Advertisement

ಕಾಡ್ಗಿಚ್ಚು ನಂದಿಸಲು ಅರಣ್ಯ ಸಿಬಂದಿಯೂ ಮುಖ್ಯ

11:26 AM Feb 21, 2017 | Harsha Rao |

ಕಾಡ್ಗಿಚ್ಚು ನಂದಿಸಲು ಅತ್ಯಾಧುನಿಕ ಸೌಲಭ್ಯ ಅಗತ್ಯ

Advertisement

ಮಳೆಗಾಲದಲ್ಲಿ ಗಿಡ ನೆಟ್ಟು ಕಾಡು ಬೆಳೆಸುವ ಕಾರ್ಯಕ್ರಮ ನಡೆಸುವ ಸರಕಾರ ಈ ಕಾಡನ್ನು ಉಳಿಸಲು ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ. ನಿರ್ಲಕ್ಷ್ಯಕ್ಕೊಳಗಾದ ಇಲಾಖೆ ಪೈಕಿ ಅರಣ್ಯ ಇಲಾಖೆಯೂ ಒಂದು. ವರ್ಷವಿಡೀ ಕಾಡಿನಲ್ಲೇ ಕಳೆಯುವ ಸಿಬಂದಿಗಳ ಸುರಕ್ಷತೆ ಬಗ್ಗೆ ಇಲಾಖೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ. 

ಬಂಡೀಪುರ ಅಭಯಾರಣ್ಯದಲ್ಲಿ ಕಳೆದ ಶನಿವಾರ ಅರಣ್ಯ ಇಲಾಖೆ ನೌಕರರೊಬ್ಬರು ಕಾಡ್ಗಿಚ್ಚಿಗೆ ಬಲಿಯಾದ ಘಟನೆ ಅರಣ್ಯ ಇಲಾಖೆಯೊಳಗಿನ ಅನೇಕ ಹುಳುಕುಗಳನ್ನು ಬಯಲುಗೊಳಿಸಿದೆ. ಕಾಡ್ಗಿಚ್ಚು ಪ್ರತಿ ವರ್ಷ ಸಂಭವಿಸುವ ದುರಂತ. ಕಾಡಿರುವ ತನಕ ಕಾಡ್ಗಿಚ್ಚು ಇರುತ್ತದೆ. ಆದರೆ ಕಾಡಿಗೆ ಬೆಂಕಿ ಹತ್ತಿಕೊಂಡಾಗ ಅದನ್ನು ನಂದಿಸಲು ಸಿಬ್ಬಂದಿ ಬಳಿ ಏನೇನೂ ಸೌಲಭ್ಯಗಳು ಇಲ್ಲ ಎನ್ನುವುದು ಮಾತ್ರ ಗಂಭೀರವಾದ ಲೋಪ. ಅರಣ್ಯ ಸರ್ವೇಕ್ಷಣಾ ಇಲಾಖೆಯ ದತ್ತಾಂಶಗಳ ಪ್ರಕಾರ ದೇಶದ ಶೇ. 19 ಭಾಗ ಕಾಡಿನಿಂದ ಆವರಿಸಿದೆ. ಇದರಲ್ಲಿ ದಟ್ಟ ಕಾಡು, ಮಧ್ಯಮ ದಟ್ಟಣೆಯ ಕಾಡು, ಕಡಿಮೆ ದಟ್ಟಣೆಯ ಕಾಡು ಎಂದೆಲ್ಲ ವರ್ಗೀಕರಣಗಳಿವೆ. ದೇಶದ 125 ಕೋಟಿ ಜನರ ಮತ್ತು ಕೋಟ್ಯಂತರ ಪ್ರಾಣಿಗಳ ಬೇಡಿಕೆಗಳೆಲ್ಲ ಈ ಶೇ. 19 ಕಾಡಿನಿಂದ ಈಡೇರಬೇಕು. ಹೀಗಾಗಿ ಭಾರತ ಎಂದಲ್ಲ ಹೆಚ್ಚಿನೆಲ್ಲ ದೇಶಗಳಲ್ಲಿ ಕಾಡಿನ ಮೇಲೆ ಅಪಾರ ಒತ್ತಡವಿದೆ. ಭಾರತದ ಶೇ. 50ರಷ್ಟು ಕಾಡು  ಸದಾ ಕಾಡ್ಗಿಚ್ಚಿನ ಅಪಾಯ ಎದುರಿಸುತ್ತಿದೆ.

