Advertisement

ಸೆ.27ರಿಂದ “ಆಟಕ್ಕುಂಟು ಲೆಕ್ಕಕ್ಕಿಲ್ಲ’

10:23 AM Sep 20, 2019 | Lakshmi GovindaRaju |

ಸಂಚಾರಿ ವಿಜಯ್‌ “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಸೆ.27 ರಂದು ತೆರೆಕಾಣುತ್ತಿದೆ. ಈ ಮೂಲಕ ಸಂಚಾರಿ ವಿಜಯ್‌ ಕಣ್ಣಲ್ಲಿ ಮತ್ತೆ ಭರವಸೆ ಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರೇಕ್ಷಕರು ಕೂಡಾ ಸಿನಿಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಕೂಡಾ ಚಿತ್ರತಂಡಕ್ಕಿದೆ.

Advertisement

ರಾಮ್‌ ಜೆ ಚಂದ್ರ ಈ ಚಿತ್ರದ ನಿರ್ದೇಶಕರು. ಇವರಿಗಿದು ಚೊಚ್ಚಲ ಸಿನಿಮಾ. ಚಿತ್ರೀಕರಣಕ್ಕೆ ಹೋಗುವ ಮೊದಲು ಸಾಕಷ್ಟು ಪೂರ್ವತಯಾರಿ ಮಾಡಿಕೊಂಡ ಪರಿಣಾಮ ಸಿನಿಮಾ ಕೂಡಾ ಚೆನ್ನಾಗಿ ಮೂಡಿಬಂದ ಖುಷಿ ಚಿತ್ರತಂಡದ್ದು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ಈಗಾಗಲೇ ಟ್ರೇಲರ್‌ ಹಿಟ್‌ ಆಗಿದ್ದು, ಸಿನಿಮಾ ಮೇಲೆ ಭರವಸೆ ಮೂಡಿಸಿದೆ. ಇದು ಮನೋಲೋಕದ ಸುತ್ತ ನಡೆಯುವ ಕಥೆ. ಈ ಕಥೆಯನ್ನು ಬರೆಯುವಾಗಲೇ ನನ್ನ ಮನಸಲ್ಲಿ ಈ ಪಾತ್ರಕ್ಕೆ ಸಂಚಾರಿ ವಿಜಯ್‌ ಫಿಕ್ಸ್‌ ಆಗಿದ್ದರು.

ಅದರಂತೆ ಅವರು ಕೂಡಾ ಕಥೆ ಇಷ್ಟಪಟ್ಟು ಒಪ್ಪಿಕೊಂಡರು. ಪ್ರತಿ ಕ್ರೈಂ ಹಿಂದೆಯೂ ಮನಸಿಗೆ ಸಂಬಂಧಿಸಿದ ಕಾರಣಗಳಿರುತ್ತವೆ. ಮಾನಸಿಕವಾಗಿ ಸರಿಯಾಗಿರುವವರು ಕೊಲೆಯಂಥ ಕೃತ್ಯಗಳಿಗೆ ಕೈ ಹಾಕಲು ಸಾಧ್ಯವೇ ಇಲ್ಲ. ಅಂಥದ್ದನ್ನು ಮಾಡುವವರ ಮನಸ್ಥಿತಿ ಬೇರೆ ತೆರನಾಗಿರುತ್ತದೆ. ಆ ತರಹದ ಮನಸ್ಥಿತಿಯ ಸುತ್ತ ಈ ಸಿನಿಮಾ ಸಾಗುತ್ತದೆ. ಈ ಚಿತ್ರ ಸೈಕಾಲಾಜಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ನಲ್ಲಿ ಮೂಡಿಬಂದಿದೆ’ ಎನ್ನುವುದು ನಿರ್ದೇಶಕರ ಮಾತು.

ಮಾನಸಿಕ ವಿಷಯಗಳ ಕುರಿತಾದ ಹಲವು ಅಂಶಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ. ಮುಖ್ಯವಾಗಿ ಅದೆಷ್ಟೇ ಆರೋಗ್ಯವಂತರಾಗಿರೋ ಮನುಷ್ಯರಲ್ಲಿಯೂ ಒಂದಷ್ಟು ಮಾನಸಿಕ ಸಮಸ್ಯೆಗಳು ಇರುತ್ತವೆ. ಅದರ ಪ್ರಮಾಣ ಕೊಂಚ ಹೆಚ್ಚಿರುವವರು ಕೂಡ ನಮ್ಮೊಡನೆ ಸಾಮಾನ್ಯರಂತೆಯೇ ಬದುಕುತ್ತಿರುತ್ತಾರೆ. ಆದರೆ, ಅವರ ಮನಸ್ಥಿತಿ ತಿಳಿಯೋದು ಕ್ರೈಂ ನಡೆದಾಗ. ಅಂಥಹ ಅಂಶಗಳನ್ನು “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರದಲ್ಲಿ ಹೇಳಲಾಗಿದೆಯಂತೆ. ಚಿತ್ರದಲ್ಲಿ ಸಂಚಾರಿ ವಿಜಯ್‌, ಮಯೂರಿ, ರಶ್ಮಿ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next