕೆ ; ಗಡಿಗೆ ತಯಾರಿಕೆಗೆ ಆಧುನಿಕ ಸ್ಪರ್ಶ

06:00 PM Apr 07, 2022 | Team Udayavani |

ಗೌರಿಬಿದನೂರು: ನಗರದ ಪಾದಚಾರಿ ಮಾರ್ಗ ಮತ್ತು ಅಂತಾರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಮಡಕೆ ಮಾರಾಟ ಮಾಡುತ್ತಿರುವ ದೃಶ್ಯ ಕಾಣ ಸಿಗುತ್ತವೆ. ಬೇಸಿಗೆ ದಿನಗಳಲ್ಲಿ ಮಡಕೆ ವ್ಯಾಪಾರ ಪ್ರಮುಖ ವಾಗಿದ್ದು, ಮಾರ್ಚ್‌ ತಿಂಗಳಿನಿಂದಲೇ ಆರಂಭವಾಗಿದೆ.

Advertisement

ಮಡಕೆ ಕೊಳ್ಳುವ ಗ್ರಾಹಕರ ನಿರೀಕ್ಷೆಯಲ್ಲಿ ಕುಂಬಾರಿಕೆ ಮಾಡುವ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಎದುರು ನೋಡುತ್ತಿದ್ದು, ನಗರದ ರಸ್ತೆ ಬದಿ, ಸಂತೆ, ಮಾರುಕಟ್ಟೆಯಲ್ಲಿ ಕುಂಬಾರರು ತಮ್ಮ ಸರಕುಗಳೊಂದಿಗೆ ಠಿಕಾಣಿ ಹೂಡಿದ್ದಾರೆ. ಪಾರಂಪರಿಕ ಮಡಕೆ ಗಡಿಗೆಗಳ ತಯಾರಿಕೆಗೆ ಆಧುನಿಕ ಟಚ್‌ ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣದಿಂದ ಕುಂಬಾರಿಕೆ ಕಸುಬು ನೆಲಕಚ್ಚಿದ್ದು, ಕೂಲಿ ಮಾಡಿ ಬದುಕನ್ನು ದೂಡಿದ ಕುಂಬಾರ ಜನಾಂಗದವರು ಈಗ ಕುಲಕಸು ಬನ್ನು ಪ್ರಾರಂಭಿಸಿ ಮಡಕೆ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.

ಮಡಕೆಗೆ ಅಷ್ಟು ಬೇಡಿಕೆಯಿಲ್ಲ: ನಾನಾ ಬಗೆಯ ವಿನ್ಯಾಸ, ಗಾತ್ರದ ಆಧಾರದ ಮೇಲೆ ದರ ನಿಗದಿಪಡಿಸಿದ್ದು, ಆಹಾರ ಪದಾರ್ಥ, ಕುಡಿಯುವ ನೀರಿನ ಬಳಕೆ ಆರೋಗ್ಯದ ದೃಷ್ಟಿಯಿಂದ ನೈಸರ್ಗಿಕ ವರವಾಗಿರುವ ಮಣ್ಣಿನ ಮಡಕೆಗಳಲ್ಲಿ ಆಹಾರ ತಯಾರಿಸಿ ಸೇವನೆ ಹಾಗೂ ನೀರನ್ನು ಶೇಖರಿಸಿ ಕುಡಿಯುವುದರಿಂದ ಜನರ ಆರೋಗ್ಯಕ್ಕೆ ಹೆಚ್ಚಿನ ಲಾಭವಾಗುತ್ತದೆ. ಮಣ್ಣಿನಲ್ಲಿರುವ ವಿಶಿಷ್ಟ ಗುಣಗಳು ದೇಹಗೊಳಗಿನ ಅನಾರೋಗ್ಯಕಾರಿ ಕೆಲವು ಕೀಟಾಣುಗಳ ಮೇಲೆ ಪ್ರಭಾವ ಬೀರಿ, ಆರೋಗ್ಯದ ರಕ್ಷಣೆಗೆ ನೆರವಾಗುತ್ತದೆ. ಕಡಿಮೆ ಖರ್ಚಿನಲ್ಲಿ ನಾನಾ ರೀತಿ ಲಾಭದಾಯಕವಾಗಿರುವ ಪರಿಸರ ಪ್ರಿಯವಾದ ಮಡಕೆಗೆ ಅಷ್ಟು ಬೇಡಿಕೆಯಿಲ್ಲ ಎಂಬುದು ಕುಂಬಾರರ ಅಳಲಾಗಿದೆ.

