Advertisement

Udupi Paryaya; ಪಂಚಸೂತ್ರಗಳನ್ನು ಪಾಲಿಸಿ, ಮಕ್ಕಳಿಗೆ ಸಂಸ್ಕಾರ ಕೊಡಿ

12:34 AM Jan 17, 2024 | Team Udayavani |

ನದಿತೊರೆ ಮೂಲದಲ್ಲಿ ಚಿಕ್ಕರೂಪದಲ್ಲಿ ಕಾಣಿಸಿಕೊಂಡು ದೊಡ್ಡ ನದಿಯಾಗಿ ಸುದೀರ್ಘ‌ ಹರಿಯುವಂತೆ 13ನೆಯ ವಯಸ್ಸಿನಲ್ಲಿಯೇ ಸನ್ಯಾಸಾಶ್ರಮ ಸ್ವೀಕರಿಸಿ 15ನೆಯ ವಯಸ್ಸಿನಲ್ಲಿಯೇ ಪ್ರಥಮ ಪರ್ಯಾಯ ಪೂಜೆ ನೆರವೇರಿಸಿ, ದೇಶ- ವಿದೇಶಗಳಲ್ಲಿ ಸಂಚರಿಸಿ ವಿದೇಶಗಳ 15 ಕಡೆ ಶ್ರೀಕೃಷ್ಣ ಮಂದಿರವನ್ನು ಸ್ಥಾಪಿಸಿ ಒಟ್ಟು 108 ಮಂದಿರಗಳನ್ನು ಸ್ಥಾಪಿಸುವ ಗುರಿ ಹೊಂದಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು 2024ರ ಜ. 18ರಿಂದ ನಾಲ್ಕನೆಯ ಪರ್ಯಾಯ ಪೂಜೆಯ ವ್ರತ ಕೈಗೊಳ್ಳುತ್ತಿದ್ದಾರೆ. ಅವರ ಸನ್ಯಾಸಾಶ್ರಮದ ಸುವರ್ಣ ‌ಮಹೋತ್ಸವದ ಹೊತ್ತಿದು. ಹೀಗಾಗಿ ಕೋಟಿ ಗೀತಾ ಲೇಖನ ಯಜ್ಞದಂತಹ ಮಹತ್ವಪೂರ್ಣ ಯೋಜನೆಯನ್ನು ಸಂಕಲ್ಪಿಸಿರುವ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನವನ್ನು ಇಲ್ಲಿ ನೀಡಲಾಗಿದೆ.

Advertisement

ಚಿಕ್ಕಪ್ರಾಯದಲ್ಲಿಯೇ ತಮಗೆ ಸ್ವಾಮೀಜಿಯಾಗುವ ಅವಕಾಶ ಹೇಗೆ ಸಿಕ್ಕಿತು?
ನಮ್ಮ ಗುರುಗಳಾದ ಶ್ರೀ ಸುಜ್ಞಾನೇಂದ್ರ ತೀರ್ಥರು ಹಿರಿಯರಾಗಿದ್ದಾಗ ಅನೇಕರ ಜಾತಕಗಳನ್ನು ಕೇರಳದ ಜ್ಯೋತಿಷಿ ಗಳಿದ ಪರಿಶೀಲಿಸಿ ನಮ್ಮ ಜಾತಕವನ್ನು ಆಯ್ಕೆ ಮಾಡಿದರು. ಬಳಿಕ ನಮ್ಮ ತಂದೆ ತಾಯಿಗಳನ್ನು ಕರೆಸಿ ನನ್ನನ್ನು ಮಠಕ್ಕೆ ಕೊಡುವಂತೆ ಕೇಳಿದರು. ನಮಗೆ ಆಗ 13 ವರ್ಷ. ಸ್ವಾಮಿಗಳೆಂದರೆ ಏನೆಂದೇ ತಿಳಿದಿರಲಿಲ್ಲ. ತಂದೆ ಒಪ್ಪಿದರೂ ತಾಯಿ ಒಪ್ಪಿರಲಿಲ್ಲ. ಕೊನೆಗೆ ತಂದೆಯೇ ತಾಯಿಯನ್ನು “ನಮಗೆ 11 ಮಕ್ಕಳಿದ್ದಾರೆ. ಒಬ್ಬನನ್ನು ಶ್ರೀಕೃಷ್ಣನ ಸೇವೆಗಾಗಿ ಕೊಡೋಣ’ ಎಂದರು. ಅನಂತರ ತಾಯಿ ಒಪ್ಪಿದರು. ಆಗ ಗುರುಗಳು ನಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು.