ಕಾಡ್ಗಿಚ್ಚಿಗೆ ವಾತಾವರಣದ ಉಷ್ಣಾಂಶ ಹೆಚ್ಚಿರುವುದು, ಮಳೆ ಕಡಿಮೆಯಾಗಿರುವುದು ಸೇರಿದಂತೆ ಹಲವಾರು ಕಾರಣಗಳು ಇದ್ದರೂ ಶೇ. 90ರಷ್ಟು ಕಾಡ್ಗಿಚ್ಚುಗಳು ಸಂಭವಿಸುವುದು ಮನುಷ್ಯರಿಂದಾಗಿ. ಕಳೆದ ವರ್ಷ ಉತ್ತಖಂಡದಲ್ಲಿ ಸಂಭವಿಸಿದ ಕಾಡ್ಗಿಚ್ಚು ಆತಂಕಕ್ಕೆ ಕಾರಣವಾಗಿತ್ತು. ಈ ಕಾಡ್ಗಿಚ್ಚಿಗೆ ಸುಮಾರು 3000 ಹೆಕ್ಟೇರ್‌ ಆಹುತಿಯಾಗಿ ಅಪಾರ ನಷ್ಟ ಸಂಭವಿಸಿದೆ. 

ಬೇಸಿಗೆ ಕಾಲದಲ್ಲಿ ಚಿಕ್ಕ ಪುಟ್ಟ ಕಿಡಿಯೂ ಬೃಹತ್‌ ಕಾಡ್ಗಿಚ್ಚಿಗೆ ಕಾರಣವಾಗಬಹುದು. ಸೇದಿ ಎಸೆದ ಬೀಡಿ ಸಿಗರೇಟಿನ ತುಂಡುಗಳೇ ಕಾಡ್ಗಿಚ್ಚಿಗೆ ಕಾರಣವಾದ ಅನೇಕ ಉದಾಹರಣೆಗಳಿವೆ. ಕೆಲವೊಮ್ಮೆ ಜನರೇ ತಮ್ಮ ಸ್ವಾರ್ಥಕ್ಕಾಗಿ  ಕಾಡಿಗೆ ಬೆಂಕಿ ಹಚ್ಚುತ್ತಾರೆ. ಜೇನು ತುಪ್ಪ ಸಂಗ್ರಹಿಸಲು ಹೋದವರು ಜೇನು ನೊಣಗಳನ್ನು ಓಡಿಸಲು ಹೊಗೆ ಹಾಕಿ ಬಳಿಕ ಅದನ್ನು ನಂದಿಸದೆ ವಾಪಸಾಗುವುದರಿಂದ ಕಾಡಿಗೆ ಬೆಂಕಿ ಹತ್ತಿಕೊಳ್ಳುವುದು ಸಾಮಾನ್ಯ ವಿಷಯ. ಇಲ್ಲೆಲ್ಲ ಕಾಣುವುದು ಜನರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ. ಅರಿವು ಇಲ್ಲದ್ದರಿಂದಲೇ ಹೆಚ್ಚಿನ ಕಾಡ್ಗಿಚ್ಚುಗಳಿಗೆ ಮನುಷ್ಯನೇ ಕಾರಣವಾಗುತ್ತಿರುವುದು. 

