Advertisement

ಪುಣ್ಯಕೋಟಿ ಕಥೆಯಲ್ಲಿ ಸೌಹಾರ್ದ ಸಂದೇಶ

11:33 AM Aug 25, 2018 | |

ಸಮೀರನನ್ನು ಬಿಟ್ಟುಬಿಡಿ ಎಂದು ಕಣ್ಣೀರಿಡುತ್ತಾ ರಾಜಣ್ಣನ ಪತ್ನಿ ಕಿವಿಯೋಲೆ, ಕೈಬಳೆಯನ್ನು “ಹುಲಿ’ಯ ಕೈಗಿಡುತ್ತಾಳೆ. ಇತ್ತ ಕಡೆ ಸಮೀರ ತನ್ನ ಸಹೋದರಿ ಫಾತಿಮಾ ಬರೆದ ಭಾನುವಿನ ಚಿತ್ರ ಹಿಡಿದುಕೊಂಡು ಊರೆಲ್ಲಾ ಹುಡುಕುತ್ತಿರುತ್ತಾನೆ. ಮತ್ತೂಂದು ಕಡೆ ಭಾನು ಹೋದ ಆಟೋ ಆ್ಯಕ್ಸಿಡೆಂಟ್‌ ಆಗಿರುವ ಸುದ್ದಿ ಕೇಳಿ ಸಮೀರನ ಕುಟುಂಬ ಹಾಗೂ ರಾಜಣ್ಣನ ಕುಟುಂಬಕ್ಕೆ ಆಘಾತಕ್ಕೊಳಗಾಗುತ್ತದೆ. ಸಮೀರ ಮತ್ತು ಭಾನುವಿನ ನಂಟೇನು, ಭಾನು ಸಿಗುತ್ತಾಳಾ …. ಕುತೂಹಲವನ್ನು ಕಾಯ್ದಿರಿಸಲಾಗಿದೆ. 

Advertisement

ಕೆಲವು ಚಿತ್ರಗಳು ಇಷ್ಟವಾಗಲು ಯಾವುದೋ ಒಂದು ಅಂಶ ಕಾರಣವಾಗಿರುತ್ತವೆ. ಆದರೆ, “ಒಂದಲ್ಲಾ ಎರಡಲ್ಲಾ’ ಚಿತ್ರ ಇಷ್ಟವಾಗಲು ಹಲವು ಕಾರಣಗಳು ಚಿತ್ರದಲ್ಲಿ ಸಿಗುತ್ತವೆ. ಸಿನಿಮಾದುದ್ದಕ್ಕೂ ಸಿಗುವ ಹಲವು ಸನ್ನಿವೇಶ-ಸಂದರ್ಭಗಳು, ಸಾಗುವ ರೀತಿ ಎಲ್ಲವೂ ಪ್ರೇಕ್ಷಕ ಮತ್ತು ಕಥೆಯ ನಡುವಿನ ಬಾಂಧವ್ಯವನ್ನು ಬೆಸೆಯುತ್ತಾ ಹೋಗುತ್ತವೆ. ಆ ಮಟ್ಟಿಗೆ “ರಾಮಾ ರಾಮಾರೇ’ ನಂತರ ನಿರ್ದೇಶಕ ಸತ್ಯಪ್ರಕಾಶ್‌ ಮತ್ತೂಂದು ವಿಭಿನ್ನ ಕಥೆಯನ್ನು ಆಯ್ಕೆ ಮಾಡಿದ್ದಾರೆ ಮತ್ತು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ಮೇಲ್ನೋಟಕ್ಕೆ ತುಂಬಾ ಸರಳವಾಗಿ ಸಾಗುವ ಕಥೆಯಲ್ಲಿ ನಿರ್ದೇಶಕರು ನಾನಾರ್ಥಗಳನ್ನು ತುಂಬುತ್ತಾ, ಸೂಕ್ಷ್ಮವಾದ ಸಂದೇಶಗಳನ್ನು ನೀಡುತ್ತಾ ಮುಂದೆ ಸಾಗಿರುವುದು ಅವರ ಜಾಣ್ಮೆಗೆ ಹಿಡಿದ ಕನ್ನಡಿ. ಈ ಸಿನಿಮಾದ ಪ್ರಮುಖ ಅಂಶವೆಂದರೆ ಇಡೀ ಸಿನಿಮಾ ಪಾಸಿಟಿವ್‌ ಅಂಶಗಳೊಂದಿಗೆ ಸಾಗುತ್ತದೆ. ಎಲ್ಲೂ ನಿಮಗೆ ತುಂಬಾ ಆಘಾತಕಾರಿ ಎನಿಸುವ, ಬೀಭತ್ಸವಾದ ದೃಶ್ಯಗಳು ಇಲ್ಲ. ಆರಂಭದಿಂದ ಕೊನೆಯವರೆಗೂ ಒಂದೇ ಗುಣಮಟ್ಟವನ್ನು ಕಾಯ್ದುಕೊಂಡು ಸಾಗುವ ಕಥೆ, ಪ್ರತಿ ಪಾತ್ರಗಳಿಗೆ ಹೊಸ ಚೈತನ್ಯ ತುಂಬುತ್ತಾ, ಜೀವನ ಪ್ರೀತಿ ಹೇಳುತ್ತಾ, ಬದಲಾವಣೆಯ ಮಾರ್ಗಕ್ಕೆ ನಾಂದಿಯಾಗುತ್ತಾ ಹೋಗುತ್ತದೆ. 