ನೀವು ಸರಳ ಸಂಸ್ಕೃತದ ಅಧ್ವರ್ಯು ಸ್ವಾಮೀಜಿ. ಸಂಸ್ಕೃತದ ಭಾಷಣವನ್ನು ಹೇಗೆ ಸ್ವೀಕರಿಸುತ್ತಾರೆ?
ನಾವು 4 ದಶಕಗಳಿಂದ ಸರಳ ಸಂಸ್ಕೃತದಲ್ಲಿ ಮಾತನಾಡುತ್ತಿದ್ದೇವೆ. ಸಂಸ್ಕೃತದ ಶಬ್ದಗಳೇ ಭಾರತೀಯ ಭಾಷೆಗಳಲ್ಲಿರುವುದರಿಂದ ಸಂಸ್ಕೃತ ತಿಳಿಯದವರಿಗೂ ಅರ್ಥವಾಗುತ್ತದೆ. ಆದ್ದರಿಂದ ಕರ್ನಾಟಕ ಹೊರತುಪಡಿಸಿದ ಇತರೆಡೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕನ್ನಡ, ಹಿಂದಿ, ಇಂಗ್ಲಿಷ್‌ ಜತೆ ಸಂಸ್ಕೃತದಲ್ಲಿ ಉಪನ್ಯಾಸ ಕೊಡುತ್ತೇವೆ. ವಿದೇಶಗಳ ವಿ.ವಿ. ಗಳಲ್ಲಿ ಯೂ ಸಂಸ್ಕೃತದಲ್ಲಿ ಪ್ರಬಂಧ ಮಂಡಿಸಿದ್ದೇವೆ. ಸಂಸ್ಕೃತವನ್ನು ತಮ್ಮದೇ ಆದ ಭಾಷೆ ಎಂಬಂತೆ ಜನರು ಸ್ವೀಕರಿಸುತ್ತಾರೆ.

