Advertisement

“ಭಟ್ರ ಮನೆ’ಯಲ್ಲಿ ಯೋಧರಿಗೆ, ಅವರ ಫ್ಯಾಮಿಲಿಗೆ ಫ್ರೀ ಊಟ!

03:28 PM Aug 19, 2017 | |

“ನಮ್ಮ ಮೂರ್‌ ಹೊತ್ತಿನ ಊಟವನ್ನು ಸುರಕ್ಷಿತವಾಗಿ ಮಾಡುವಂತೆ ನಮ್ಮನ್ನು ರಕ್ಷಿಸುತ್ತಿರುವ ಸೈನಿಕರ ಹೊಟ್ಟೆಯನ್ನು ತುಂಬಿಸುವ ಭಾಗ್ಯ ನಮ್ಮದು. ಬನ್ನಿ ಸೈನಿಕರೇ… ಸುಸ್ವಾಗತ… ನಮ್ಮ ಆತಿಥ್ಯವನ್ನು ಸ್ವೀಕರಿಸಿ. ಬಿಲ್‌ ಕೇಳಿದರೆ ಶೂಟ್‌ ಮಾಡಿ…!’ಇದು ಯಾವುದೋ ಆರ್ಮಿ ಕ್ಯಾಂಟೀನ್‌ನ ಎದುರಿಗಿರುವ ಬೋರ್ಡ್‌ ಅಲ್ಲ. ಹೀಗೆ ಹೇಳುತ್ತಿರುವುದು ಮೂಡಲಪಾಳ್ಯದಲ್ಲಿರುವ “ಭಟ್ರ ಮನೆ’ ಎಂಬ ಸಸ್ಯಾಹಾರಿ ಹೋಟೆಲ್‌! ಸೈನಿಕರ ಮೇಲೆ ಪ್ರೀತಿ ಇಟ್ಟುಕೊಂಡ ಹೋಟೆಲ್‌ ಇದು. ಇಲ್ಲಿ ಯೋಧರಿಗಷ್ಟೇ ಉಚಿತ ಊಟೋಪಚಾರವಲ್ಲ, ಇಡೀ ಯೋಧರ ಕುಟುಂಬಕ್ಕೇ ಇಲ್ಲಿ ಫ್ರೀಯಾಗಿ ಆಹಾರ ಸೇವೆಯಿದೆ!

Advertisement

ಐಡಿ ಕಾರ್ಡ್‌ ತೋರ್ಸಿದ್ರೆ ಸಾಕು…
ಹೌದು, “ಭಟ್ರ ಮನೆ’ ಬೇರೆ ಹೋಟೆಲ್‌ಗ‌ಳಂತೆಯೇ ಇದ್ದರೂ, ಇಲ್ಲಿ ದೇಶಭಕ್ತಿಯ ಜಾಗೃತಿಯೊಂದು ನಿಮ್ಮ ಮನಸ್ಸಿಗೆ ತಟ್ಟುತ್ತದೆ. ಪ್ಲೇಟಿನಲ್ಲಿದ್ದ ತಿಂಡಿಯನ್ನು ಬಾಯಿಗೆ ಹಾಕಿಕೊಳ್ಳುತ್ತಾ ಹಾಗೆ ಗೋಡೆಯ ಮೇಲಕ್ಕೆ ನೋಡಿದರೆ ಸಾಕು, ಅಲ್ಲಿ ನೇತುಬಿದ್ದ ಸೈನಿಕರ ಫ‌ಲಕಗಳು, ಎಲ್ಲೋ ಕಾರ್ಗಿಲ್‌ನಲ್ಲೋ, ಸೈನಿಕರ ಕ್ಯಾಂಪ್‌ನಲ್ಲೋ ಇದ್ದೀವೇನೋ ಭಾವವನ್ನು ಹುಟ್ಟುಹಾಕುತ್ತವೆ. ಸೈನಿಕರು ಬಿಲ್‌ ಕೌಂಟರಿನಲ್ಲಿ ತಮ್ಮ ಐಡಿ ಕಾರ್ಡ್‌ ತೋರಿಸಿದರೆ, ಇಲ್ಲಿ ಉಚಿತ ಊಟೋಪಚಾರ ಪಡೆಯಬಹುದು.