ನಾನಾ ಗಾತ್ರದ ಅಳತೆಗೆ ತಕ್ಕಂತೆ ಹಾಗೂ ಟ್ಯಾಪ್‌ ಅಳವಡಿಸಿರುವ ಒಂದು ಲೀಟರ್‌ನಿಂದ ಹಿಡಿದು 15 ಲೀಟರ್‌ ಸಾಮರ್ಥ್ಯವುಳ್ಳ ತರಹೇವಾರಿ ಮಡಕೆ ಮಾರಾಟವಾಗುತ್ತಿವೆ. 120 ರೂ., 211 ರೂ., 400 ರೂ., 800 ರೂ.ವರೆಗೆ ಮಡಕೆ ದರ ನಿಗದಿ ಮಾಡಲಾಗಿದೆ.

ಗುಣಮಟ್ಟದ ಮಣ್ಣು ಸಿಗುವುದು ಕಷ್ಟ: ಬಿಸಿಲಿನ ದಿನಗಳಲ್ಲಿ ಮಡಕೆಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಪ್ರಸ್ತುತ ದಿನದಲ್ಲಿ 10 ರಿಂದ 20 ಮಡಕೆ ಮಾರಾಟವಾಗುತ್ತಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ. ಸರ್ಕಾರ 30 ಎಕರೆ ಕೆರೆಯ ಜಮೀನನ್ನು ನಿಗದಿ ಮಾಡಿ ಈ ಕೆರೆಯಲ್ಲಿ ಕುಂಬಾರಿಕೆ ಮಾಡುವವರೇ ಮಣ್ಣನ್ನು ತೆಗೆದುಕೊಂಡು ಕುಂಬಾರಿಕೆಗೆ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿತ್ತು. ಆದರೆ, ಇಟ್ಟಿಗೆ ತಯಾರಿಕೆ ಮಾಡುವವರು ಜೆಸಿಬಿ ಹಾಗೂ ಲಾರಿಗಳಲ್ಲಿ ಮಣ್ಣನ್ನು ಸಾಗಿಸಿರುವುದರಿಂದ ಉತ್ತಮ ಗುಣಮಟ್ಟದ ಮಣ್ಣು ಸಿಗುವುದು ಕಷ್ಟಕರವಾಗಿದೆ ಎಂದು ಸಿದ್ದಯ್ಯ ಅಸಹಾಯಕತೆ ತೋಡಿಕೊಂಡಿದ್ದಾರೆ.

Advertisement

ದಿನದಿಂದ ದಿನಕ್ಕೆ ಏರುತ್ತಿರುವ ತಾಪ: ದಿನದಿಂದ ದಿನಕ್ಕೆ ಬಿಸಿಲಿನ ತಾಪವು 30 ಡಿಗ್ರಿಯಿಂದ 37 ಡಿಗ್ರಿವರೆಗೆ ವ್ಯತ್ಯಾಸವಾಗುತ್ತಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಗುಡಿ ಕೈಗಾರಿಕೆಗೆ ಉತ್ತೇಜನ ಅಗತ್ಯ: ಸ್ಥಳೀಯವಾಗಿ ಕುಂಬಾರರ ಕುಟುಂಬಗಳಿಗೆ ತಿರುಪತಿ, ರಾಜಸ್ತಾನದ ಕೆಂಪು ಮಡಕೆ ಪೈಪೋಟಿ ಒಡ್ಡುತ್ತಿವೆ. ಶ್ರೀಮಂತರು ಬೇಸಿಗೆ ದಿನದಲ್ಲಿ ತಂಪಾದ ನೀರಿಗಾಗಿ ಫ್ರಿಜ್‌ ಬಳಸುವುದು ಸಾಮಾನ್ಯ. ಆದರೆ, ವಿದ್ಯುತ್‌ ಕಡಿತದಿಂದ ಫ್ರಿಜ್‌ ಕಾರ್ಯನಿರ್ವಹಿಸದ ಸಂದರ್ಭದಲ್ಲಿ ಮಣ್ಣಿನ ಮಡಕೆಯನ್ನೇ ಅವಲಂಬಿಸ ಬೇಕಾಗುತ್ತದೆ. ವಿದ್ಯುತ್‌ ಇರಲಿ, ಬಿಡಲಿ ಸದಾ ಕಾಲ ತಂಪಾದ ನೀರು ಸಿಗುವುದು ಮಾತ್ರ ಮಡಕೆಯಿಂದಲೇ. ಆದ್ದರಿಂದ, ಮಡಕೆ ಬಡವರ ಫ್ರಿಜ್‌ ಆಗಿದ್ದು, ಜನರು ಈ ಉದ್ಯಮಕ್ಕೆ ಹೆಚ್ಚಿನ ಬೆಂಬಲ ನೀಡಿ ಗ್ರಾಮೀಣ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಬೇಕಿದೆ.

