Advertisement

ಕೋವಿಡ್‌ಗೆ ಬಲಿಯಾದ ಮಾಜಿ ಆರಂಭಕಾರ ಚೇತನ್ ಚೌಹಾಣ್‌

08:17 PM Aug 16, 2020 | Hari Prasad |

ಗುರ್ಗಾಂವ್: ಮಾಜಿ ಕ್ರಿಕೆಟ್ ಆಟಗಾರ ಚೇತನ್ ಚೌಹಾಣ್ ಅವರು ಇಂದು ನಿಧನ ಹೊಂದಿದ್ದಾರೆ.

Advertisement

ಕಿಡ್ನಿ ಹಾಗೂ ರಕ್ತದೊತ್ತಡ ಸಮಸ್ಯೆಗಳ ಕಾರಣದಿಂದ ಚೌಹಾಣ್ ಅವರನ್ನು ಗುರುಗ್ರಾಮದಲ್ಲಿರುವ ಮೆದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಅವರು ಇಂದು ಸಂಜೆ ಹೃದಯಾಘಾತದಿಂದ ಮೃತಪಟ್ಟರು ಎಂದು ತಿಳಿದುಬಂದಿದೆ. ಪತ್ನಿ, ಮೆಲ್ಬರ್ನ್ ನಲ್ಲಿರುವ ಪುತ್ರ ವಿನಾಯಕ್‌ ಚೌಹಾಣ್‌ ಹಾಗೂ ಅಪಾರ ಕ್ರಿಕೆಟ್‌ ಅಭಿಮಾನಿಗಳನ್ನು ಚೌಹಾಣ್‌ ಅಗಲಿದ್ದಾರೆ.

ಎರಡು ಬಾರಿಯ ಲೋಕಸಭಾ ಸದಸ್ಯರಾಗಿದ್ದ ಚೇತನ್‌ ಚೌಹಾಣ್‌, ಪ್ರಸ್ತುತ ಉತ್ತರಪ್ರದೇಶ ಸರಕಾರದ ಸೈನಿಕ ಕಲ್ಯಾಣ, ಗೃಹರಕ್ಷಕ ದಳ, ಸಾರ್ವಜನಿಕ ಸಂಪರ್ಕ ಖಾತೆ ಮತ್ತು ನಾಗರಿಕ ರಕ್ಷಣಾ ಸಚಿವರಾಗಿದ್ದರು. ಕಳೆದ ವರ್ಷದ ತನಕ ರಾಜ್ಯದ ಕ್ರೀಡಾ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದರು.

ಚೌಹಾಣ್ ಅವರಲ್ಲಿ ಜುಲೈ ತಿಂಗಳಿನಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿತ್ತು ಮತ್ತು ಅವರು ಅದರಿಂದ ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಬಳಿಕ ಈ ಸೋಂಕು ಚೌಹಾಣ್ ಅವರ ಕಿಡ್ನಿಗೆ ಘಾಸಿಯುಂಟುಮಾಡಿತ್ತು ಮಾತ್ರವಲ್ಲದೇ ಅಧಿಕ ರಕ್ತದೊತ್ತಡ ಸಮಸ್ಯೆಯನ್ನೂ ಉಲ್ಭಣಿಸುವಂತೆ ಮಾಡಿತ್ತು.

Advertisement

ಕೋವಿಡ್ 19 ಸೋಂಕು ಕಾಣಿಸಿಕೊಂಡ ತಕ್ಷಣ ಚೇತನ್ ಚೌಹಾಣ್ ಅವರು ಲಕ್ನೋದಲ್ಲಿರುವ ಸಂಜಯ್ ಗಾಂಧಿ ಪಿಜಿಐ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಶುಕ್ರವಾರ ರಾತ್ರಿ ಗುರುಗ್ರಾಮದಲ್ಲಿರುವ ಮೆದಾಂತ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು.

ಇಲ್ಲಿ ಅವರ ದೇಹ ಸ್ಥಿತಿ ಇನ್ನಷ್ಟು ಹದಗೆಟ್ಟ ಕಾರಣದಿಂದ ವೈದ್ಯರು ಚೌಹಾಣ್ ಅವರನ್ನು ಜೀವರಕ್ಷಕ ಸಾಧನಗಳ ನಿಗಾದಲ್ಲಿ ಇರಿಸಿದ್ದರು. ಆದರೆ ಚೌಹಾಣ್ ಅವರು ಇಂದು ಸಂಜೆ ತೀವ್ರ ಸ್ವರೂಪದ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎಂದು ಅವರ ಸಹೋದರ ಪುಷ್ಪೇಂದ್ರ ಚೌಹಾಣ್ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಚೌಹಾಣ್-ಗವಾಸ್ಕರ್ ಯಶಸ್ವಿ ಆರಂಭಿಕ ಜೋಡಿ
1969-1978ರ ಅವಧಿಯಲ್ಲಿ 40 ಟೆಸ್ಟ್‌ ಪಂದ್ಯಗಳನ್ನಾಡಿದ್ದ ಚೇತನ್‌ ಚೌಹಾಣ್‌ ದಾಖಲೆಗಳ ವೀರ ಸುನೀಲ್‌ ಗಾವಸ್ಕರ್‌ ಅವರ ಸುದೀರ್ಘಾವಧಿಯ ಜತೆಗಾರನಾಗಿದ್ದರು. 31.57ರ ಸರಾಸರಿಯಲ್ಲಿ 2,084 ರನ್‌ ಗಳಿಸಿದ್ದಾರೆ. ಒಂದೆಡೆ ಗಾವಸ್ಕರ್‌ ಶತಕದ ಮೇಲೆ ಶತಕವನ್ನು ಪೇರಿಸುತ್ತ ಹೋದರೂ ಚೌಹಾಣ್‌ ಅವರ ಟೆಸ್ಟ್‌ ಶತಕದ ಕನಸು ಮಾತ್ರ ಈಡೇರಲಿಲ್ಲ. 97 ರನ್‌ ಸರ್ವಾಧಿಕ ಗಳಿಕೆಯಾಗಿದೆ.

