Advertisement

ಖಮರುಲ್‌ ಇಸ್ಲಾಂ ವಿಧಿವಶ

08:00 AM Sep 19, 2017 | Karthik A |

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ, ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖಂಡ ಹಾಗೂ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿದ್ದ ಮಾಜಿ ಸಚಿವ ಹಾಗೂ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್‌ ಶಾಸಕ ಖಮರುಲ್‌ ಇಸ್ಲಾಂ (69) ವಿಧಿವಶರಾದರು.

Advertisement

ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮಧುಮೇಹ ಕಾಯಿಲೆ ಹೆಚ್ಚಾಗಿದ್ದರಿಂದ ಎರಡು ದಿನಗಳ ಹಿಂದೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೃದಯಾಘಾತದಿಂದ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದರು. ಪತ್ನಿ, ಪುತ್ರ, ಸಂಬಂಧಿಕರು, ಆಪ್ತರು, ರಾಜಕೀಯ ಸ್ನೇಹಿತರು, ಬೆಂಬಲಿಗರನ್ನು ಖಮರುಲ್‌ ಇಸ್ಲಾಂ ಅಗಲಿದ್ದಾರೆ. ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಸೇರಿದಂತೆ ಆಪ್ತರು, ಸಂಬಂಧಿಕರು ಆಸ್ಪತ್ರೆಗೆ ಧಾವಿಸಿ ಅಂತಿಮ ದರ್ಶನ ಪಡೆದರು. ಬಳಿಕ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಮಧ್ಯಾಹ್ನ 3.30ಕ್ಕೆ ಆರ್‌.ಟಿ. ನಗರದ ನಿವಾಸಕ್ಕೆ ತರಲಾಯಿತು.

ಅದಾದ ಬಳಿಕ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನ  ಕ್ಕಾಗಿ ಖುದ್ದೂಸ್‌ ಸಾಬ್‌ ಈದ್ಗಾ ಮೈದಾನದ ಖಾದ್ರಿಯಾ ಮಸೀದಿ ಆವರಣಕ್ಕೆ ತರಲಾಯಿತು. ಮುಖ್ಯಮಂತ್ರಿ ಸಿದ್ದ  ರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಗೃಹ ಸಚಿವ ರಾಮಲಿಂಗಾರೆಡ್ಡಿ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಸಂಸದರಾದ ವೀರಪ್ಪ ಮೊಯ್ಲಿ, ಕೆ.ಎಚ್‌. ಮುನಿಯಪ್ಪ, ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇದಕ್ಕೂ ಮೊದಲೇ ನಿವಾಸಕ್ಕೆ ಭೇಟಿ ನೀಡಿದ ಕೇರಳದ ಮಾಜಿ ಮುಖ್ಯ ಮಂತ್ರಿ ಓಮನ್‌ ಚಾಂಡಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಸಚಿವ  ರಾದ ಡಿ.ಕೆ. ಶಿವಕುಮಾರ್‌, ಎಚ್‌. ಆಂಜನೇಯ, ಕೆ.ಜೆ. ಜಾರ್ಜ್‌, ರಮೇಶ್‌ ಕುಮಾರ್‌, ರಾಜ್ಯಸಭಾ ಸದಸ್ಯ ಕೆ. ರೆಹಮಾನ್‌ ಖಾನ್‌, ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ, ಹೆಬ್ಟಾಳ ಶಾಸಕ ವೈ.ಎ. ನಾರಾಯಣ ಸ್ವಾಮಿ ಮತ್ತಿತರರು ಅಂತಿಮ ದರ್ಶನ ಪಡೆದರು. 