ಕುಲಕಸುಬು ಬಿಟಿಲ್ಲ: ಮಡಕೆ ತಯಾರಿಕ ಸಿದ್ದಯ್ಯ
ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಮಾತ್ರ ಮಡಕೆ ವೃತ್ತಿ ನಡೆಯುತ್ತದೆ. ಉಳಿದ ದಿನಗಳಲ್ಲಿ ಕೆಲಸವಿಲ್ಲದಂತಾಗುತ್ತದೆ. ಆದರೂ, ವಂಶಪಾರಂಪರ್ಯವಾಗಿ ಬಂದ ವೃತ್ತಿಯನ್ನು ನಿಲ್ಲಿಸಲು ಸಾಧ್ಯವಾಗಲ್ಲ. ವೃತ್ತಿಯಿಂದ ಗಳಿಸುವ ಹಣದಿಂದ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಕುಲಕಸುಬು ಬಿಟ್ಟಿಲ್ಲ ಎಂಬುದೇ ತೃಪ್ತಿ ಎಂಬ ಭಾವನೆ ಯೊಂದಿಗೆ ಕುಂಬಾರಿಕೆ ನಡೆಸುತ್ತಿದ್ದೇವೆ ಎನ್ನುತ್ತಾರೆ ಮಡಕೆ ತಯಾರಿಸುತ್ತಿರುವ ಗೌರಿಬಿದನೂರು ತಾಲೂಕಿನ ಕಮಲಾಪುರದ ಸಿದ್ದಯ್ಯ.

ಕುಂಬಾರ ವೃತ್ತಿಗೆ ಪೆಟ್ಟು
ಬೇಸಿಗೆಯಲ್ಲಿ ತಣ್ಣನೆ ನೀರಿಗಾಗಿ ಜನರು ಮಡಕೆ ಮೊರೆ ಹೋಗುವರು. ಉಳಿದ ದಿನಗಳಲ್ಲಿ ಮಡಕೆ ಕೇಳುವವರೇ ಇರಲ್ಲ, ಮಡಕೆ ಬಿಟ್ಟರೆ ಮಣ್ಣಿನ ಪಾತ್ರೆ, ತಟ್ಟೆಗಳನ್ನು ಯಾರೂ ಕೇಳಲ್ಲ. ಹೀಗಾಗಿ ಕುಂಬಾರರು ನೀರಿನ ಮಡಕೆ, ತಂದೂರಿ ರೋಟಿಗಳಿಗೆ ಬಳಸುವ ವಾಡೆಗಳು, ಹೂವಿನ ಕುಂಡಗಳ ತಯಾರಿಕೆಗಷ್ಟೆ ಸೀಮಿತರಾಗಿದ್ದಾರೆ.
ವಿ.ಡಿ.ಗಣೇಶ್, ಗೌರಿಬಿದನೂರು

Advertisement

Udayavani is now on Telegram. Click here to join our channel and stay updated with the latest news.

Next