ಈ ಕಥೆಯಲ್ಲಿ ಮೂರು ಅಂಶಗಳನ್ನು ಪ್ರಮುಖವಾಗಿ ಗುರುತಿಸಬಹುದು. ಹಿಂದು-ಮುಸ್ಲಿಂ ಕುಟುಂಬವೊಂದರ ನಡುವಿನ ಬಾಂಧವ್ಯ, ಮುಗ್ಧ ಬಾಲಕನಿಗೆ ಹೋದಲ್ಲೆಲ್ಲಾ ಸಹಾಯ ಮಾಡುವ ಮತ್ತು ಆತನ ಮುಗ್ಧತೆಗೆ ಕರಗುವ ಜನ, ಮಗನನ್ನು ಕಳೆದುಕೊಂಡಿರುವ ತಂದೆಯ ವೇದನೆ …. ಹೀಗೆ ಮೂರು ಪ್ರಮುಖ ಅಂಶಗಳನ್ನು ಬಿಚ್ಚಿಡುತ್ತಾ “ಒಂದಲ್ಲಾ ಎರಡಲ್ಲಾ’ ಚಿತ್ರ ಸಾಗುತ್ತದೆ. ಇಲ್ಲಿ ನಿರ್ದೇಶಕರು ಯಾವುದೇ ಒಂದು ಜಾತಿ-ಧರ್ಮವನ್ನು ಮೊದಲಿಗೆ ವಿಜೃಂಭಿಸಿ, ಆ ನಂತರ ಅವರ ಬಾಂಧವ್ಯವನ್ನು ತೋರಿಸಿಲ್ಲ.

ಬದಲಾಗಿ ಸಿನಿಮಾದ ಆರಂಭದಿಂದಲೂ ಎರಡು ಕುಟುಂಬಗಳ ನಡುವಿನ ಅನ್ಯೋನ್ಯತೆಯನ್ನು ತುಂಬಾನೇ ಸಹಜವಾಗಿ ತೋರಿಸಿದ್ದಾರೆ. ಜೊತೆಗೆ ದೃಶ್ಯವೊಂದರಲ್ಲಿ ಸಮೀರ ದೇವಸ್ಥಾನಕ್ಕೆ ಹೋಗಿ ಅರ್ಚಕರನ್ನು “ಮೌಲ್ವಿ ಸಾಬ್‌’ ಎಂದು ಕರೆದಾಗಲೂ ಅರ್ಚಕರು ಯಾವುದೇ ಬೇಸರ ಮಾಡಿಕೊಳ್ಳದೇ, ಪುಟ್ಟ ಸಮೀರನನ್ನು ಪ್ರೀತಿಯಿಂದ ಇಡೀ ದೇವಸ್ಥಾನ ಸುತ್ತಿಸಿ, ಆಟೋ ಹತ್ತಿಸಿ ಕಳುಹಿಸುತ್ತಾರೆ. ಈ ತರಹದ ಕೆಲವು ಸೂಕ್ಷ್ಮ ದೃಶ್ಯಗಳ ಮೂಲಕ ಸೌಹಾರ್ದತೆಯ ಪಾಠ ಮಾಡಿದ್ದಾರೆ ಸತ್ಯಪ್ರಕಾಶ್‌. 