ಖಾದ್ರಿಯಾ ಮಸೀದಿ ಆವರಣದಿಂದ ಪಾರ್ಥಿವ ಶರೀರವನ್ನು ವಿಶೇಷ ಆ್ಯಂಬುಲೆನ್ಸ್‌ ಮೂಲಕ ಸಂಜೆ 6 ಗಂಟೆಗೆ ರಸ್ತೆ ಮಾರ್ಗವಾಗಿ ಕಲಬುರಗಿಗೆ ಕೊಂಡೊಯ್ಯಲಾಯಿತು. ವಿಶೇಷ ಕಾಪ್ಟರ್‌ ಮೂಲಕ ಪಾರ್ಥಿವ ಶರೀರ ಕೊಂಡೊಯ್ಯಲು ನಿರ್ಧರಿಸಲಾಗಿತ್ತು. ಆದರೆ, ಕತ್ತಲು ಹಾಗೂ ದಟ್ಟ ಮೋಡಗಳು ಇರುವ ಕಾರಣ ವಿಶೇಷ ಕಾಪ್ಟರ್‌ ಬದಲಿಗೆ ರಸ್ತೆ ಮಾರ್ಗವಾಗಿ ಕಲಬುರಗಿಗೆ ತೆರಳಲಾಯಿತು ಎಂದು ಆಪ್ತ ಮೂಲಗಳು ಹೇಳಿವೆ. ಕಲಬುರಗಿ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಹಿಂಭಾಗದಲ್ಲಿರುವ ಖಬರಸ್ಥಾನದಲ್ಲಿ ಮಂಗಳವಾರ ಸಂಜೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕಲಬುರಗಿ ಜಿಲ್ಲಾಡಳಿತ ಹಾಗೂ ಕುಟುಂಬದ ಮೂಲಗಳು ತಿಳಿಸಿವೆ. ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ.

ಖಮರುಲ್‌ ಇಸ್ಲಾಂ ನಿಧನಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಸಚಿವ ಸಂಪುಟದ ಸದಸ್ಯರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ವಿಧಾನ ಸಭೆ ಜೆಡಿಎಸ್‌ ಉಪನಾಯಕ ವೈಎಸ್‌ವಿ ದತ್ತಾ, ವಿಧಾನಪರಿಷತ್‌ ಸದಸ್ಯ ರಮೇಶ್‌ಬಾಬು, ಜೆಡಿಎಸ್‌ ಬಂಡಾಯ ಶಾಸಕ ಜಮೀರ್‌ ಅಹ್ಮದ್‌ ಖಾನ್‌, ಮುಸ್ಲಿಂ ಧಾರ್ಮಿಕ ಮುಖಂಡ ಮಹ್ಮದ್‌ ಯಸೂಫ್ ಕನ್ನಿ ಸಂತಾಪ ಸೂಚಿಸಿದ್ದಾರೆ. 

Advertisement

“ಅಸಿರಿಯಾ’ ಕಾಯಿಲೆ ಇತ್ತು
ಖಮರುಲ್‌ ಇಸ್ಲಾಂ ಅಪರೂಪದ ನರಸಂಬಂಧಿ “ಅಸಿರಿಯಾ’ ಕಾಯಿಲೆಯಿಂದ ಬಳಲುತ್ತಿದ್ದರು. ಇದು ಯಾವ ಚಿಕಿತ್ಸೆಗೂ ಸ್ಪಂದಿಸದ ಮಟ್ಟಕ್ಕೆ ಹೋಗುವ ಕಾಯಿಲೆ. ಈ ಕಾಯಿಲೆ ಇರುವುದು ಪತ್ತೆಯಾದ ತಕ್ಷಣ 4 ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಲಾಗುತ್ತಿತ್ತು. ಅಲ್ಲದೇ ಬಹುಅಂಗಾಂಗ
ವೈಫ‌ಲ್ಯದಿಂದಲೂ ಅವರು ಬಳಲುತ್ತಿದ್ದರು. ಮಧುಮೇಹ ಹೆಚ್ಚಾಗಿ ಕಾಲಿನ ಗಾಯ ಸಹ ಇತ್ತಿ ಚಿಗೆ ತುಂಬಾ ಉಲ್ಬಣಗೊಂಡಿತ್ತು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕಲಬುರಗಿಯಲ್ಲಿಂದು ಅಂತ್ಯಕ್ರಿಯೆ
ಖಮರುಲ್‌ ಇಸ್ಲಾಂ ಅವರ ಅಂತ್ಯಕ್ರಿಯೆ ಸೆ. 19ರಂದು ರಾತ್ರಿ 10ಗಂಟೆ ಸುಮಾರಿಗೆ ನಗರದ ಜಿಲ್ಲಾ ನ್ಯಾಯಾಲಯ ರಸ್ತೆಯ ಖಬರಸ್ತಾನ್‌ ರೋಜಾ-ಇ ಖಲಾಂದರ್‌ ಖಾನ್‌ದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.

