Advertisement

ವಿದೇಶಿ ಪಿಚ್‌ ಸವಾಲು ಗೆಲ್ಲುತ್ತಾ ಭಾರತ?

01:30 AM Aug 04, 2018 | Team Udayavani |

ಕಾಲ ಮುಂದೆ ಸಾಗಿದೆ, ಅದರೊಂದಿಗೆ ಭಾರತದ ನಸೀಬು ಬದಲಾಗಿದೆ! ಸಂಜಯ್‌ ಮಾಂಜ್ರೆàಕರ್‌ ಒಂದೆಡೆ ಬರೆಯುತ್ತಾರೆ, 15 ವರ್ಷಗಳ ಹಿಂದಿನ ದಿನಗಳಲ್ಲಿ ಭಾರತ ವಿದೇಶಿ ನೆಲದಲ್ಲಿ ಟೆಸ್ಟ್‌ ಆಡಲು ಪ್ರವಾಸ ತೆರಳಿದಾಗ ಭಾರತೀಯ ಟೆಸ್ಟ್‌ ಅಭಿಮಾನಿ ಭಾರತ ಗೆಲ್ಲುತ್ತದೆಂದು ನಿರೀಕ್ಷಿಸುತ್ತಲೇ ಇರಲಿಲ್ಲ. ಹಾಗಾಗಿ ಅವನಲ್ಲಿ ಪರಾಭವದಿಂದ ಅಂತಹ ನಿರಾಶೆಯೇನೂ ಆಗುತ್ತಿರಲಿಲ್ಲ. ಆತ ಬಲಾಡ್ಯ ತಂಡಗಳ ಎದುರು  ಆಡುವ ಹನ್ನೊಂದರ ಕೆಲವರಿಂದಾದರೂ ಅಭಿಮನ್ಯು ಸದೃಶ ಆಟವನ್ನು ಕಾಯುತ್ತಿದ್ದ. ಅಂತಹ ಆಟ ಒಬ್ಬ ಸುನಿಲ್‌ ಗವಾಸ್ಕರ್‌, ಜಾವಗಲ್‌ ಶ್ರೀನಾಥ್‌ರಿಂದ ಸಿಕ್ಕರೂ ಆತ ಖುಷ್‌!

Advertisement

ಕಳೆದುಹೋಗದ ಆತ್ಮವಿಶ್ವಾಸ!
ಈಗ ಕಾಲ ಬದಲಾಗಿದೆ. ಭಾರತವೀಗ ವಿಶ್ವ ಟೆಸ್ಟ್‌ ಕ್ರಿಕೆಟ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಗಣ್ಯ ತಂಡವಾಗಿದೆ. ಇಂಗ್ಲೆಂಡ್‌ ವಿರುದ್ಧ ತೀರಾ ಅಪರೂಪಕ್ಕೆನ್ನುವಂತೆ ನಡೆದಿರುವ ಐದು ಪಂದ್ಯಗಳ ಪೂರ್ಣ ಪ್ರಮಾಣದ ಪ್ರವಾಸ ಸರಣಿಯಲ್ಲಿ ಭಾರತ 5-0ದಿಂದ ಸೋತರೂ ಅದರ ಅಗ್ರ ಕ್ರಮಾಂಕಕ್ಕೆ ಧಕ್ಕೆ ಇಲ್ಲ. 2003ರಲ್ಲಿ ಐಸಿಸಿ ರ್‍ಯಾಂಕಿಂಗ್‌ ವ್ಯವಸ್ಥೆ ಬಂದಾಗ ಐದನೇ ಸ್ಥಾನದಲ್ಲಿದ್ದ ಭಾರತ 2010ರಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಏರಿತ್ತು. ಈ ರ್‍ಯಾಂಕಿಂಗ್‌ ಒಂದು ರೀತಿಯ ಹಾವು ಏಣಿಯಾಟ. ಒಂದು ಅವ ಧಿಯಲ್ಲಿ ತಂಡ ಟೆಸ್ಟ್‌ ಕ್ರಿಕೆಟ್‌ ಆಡದಿದ್ದರೂ, ಯಾವುದೇ ಪಂದ್ಯ ಸೋಲದಿದ್ದರೂ ಅಗ್ರಕ್ರಮಾಂಕ ಬಿಟ್ಟುಕೊಡುವ ಪರಿಸ್ಥಿತಿ. ಟಾಪ್‌ ಒನ್‌ ಸ್ಥಾನದ ನಷ್ಟ ಹಲವು ಬಾರಿ ಭಾರತೀಯ ತಂಡಕ್ಕೆ ಆಗಿರಬಹುದು. ಆದರೆ ಅದು ಸಂಪಾದಿಸಿಕೊಟ್ಟಿರುವ ಆತ್ಮವಿಶ್ವಾಸ ಕಳೆದುಹೋಗುತ್ತಿಲ್ಲ. ಹಾಗಾಗಿ ಭಾರತ ಸದಾ ಅಗ್ರ ಪಟ್ಟದ ಪೈಪೋಟಿಯಲ್ಲಿಯೇ ಇರುತ್ತಿದೆ.