ದುಬೈನ ಭಟ್ಟರು!
“ಭಟ್ಟರ ಮನೆ’ಯ ಜಗದೀಶ್‌ ಅವರು ಕತಾರ್‌ ಹಾಗೂ ದುಬೈನಲ್ಲಿ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಿದವರು. ಒಂದು ವರ್ಷದ ಹಿಂದೆ ಬೆಂಗಳೂರಿಗೆ ಮರಳಿದ ಅವರು ಹೋಟೆಲ್‌ ಉದ್ಯಮ ಶುರು ಮಾಡಿದ್ದಾರೆ. ಸೈನಿಕರ ಮೇಲೆ ವಿಪರೀತ ಪ್ರೀತಿ ಇದ್ದ ಕಾರಣಕ್ಕಾಗಿ ತಮ್ಮ ಹೋಟೆಲ್‌ನಲ್ಲಿ ಈ “ಭಾಗ್ಯ’ವನ್ನು ಅವರು ಕಲ್ಪಿಸಿದ್ದಾರೆ. ಅಂದಹಾಗೆ, ಈ ಹೋಟೆಲ್‌ ಇದಕ್ಕೆ ಮಾತ್ರ ವಿಶೇಷವಲ್ಲ. ಕಡಿಮೆ ದರದಲ್ಲಿ, ಗುಣಮಟ್ಟದ ಆಹಾರವನ್ನು ಇಲ್ಲಿ ಸವಿಯಬಹುದು. ಆಹಾರಗಳಿಗೆ ದುಬಾರಿ ಬೆಲೆಯಿಟ್ಟು, ಗ್ರಾಹಕರ ಜೇಬಿನಿಂದ ಹಣ ಕೀಳುವ ಬೆಂಗಳೂರಿನಲ್ಲಿ ಇಂಥ ಹೋಟೆಲ್‌ಗ‌ಳು ಬಹಳ ಅಪರೂಪ ಎನ್ನಬಹುದು.

ಜಗದೀಶ್‌ ಅವರು ಗೋವಿಂದನಗರದಲ್ಲಿ ಸದ್ಯದಲ್ಲೇ ಇನ್ನೊಂದು ಹೋಟೆಲ್‌ ಆರಂಭಿಸಲಿದ್ದು, ಅಲ್ಲಿಯೂ ಸೈನಿಕರಿಗೆ ಉಚಿತ ಊಟ ನೀಡಲಾಗುತ್ತದೆ.

ಏನೇನು ಸಿಗುತ್ತೆ?
ಸೌತ್‌ ಇಂಡಿಯನ್‌, ನಾರ್ತ್‌ ಇಂಡಿಯನ್‌, ಚೈನೀಸ್‌, ಚಾಟ್ಸ್‌ಗಳ ಜೊತೆಗೆ ಇಲ್ಲಿ ಭಟ್ರ ಮನೆ ಸ್ಪೆಶಲ್‌ ತಿಂಡಿಗಳಾದ ಮಲೆನಾಡಿನ ಕೊಟ್ಟೆ ಕಡುಬು, ನೀರು ದೋಸೆ ಅಲ್ಲದೇ, ಇಡ್ಲಿ ಚಿಲ್ಲಿ, ಸ್ಪೆಶಲ್‌ ಬಿರಿಯಾನಿ, ಸ್ಪ್ಯಾನಿಶ್‌ ಮಂಚೂರಿಯನ್ನೂ ಸವಿಯಬಹುದು.

Advertisement

ವೆರೈಟಿ ವೆರೈಟಿ ದೋಸೆ
ಸಬ್ಬಕ್ಕಿ ದೋಸೆ, ಪೈನಾಪಲ್‌ ದೋಸೆ, ಬನಾನ ದೋಸೆ, ನೂಡಲ್ಸ್‌ ದೋಸೆ ಹೀಗೆ ಹತ್ತಾರು ಬಗೆಯ ದೋಸೆಗಳೂ ಇಲ್ಲಿ ಲಭ್ಯ.

ಎಲ್ಲಿದೆ?
ಭಟ್ರಮನೆ, ವಿಜಯಾ ಬ್ಯಾಂಕ್‌ ಎದುರು, ನಾಗರಬಾವಿ ಮುಖ್ಯರಸ್ತೆ, ಮೂಡಲಪಾಳ್ಯ
ಸಂಪರ್ಕ: 9986227788
ನಮ್ಮನ್ನು ಹಗಲು- ರಾತ್ರಿ ಕಾಯುವ ಸೈನಿಕರನ್ನು ಆದರದಿಂದ ಕಾಣುವುದು ನಮ್ಮ ಕರ್ತವ್ಯ. ಅದಕ್ಕಾಗಿ ನಾನು ನನ್ನ ಹೋಟೆಲ್‌ನಲ್ಲಿ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಊಟ ನೀಡುತ್ತೇವೆ. ಇದೇನು ಮಹಾನ್‌ ಕೆಲಸವಲ್ಲದೇ ಇರಬಹುದು. ಆದರೆ, ಈ ದೇಶಕ್ಕೆ ಇದು ನನ್ನ ಪುಟ್ಟ ಕಾಣಿಕೆ.
– ಜಗದೀಶ್‌, ಹೋಟೆಲ್‌ ಮಾಲೀಕ

 - ಪ್ರಿಯಾಂಕಾ

Advertisement

Udayavani is now on Telegram. Click here to join our channel and stay updated with the latest news.

Next