Advertisement

ಆತ್ಮಕಥನದ ಪುಟಗಳಿಂದ…

07:00 AM Apr 08, 2018 | |

ಪ್ರಸಿದ್ಧ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಆತ್ಮಕಥನ ಗಿರಿಜವ್ವನ ಮಗ ಮುಂದಿನ ಭಾನುವಾರ ಬಿಡುಗಡೆಯಾಗುತ್ತಿದೆ. ಅದರ ಕೆಲವು ಪ್ಯಾರಾಗಳು ಇಲ್ಲಿವೆ…

Advertisement

ಒಂದು ದೃಷ್ಟಿಯಿಂದ, ನಮ್ಮ ಸಮಸ್ತ ಬರವಣಿಗೆ ಒಂದು ಬಗೆಯ ನಿರಂತರ ಆತ್ಮಾಭಿವ್ಯಕ್ತಿ ಪ್ರಕ್ರಿಯೆ. ಆದರೂ ಆತ್ಮಕಥೆ ಎಂಬುದು ಉಳಿದ ಸಾಹಿತ್ಯ ಪ್ರಕಾರಗಳಿಗಿಂತ ಭಿನ್ನವಾದ ರಕ್ತ ಮಾಂಸ ನರ ನಾಡಿ ಮಿಡಿತಗಳನ್ನು ಅಪೇಕ್ಷಿಸುವಂಥದು. ಇದು ಸ್ವಯಂ-ಕರಣೀಯ ಶಸ್ತ್ರಚಿಕಿತ್ಸಾ ವಿಧಾನ. ಇಲ್ಲಿ ನಮ್ಮನ್ನು ನಾವೇ ಕಿತ್ತು, ಕೊಯ್ದು, ಜೋಡಿಸಿ, ಮಡಿಸಿ, ಹೊಲಿದು ಇಟ್ಟುಕೊಳ್ಳಬೇಕಾಗುತ್ತದೆ. ಹೀಗೆ ಮಾಡುವಾಗ ಒಮ್ಮೊಮ್ಮೆ ಬದುಕಿನ ಹಾದಿಯಲ್ಲಿ ಜೊತೆಗೆ ಹೆಜ್ಜೆ ಹಾಕಿದ್ದವರನ್ನು ನಲಿಸಬಹುದು, ನೋಯಿಸಬಹುದು, ನೆನೆಯಬಹುದು, ನೆನೆಸಬಹುದು. ಆತ್ಮಕಥೆ ಬರೆಯುವುದು ಎರಡೂ ಕಡೆಗೆ ಹರಿತವಾದ ಅಲಗು ಹೊಂದಿದ ಖಡ್ಗದ ಮೇಲೆ ನಡೆದಂತೆ. ಹೇಳಿದರೆ ಕಷ್ಟ , ಹೇಳದಿದ್ದರೆ ಅಪರಾಧ. ಸ್ವಪ್ರಶಂಸೆ, ಅಹಂಕಾರ, ಭಾವುಕತೆ, ಕಲ್ಪನೆ, ಅತಿರಂಜನೆ, ಮರೆವು ಮುಂತಾದುವುಗಳ ಭಯಂ-ಕರ ಕೊಳ್ಳಗಳನ್ನು ದಾಟಿ ಬಂದು ಸತ್ಯವನ್ನು, ಸಾಚಾತನವನ್ನು ಮೆರುಗಿನಿಂದ ತೋರಿಸಿ, ನುಡಿದು ಬರೆಯಬೇಕಾಗುತ್ತದೆ. ಮೈತುಂಬ, ಮನಸ್ಸಿನ ತುಂಬ ಕ್ಷಣಕ್ಷಣಕ್ಕೂ ವ್ಯಾಪಿಸುವ ಇಂಥ ಎಚ್ಚರಿಕೆಯ ಚುಚ್ಚುಮುಳ್ಳುಗಳಿಂದ ಆತ್ಮರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಆಗ ಆ ಬರವಣಿಗೆ ನಿಜವಾದ, ಯೋಗ್ಯವಾದ ಇತಿಹಾಸವಾಗಿಯೂ ಸಾಹಿತ್ಯವಾಗಿಯೂ ಉಳಿಯುವಂಥ ಕೃತಿಯಾಗುವ ಸಾಧ್ಯತೆ ಹೆಚ್ಚುತ್ತದೆ. 