70ರ ದಶಕದಲ್ಲಿ ಸುನೀಲ್‌ ಗಾವಸ್ಕರ್‌-ಚೇತನ್‌ ಚೌಹಾಣ್‌ ಭಾರತದ ಯಶಸ್ವಿ ಆರಂಭಿಕ ಜೋಡಿಯಾಗಿತ್ತು. ಗಾವಸ್ಕರ್‌ ಯಶಸ್ಸಿನಲ್ಲಿ ಚೌಹಾಣ್‌ ಅವರ ಪಾತ್ರವನ್ನು ಮರೆಯುವಂತಿರಲಿಲ್ಲ. ಮೊದಲ ವಿಕೆಟಿಗೆ ಮೂರು ಸಾವಿರಕ್ಕೂ ಅಧಿಕ ರನ್‌ ಪೇರಿಸಿದ ಹೆಗ್ಗಳಿಕೆ ಈ ಜೋಡಿಯದ್ದಾಗಿತ್ತು. ಇದರಲ್ಲಿ 10 ಶತಕದ ಜತೆಯಾಟಗಳು ಸೇರಿವೆ. 7 ಏಕದಿನ ಪಂದ್ಯಗಳನ್ನೂ ಆಡಿರುವ ಚೌಹಾಣ್‌, 153 ರನ್‌ ಗಳಿಸಿದ್ದಾರೆ.

ಅಂದಿನ ಕಾಲದ ಘಾತಕ ವೇಗಿಗಳಾಗಿದ್ದ ಡೆನ್ನಿಸ್‌ ಲಿಲ್ಲಿ, ಜೆಫ್ ಥಾಮ್ಸನ್‌, ರಾಡ್ನಿ ಹಾಗ್‌, ಲೆನ್‌ ಪಾಸ್ಕೊ, ಬಾಬ್‌ ವಿಲ್ಲೀಸ್‌ ಅವರ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸುತ್ತಿದ್ದ ಚೌಹಾಣ್‌, ಭಾರತ ತಂಡದ ಗಟ್ಟಿಮುಟ್ಟಾದ ಅಡಿಪಾಯಕ್ಕೆ ಮಹತ್ವದ ಕಾಣಿಕೆ ಸಲ್ಲಿಸಿದ್ದನ್ನು ಮರೆಯುವಂತಿಲ್ಲ.

ಮಹಾರಾಷ್ಟ್ರ ಮತ್ತು ದಿಲ್ಲಿ ಪರ ರಣಜಿ ಟ್ರೋಫಿ ಪಂದ್ಯಗಳನ್ನಾಡಿದ ಚೇತನ್‌ ಚೌಹಾಣ್‌ ಡಿಡಿಸಿಎ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿದ್ದರು. ಆಸ್ಟ್ರೇಲಿಯ ಪ್ರವಾಸದ ವೇಳೆ ಭಾರತ ತಂಡದ ಮ್ಯಾನೇಜರ್‌ ಕೂಡ ಆಗಿದ್ದರು. 1981ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.

ಕ್ರಿಕೆಟಿಗರ ಶೋಕ

ಚೇತನ್‌ ಚೌಹಾಣ್‌ ನಿಧನಕ್ಕೆ ಭಾರತದ ಕ್ರಿಕೆಟ್‌ ವಲಯ ಗಾಢ ಶೋಕ ವ್ಯಕ್ತಪಡಿಸಿದೆ. ಅವರ ಕುಟುಂಬಕ್ಕೆ ಅಗಲಿಕೆಯ ಶಕ್ತಿ ನೀಡಲಿ ಎಂದು ಅನಿಲ್‌ ಕುಂಬ್ಳೆ, ವೀರೇಂದ್ರ ಸೆಹವಾಗ್‌, ಗೌತಮ್‌ ಗಂಭೀರ್‌ ಪ್ರಾರ್ಥಿಸಿದ್ದಾರೆ.
ಚೇತನ್ ಚೌಹಾಣ್ ಅವರು ತಮ್ಮ 12 ವರ್ಷಗಳ ಕ್ರಿಕೆಟ್ ಜೀವನದಲ್ಲಿ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 2084 ರನ್ ಗಳನ್ನು ಕಲೆ ಹಾಕಿದ್ದಾರೆ ಇದರಲ್ಲಿ 16 ಅರ್ಧ ಶತಕಗಳು ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next