Advertisement

ಗ್ರಾಪಂಗಳಲ್ಲಿ “ಜೀವವೈವಿಧ್ಯ ನಿರ್ವಹಣಾ ಸಮಿತಿ’ರಚನೆ

11:20 PM Nov 03, 2019 | Lakshmi GovindaRaju |

ಬೆಂಗಳೂರು: ಗ್ರಾಮೀಣ ಭಾಗದಲ್ಲಿನ ಜೀವವೈಧ್ಯತೆಯನ್ನು ಕಾಪಾಡಿ ಅದನ್ನು ಭವಿಷ್ಯದ ದೃಷ್ಟಿಯಿಂದ ಸಂರಕ್ಷಿಸಲು ಗಿಡ-ಮರ, ಜೀವ-ಜಂತು, ನೆಲ-ಜಲ, ಕಾಡು-ನಾಡು ಸೇರಿ ಸಕಲ ಜೀವರಾಶಿಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ “ಜೀವವೈವಿಧ್ಯ ನಿರ್ವಹಣಾ ಸಮಿತಿ’ಗಳು ಅಸ್ತಿತ್ವಕ್ಕೆ ಬರಲಿವೆ.

Advertisement

ಈಗಾಗಲೇ ರಾಜ್ಯದ 6,020ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿ ರಚನೆ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರವೇ ರಚನೆ ಕಾರ್ಯ ಪೂರ್ಣಗೊಂಡು ಸಮಿತಿಗಳು ಅನುಷ್ಠಾನಕ್ಕೆ ಬರಲಿವೆ. ಈ ಸಮಿತಿಗಳಿಗೆ ಕಾಯಕಲ್ಪ ನೀಡಲು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಕ್ರಿಯಾಯೋಜನೆ ರೂಪಿಸಿದ್ದರೆ, ಆ ಸಮಿತಿಗಳಿಗೆ ಹೆಚ್ಚಿನ ಕಾನೂನು ಬಲ ನೀಡಲು ಗ್ರಾಮೀಣಾ ಭಿವೃದ್ಧಿ ಇಲಾಖೆ ನಿರ್ಧರಿಸಿದೆ.

ಸಮಿತಿಗಳ ರಚನೆಗೆ ವೇಗ: ಜೈವಿಕ ವೈವಿಧ್ಯ ಅಧಿನಿಯಮ 2002ರ ಸೆಕ್ಷನ್‌ 41(1), ಜೈವಿಕ ವೈವಿಧ್ಯ ನಿಯಮ ಗಳು-2005ರ ನಿಯಮ 22 ಮತ್ತು ಕರ್ನಾಟಕ ಜೈವಿಕ ವೈವಿಧ್ಯ ನಿಯಮ ಗಳು-2005ರ ನಿಯಮ 21ರ ಪ್ರಕಾರ ಪಂಚಾಯಿತಿಗಳಲ್ಲಿ “ಜೀವವೈವಿಧ್ಯ ನಿರ್ವ ಹಣಾ ಸಮಿತಿ’ಗಳ ರಚನೆ ಕಡ್ಡಾಯ ವಾಗಿದೆ. ಆದರೆ, ಈ ಬಗ್ಗೆ ಅಷ್ಟೊಂದು ಗಮನ ಹರಿಸಲಾಗುತ್ತಿರಲಿಲ್ಲ. ಈ ಮಧ್ಯೆ, ಪಂಚಾಯಿತಿಗಳಲ್ಲಿ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕೆಂದು 2019ರ ಆ.9ರಂದು “ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ’ ಆದೇಶ ನೀಡಿದ ಬಳಿಕ ಸಮಿತಿಗಳ ರಚನೆಗೆ ವೇಗ ಸಿಕ್ಕಿದೆ.