ವಿಚಾರ, ಭಾವ, ಅನಿಸಿಕೆಗಳ ಸಂಕೋಲೆಗಳಿಂದ ಸ್ವಯಂಬಂಧಿತ ನಾಗಿದ್ದರೂ ಸ್ವಮುಕ್ತಿಗಾಗಿ ಯತ್ನಿಸಿ ನನ್ನನ್ನು ನಾನು ನೋಡಿಕೊಳ್ಳುವ ಈ ಪ್ರಯತ್ನ ಇತಿಹಾಸವಾಗುವುದೋ ಸಾಹಿತ್ಯವಾಗುವುದೋ ಕಥೆಯಾಗುವುದೋ ಬರಿಯ ವ್ಯಥೆಯಾಗುವುದೋ ತಿಳಿಯದು. ಆದರೂ ಬರೆಯುತ್ತೇನೆ. ಹಾಗೆ ನೋಡಿದರೆ ನನ್ನ ಎಲ್ಲ ಬರವಣಿಗೆಗಳೂ ನನ್ನ ಆತ್ಮಕಥೆಗಳೇ. ನನ್ನ ಮಾತು, ಅಕ್ಷರ, ನಡೆನುಡಿಗಳಲ್ಲಿ ಸಾಧ್ಯವಿದ್ದಷ್ಟು ಪ್ರಾಮಾಣಿಕವಾಗಿ ನನ್ನನ್ನೇ ತೂರಿಸುವ, ತೋರಿಸುವ ಪ್ರಯತ್ನವನ್ನು ನಾನು ಯಾವಾಗಲೂ ಮಾಡುತ್ತ ಬಂದಿದ್ದೇನೆ. ಈಗ ಅದೇ ನಿಟ್ಟಿನಲ್ಲಿ ಇನ್ನಷ್ಟು ದಟ್ಟ ಹಾಗೂ ದಿಟ್ಟ ಹೆಜ್ಜೆಗಳನ್ನು ಇಲ್ಲಿ ಮೂಡಿಸಬೇಕಾಗಿದೆ. 
.
    ಎಲ್ಲಿಂದ ಆರಂಭಿಸಲಿ? ಏನು ಹೇಳಲಿ? ಏನು ಬಿಡಲಿ? ಅಕ್ಷರಶಃ ಅಸಂಖ್ಯ ನೆನಪುಗಳ, ಪ್ರಸಂಗಗಳ, ಆಗುಹೋಗುಗಳ ಸಮುದ್ರವೇ ನನ್ನನ್ನು ಕದಡುತ್ತಿದೆ, ಕಲಕುತ್ತಿದೆ; ಹೀಗಾಗಿ ಇಂಥ ಬರವಣಿಗೆಗೆ ಒಂದು ನಿಶ್ಚಿತವಾದ ಆಕಾರವನ್ನಾಗಲಿ ಚೌಕಟ್ಟನ್ನಾಗಲಿ ಕೊಡುವುದು ನನಗೆ ಕಷ್ಟದ ಕೆಲಸ. ನೆನಪುಗಳು, ಅವುಗಳ ಕಾಲಘಟ್ಟಗಳು ಕ್ರಮವಾಗಿ ಅಥವಾ ಸುಸಂಬದ್ಧವಾಗಿ ಬರಲಾರವೆನಿಸುತ್ತದೆ. 