ಸಚಿನ್‌ ತೆಂಡೂಲ್ಕರ್‌ ನಾಯಕತ್ವದಲ್ಲಿ ಆಸ್ಟ್ರೇಲಿಯಾದಲ್ಲಿ ವೈಟ್‌ ವಾಶ್‌ ಹಾಗೂ ನಮ್ಮ ನೆಲದಲ್ಲಿ ದಕ್ಷಿಣ ಆಫ್ರಿಕಾ ಎದುರಿನ 0-2 ಸೋಲಿನ ನಂತರ ಅಕ್ಷರಶಃ ಸಚಿನ್‌ ಕಣ್ಣೀರಾದರು. ಬೇಡ ನಾಯಕತ್ವ ಎಂದರು. ಆಗ ಉದಯಿಸಿದ್ದು ಸೌರವ್‌ ಗಂಗೂಲಿ, ಮೊದಲ ಬಾರಿಗೆ ವಿದೇಶಿ ಕೋಚ್‌ ಜಾನ್‌ ರೈಟ್‌. ಆ ವೇಳೆ ಬಿಸಿಸಿಐನ ಅಧ್ಯಕ್ಷರಾಗಿದ್ದ ಜಗಮೋಹನ್‌ ದಾಲಿ¾ಯಾ ಜಾನ್‌ರೈಟ್‌ರಿಗೊಂದು ಪತ್ರವನ್ನು ಫ್ಯಾಕ್ಸ್‌ ಮಾಡುತ್ತಾರೆ.   ಅದರಲ್ಲಿ ಅವರು, “ನಮ್ಮ ಆಟಗಾರರು ಒಂದು ರನ್‌ನ್ನು ಎರಡಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗುವ ಬದಲು ಅಂಕಣದ ಮಧ್ಯೆ ಯೆಸ್‌ ನೋ ಗೊಂದಲದಲ್ಲಿ ಸಿಕ್ಕಿಬೀಳುವುದು ಚಿಂತನೆಗೆ ಹಚ್ಚುವಂಥದ್ದು. ಇದಕ್ಕೆ ನೀವೇನು ಹೇಳುತ್ತೀರಿ?  ಸೂಕ್ತವಾದ ತರಬೇತಿಯಿಲ್ಲದೆ ಹೀಗಾಗುತ್ತಿದೆಯೇ? ಇನ್ನೂ ನಾವು ಕ್ರಿಕೆಟ್‌ ಎಂದರೆ ತೀರಾ ಅನಿಶ್ಚಿತತೆಯ ಆಟ ಎಂಬ ಬ್ಯಾನರ್‌ನ ಅಡಿ ರಕ್ಷಣೆ ಪಡೆಯಲಾಗದು. ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಲೇಬೇಕಾಗಿದೆ. ನೀವು ಹಾಗೂ ಫಿಜಿಯೋ ಆ್ಯಂಡ್ರ್ಯೂ ಲೂಪಿಸ್‌ ಸೇರಿ ಈ ಕೆಲಸಗಳನ್ನು ಮಾಡಬೇಕಾಗಿದೆ’ ಎಂದು ಹೇಳಿದ್ದರು. 