Advertisement

ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡ್ಗಿಚ್ಚು ನಂದಿಸಲು ಈಗಲೂ ಬಳಸುವುದು ಪುರಾತನ ಸೊಪ್ಪು ಸದೆಯನ್ನು ಎನ್ನುವ ವಿಚಾರ ಬಂಡೀಪುರ ಘಟನೆಯ ಬಳಿಕ ಬೆಳಕಿಗೆ ಬಂದಿದೆ. ಲಕ್ಷಗಟ್ಟಲೆ ಹೆಕ್ಟೇರ್‌ ಅರಣ್ಯ ರಕ್ಷಿಸಲು ಇರುವುದು ಕೆಲವೇ ಸಿಬ್ಬಂದಿಗಳು. ಅವರಿಗೂ ಸಮರ್ಪಕ ಸೌಲಭ್ಯಗಳಿಲ್ಲ.  ಕೆಳ ಹಂತದಲ್ಲಿ ದುಡಿಯುತ್ತಿರುವ ಅರಣ್ಯ ಸಿಬ್ಬಂದಿಗಳ ಬದುಕು ಅರಣ್ಯ ರೋದನವೇ ಸರಿ. ಇದು ಕರ್ನಾಟಕ ಎಂದಲ್ಲ ಎಲ್ಲ ರಾಜ್ಯಗಳ ದಯನೀಯ ಸ್ಥಿತಿ. ಎಲ್ಲೇ ಕಾಡ್ಗಿಚ್ಚು ಕಾಣಿಸಿಕೊಂಡರೂ ಅರಣ್ಯ ರಕ್ಷಕ ಸಿಬ್ಬಂದಿಗಳು ಬರಿಗೈಯಲ್ಲಿ ಅಲ್ಲಿಗೆ ಧಾವಿಸಬೇಕು. ಆಕಾಶಕ್ಕೆ ಕೆನ್ನಾಲಿಗೆ ಚಾಚಿರುವ ಬೆಂಕಿಯನ್ನು ಸೊಪ್ಪು ಬಡಿದು ನಂದಿಸಬೇಕು. ಈ ಸಿಬ್ಬಂದಿಯ ಬಳಿ ಯಾವುದೇ ಅತ್ಯಾಧುನಿಕ ಸಲಕರಣೆಗಳಿರುವುದಿಲ್ಲ. ಕನಿಷ್ಠ ಪರಸ್ಪರರನ್ನು ಸಂಪರ್ಕಿಸಲು ವಾಕಿಟಾಕಿ ಕೂಡ ಇಲ್ಲ. ಗಡಿ ಕಾಯುವ ಸೈನಿಕರಿಗೆ ಶೂ  ಇಲ್ಲ, ಊಟ ಸರಿಯಾಗಿಲ್ಲ  ಎಂದು ರೊಚ್ಚಿನಿಂದ ಬುಸುಗುಡುವ ಯಾರೂ ಗಡಿಯಷ್ಟೇ ಮಹತ್ವ ಹೊಂದಿರುವ ಅರಣ್ಯ ಸಂಪತ್ತನ್ನು ಕಾಯುವ ಬಡಪಾಯಿ ಸಿಬ್ಬಂದಿಗಳ ಬಳಿ ಕನಿಷ್ಠ ಒಂದು ಕೈಗವಚವೂ ಇರುವುದಿಲ್ಲ ಎಂದು ಚಿಂತಿಸದಿರುವುದು ವಿಪರ್ಯಾಸ. 

ಪ್ರತಿವರ್ಷ ಮಳೆಗಾಲದಲ್ಲಿ ಗಿಡ ನೆಟ್ಟು ಕಾಡು ಬೆಳೆಸುವ ಕಾರ್ಯಕ್ರಮ ನಡೆಸುವ ಸರಕಾರ ಈ ಕಾಡನ್ನು ಉಳಿಸಲು ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ. ಅತಿ ಹೆಚ್ಚು ನಿರ್ಲಕ್ಷ್ಯಕ್ಕೊಳಗಾದ ಇಲಾಖೆಗಳ ಪೈಕಿ ಅರಣ್ಯ ಇಲಾಖೆಯೂ ಒಂದು. ವರ್ಷವಿಡೀ ಕಾಡಿನಲ್ಲೇ ಕಳೆಯುವ ಸಿಬ್ಬಂದಿಗಳ ಸುರಕ್ಷತೆ ಬಗ್ಗೆ ಇಲಾಖೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ. ಹಲವು ದೇಶಗಳು ಕಾಡ್ಗಿಚ್ಚು ನಂದಿಸಲು ಹೆಲಿಕಾಪ್ಟರ್‌, ಕಾಡಿನ ಪಕ್ಕವೇ ಅಗ್ನಿಶಾಮಕ ಕೇಂದ್ರ ಇತ್ಯಾದಿ ಸೌಲಭ್ಯಗಳನ್ನು ಮಾಡಿಟ್ಟುಕೊಂಡಿವೆ.  ಇಂತಹ ಸೌಲಭ್ಯಗಳನ್ನು ನಾವೂ ಮಾಡಿಕೊಳ್ಳಬಹುದು. ಮುಖ್ಯವಾಗಿ ಸಿಬ್ಬಂದಿಗಳಿಗೆ ಸಲಕರಣೆಗಳನ್ನು ಕೊಡಬೇಕು. ಜತೆಗೆ ಉತ್ತಮ ತರಬೇತಿಯನ್ನೂ ನೀಡಬೇಕು. ಇದಕ್ಕೂ ಮಿಗಿಲಾಗಿ ಸ್ವಾರ್ಥಕ್ಕಾಗಿ ಕಾಡಿಗೆ ಬೆಂಕಿ ಹಚ್ಚದಂತೆ ಜನರಲ್ಲಿ ಅರಿವು ಮೂಡಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next