ವಿದೇಶಗಳಲ್ಲಿ ಧರ್ಮಪ್ರಸಾರ
ವಿದೇಶಗಳಲ್ಲಿ ಧರ್ಮಪ್ರಸಾರಕ್ಕೆ ತಮಗೆ ಹೇಗೆ ಆಸಕ್ತಿ ಕುದುರಿತು? ಅದರ ವಿಕಾಸ ಹೇಗಾಯಿತು?
1997ರಲ್ಲಿ ವಿದೇಶಗಳಲ್ಲಿದ್ದ ಕೆಲವು ವ್ಯಕ್ತಿಗಳು ನಮ್ಮನ್ನು ಭೇಟಿದ್ದರು. ನಮಗೆ ಆಗ ಇಂಗ್ಲಿಷ್‌ನಲ್ಲಿ ಮಾತನಾಡಲು ಬರುತ್ತಿದ್ದಕಾರಣ ಅವರು ಎತ್ತಿದ ಧಾರ್ಮಿಕ, ಆಧ್ಯಾತ್ಮಿಕ ಸಂಬಂಧದ ಪ್ರಶ್ನೆಗಳಿಗೆ ಇಂಗ್ಲಿಷ್‌ನಲ್ಲಿ ಉತ್ತರಿಸಿದೆ. ಹೀಗೆ ಕೆಲವರು ವಿಚಾರ ಗಳನ್ನು ಮನದಟ್ಟು ಮಾಡಿಕೊಂಡು ಹೋಗುತ್ತಿದ್ದರು. ಅಲ್ಲಿ ಅಸಂಖ್ಯ ಜನರಿಗೆ ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಿಗೆ ಸಂಬಂಧಿಸಿ ತಿಳಿದುಕೊಳ್ಳಬೇಕೆಂಬ ಹಂಬಲವಿದೆ. ಅಲ್ಲಿಗೆ ಬಂದರೆ ಮಾತ್ರ ವ್ಯವಸ್ಥಿತವಾಗಿ ಅವರಿಗೆ ತಿಳಿಸಿಕೊಡಬಹುದು. ಆಲ್ಲಿಗೆ ಬರಲು ಸೂಕ್ತ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಧರ್ಮದ ಬಗ್ಗೆ ಎಲ್ಲಿ ಹಸಿವು ಇದೆಯೋ? ಎಲ್ಲಿ ಭಗವದ್ಭಕ್ತಿ ಇದೆಯೋ ಅಲ್ಲಿಗೆ ಮಠಾಧಿಪತಿಗಳಾದವರು ಹೋಗಿ ಧರ್ಮ ಪ್ರಸಾರ ಮಾಡಬೇಕು ಎಂದು ನಿರ್ಧರಿಸಿದೆವು. ಧರ್ಮ ಪ್ರಸಾರದಲ್ಲಿ ದೇಶದ ಗಡಿಗಳ ನಿರ್ಬಂಧ ಇರಕೂಡದು ಎಂಬ ಭಾವನೆ ನಮ್ಮದು. ಮೊದಲು ಹೋದದ್ದು ಅಮೆರಿಕಕ್ಕೆ. ಒಟ್ಟು 15 ಶ್ರೀಕೃಷ್ಣ ವೃಂದಾವನ ದೇವಸ್ಥಾನಗಳನ್ನು ವಿದೇಶಗಳಲ್ಲಿ ಪ್ರತಿಷ್ಠಾಪಿಸಿದ್ದೇವೆ. ಕೆಲವೆಡೆ ಬಾಡಿಗೆ ಕಟ್ಟಡದಲ್ಲಿ ನಡೆಯು ತ್ತಿವೆ, 108 ದೇವಸ್ಥಾನಗಳನ್ನು ನಿರ್ಮಿಸುವ ಗುರಿ ಇದೆ.

ಭಾರತೀಯ ಸಂಸ್ಕೃತಿಗೆ ಲಾರಾ ಬುಷ್‌ ಮೆಚ್ಚುಗೆ
ಭಾರತೀಯ ಕುಟುಂಬ ವ್ಯವಸ್ಥೆ ಕುರಿತು ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್‌ ಬುಷ್‌ ಅವರ ಪತ್ನಿ ಲಾರಾ ಬುಷ್‌ ಮೆಚ್ಚುಗೆ ವ್ಯಕ್ತಪಡಿಸಿದ ಕುರಿತು ಹೀಗಿತ್ತು.
ಅಮೆರಿಕದ ಶ್ವೇತಭವನಕ್ಕೆ ಅವರ ಆಹ್ವಾನದ ಮೇರೆಗೆ ಭೇಟಿ ಕೊಟ್ಟಾಗ ಭಾರತೀಯ ಕುಟುಂಬ ಪದ್ಧತಿ ಕುರಿತು
ಜಾರ್ಜ್‌ ಬುಷ್‌ ಅವರ ಜತೆಗಿದ್ದ ಲಾರಾ ಬುಷ್‌ ಅಚ್ಚರಿ ಯಿಂದ ಕೇಳಿದರು. “ಭಾರತದಲ್ಲಿ ಒಂದೇ ಮನೆಯಲ್ಲಿ ಅಜ್ಜ, ಅಜ್ಜಿ, ದೊಡ್ಡಪ್ಪ, ಚಿಕ್ಕಪ್ಪ, ಅವರ ಪತ್ನಿಯರು, ಸೊಸೆ, ಗಂಡುಮಕ್ಕಳು, ಹೆಣ್ಣು ಮಕ್ಕಳು ಇವರೆಲ್ಲ ಹೇಗೆ ಇರುತ್ತಾರೆ? ಅಮೆರಿಕದಲ್ಲಿ ಇದು ಸಾಧ್ಯವೇ ಇಲ್ಲ. ನಾವು ಇದಕ್ಕಾಗಿ ಒಂದು ಸಚಿವಾಲಯವನ್ನೇ ಮಾಡ
ಬೇಕೆಂದಿದ್ದೇವೆ’ಎಂದರು. ಅವರಿಗೇ ಇಷ್ಟೊಂದು ಕಳಕಳಿ ಇರುವಾಗ ನಾವೇಕೆ ಅಮೂಲ್ಯ ಸಂಸ್ಕೃತಿ ಸಂಪತ್ತನ್ನು ಕಳೆದುಕೊಳ್ಳಬೇಕು?