Advertisement

ಇಡೀ ಸಿನಿಮಾದ ಹೈಲೈಟ್‌ ಸಮೀರ ಹಾಗೂ ಭಾನು. ಸಮೀರ ತಾನು ತುಂಬಾನೇ ಪ್ರೀತಿಸುವ ಭಾನು ಎಂಬ ಹಸುವನ್ನು ಯಾವ ರೀತಿ ಹುಡುಕುತ್ತಾನೆ, ಅದಕ್ಕಾಗಿ ಆತ ಎಲ್ಲೆಲ್ಲಾ ಓಡಾಡುತ್ತಾನೆಂಬ ಅಂಶದ ಮೂಲಕ ಚಿತ್ರ ಸಾಗುತ್ತದೆ. ಇಲ್ಲಿ ನಿರ್ದೇಶಕರು ಪುಣ್ಯಕೋಟಿಯ ಕಥೆಯನ್ನು ಇವತ್ತಿನ ಕಾಲಕ್ಕೆ ಅನ್ವಯವಾಗುವಂತೆ ಹೇಳಿದ್ದಾರೆ. ಅಲ್ಲಿ ಸತ್ಯ ಗೆದ್ದರೆ, ಇಲ್ಲಿ ಮುಗ್ಧತೆ ಗೆಲ್ಲುತ್ತದೆ. ಇಲ್ಲೂ ನಿರ್ದೇಶಕರು ಹುಲಿ ಮತ್ತು ಹಸುವನ್ನು ಸಾಂಕೇತಿಕವಾಗಿ ಬಳಸಿಕೊಂಡಿದ್ದಾರೆ.

ಜೊತೆಗೆ ಒಬ್ಬ ಮುಗ್ಧ ಹುಡುಗ ಹೇಗೆ ಎಲ್ಲರ ಮನಗೆಲ್ಲುತ್ತಾ, ಪ್ರತಿಯೊಬ್ಬರ ಅಂತಃಕರಣವನ್ನು ಕಲುಕುತ್ತಾನೆ ಎಂಬುದನ್ನು ಅರ್ಥಪೂರ್ಣವಾಗಿ ನಿರೂಪಿಸಲಾಗಿದೆ. ಇವತ್ತಿನ ಕಾಲಘಟ್ಟಕ್ಕೆ ಈ ಚಿತ್ರ ಹೆಚ್ಚು ಸೂಕ್ತವಾಗಿದೆ. ಮನುಷ್ಯರ ನಡುವಿನ ವಿಶ್ವಾಸ, ನಂಬಿಕೆ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಸತ್ಯಪ್ರಕಾಶ್‌ ತಮ್ಮ ಸಿನಿಮಾ ಮೂಲಕ ಭರವಸೆಯ ಬೆಳಕು ಮೂಡಿಸಿದ್ದಾರೆ. “ಒಂದಲ್ಲಾ ಎರಡಲ್ಲಾ’ ಚಿತ್ರವನ್ನು ಮಕ್ಕಳ ಸಿನಿಮಾವೆಂದು ಒಂದೇ ಮಾತಿಗೆ ಹೇಳಿಬಿಡೋದು ಕಷ್ಟ.  