ಬೆಂಗಳೂರಿನಿಂದ ಬೆಳಗ್ಗೆ 7ರಿಂದ 8:30ರ ಸುಮಾರಿಗೆ ಪಾರ್ಥೀವ ಶರೀರ ನಗರಕ್ಕೆ ಆಗಮಿಸಿದ ನಂತರ ಕೆಲ ಗಂಟೆಗಳ ಕಾಲ ಸ್ಟೇಷನ್‌ ಬಜಾರ್‌ದಲ್ಲಿರುವ ಅವರ ಮನೆಯಲ್ಲಿಟ್ಟು ಧಾರ್ಮಿಕ ವಿಧಿ ವಿಧಾನ ಕಾರ್ಯಗಳನ್ನು ಪೂರ್ಣಗೊಳಿಸಿತದ ನಂತರ ಮೆರವಣಿಗೆ ಮೂಲಕ ಎಂಎಸ್‌ಕೆ ಮಿಲ್‌ ಜಿಲಾನಾಬಾದ್‌, ಮಿಸ್ಬಾ ನಗರ, ಆಳಂದ ಚೆಕ್‌ಪೋಸ್ಟ್‌, ತಾಜನಗರ, ಹುಮನಾಬಾದ ಸರ್ಕಲ್‌, ಮಿಲ್ಲತ್‌ ನಗರದಿಂದ ವರ್ತುಲ ರಸ್ತೆಯಲ್ಲಿರುವ ಕೆಸಿಟಿ ಎಂಜಿನಿಯರಿಂಗ್‌ ಕಾಲೇಜಿಗೆ ತೆಗೆದುಕೊಂಡು ಹೋಗಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸಂಜೆ 5ಕ್ಕೆ ಕೆಸಿಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಕಲ ಸರ್ಕಾರಿ ಗೌರವಗಳನ್ನು ನೆರವೇರಿಸಿದ ನಂತರ ಪಾರ್ಥಿವ ಶರೀರವನ್ನು ಪಾದಯಾತ್ರೆ ಮೂಲಕ ಮಹ್ಮದ ರಫಿ ಚೌಕ್‌, ಬಿಬಿ ರಾಜಾ ಕಾಲೇಜು, ರೋಜಾ ಪೊಲೀಸ್‌ ಠಾಣೆ, ಫರಾನಾ ಕಾಲೇಜು, ಮುಸ್ಲಿಂ ಚೌಕ್‌, ಗಂಜ್‌, ಹುಮನಾಬಾದ ಬೇಸ್‌, ಸೂಪರ್‌ ಮಾರ್ಕೆಟ್‌, ಜಗತ್‌ ಸರ್ಕಲ್‌, ಸರ್ದಾರ ವಲ್ಲಭಭಾಯಿ ಪಟೇಲ ವೃತ್ತ, ನ್ಯಾಯಾಲಯ ರಸ್ತೆ ಖಬರಸ್ತಾನ್‌ ರೋಜಾ-ಇ ಖಲಾಂದರ್‌ ಖಾನ್‌ಗೆ ತೆರಳಿ ಇಸ್ಲಾಂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರುವುದು. ಸಾರ್ವಜನಿಕ ದರ್ಶನದ ವ್ಯವಸ್ಥೆ ಹಾಗೂ
ಅಂತ್ಯಕ್ರಿಯೆ ಕುರಿತಾಗಿ ಜಿಲ್ಲಾಧಿಕಾರಿ ಎಂ.  ಕಟೇಶಕುಮಾರ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಇನ್ನೂ ಸಮಯ ಅಂತಿಮಗೊಂಡಿಲ್ಲ ಎಂದರು.