    ನಮ್ಮ ಮನೆತನದ ಹೆಳವ (ಹೇಳುವವ) ತಮ್ಮಣ್ಣ ಯಲ್ಲಪ್ಪ ಚಣಬತ್ತಿ. ಅವನು ಕಳೆದ 25-30 ವರ್ಷಗಳಿಂದ ಪ್ರತಿವರ್ಷ ನನ್ನಲ್ಲಿ ಬಂದುಹೋಗುತ್ತಾನೆ. ಮೊದಲು ಗೋಕಾಕ ಹತ್ತಿರದ ಹುಲಿಕಟ್ಟಿಯಲ್ಲಿದ್ದ. ನಂತರ ಸೊಗಲದ ಹತ್ತಿರದ ಕಾರಲಕಟ್ಟಿಯಲ್ಲಿ ವಾಸಿಸಿರಬೇಕು. ಈಗ ಕೆಲವು ವರ್ಷಗಳಿಂದ ಕಲಘಟಗಿ ತಾಲೂಕಿನ ಹಸರಂಬಿ-ಹುಲಕೊಪ್ಪ ಹತ್ತಿರ ಆರೇಬಸನಕೊಪ್ಪದಲ್ಲಿ ನೆಲೆಸಿ¨ªಾನೆ. ಈಗ ಅವನಿಗೆ ಅಜಮಾಸು 80-82ರ ವಯಸ್ಸು. ಅವನ ಚೋಪಡಿ ಪುಸ್ತಕದಲ್ಲಿ ನಮ್ಮ ಮನೆತನದ ಸ್ವಲ್ಪ ಇತಿಹಾಸ, ಮೂಲಪುರುಷರ ಹೆಸರುಗಳು ಸಿಗುತ್ತವೆ. ಅದರ ಪ್ರಕಾರ, ಕಲಘಟಗಿಯ ಹಿರೇಮಠದ ಕರಿಬಸಯ್ಯಸ್ವಾಮಿ ನಮ್ಮ ಮನೆತನದ ಗುರುಗಳು. ಕರಿಸಿದ್ಧಸ್ವಾಮಿ ಎಂತಲೂ ಒಮ್ಮೆ ಹೇಳಿ¨ªಾನೆ. ಮನೆದೇವರು ಶ್ರೀಶೈಲದ ಪರ್ವತಮಲ್ಲಯ್ಯ. ಮೊದಲು ಇಂಡಿ-ಯಳಮಲಿಗಳಲ್ಲಿ ಗೌಡಕಿ ಮಾಡಿದ ಮನೆತನ. ದೊಡ್ಡಮಲ್ಲಪ್ಪ, ಪರಪ್ಪಶೆಟ್ಟರು, ಗುರುಸಿದ್ಧಪ್ಪ ಮುಂತಾದವರು ಮೂಲಪುರುಷರು. ಇವನ ಪಟ್ಟಿಯ ಪ್ರಕಾರ ಪ್ರಸಕ್ತ ಪಟ್ಟಣಶೆಟ್ಟಿ ಮನೆತನದಲ್ಲಿ ನನ್ನ ತಂದೆ ಬಸಪ್ಪ ಹದಿಮೂರನೆಯವನು. ನಾನು ಹದಿನಾಲ್ಕನೆಯವನು. 