Advertisement

ವಿಶ್ವಕ್ಕೇ ಮಾದರಿಯಾದ ಭಾರತೀಯ ಆದರ್ಶ ಕುಟುಂಬ ಪದ್ಧತಿ ಉಳಿಸಲು ತಮ್ಮ ಸಲಹೆಗಳೇನು?
ನಮ್ಮ ಕಳಕಳಿ ಇಷ್ಟೆ: ಯಾರೂ ನಮ್ಮ ಪಾರಂಪರಿಕ ಕೌಟುಂಬಿಕ ಮೌಲ್ಯವನ್ನು ಬಿಡಬೇಡಿ. ನಾವು ಇದನ್ನು ಕ್ರಮೇಣ ಬಿಡುತ್ತಿದ್ದೇವೆ. ಪ್ರತಿ ಮಕ್ಕಳàಗೂ ಈ ಐದು ಸಂಸ್ಕಾರಗಳನ್ನು ಕೊಡಬೇಕೆಂದು ಅಪೇಕ್ಷೆಪಡುತ್ತೇವೆ: ದಿನಕ್ಕೆ ಒಮ್ಮೆಯಾದರೂ ಮನೆಯ ಎಲ್ಲ ಸದಸ್ಯರು ಒಟ್ಟಿಗೆ ಕುಳಿತು ಊಟ ಮಾಡಿ. ಇದರಿಂದ ಬಾಂಧವ್ಯ, ತಿಳಿವಳಿಕೆ ಬೆಳೆಯುತ್ತದೆ. ನಾವು ದೂರ ದೂರ ಹೋದಂತೆ ವೈಮನಸ್ಯ ಬೆಳೆಯುತ್ತದೆ. ವರ್ಷಕ್ಕೊಮ್ಮೆಯಾದರೂ ಕುಟುಂಬಸ್ಥರ ಸಮ್ಮಿಲನ ನಡೆಯಲಿ. ಮಕ್ಕಳ ಸಾಧನೆ ಕುರಿತು ಎದುರು ಹೊಗಳದೆ ಇನ್ನಷ್ಟು ಸಾಧನೆ ಮಾಡು ಎಂಬ ಕಿವಿಮಾತು ಹೇಳಿ. ಹಿರಿಯರ ಸೇವೆ ಮಾಡುವ ಅಭ್ಯಾಸವನ್ನು ಚಿಕ್ಕ ಪ್ರಾಯದಿಂದಲೇ ಮಕ್ಕಳಲ್ಲಿ ರೂಢಿಸಿ. ದೇವಸ್ಥಾನ, ಭಜನ ಮಂದಿರಗಳಿಗೆ ಹೋಗುವಾಗ ಮಕ್ಕಳನ್ನೂ ಕರೆದುಕೊಂಡು ಹೋಗಿ. ಗುರು ಹಿರಿಯರಿಗೆ ಗೌರವ ಕೊಡುವುದನ್ನು ಮಕ್ಕಳಿಗೆ ಕಲಿಸಿ ಪ್ರತಿ ನಿತ್ಯ ಬೆಳಗ್ಗೆ ಮಕ್ಕಳು ತಂದೆತಾಯಿಗಳಿಗೆ ನಮಸ್ಕಾರ ಮಾಡಬೇಕು. ತಂದೆಗೆ ನಮಸ್ಕಾರ ಮಾಡಬೇಕೆಂದು ತಾಯಿ ಹೇಳಬೇಕು, ತಾಯಿಗೆ ನಮಸ್ಕಾರ ಮಾಡಬೇಕೆಂದು ತಂದೆ ಹೇಳಬೇಕು. ಹೀಗಾದರೆ ಮಾತ್ರ ಮಕ್ಕಳು ದೊಡ್ಡವರಾದ ಬಳಿಕ ಹಿರಿಯರಿಗೆ ಗೌರವ ಕೊಡುತ್ತಾರೆ.

ಚತುರ್ಥ ಪರ್ಯಾಯದ ಯೋಜನೆಗಳೇನು?
ನಮ್ಮ ಎರಡನೆಯ ಪರ್ಯಾಯದಲ್ಲಿ ಎರಡು ಲಕ್ಷ ಭಕ್ತರಿಂದ ಗೀತಾ ಲೇಖನವನ್ನು ಬರೆದು ಸಮರ್ಪಿಸಿದ್ದರೆ, ಈ ಬಾರಿ ಕೋಟಿ ಭಕ್ತರಿಂದ ಗೀತಾ ಲೇಖನ ಯಜ್ಞವನ್ನು ನಡೆಸಬೇಕೆಂದಿದ್ದೇವೆ. ಭಕ್ತರು ಉಡುಪಿಗೆ ಬಂದು ಗೀತಾ ಪಾರಾಯಣ ಮಾಡಿ ಗೀತಾಚಾರ್ಯನಿಗೆ ಗೀತೆಯನ್ನು ಸಮರ್ಪಿಸಬೇಕು. ಗೀತಾ ಮಂದಿರದಲ್ಲಿ ನಿತ್ಯ ಉದಯಾಸ್ತಮಾನ (ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ) ಗೀತಾ ಪಾರಾಯಣ ನಡೆಸಲಿದ್ದೇವೆ. ಪರ್ಯಾಯದ ಕೊನೆಯಲ್ಲಿ ಗೀತೆಯ 700 ಶ್ಲೋಕಗಳ ಮಹಾಯಾಗವನ್ನೂ, ಅಂತಾರಾಷ್ಟ್ರೀಯ ಸ್ತರದ ಗೀತಾ ಸಮ್ಮೇಳನವನ್ನೂ ನಡೆಸಬೇಕು. ಪ್ರತಿ ನಿತ್ಯ ಒಂದೊಂದು ಶ್ಲೋಕದ ಕುರಿತು ಉಪನ್ಯಾಸ ನೀಡಲಾಗುವುದು. ಗೀತೆಯನ್ನು ಬೋಧಿಸಿದ ಮಾದರಿಯ ಚಿನ್ನದ ರಥವನ್ನು ಸಮರ್ಪಿಸಲಿದ್ದೇವೆ.

ಕೋಟಿ ಲೇಖನ ಯಜ್ಞದ ಪುಸ್ತಕಗಳನ್ನೇನು ಮಾಡುವಿರಿ?
ಲಕ್ಷ ಗೀತಾ ಲೇಖನ ಯಜ್ಞ ಮಾಡಿದಾಗ ಕೆಲವು ಪುಸ್ತಕಗಳನ್ನು ಪೂಜೆಗಾಗಿ ಗೀತಾ ಮಂದಿರದಲ್ಲಿ ಇರಿಸಿದ್ದೆವು, ಕೆಲವನ್ನು ಭಕ್ತರಿಗೆ ಕೊಟ್ಟಿದ್ದೆವು. ಈ ಬಾರಿ ಎಲ್ಲ ಪುಸ್ತಕಗಳನ್ನು ಬರೆದವರಿಗೇ ಕೊಡುತ್ತೇವೆ. ಇದು ಭಕ್ತರಿಗೆ ಜೀವನದ ಅಮೂಲ್ಯ ಸ್ಮರಣೆ.

ಕಿರಿಯ ಶ್ರೀಗಳನ್ನು ಹೇಗೆ ರೂಪಿಸಬೇಕೆಂಬ ಇರಾದೆ ಇದೆ?
ಕಿರಿಯ ಸ್ವಾಮೀಜಿಯವರನ್ನು ಒಬ್ಬ ಆದರ್ಶ ಯತಿಯಾಗಿಸುವೆ ಲೌಕಿಕವಾಗಿ ಯೂ, ವೈದಿಕವಾಗಿಯೂ ಅವರು ಮುಂದೆ ಬರಬೇಕು. ಪಾಠ ಪ್ರವಚನದ ಜತೆ ಸಮಾಜಮುಖಿಯಾಗಿಯೂ ರೂಪುಗೊಳ್ಳಬೇಕು ಎಂಬ ಆಶಯ ನಮ್ಮದು.

ಶ್ರೀಕೃಷ್ಣ-ಮುಖ್ಯಪ್ರಾಣರ ಕಾರಣಿಕ!
ನ್ಯೂಜೆರ್ಸಿಗೆ ಕೃಷ್ಣನ ಮೂರ್ತಿಯನ್ನು ಕೊಂಡೊಯ್ಯಬೇಕಾಗಿತ್ತು. ಆದರೆ ಅದಕ್ಕಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಮೂರ್ತಿಯನ್ನು ಕೊಂಡೊಯ್ಯಲುಹೋದಾಗ ಅವರು ನಿರಾಕರಿಸಿದರು. ಮರುದಿನ ಪ್ರತಿಷ್ಠಾ ದಿನವಾಗಿತ್ತು. ಇನ್ನೇನುಮಾಡುವುದೆಂದು ವಾಪಸು ಬರುವಾಗ ಕಟೀಲು ಬಳಿ ವಿಮಾನ ನಿಲ್ದಾಣದಿಂದ ದೂರವಾಣಿ ಕರೆ ಬಂತು. ಅವರು ಕೊಂಡೊಯ್ಯಲು ಅವಕಾಶ ಕೊಡುತ್ತೇವೆ ಎಂದರು. ಇದು ಕೃಷ್ಣನ ಇಚ್ಛೆ ಎಂದು ತಿಳಿದೆವು. ಇನ್ನೊಮ್ಮೆ ಮುಖ್ಯಪ್ರಾಣನ ವಿಗ್ರಹವನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಕೊಂಡೊಯ್ಯಬೇಕಾಗಿತ್ತು. ವಿಗ್ರಹವನ್ನು ತೂಕ ಮಾಡಿದಾಗ 37 ಕೆ.ಜಿ. ಇತ್ತು. ವಿಮಾನ ನಿಲ್ದಾಣದವರ ಪ್ರಕಾರ 32 ಕೆ.ಜಿ.ಗಿಂತ ಹೆಚ್ಚಾದರೆ ಆಗದು. ಇನ್ನೇನು ಮಾಡುವುದೆಂದು ವಾಪಸಾಗುವಾಗ ಮತ್ತೆ ತೂಕ ಮಾಡೋಣವೆಂದು ಎನಿಸಿ ತೂಕ ಮಾಡಿದೆವು. ಬಂದ ತೂಕ 32 ಕೆ.ಜಿ. ವಿಮಾನ ನಿಲ್ದಾಣದವರು ಒಪ್ಪಿದರು. ಅಮೆರಿಕಕ್ಕೆ ಹೋದ ಬಳಿಕ ತೂಕ ಮಾಡಿ ನೋಡಿದೆವು. ಆಗ 37 ಕೆ.ಜಿ. ಇತ್ತು. ಇದು ಹೇಗಾಯಿತು ಎಂಬುದು ಇಂದಗೂ ನನಗೆ ಕುತೂಹಲವೇ. ಇದನ್ನು ನಾವು ಮುಖ್ಯಪ್ರಾಣ ದೇವರ ಮಹಿಮೆ ಎಂದುಕೊಂಡಿದ್ದೇವೆ. ಅಮೆರಿಕದಲ್ಲಿ ಆರಂಭಿಸಿದ ದೇವಸ್ಥಾನಗಳಲ್ಲಿಯೂ ಭಕ್ತರಿಗೆ ಇಂತಹ ಅನುಭವಗಳು ಆಗಿ ಭಕ್ತರ ಇಷ್ಟಾರ್ಥಗಳು ನೆರವೇರುತ್ತಿವೆ. ಒಮ್ಮೆ ಮಿಯಾಮಿಗೆ ಹೋಗುವುದಿತ್ತು. ವಿಮಾನದಲ್ಲಿ 10-12 ಗಂಟೆಗಳ ಪ್ರಯಾಣ. ರಾತ್ರಿ 9 ಗಂಟೆ ಹೊತ್ತಿಗೆ ಮೋಡ ಕವಿಯಿತು. ಒಂದೂವರೆ ಗಂಟೆ ಕಾಲ ಆಕಾಶದಲ್ಲಿಯೇ ಪೈಲಟ್‌ ವಿಮಾನವನ್ನು ಹಾರಾಡಿಸಿದ. ಅದೇ ಹೊತ್ತಿಗೆ ಇಂಧನ ಕಡಿಮೆಯಾಗುತ್ತಿದೆ ಎನ್ನುವುದು ಆತನಿಗೆ ತಿಳಿಯಿತು. ಇನ್ನು ಕಾಲು ಗಂಟೆಗೆ ಆಗುವಷ್ಟು ಇಂಧನವಿದೆ ಎಂದು ತಿಳಿಸಿದ. 300-400 ಪ್ರಯಾಣಿಕರು ಗಾಬರಿಗೊಳಗಾಗಿದ್ದರು. ನಮ್ಮ ಉಡುಗೆಯನ್ನು ಕಂಡ ವಿದೇಶೀಯರು ಹತ್ತಿರ ಬಂದು “ನೀವು ಹಿಂದೂ ಸನ್ಯಾಸಿ. ನಿಮ್ಮ ಪ್ರಾರ್ಥನೆಯಂತೆ ನಮಗೆ ಯಾವುದಾದರೂ ದಾರಿ ತೋರಬಹುದು. ನೀವು ದೇವರಲ್ಲಿ ಪ್ರಾರ್ಥಿಸಿ’ ಎಂದು ವಿನಂತಿಸಿದರು. ನಾವು ಪ್ರಾರ್ಥನೆ ಮಾಡಿದೆವು. ಕೊನೆಗೆ ಪೈಲಟ್‌ ಏನಾಗುವುದೋ ಆಗಲಿ, ಇಳಿಸಿಯೇ ಬಿಡುತ್ತೇನೆಂದು ಇಳಿಸಿದ. ಎಲ್ಲರೂ ಸುರಕ್ಷಿತವಾಗಿ ಹೊರಬಂದೆವು. ಅಮೆರಿಕದಲ್ಲಿ ಸಾವಿರ ಮಂದಿ ಭಗವದ್ಗೀತೆಯನ್ನು ಕಂಠಪಾಠ ಹೇಳಬಲ್ಲರು. ಇದನ್ನು ಕಲಿತದ್ದು ನಮ್ಮ ಆನ್‌ಲೈನ್‌ ತರಗತಿಗಳಿಂದ. ವೃದ್ಧರೂ ಭಗವದ್ಗೀತೆಯನ್ನು ಬರೆಯುತ್ತಿದ್ದಾರೆ. ಇದೆಲ್ಲವೂ ಕೃಷ್ಣನ ಇಚ್ಛೆಯೇ.

ಸಂದರ್ಶನ: ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next