ಸುಧಾರಿಸಿದೆ ಅಷ್ಟೇ!
ಭಾರತ ಈವರೆಗೆ ವಿದೇಶಗಳಲ್ಲಿ 257 ಟೆಸ್ಟ್‌ ಪಂದ್ಯಗಳನ್ನು ಆಡಿದೆ. ಇದರಲ್ಲಿ 46 ಪಂದ್ಯಗಳಲ್ಲಿ ಗೆಲುವು ಸಿಕ್ಕಿದ್ದರೆ 108ರಲ್ಲಿ ಪರಾಭವ. ಅದೇ ಕಳೆದ 10 ವರ್ಷಗಳಲ್ಲಿ 15 ಜಯ, 21 ಸೋಲು. ಪರಿಸ್ಥಿತಿ ಸುಧಾರಿಸಿದೆ. ಸುಧಾರಿಸಿದೆ ಅಷ್ಟೇ!

ಗಂಗೂಲಿ 2005ರಿಂದ ಆರಂಭಿಸಿ 2008ರವರೆಗೆ ಭಾರತವನ್ನು ಮುನ್ನಡೆಸಿದ್ದರು. ಅವರು ಹಾಕಿಕೊಟ್ಟ ಸುಪೀರಿಯಾರಿಟಿ ಮನೋಭಾವ ತಂಡವನ್ನು ಅವರ ನಂತರವೂ ಬಿಟ್ಟುಹೋಗಿಲ್ಲ. ಸ್ವಾರಸ್ಯ ಎಂದರೆ, ಆಟದಲ್ಲಿ ನಿರಂತರ ಗೆಲುವು ಸಾ ಸಲು ನಾನು ಅತ್ಯುತ್ತಮ ಎಂಬ ಭಾವದೊಂದಿಗೇ ಕಣಕ್ಕಿಳಿಯಬೇಕಾಗುತ್ತದೆ. 

Advertisement

2001ರ ರಾಹುಲ್‌ ಲಕ್ಷ್ಮಣ್‌ರ ಕೊಲ್ಕತ್ತಾ ಟೆಸ್ಟ್‌ ಯಶಸ್ಸಿನ ದಾರಿಯ ಆರಂಭ. 15 ವರ್ಷಗಳಿಂದ ಭಾರತೀಯ ಉಪಖಂಡದ ಹೊರಗೆ ಒಂದೇ ಒಂದು ಪಂದ್ಯ ಗೆಲ್ಲದ ಕುಖ್ಯಾತಿಯನ್ನು ತೊಡೆದುಹಾಕಿದ ಭಾರತ ಆಸ್ಟ್ರೇಲಿಯಾದಲ್ಲಿ ಸರಣಿ ಸಮ ಮಾಡಿಕೊಳ್ಳುತ್ತದೆ. ವೆಸ್ಟ್‌ಇಂಡೀಸ್‌, ದಕ್ಷಿಣ ಆಫ್ರಿಕಾದಲ್ಲೂ ಸರಣಿ ಸಮ, 41 ವರ್ಷಗಳಲ್ಲಿ ಮೊದಲ ಬಾರಿಗೆ ನ್ಯೂಜಿಲ್ಯಾಂಡ್‌ ವಿರುದ್ಧ ಅಲ್ಲಿನ ನೆಲದಲ್ಲಿ ವಿಕ್ರಮ, ಪರ್ತ್‌ನಲ್ಲಿ ಕುಂಬ್ಳೆ ನಾಯಕತ್ವದಲ್ಲಿ ಜಯ, 2007ರಲ್ಲಿ ಇಂಗ್ಲೆಂಡ್‌ನ‌ಲ್ಲಿ ದ್ರಾವಿಡ್‌ ನಾಯಕತ್ವದಲ್ಲಿ ವಿಜಯ, ಕೋಚ್‌ ಗ್ಯಾರಿ ಕಸ್ಟೇìನ್‌- ಧೋನಿ ಜೊತೆಯಾಟದಲ್ಲಿ ವಿಶ್ವದ ನಂ. 1 ಪಟ್ಟ. ಈ ಅಶ್ವಮೇಧ ಯಾತ್ರೆಯನ್ನು ಈಗ ವಿರಾಟ್‌ ಕೊಹ್ಲಿ ಮುಂದುವರೆಸಿದ್ದಾರೆ.