ಪಂಚಾಯಿತಿಗಳಲ್ಲಿ ರಚನೆಯಾಗುವ ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಮೇಲ್ವಿಚಾರಣೆಯನ್ನು “ಕರ್ನಾಟಕ ಜೀವ ವೈವಿಧ್ಯ ಮಂಡಳಿ’ ನಡೆಸುತ್ತದೆ. ಅದರ ಮಾಹಿತಿಯಿಂತೆ ರಾಜ್ಯದ 6,024 ಗ್ರಾಪಂ ಗಳ ಪೈಕಿ ಈವರೆಗೆ 5 ಸಾವಿರಕ್ಕೂ ಹೆಚ್ಚು ಕಡೆ ಸಮಿತಿಗಳ ರಚನೆಯಾಗಿದೆ. ಉಳಿದ ಕಡೆ ಆದಷ್ಟು ಬೇಗ ಸಮಿತಿ ರಚನೆ ಕಾರ್ಯ ಪೂರ್ಣಗೊಳ್ಳಲಿದೆ. ಈ ಸಮಿತಿ ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾ ರಂಭ ಮಾಡಲು ಆರಂಭಿಸಿದರೆ, ಗ್ರಾಮೀಣ ಭಾಗದ ಜೀವವೈವಿಧ್ಯತೆಯ ರಕ್ಷಣೆ ಮತ್ತು ನಿರ್ವಹಣೆಗೆ ಖಚಿತ ಚೌಕಟ್ಟು ಸಿಗಲಿದೆ.

ಏನಿದು ಜೀವವೈವಿಧ್ಯ ನಿರ್ವಹಣಾ ಸಮಿತಿ?: ಜೈವಿಕ ವೈವಿಧ್ಯ ಅಧಿನಿಯ ಮಗಳ ಪ್ರಕಾರ ಪ್ರತಿ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಜೀವವೈವಿಧ್ಯ ನಿರ್ವಹಣಾ ಸಮಿತಿ ರಚಿಸಬೇಕು. ಈ ಸಮಿತಿ ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ “ಜೀವವೈವಿಧ್ಯ ಸಂರಕ್ಷಣೆ, ಜೈವಿಕ ಸಂಪ ನ್ಮೂಲಗಳ ಸುಸ್ಥಿತ ಬಳಕೆ, ಜೀವವೈವಿಧ್ಯ ದಾಖಲಾತಿ ತಯಾರಿಸುವುದು, ಜೀವಿಗಳ ಆವಾಸ ಸ್ಥಾನಗಳ ಗುರುತಿಸುವಿಕೆ ಮತ್ತು ಅವುಗಳ ಸಂರಕ್ಷಣೆ, ಸ್ಥಳೀಯ ವನ್ಯ ತಳಿ, ನಾಟಿ ತಳಿ, ಕೃಷಿ ತಳಿಗಳ ಸಂರಕ್ಷಣೆ, ಸ್ಥಳೀಯ ಸಾಕು ಪ್ರಾಣಿಗಳ ಸಂರಕ್ಷಣೆ, ಸೂಕ್ಷ್ಮಾಣುಜೀವಿಗಳ ಹಾಗೂ ಜೈವಿಕ ಸಂಪನ್ಮೂಲಗಳ ಸಂಬಂಧಿತ ಜ್ಞಾನ ಮತ್ತು ಮಾಹಿತಿಗಳನ್ನು ದಾಖಲು ಮಾಡುವ ಹೊಣೆಗಾರಿಕೆ ಹೊಂದಿದೆ.

Advertisement

ಸ್ವಾಯತ್ತ ಸಂಸ್ಥೆಗಳು: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ತೀರ್ಪು ಹಾಗೂ ಅರಣ್ಯ ಇಲಾಖೆಯ ಮಾರ್ಗಸೂಚಿಗಳಂತೆ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಮೇಲ್ವಿಚಾರಣೆಯಲ್ಲಿ ಗ್ರಾಪಂಗಳಲ್ಲಿ “ಜೀವವೈವಿಧ್ಯ ನಿರ್ವಹಣಾ ಸಮಿತಿ’ಗಳನ್ನು ರಚಿಸಲಾಗುತ್ತಿದೆ. ಜೈವಿಕ ವೈವಿಧ್ಯ ಕಾಯ್ದೆ-2002ರ ಪ್ರಕಾರ ಈ ಸಮಿತಿಗಳು ಸ್ವಾಯತ್ತ ಸಂಸ್ಥೆಗಳಾಗಿರುತ್ತವೆ. ಆದರೆ, ಈ ಸಮಿತಿಗಳನ್ನು ಪಂಚಾಯತ್‌ರಾಜ್‌ ಕಾಯ್ದೆಯ ಸೆಕ್ಷನ್‌ 61 (ಎ)ರಡಿ ತಂದು ಪಂಚಾಯಿತಿ ಉಪ ಸಮಿತಿ ಸ್ಥಾನಮಾನ ಕೊಡುವ ಮೂಲಕ ಹೆಚ್ಚಿನ ಕಾನೂನು ಬಲ ನೀಡಲು ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ಧರಿಸಿದೆ.

