Advertisement

ಕಲ್ಸಂಕದಲ್ಲಿ ಫ್ರೀಲೆಫ್ಟ್ ಕಾಮಗಾರಿಗೆ ಚಾಲನೆ

10:33 AM Oct 21, 2022 | Team Udayavani |

ಉಡುಪಿ: ಉಡುಪಿ-ಮಣಿಪಾಲ ಮುಖ್ಯ ರಸ್ತೆ (169ಎ) ವಿಸ್ತರಣೆಯಾದರೂ ನಗರ ಹೃದಯ ಮಾರ್ಗದಲ್ಲಿರುವ ಕಲ್ಸಂಕ ವೃತ್ತದಲ್ಲಿ ಹಲವಾರು ವರ್ಷಗಳಿಂದ ಟ್ರಾಫಿಕ್‌ ಜಾಮ್‌ ದೊಡ್ಡ ತಲೆನೋವಿಗೆ ಕಾರಣವಾಗಿತ್ತು. ಇದೀಗ ಫ್ರೀಲೆಫ್ಟ್ ಮಾಡುವ ಮೂಲಕ ಒಂದಿಷ್ಟು ಟ್ರಾಫಿಕ್‌ ಸಮಸ್ಯೆ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ.

Advertisement

ವಾರಾಂತ್ಯ, ರಜೆ ದಿನಗಳು, ಹಬ್ಬ, ಉತ್ಸವದ ಸಂದರ್ಭಗಳಲ್ಲಿ ಸಾಕಷ್ಟು ವಾಹನಗಳ ಸಂಚಾರ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್‌ ಜಾಮ್‌ ಸಂಭವಿಸಿ ಸಮಸ್ಯೆಗೆ ಕಾರಣವಾಗುತ್ತಿತ್ತು. ಸಂಚಾರ ಪೊಲೀಸರು, ಹೋಂಗಾರ್ಡ್ಸ್‌ ಟ್ರಾಫಿಕ್‌ ನಿರ್ವಹಣೆಯಲ್ಲಿ ಹೈರಾಣಾಗಿದ್ದರು. ಸಮೀಪದ ರಿಕ್ಷಾ ನಿಲ್ದಾಣದ ಚಾಲಕರು ಸಂಚಾರ ನಿಯಂತ್ರಣದಲ್ಲಿ ಪೊಲೀಸರಿಗೆ ಸಹಕಾರ ನೀಡುತ್ತಿದ್ದರು. ಅಂಬಾಗಿಲಿನಿಂದ ಉಡುಪಿ ಕಡೆಗೆ ಆಗಮಿಸುವ ಮತ್ತು ಉಡುಪಿ ಕಡೆಯಿಂದ ಗುಂಡಿಬೈಲು, ದೊಡ್ಡಣಗುಡ್ಡೆ ಕಡೆಗೆ ಹೋಗುವ, ಉಡುಪಿ ಸಿಟಿ ಬಸ್‌ ನಿಲ್ದಾಣ ಕಡೆಯಿಂದ ಮಣಿಪಾಲ, ಕೃಷ್ಣಮಠ ಕಡೆಗೆ ಸಾಗುವ-ಮಣಿಪಾಲದಿಂದ ಉಡುಪಿ ಸಿಟಿ ಬಸ್‌ ನಿಲ್ದಾಣ, ಅಂಬಾಗಿಲು -ಕೃಷ್ಣಮಠ ಕಡೆಗೆ ಸಾಗುವ ಪ್ರಮುಖ ವೃತ್ತವಾಗಿರುವುದು ಕಲ್ಸಂಕ ಜಂಕ್ಷನ್‌ ಇತ್ತೀಚೆಗೆ ಇಂದ್ರಾಣಿ ನದಿಯ ಸೇತುವೆ ವಿಸ್ತರಣೆಗೊಳಿಸಿದ್ದರೂ, ಸಂಚಾರ ದಟ್ಟಣೆಗೆ ಮಾತ್ರ ಪರಿಹಾರ ಸಿಕ್ಕಿರಲಿಲ್ಲ.