ನನ್ನ ಅಪ್ಪ ನನಗೆ ತಮ್ಮ ತಂದೆ ಸಿದ್ಧಲಿಂಗಪ್ಪನ ಹೆಸರನ್ನೇ ಇಟ್ಟಿ¨ªಾರೆ. ಅವರ ಅವ್ವನ ಹೆಸರು ನಾಗಮ್ಮ ಎಂದು ಇತ್ತಂತೆ. ಅಪ್ಪನ ತಮ್ಮ ನಾಗಪ್ಪ. ಅವನು 1966ರಲ್ಲಿ ತೀರಿಕೊಂಡ. ಅಪ್ಪನ ತಂಗಿ ಪಾರ್ವತಿಯನ್ನು ಹುಬ್ಬಳ್ಳಿಯ ಹುರಕಡ್ಲಿಯವರ ಮನೆಗೆ ಕೊಟ್ಟಿದ್ದರು. ಅವಳು ಬಹಳ ಬೇಗ ತೀರಿಕೊಂಡಿ¨ªಾಳೆ. ಅವಳ ಮೂವರು ಮಕ್ಕಳಲ್ಲಿ ಒಬ್ಬನಾದ ಚಂಬಣ್ಣ ವಕೀಲನಾಗಿ¨ªಾನೆ. ಹುಬ್ಬಳ್ಳಿಯಲ್ಲಿ ಬಾಸೆಲ್‌ ಮಿಶನ್‌ ಹೈಸ್ಕೂಲಿನಲ್ಲಿ ಕೆಲಕಾಲ ನನ್ನ ವಿದ್ಯಾರ್ಥಿಯಾಗಿದ್ದ. ಆಗಾಗ ಸಿಗುತ್ತಿರುತ್ತಾನೆ. ನಾಗಪ್ಪ ಕಾಕಾನ ಪತ್ನಿ ಗಂಗವ್ವ ಮತ್ತು ಮಕ್ಕಳು ಧಾರವಾಡದಲ್ಲಿ ಬಾಳಿಕಾಯಿ ಓಣಿಯಲ್ಲಿಯೇ ಇ¨ªಾರೆ. 

Advertisement

ಅವ್ವನ ಪ್ರೀತಿಯ ತಮ್ಮನಾದ ಗುರುಪಾದಪ್ಪ ಧಾರವಾಡದಲ್ಲಿ ತನ್ನ ಅಕ್ಕ, ನನ್ನ ಅವ್ವನ ಜೊತೆಗೇ ಇರುತ್ತಿದ್ದ. ನನ್ನ ಅಪ್ಪ ತಾನು ಬಹಳ ಕಾಲ ಬದುಕುವುದಿಲ್ಲ ಎಂದು ತಿಳಿದಿದ್ದನೇನೊ. “”ನಿನ್ನ ಮಗ ಬ್ಯಾರಿಸ್ಟರ್‌ ಆಗ್ತಾನ, ಮುಂದ ಅವನೇ ನಿನ್ನನ್ನ ನೋಡಿಕೊಳ್ಳಾಂವ” ಎಂದು ಅವ್ವನಿಗೆ ಹೇಳುತ್ತಿದ್ದನಂತೆ. ಒಂದು ಸಲ ಗಣಪತಿ ಇಟ್ಟಾಗ ನಾನು ಗಣಪತಿಯ ಕೈ ಮುರಿದೆನಂತೆ. ಆ ಸಲ ಏನೋ ಅನಾಹುತ ಆಗುತ್ತದೆ ಎಂದು ಅವ್ವನಿಗೆ ಅನಿಸಿತಂತೆ. ಆ ವರುಷವೇ ಅಪ್ಪ ತೀರಿದರು ಎಂದೂ ಅವ್ವ ಹೇಳುತ್ತಿದ್ದಳು. ಒಂದು ಬೆಳಗ್ಗೆ ಸ್ನಾನ-ಪೂಜೆ ಮುಗಿಸಿಕೊಂಡು, ಇನ್ನು ನನ್ನ ಕಾಲ ಮುಗಿಯಿತು, ಎನ್ನುತ್ತ ಗೋಡೆಗೆ ಕುಳಿತರಂತೆ. ಹಾಗೆಯೇ ಜೀವ ಹೋಯಿತಂತೆ.

ಅಪ್ಪನ ಹೆಣ ಹೊತ್ತ ಸಿದಿಗೆಯನ್ನು ಬಾಳಿಕಾಯಿ ಓಣಿಯ ನಮ್ಮ ಮನೆಯಿಂದ ಸಾಗಿಸಿದ್ದು, ಸಿದಿಗೆಯ ಮುಂದೆ ಮುಂದೆ ಹಡದಿ ಹಾಸುತ್ತ ಹೋದದ್ದು, ಅಪ್ಪ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಹಮಾಲನಾಗಿದ್ದ ಚಂದನಮಟ್ಟಿಯ ಪರುತಪ್ಪ ಎನ್ನುವ ಎತ್ತರದ ಆಳು ನನ್ನನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ನಡೆದದ್ದು, ಸ್ಮಶಾನದಲ್ಲಿ ಅಪ್ಪನ ಶವವನ್ನು ಕುಣಿಗೆ ಇಳಿಸಿದ್ದು ನನಗೆ ಈಗಲೂ ನೆನಪಿದೆ. 

ನಮ್ಮಜ್ಜ ಮೂಲತಃ ಯಾದವಾಡದಂವ ಇದ್ದಿರಲಿಕ್ಕಿಲ್ಲ. ಬಹುಶಃ ಸವದತ್ತಿ, ಯಕ್ಕುಂಡಿ ಕಡೆಯಿಂದ ಬಂದು, ಇಲ್ಲಿ ಹೇಗೋ ನೆಲೆ ಊರಿದ್ದ ಅನಿಸುತ್ತದೆ. ಆಮೇಲೆ ಸಾವಕಾಶ ಊರ ಅಗಸಿಯೊಳಗಿನ ಒಂದೀಟು ಜಾಗ ಸಹ ಖರೀದಿ ಮಾಡಿದ್ದ. ತನ್ನ ತಿಳಿವಳಿಕೆ ಮತ್ತು ಸಮಾಧಾನದ ಸ್ವಭಾವದಿಂದಾಗಿ ಊರೊಳಗಿನ ಎಲ್ಲರಿಗೂ ಬೇಕಾದವನಾಗಿದ್ದ. ಮಂದಿಯ ಹೊಲದಲ್ಲಿ ಕೂಲಿ ಮಾಡುವ ಕೆಲಸ ಬಿಟ್ಟು, ಶಾಣೇತನದಿಂದ ಅಗಸಿಯ ಜಾಗದಲ್ಲಿ ಕುಟುಕುಟು ಅಂಗಡಿ ಶುರುಮಾಡಿದ್ದ. ಮೊದಮೊದಲು ಬರೇ ಕಡಲೆ ಹುರಿದು ಪುಟಾಣಿ ಮಾಡಿ, ಮಾರುವ ಅಂಗಡಿ ಮಾಡಿದ್ದ. ನಂತರ ಸಾವಕಾಶ ಚಾದಂಗಡಿ ಮಾಡಿದ್ದ. ನನಗೆ ತಿಳಿದಂತೆ ಯಾದವಾಡದಲ್ಲಿ ಮೊದಲು ಚಾದಂಗಡಿ ಶುರು ಮಾಡಿದ್ದಂವ ರೂಪಾಕ್ಷಜ್ಜನೇ. ಆ ಅಂಗಡಿಯಲ್ಲಿ ನಮುನಮೂನೆಯ ಚುರಮರಿ, ಕಾರದಾಣಿ, ಹಿಟ್ಟಿನ ಬಜಿ, ಉಳ್ಳಾಗಡ್ಡಿ ಪುಗ್ಗೆ ಮಾಡಿ, ಅಲ್ಲಿಯ ಮಂದಿಗೆ ತಿನಿಸಿದ್ದ. ಮುಂದೆ ತನ್ನ ಮಕ್ಕಳು ಕೈಗುಟುಕರಾಗಿ ಬಂದಾಗ ಅವರ ಬಲ ಮತ್ತು ಸಹಾಯ ಪಡೆದು ನಿಧಾನ ಅಂಗಡಿಯನ್ನು, ತಿನಿಸು ಪದಾರ್ಥಗಳನ್ನು ಬೆಳೆಸುತ್ತ ಹೋಗಿದ್ದ. ಒಂದು ದೊಡ್ಡ ಕುದುರೆ ಕೊಂಡಿದ್ದ. ಅದರ ಮೇಲೆ ಸಂತೆಯಿಂದ ಅಂಗಡಿ ಸಾಮಾನು ತರುತ್ತಿದ್ದ. ನಂತರದ ದಿನಗಳಲ್ಲಿ, ಸಾಮಾನು ಹೆಚ್ಚಿದಾಗ, ಚಕ್ಕಡಿ ಬಾಡಿಗೆ ಮಾಡಿಕೊಂಡು ಸಂತೆ ತರುವ ಪದ್ಧತಿ ಜಾರಿಗೆ ಬಂದಿತ್ತು.  

ನನ್ನ ಮೂರೂ ಮಂದಿ ಮಾವಂದಿರಿಗೆ ಭಜನಿ, ಹಾಡು, ಪಿಯಾನ ಪೆಟಿಗಿ ಬಾರಿಸುವುದು, ನಾಟಕ ಮಾಡಿಸುವುದು ಬಹಳ ಸೇರುತ್ತಿತ್ತು. ಗುರುಪಾದಮಾವನ ಖಾಸಾ ಗೆಳೆಯನಾಗಿದ್ದ ಪತ್ತಾರ ಈರಣ್ಣ ಯಾವಾಗಲೂ ಇವರ ಹಿಂಬÇÉೇ ಇರುತ್ತಿದ್ದ. ಈರಣ್ಣನ ಮನೆಯವರು ಮೂಲತಃ ಯಾದವಾಡದವರಲ್ಲ; ಯಾವ ಊರಿಂದ ಬಂದು ಇಲ್ಲಿ ಉಳಕೊಂಡಿದ್ದರೋ ಗೊತ್ತಿಲ್ಲ. ಅವನು ಕಾಲ ಪೆಟಿಗಿ ಬಾರಿಸುತ್ತಿದ್ದ. ಸ್ವಲ್ಪ ಓದು-ಬರಹ ತಿಳಿದಿದ್ದ. ಚೊಲೊ ಮಾಸ್ತರ ಇದ್ದು ನಾಟಕ ಕಲಿಸುವ ಮನಸ್ಸಿದ್ದಂವ ಎಂದು ಗೊತ್ತಾಯಿತು. ಅವನು ಯಾವಾಗಲೂ ತನ್ನಷ್ಟಕ್ಕೇ ಏನಾದರೂ ಒಂದು ಹಾಡನ್ನು ಗುನುಗುನಿಸುತ್ತ ಇರುತ್ತಿದ್ದ. ತಲೆ ಮೇಲಿನ ಬಿಳೇ ಟೊಪ್ಪಿಗೆಯನ್ನು ಆಗಾಗ ಅತ್ತಿತ್ತ ಸರಿಸಾಡುತ್ತಿದ್ದ. ಶಾಂತ ಸ್ವಭಾವದ, ಸಂಕೋಚಶೀಲ ಪತ್ತಾರ ಮಾಸ್ತರನ ಸಲುವಾಗಿ ಮತ್ತು ತಮ್ಮ ನಾಟಕದ ಹುಕಿಯ ಸಲುವಾಗಿ ನನ್ನ ಮಾವಂದಿರು, ಅವರ ಗೆಳೆಯಂದಿರು ಕೂಡಿಕೊಂಡು ಆಗಾಗ ನಾಟಕ ಆಡಿಸುವ ಪರಿಪಾಟಿ ಶುರು ಮಾಡಿದ್ದರು. ಸಾಮಾನ್ಯವಾಗಿ ದೀಪಾವಳಿ ನಂತರ ಮತ್ತು ಯುಗಾದಿ ನಡುವೆ ಯಾವುದಾದರೂ ನಾಟಕ ಕೂಡಿಸುವ ಜವಾಬ್ದಾರಿ ಮಾಸ್ತರ ಮತ್ತು ಗುರುಪಾದಮಾವ ಹೊರುತ್ತಿದ್ದರು. ಮಾಸ್ತರನಿಗೆ ಸಣ್ಣಾಟ ಕಲಿಸುವ ಮನಸ್ಸು ಇದ್ದುದರಿಂದ ಯಾದವಾಡದಲ್ಲಿ ಬಹುಶಃ ಬೇರೆ ಬೇರೆ ಸಣ್ಣಾಟಗಳೇ ಆಗುತ್ತಿದ್ದುವು. 

ಸಿದ್ಧಲಿಂಗ ಪಟ್ಟಣಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next