“ಜನತಾ ಜೀವವೈವಿಧ್ಯ ದಾಖಲಾತಿ’ ತಯಾರಿಕೆ: ಜೈವಿಕ ವೈವಿಧ್ಯ ಅಧಿನಿಯಮ-2002ರ ಪ್ರಕಾರ ಪ್ರತಿ ಜೀವವೈವಿಧ್ಯ ನಿರ್ವಹಣಾ ಸಮಿತಿಯು ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ “ಜನತಾ ಜೀವವೈವಿಧ್ಯ ದಾಖಲಾತಿ (ಪಿಬಿಆರ್‌) ತಯಾರಿಸಬೇಕು. ಈ ದಾಖಲಾತಿಯು ಆಯಾ ಗ್ರಾ.ಪಂನ ಜೀವವೈವಿಧ್ಯತೆಯ ಮಾಹಿತಿ ಹಾಗೂ ಅಂಕಿ-ಅಂಶಗಳನ್ನು ಒಳಗೊಂಡಿರುತ್ತದೆ.

ಮುಖ್ಯವಾಗಿ ಆ ಪಂಚಾಯಿತಿಯ ವ್ಯಾಪ್ತಿಗೆ ಬರುವ ಅರಣ್ಯ ಭೂಮಿ, ಕೃಷಿ ಜಮೀನು, ಸಂರಕ್ಷಿತ ಅರಣ್ಯ ಪ್ರದೇಶ, ಅರಣ್ಯ ಸಂಪತ್ತು, ಗಿಡ-ಮರ, ಹುಳು-ಜಂತು, ಪ್ರಾಣಿ-ಪಕ್ಷಿ ಇವುಗಳ ವಿವಿಧ ಪ್ರಬೇಧ ಮತ್ತು ತಳಿಗಳ ಮಾಹಿತಿ, ಔಷಧೀಯ ಗಿಡಮೂಲಿಕೆಗಳ ವಿವರ, ಪಾರಂಪರಿಕ ತಾಣ, ಗುಡಿ-ಗುಂಡಾರಗಳ ಇತಿಹಾಸದ ಜತೆಗೆ ಪ್ರಸಕ್ತ ಅಂಕಿ-ಅಂಶಗಳನ್ನು ಈ ದಾಖಲಾತಿ ಒಳಗೊಂಡಿರುತ್ತದೆ. ಇದು ಸಂಬಂಧಪಟ್ಟ ಗ್ರಾಪಂನ ಜೀವವೈವಿಧ್ಯತೆಯ ಆರ್‌ಟಿಸಿ ದಾಖಲೆ ಇದ್ದಂತೆ ಎಂದು ಅಧಿಕಾರಿಗಳು ಹೇಳುತ್ತಾರೆ.

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ತೀರ್ಪಿನಂತೆ ಪಂಚಾಯಿತಿಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಿಸಲಾಗುತ್ತಿದೆ. ಈಗಾಗಲೇ ಬಹುತೇಕ ಪಂಚಾಯಿತಿಗಳಲ್ಲಿ ಸಮಿತಿ ರಚನೆಯಾಗಿದೆ. ಜತೆಗೆ ಜನತಾ ಜೀವವೈವಿಧ್ಯ ದಾಖಲಾತಿ’ ತಯಾರಿಸುವ ಪ್ರಕ್ರಿಯೆ ನಡೆದಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪ್ರಗತಿ ಉತ್ತಮವಾಗಿದೆ.
-ಕೆ.ಆರ್‌. ಪ್ರಸನ್ನ, ತಾಂತ್ರಿಕ ಕಾರ್ಯನಿರ್ವಾಹಕ (ಸಸ್ಯಶಾಸ್ತ್ರ) ಕರ್ನಾಟಕ ಜೀವವೈವಿಧ್ಯ ಮಂಡಳಿ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next