ಕಲ್ಸಂಕ ವೃತ್ತದಲ್ಲಿ ಸಂಭವಿಸುವ ಟ್ರಾಫಿಕ್‌ ಜಾಮ್‌ ಸಮಸ್ಯೆ ನಿವಾರಣೆಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಕೇಳಿ ಬಂದಿತ್ತು. ಸಿಗ್ನಲ್‌ ಅಳವಡಿಕೆ ಸಹಿತ ಮೊದಲಾದ ಸಲಹೆಗಳು ವ್ಯಕ್ತವಾಗಿದ್ದರೂ, ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ನಗರ ಸಂಚಾರ ಠಾಣೆ ಪೊಲೀಸ್‌ ಅಧಿಕಾರಿಗಳು ನಗರದ ವೃತ್ತದಲ್ಲಿ ಫ್ರೀಲೆಫ್ಟ್ ಕ್ರಮಗಳನ್ನು ಅನುಸರಿಸಿದಲ್ಲಿ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸ್ಥಳೀಯಡಳಿತಕ್ಕೆ ಸಲಹೆ ನೀಡಿದ್ದರು. ಈ ಬಗ್ಗೆ ಶಾಸಕ ಕೆ. ರಘುಪತಿ ಭಟ್‌ ಅವರು, ಜಿಲ್ಲಾಧಿಕಾರಿ ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಲ್ಸಂಕದಲ್ಲಿ ಫ್ರೀ-ಲೆಫ್ಟ್ಗೆ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದರು. ಕಲ್ಸಂಕ ವೃತ್ತದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ, ಮಾಂಡವಿ ಬಿಲ್ಡರ್ì ಜೆರ್ರಿ ವಿನ್ಸೆಂಟ್‌ ಡಯಾಸ್‌ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಸ್ತೆಗೆ ಬೇಕಾದ ಜಾಗವನ್ನು ನೀಡುವುದಾಗಿ ಹೇಳಿ, ಅದರಂತೆ ನಡೆದುಕೊಂಡಿದ್ದಾರೆ. 10 ದಿನದ ಒಳಗೆ ಫ್ರೀಲೆಫ್ಟ್ ಪೂರ್ಣಗೊಳ್ಳಲಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಅಂಬಾಗಿಲಿನಿಂದ ಬರುವ ವಾಹನಗಳು ಮುಕ್ತವಾಗಿ ಎಡಗಡೆಗೆ ತಿರುಗಿ ಕಡಿಯಾಳಿ, ಕುಂಜಿಬೆಟ್ಟು, ಎಂಜಿಎಂ, ಮಣಿಪಾಲ ಕಡೆಗೆ ಸಾಗಬಹುದು.

ʼಉದಯವಾಣಿ ನಿರಂತರ ವರದಿ’

Advertisement

ಕಲ್ಸಂಕ ವೃತ್ತದಲ್ಲಿ ಟ್ರಾಫಿಕ್‌ ಸಮಸ್ಯೆ ಬಗ್ಗೆ ಇದರಿಂದಾಗಿ ಸವಾರರಿಗೆ ತೊಂದರೆಯಾಗುತ್ತಿರುವ ರೀತಿ, ಅವೈಜ್ಞಾ ನಿಕ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿ ವಿಸ್ತೃತ ವರದಿಯನ್ನು ಉದಯವಾಣಿ ಸರಣಿರೂಪದಲ್ಲಿ ಪ್ರಕಟಿಸಿ ಗಮನ ಸೆಳೆದಿತ್ತು. ಸಂಚಾರ ಪೊಲೀಸ್‌ ಠಾಣೆ ಉಪ ನಿರೀಕ್ಷಕ ಖಾದರ್‌ ಅವರು ಸಲಹೆ ನೀಡಿದ್ದ ಪ್ರಮುಖ ವೃತ್ತಗಳಲ್ಲಿ ಫ್ರೀ-ಲೆಫ್ಟ್ ನಿಂದಾಗುವ ಅನುಕೂಲಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಫ್ರೀಲೆಫ್ಟ್ ನಿರ್ಮಾಣಗೊಂಡ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ತಗ್ಗಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸರಕು ತುಂಬಿದ ವಾಹನಗಳ ಕಿರಿಕಿರಿ

ಕಲ್ಸಂಕ ವೃತ್ತದಲ್ಲಿ ತೆಂಕಪೇಟೆ ರಸ್ತೆಯಲ್ಲಿ ಘನ ವಾಹನಗಳು, ಸಣ್ಣ ಟ್ರಕ್‌ಗಳು ಬೆಳಗ್ಗೆ, ಸಂಜೆ ಹೊತ್ತಿನಲ್ಲಿ ಸಂಚಾರ ಸಮಸ್ಯೆ ಉಂಟು ಮಾಡುತ್ತಿರುತ್ತವೆ. ಕೆಲವು ಟ್ರಕ್‌, ಲಾರಿಗಳು ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಿ ಸರಕು ಸಾಮಗ್ರಿಗಳನ್ನು ಲೋಡ್‌, ಅನ್‌ ಲೋಡ್‌ ಮಾಡುವುದರಿಂದ ಪಾದಚಾರಿಗಳಿಗೆ ದ್ವಿಚಕ್ರವಾಹನ ಸಾವರರಿಗೆ ಕಿರಿಕಿರಿ ಉಂಟುಮಾಡುತ್ತಿವೆ ಎಂಬ ಆರೋಪ ಕೇಳಿಬರುತ್ತಿವೆ.

 

Advertisement

Udayavani is now on Telegram. Click here to join our channel and stay updated with the latest news.

Next