ಪುಟ್ಟ ಬಾಲಕನೊಬ್ಬನ ಸುತ್ತ ಸುತ್ತುವ ಸಿನಿಮಾವಾದರೂ ಉಳಿದಂತೆ ದೊಡ್ಡವರಿಗೆ  ಸೂಕ್ಷ್ಮಸಂದೇಶವಿರುವ  ಸಿನಿಮಾವಿದು. ಹಾಗಂತ ಮಕ್ಕಳಿಗೆ ಈ ಚಿತ್ರ ಇಷ್ಟವಾಗುವುದಿಲ್ಲ ಎಂದಲ್ಲ. ಚಿತ್ರದಲ್ಲಿ ಬರುವ ಸಾಕಷ್ಟು ಸನ್ನಿವೇಶಗಳು ಮಕ್ಕಳಿಗೆ ಖುಷಿ ನೀಡುತ್ತವೆ. ನಿರ್ದೇಶಕ ಸತ್ಯಪ್ರಕಾಶ್‌ ಸಿನಿಮಾವನ್ನು ಸರಳವಾಗಿ ನಿರೂಪಿಸಿದ್ದಾರೆ.  ಕೆಲವು ಸನ್ನಿವೇಶಗಳಲ್ಲಿ ಕಾಮಿಡಿಯನ್ನು ಬೆರೆಸುತ್ತಾ, ಸಂದರ್ಭಕ್ಕೆ ತಕ್ಕಂತೆ ಹಾಡುಗಳನ್ನು ಬಳಸಿ ತುಂಬಾ ನೀಟಾಗಿ ಕಟ್ಟಿಕೊಟ್ಟಿದ್ದಾರೆ ಸತ್ಯಪ್ರಕಾಶ್‌. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಮಾಸ್ಟರ್‌ ರೋಹಿತ್‌ ಆ ಪಾತ್ರವನ್ನು ಆವರಿಸಿಕೊಂಡಿದ್ದಾರೆ.

ಅವರ ಮುಗ್ಧತನ, ಅಲ್ಲಲ್ಲಿ ವ್ಯಕ್ತವಾಗುವ ತುಂಟತನ ಎಲ್ಲವೂ ಕಥೆಗೆ ಚೆನ್ನಾಗಿ ಹೊಂದಿಕೊಂಡಿದೆ. ಕಥೆಯನ್ನು ಮುಂದುವರೆಸುವಲ್ಲಿ ರೋಹಿತ್‌ ಪಾತ್ರ ಪ್ರಮುಖವಾಗಿದ್ದು, ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಸಾಯಿಕೃಷ್ಣ ಕುಡ್ಲ, ಎಂ.ಕೆ.ಮಠ, ನಾಗಭೂಷಣ್‌, ರಂಜಾನ್‌ ಸಾಬ್‌ ಉಳ್ಳಾಗಡ್ಡಿ, ಜಿ.ಎಸ್‌.ರಂಗನಾಥ್‌, ಯು.ವಿ.ನಂಜಪತಿಮ್ಮಪ್ಪ ಕುಲಾಲ್‌, ಸಂಧ್ಯಾ ಅರಕೆರೆ, ಉಷಾ ರವಿಶಂಕರ್‌, ತ್ರಿವೇಣಿ ಎಲ್ಲರೂ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ವಾಸುಕಿ ವೈಭವ್‌ ಅವರ ಸಂಗೀತ ಕಥೆಯ ಆಶಯಕ್ಕೆ ತಕ್ಕುದಾಗಿದೆ. ಲವಿತ್‌ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. 

ಚಿತ್ರ: ಒಂದಲ್ಲಾ ಎರಡಲ್ಲಾ
ನಿರ್ಮಾಣ: ಉಮಾಪತಿ
ನಿರ್ದೇಶನ: ಸತ್ಯಪ್ರಕಾಶ್‌
ತಾರಾಗಣ: ರೋಹಿತ್‌, ಸಾಯಿಕೃಷ್ಣ ಕುಡ್ಲ, ಎಂ.ಕೆ.ಮಠ, ನಾಗಭೂಷಣ್‌, ರಂಜಾನ್‌ ಸಾಬ್‌ ಉಳ್ಳಾಗಡ್ಡಿ, ಜಿ.ಎಸ್‌.ರಂಗನಾಥ್‌ ಮುಂತದವರು

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next