ಬೆಂಗಳೂರು:ಜಂಟಿ ಅಧಿವೇಶನ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರದಿಂದ ರಾಜ್ಯ ಬಜೆಟ್ ಪೂರ್ವ ಸಿದ್ದತಾ ಸಭೆ ಆರಂಭಿಸಲಿದ್ದಾರೆ.
ಇಂದಿನಿಂದ ಮಾರ್ಚ್ 3 ರ ವರೆಗೂ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರ ಜೊತೆ ಸುದೀರ್ಘ ಚರ್ಚೆ ನಡೆಸಿ, ಬಜೆಟ್ ಸಿದ್ದತೆ ಮಾಡಲಿದ್ದಾರೆ.
2017-18 ನೇ ಸಾಲಿನ ಬಜೆಟ್ ಪೂರ್ವ ಸಿದ್ಧತೆಯ ಮೊದಲ ಸಭೆಯನ್ನು ರೈತ ಮುಖಂಡರು ಹಾಗೂ ರೈತರ ಜೊತೆ ಸಮಾಲೋಚನೆ ನಡೆಸಲು ತೀರ್ಮಾನಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಳಿಗ್ಗೆಯಿಂದ ಇಡೀ ದಿನ ರೈತರ ಅಹವಾಲುಗಳನ್ನು ಆಲಿಸಲಿದ್ದಾರೆ. ಪ್ರಮುಖವಾಗಿ ರಾಜ್ಯದಲ್ಲಿ ಸತತ ಬರಗಾಲ ಹಿನ್ನೆಲೆಯಲ್ಲಿ ರೈತ ಮುಖಂಡರು ಸಾಲ ಮನ್ನಾ ಮಾಡುವ ಬೇಡಿಕೆ ಇಡಲು ಮುಂದಾಗಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ತಮ್ಮ ಬಜೆಟ್ನಲ್ಲಿ ಘೋಷಿಸುವ ಬಗ್ಗೆ ಭರವಸೆ ನೀಡುವ ಸಾಧ್ಯತೆ ಇದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ವರ್ಷ ಆಗಿರುವುದರಿಂದ ಮುಖ್ಯಮಂತ್ರಿ ಜನಪ್ರಿಯ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಮುಂದಿನ ವರ್ಷ ಬಜೆಟ್ ಮಂಡನೆಗೆ ಅವಕಾಶ ದೊರೆತರೂ ಅದನ್ನು ಅನುಷ್ಠಾನ ಮಾಡಲು ಹೊಸ ಸರ್ಕಾರ ಬರುವುದರಿಂದ ಈ ವರ್ಷವೇ ಜನಪ್ರಿಯ ಯೋಜನೆಗಳ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ.