Advertisement

ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ವಾದಿಷ್ಟ ಹಲಸು

09:57 AM May 17, 2018 | |

ದೊಡ್ಡಬಳ್ಳಾಪುರ: ಬೆಂಗಳೂರು ಹಿಂದೂಪುರ ಹೆದ್ದಾರಿಯ ನಗರದ ಹೊರವಲಯದ ಟಿ.ಬಿ. ವೃತ್ತದ ಬಳಿಯ ರಸ್ತೆಯ ಬದಿಯಲ್ಲಿ ರಾಶಿ ರಾಶಿ ಹಲಸಿನ ಹಣ್ಣುಗಳು ಕಾಣುತ್ತಿದ್ದು, ಈ ಬಾರಿಯ ಹಲಸಿನ ಸೀಸನ್‌ ನೆನಪಿಸುತ್ತಿದೆ. ಹಲಸಿನ
ಹಣ್ಣುಗಳನ್ನು ಸ್ಥಳೀಯರಲ್ಲದೇ ನೆರೆಯ ಆಂಧ್ರದಿಂದ ವ್ಯಾಪಾರಸ್ಥರು ಖರೀದಿಸುವುದು ವಿಶೇಷವಾಗಿದೆ.

Advertisement

ತಾಲೂಕಿನಲ್ಲಿ ಈ ಬಾರಿ ಸಾಧಾರಣವಾಗಿ ಮಳೆಯಾಗಿರುವುದರಿಂದ ಹಲಸು ಇಳುವರಿಗೆ ಸಹಾಯಕವಾಗಿ ಸ್ವಾಧಿಷ್ಟ ಹಣ್ಣುಗಳು ಬರತೊಡಗಿವೆ. ಮಾವಿನ ಹಣ್ಣು ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆಯೇ ಹಲಸಿನ ಹಣ್ಣುಗಳ ಮಾರಾಟವೂ ನಡೆದಿದೆ. ದೊಡ್ಡ ಗಾತ್ರದ ಹಲಸಿನ ಹಣ್ಣುಗಳು 100 ರಿಂದ 150 ರೂ.ಗಳವರೆಗೆ ಮಾರಾಟವಾಗುತ್ತಿವೆ. ನಗರದ ಟಿ.ಬಿ.ವೃತ್ತ ಸೇರಿದಂತೆ ನಗರದ ವಿವಿಧೆಡೆ ದಿನ ನಿತ್ಯ ನೂರಾರು ಹಲಸಿನ ಹಣ್ಣುಗಳ ಮಾರಾಟ ನಡೆಯುತ್ತಿದೆ. 

ಹಲಸಿನ ಸೀಸನ್‌ ಅಂಗವಾಗಿ ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿರುವ ಹಲಸಿನ ತಳಿಗಳಲ್ಲಿ ಹಳದಿ ಬಣ್ಣದ ತೊಳೆಯ ಹಲಸು, ಕೆಂಪುಬಣ್ಣದ ತೊಳೆಯ ಹೆಬ್ಬಲಸು, ಬೇರು ಹಲಸು ಮೊದಲಾಗಿ ವಿಧದ ಹಲಸಿನ ಮಾರಾಟ ನಡೆಯುತ್ತಿದೆ. ಇತರ ಹಲಸಿನ ಹಣ್ಣುಗಳು ಗಾತ್ರ, ಹಣ್ಣಿನ ತಳಿ, ವೈವಿದ್ಯತೆಗಳಿಗನುಗುಣವಾಗಿ 50 ರೂ.ಗಳಿಂದ ಆರಂಭ.

150 ರೂ.ಗಳವರೆಗೆ ಮಾರಾಟವಾಗುತ್ತಿವೆ. ಚುನಾವಣೆಯ ಅಂಗವಾಗಿ ಕೆಲಕಾಲ ಮಂದಗತಿಯಲ್ಲಿದ್ದ ಹಲಸಿನ ವ್ಯಾಪಾರ ಇದೀಗ ಚುರುಕುಗೊಂಡಿದ್ದು, ನೆರೆಯ ಆಂಧ್ರ ಹಾಗೂ ಸುತ್ತಮುತ್ತಲಿನ ತಾಲೂಕುಗಳಿಂದ ಹಲಸನ್ನು ಖರೀದಿಸಲು ಆಗಮಿಸಬೇಕಿದೆ. 

ಹಲಸು ಬೆಳೆ: ಮಾವು, ಬಾಳೆಗಳಂತೆ ಹಲಸನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಇಳುವರಿ ದೃಷ್ಟಿಯಿಂದ ಈ ಹಣ್ಣಿನ ಬೇಸಾಯ ಇತರ ಹಣ್ಣಿಗಿಂತ ಹೆಚ್ಚು ಲಾಭದಾಯಕ. 5 ಕೇಜಿಯಿಂದ 50 ಕೇಜಿಗಳವರೆಗೆ ತೂಗುವ ಇದು ಗಾತ್ರದಲ್ಲಿ ಹಣ್ಣುಗಳ ದೊಡ್ಡಣ್ಣನೂ ಹೌದು. ತಾಲೂಕಿನ ತೂಬಗೆರೆ ಹಾಗೂ ಕಸಬಾ ಹೋಬಳಿಗಳಲ್ಲಿ ಹೆಚ್ಚು ಹಲಸು ಬೆಳೆಯಲಾಗುತ್ತದೆ. ಉಳಿದ ಹೋಬಳಿಗಳಿಂದಲೂ ಸೀಸನ್‌ನಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ತೂಬಗೆರೆ ಹೋಬಳಿಯ ಹಲಸಿನ ಹಣ್ಣುಗಳು ಎಂದರೆ ಹಾಗೆಯೇ. ತಿಂದವರು ಮತ್ತೆ ಮತ್ತೆ ಬಯಸುತ್ತಾರೆ. 

Advertisement

ಬೆಳೆಯುವವರು ಅದರ ಸಸಿಗಳನ್ನು ಕೇಳುತ್ತಾರೆ. ತೂಬಗೆರೆ ಹೋಬಳಿಯ ಕಾಚಳ್ಳಿ, ಮೆಳೇಕೋಟೆ, ನೆಲ್ಲುಕುಂಟೆ ಸೇರಿದಂತೆ ಇಲ್ಲಿನ ಸುತ್ತಮುತ್ತ ನೂರಾರು ವರ್ಷಗಳ ಹಳೆಯ ಮರಗಳಿವೆ. ಬೇರೆಡೆ ಹೆಚ್ಚಿನ ಇಳುವರಿಯಾಗಿ ಹಣ್ಣುಗಳು ಮಾರುಕಟ್ಟೆಗೆ ಬಂದು ಬೆಲೆ ಇಳಿಮುಖವಾಗಿದ್ದರೂ ತೂಬಗೆರೆ ಹಲಸು ಮಾತ್ರ ತನ್ನ ಬೆಲೆ ಕಳೆದುಕೊಂಡಿಲ್ಲ ಎನ್ನುವುದು ವಿಶೇಷ. ಇಲ್ಲಿನ ಮಣ್ಣಿನ ಗುಣ ಹಲಸು ಹಣ್ಣುಗಳ ರುಚಿಗೆ ಕಾರಣವಾಗಿದ್ದು, ತೂಬಗೆರೆ ಚಂದ್ರಹಲಸು ಬಗೆ ಎಂದೇ ರಾಜ್ಯದಲ್ಲಿ ಹೆಸರು ಮಾಡಿವೆ. 

ಸಗಟು ಮಾರಾಟ: ತಾಲೂಕಿನಲ್ಲಿ ಮಾವಿನಂತೆ ಹಲಸಿನ ತೋಪುಗಳು ಕಡಿಮೆ. ಹೀಗಾಗಿ ರೈತರು ತಮ್ಮ ತೋಟಗಳಲ್ಲಿ ಬೆಳೆದಿರುವ ಹತ್ತಾರು ಮರಗಳ ಹಣ್ಣುಗಳನ್ನೇ ಮಾರಾಟಗಾರರು ಮುಂಚೆಯೇ ಖರೀದಿಸಲಾಗುತ್ತದೆ. ಈ ಬಾರಿ ಇಳುವರಿ ಪರವಾಗಿಲ್ಲ. ನೀರಾವರಿ ಜಮೀನು ಹಾಗೂ ನೀರಿನ ಆಶ್ರಯವಿರುವ ತೋಟಗಳ ಬಳಿ ಹೆಚ್ಚಿನ ಇಳುವರಿ ಬಂದಿದ್ದು, ಉಳಿದೆಡೆ ಸಾಧಾರಣ ಇಳುವರಿಯಾಗಿದೆ. ಹಲಸಿನ ತೋಪುಗಳು ಕಡಿಮೆಯಾಗುತ್ತಿದ್ದರೂ ತೋಟಗಳಲ್ಲಿ ಬೆಳಸಿರುವ ಹಲಸಿನ ಮರಗಳಲ್ಲಿ ಜನವರಿ ಫೆಬ್ರವರಿಯಲ್ಲಿಯೇ ವ್ಯಾಪಾರ ಮಾಡಿ, ಈಗ ಖರೀದಿಸಿ ತಂದು ಮಾರುತ್ತೇವೆ. ಒಂದು ಹುಂಡಿಗೆ (ಗುಡ್ಡೆ) ಸುಮಾರು 100ರಿಂದ 200 ಕಾಯಿಗಳು ಇರುತ್ತವೆ. ಕಾಯಿಗಳ ಗಾತ್ರದ ಮೇಲೆ ಹುಂಡಿಗೆ 2 ಸಾವಿರದಿಂದ 5 ಸಾವಿರದವರೆಗೆ ಬೆಲೆ ಇರುತ್ತದೆ.

ಆದರೆ ಒಟ್ಟಾಗಿ ತಂದು ಮಾರಬೇಕಾಗಿ ರುವುದರಿಂದ ಸಗಟಾಗಿ ಖರೀದಿಸುವವರು ಹೆಚ್ಚಿನಬೆಲೆ ನೀಡುವುದಿಲ್ಲ. ತೋಟಗಳಲ್ಲಿ ಕಾಯಿ ಕೀಳಲು ಕೂಲಿಕಾರರ ಸಮಸ್ಯೆ, ಸಾಗಾಣಿಕೆ ವೆಚ್ಚ ಹೆಚ್ಚು ಇದರಿಂದ ಲಾಭ ಕಡಿಮೆ. ಇದರೊಂದಿಗೆ ಹಣ್ಣುಗಳನ್ನು ರಾತ್ರಿ ಹೊತ್ತು ಕಾಯದಿದ್ದರೆ ಕಳ್ಳತನವಾಗುತ್ತವೆ. ಆದರೆ ಚಿಲ್ಲರೆ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿದೆ ಎನ್ನುತ್ತಾರೆ ಕೊನಘಟ್ಟದ ರೈತ ವೆಂಕಟೇಶ್‌.

ಮಾರಾಟಕ್ಕೆ ಅನುವು ಮಾಡಿಕೊಡಿ: ತಾಲೂಕಿನ ತೂಬಗೆರೆ, ಕಸಬಾ ಹಾಗೂ ಸಾಸಲು ಹೋಬಳಿಗಳಲ್ಲಿ ಹೆಚ್ಚಾಗಿ ಹಲಸಿನ ಮರಗಳಿವೆ. ತಾಲೂಕಿನ ನೆಲುಕುಂಟೆಯ ಸುತ್ತಮುತ್ತ ಸುಮಾರು 1200 ಮರಗಳಿವೆ. ಇಲ್ಲಿನ ಹಲಸು ತೂಬಗೆರೆ ಹಲಸಿನಂತೆಯೇ ಹೆಚ್ಚು ರುಚಿಯಾಗಿದ್ದು, ಹಣ್ಣುಗಳಿಗೆ ಬೇಡಿಕೆಯಿದೆ. ಆದರೆ ನಮಗೆ ಮಾರುಕಟ್ಟೆ ವ್ಯವಸ್ಥೆಯೇ ಇಲ್ಲ. ಕೃಷಿ ಇಲಾಖೆಯನ್ನು ಕೇಳಿದರೆ ಇದು ತೂಬಗೆರೆ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. 

ಸ್ಥಳೀಯ ಚಿಲ್ಲರೆ ವ್ಯಾಪಾರಸ್ಥರನ್ನು ನಂಬಿದರೆ ನಮಗೆ ವ್ಯಾಪಾರ ಆಗುವುದಿಲ್ಲ. ಅದಲ್ಲದೇ ರಾತ್ರಿವೇಳೆ ಇಲ್ಲಿ ಹಣ್ಣುಗಳ ಕಳ್ಳತನಗಳಾಗುತ್ತಿವೆ. ನಮ್ಮಲ್ಲಿ ಖರೀದಿಸಿ ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ.  ತೂಬಗೆರೆಯಲ್ಲಿ, ತೂಬಗೆರೆ ಹೋಬಳಿಹಲಸು ಬೆಳೆಗಾರರ ಸಂಘವಿದ್ದು, ಬೆಂಗಳೂರಿನಲ್ಲಿ ಹಲಸು ಮಾರಾಟ ಮಾಡುವಲ್ಲಿ ನೇತೃತ್ವ ವಹಿಸುತ್ತಿದೆ. ಆದರೆ ಇದಕ್ಕೆ ಸೀಮಿತ ರೈತರನ್ನು ಸದಸ್ಯರನ್ನಾಗಿಸಿದೆ. ಈ ದಿಸೆಯಲ್ಲಿ ಸಂಘಕ್ಕೆ ಹಲಸು ಬೆಳೆಯುವ ಎಲ್ಲಾ ರೈತರನ್ನು ಸದಸ್ಯರನ್ನಾಗಿ ಮಾಡಿಕೊಂಡು ಹಲಸಿನ ಹಣ್ಣುಗಳನ್ನು ಲಾಲಾಬಾಗ್‌ ಹಾಗೂ ಹಲಸು ಮೇಳಗಳಲ್ಲಿ ಮಾರಾಟ ಮಾಡಲು ನಮಗೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ನೆಲುಕುಂಟೆಯ ಮಂಜುನಾಥ್‌. ದೊಡ್ಡಬಳ್ಳಾ ಪುರದ ವಿಶೇಷ ಹಲಸಿನ ಹಣ್ಣುಗಳನ್ನು ಸವಿಯಲು ಇಲ್ಲಿಗೆ ಭೇಟಿ ನೀಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next