ಧರಂ, ಖರ್ಗೆ ಜತೆ ಅವಿನಾಭಾವ ಸಂಬಂಧ 
ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್‌ ಮತ್ತು ಖಮರುಲ್‌ ಇಸ್ಲಾಂ…ರಾಜ್ಯ ರಾಜಕಾರಣ ದಲ್ಲಿ ಕಲಬುರಗಿ ಜಿಲ್ಲೆ ಪ್ರಸ್ತಾಪವಾಗುತ್ತಿ ದ್ದಂತೆ ಕೇಳಿಬರುತ್ತಿದ್ದ ಪ್ರಮುಖ 3 ಹೆಸರು ಗಳಿವು. ಅಷ್ಟರ ಮಟ್ಟಿಗೆ ಖರ್ಗೆ, ಧರಂ ಮತ್ತು ಖಮರುಲ್‌ ಇಸ್ಲಾಂ ಕಲಬುರಗಿ ಜಿಲ್ಲೆ ಮತ್ತು ರಾಜ್ಯದಲ್ಲಿ ತಮ್ಮ ಪ್ರಭಾವ ಹೊಂದಿದ್ದರು. ಈ ಪೈಕಿ ಹಿರಿಯಣ್ಣ ಮಲ್ಲಿಕಾರ್ಜುನ ಖರ್ಗೆಯವರಾದರೆ, ಧರಂಸಿಂಗ್‌ ಮಧ್ಯದವರು. ಖಮರುಲ್‌ ಕಿರಿಯ ಸಹೋದರ ಎಂದೇ ಕಾಂಗ್ರೆಸ್‌ನಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ಖರ್ಗೆ 10 ಬಾರಿ, ಧರಂಸಿಂಗ್‌ 7 ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದರೆ, ಖಮರುಲ್‌ 6 ಬಾರಿ ವಿಧಾನ ಸಭೆ ಪ್ರವೇಶಿಸಿದ್ದರು. ಎಸ್‌.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಈ ಮೂವರೂ ಸಚಿವರಾಗಿದ್ದರು. ಖರ್ಗೆ ಅವರಿಗೆ ಗೃಹ ಮತ್ತು ಸಣ್ಣ ನೀರಾವರಿ, ಧರಂ ಸಿಂಗ್‌ ಅವರಿಗೆ ಲೋಕೋಪಯೋಗಿ ಮತ್ತು ಖಮರುಲ್‌ ಇಸ್ಲಾಂ ಕಾರ್ಮಿಕ ಖಾತೆ ಹೊಂದಿದ್ದರು. ಆ ವೇಳೆ ಕೇವಲ ಒಂದು ಜಿಲ್ಲೆಯಿಂದ ಮೂವರನ್ನು ಸಚಿವರನ್ನಾಗಿ ಮಾಡಿ ದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತಾದರೂ ಮೂವರ ಹಿರಿತನ ಆ ಆಕ್ಷೇಪವನ್ನು ನುಂಗಿಹಾಕಿತ್ತು. 

ಸಿಎಂ ಸಭೆ ತಾತ್ಕಾಲಿಕ ಮುಂದೂಡಿಕೆ
ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಶಾಲಾಡಳಿತ ಮಂಡಳಿ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ನೀಡುವಂತೆ ವಿಧಾನ ಪರಿಷತ್‌ ಸದಸ್ಯರು ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿಯ ನಿಮಿತ್ತ ಸೆ.19ರಂದು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಡೆಯಬೇಕಿದ್ದ ಸಭೆ ತಾತ್ಕಾಲಿಕವಾಗಿ ರದ್ದಾಗಿದೆ. ಮಾಜಿ ಸಚಿವ ಖಮರುಲ್‌ ಇಸ್ಲಾಂ ಅವರ ನಿಧನದಿಂದ ಸಿಎಂ ಸಿದ್ದರಾಮಯ್ಯ ಅವರ ಸೆ.19ರ ಎಲ್ಲಾ ಕಾರ್ಯಕ್ರಮ ರದ್ದಾಗಿರುವುದರಿಂದ ಈ ಸಭೆಯನ್ನು ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next