2011ರ ವರ್ಷ ಭಾರತದ ದಾಖಲೆಗಳನ್ನು ಸ್ವಲ್ಪ ಕೆಡಿಸಿದೆ. ಇಂಗ್ಲೆಂಡ್‌ನ‌ಲ್ಲಿ 4-0, ಕಾಂಗರೂ ನಾಡಿನಲ್ಲಿ ಮತ್ತೆ 4-0…. ಭಾರತ ಕೇವಲ ಟೆಸ್ಟ್‌ಗಳನ್ನಲ್ಲದೆ ದ್ರಾವಿಡ್‌, ಸಚಿನ್‌, ಲಕ್ಷ್ಮಣ್‌, ಕುಂಬ್ಳೆ ಅವರಂಥವರ ಸೇವೆಯನ್ನೂ ಕಳೆದುಕೊಂಡಿದೆ. 

ಹಿಂಜರಿಕೆಯ ರೋಗಾಣು!
ಸುಧಾರಿಸಿದೆ ಅಷ್ಟೇ ಅನ್ನಲು ಕಾರಣಗಳಿವೆ. ವಿದೇಶಿ ನೆಲಗಳ ಹಿಂಜರಿಕೆಯ ಒಂದಿಷ್ಟು ರೋಗಾಣು ಈಗಲೂ ಇದೆ. 2014ರಲ್ಲಿ ಭಾರತ ಇಂಗ್ಲೆಂಡ್‌ ಎದುರು ಐದು ಟೆಸ್ಟ್‌ಗಳ ಸರಣಿಯಲ್ಲಿ ಮೊದಲ ಪಂದ್ಯ ಡ್ರಾ ಮಾಡಿಕೊಂಡ ನಂತರ ಮುಂದಿನ ಲಾರ್ಡ್ಸ್‌ ಟೆಸ್ಟ್‌ ಗೆಲ್ಲುತ್ತದೆ. ಕೊನೆಗೆ ಸರಣಿ ಫಲಿತಾಂಶ ಮಾತ್ರ 3-1ರ ಪರಾಭವ! ಕೊನೆಯ ಎರಡು ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಸೋಲು ಎಂಬುದು 21ನೇ ಶತಮಾನಕ್ಕೂ ಹಿಂದಿನ ಭಾರತವನ್ನೇ ನೆನಪಿಸುವಂತದು. ದೈಹಿಕ ಫಿಟ್‌ನೆಸ್‌ ವಿಚಾರದಲ್ಲಿ ತಂಡ ವಿಶ್ವಮಟ್ಟದಲ್ಲಿ ಇದೆ ಎಂದು ಘಂಟಾಘೋಷವಾಗಿ ಹೇಳಬಹುದು. ಮಾನಸಿಕ ದೃಢತೆ ಬಗ್ಗೆ ಒಂದೇಟಿಗೆ ಹೇಳುವುದು ಕಷ್ಟ. ವಿರಾಟ್‌ ಕೊಹ್ಲಿ ನಾಯಕತ್ವಕ್ಕೆ ಮೊತ್ತಮೊದಲ ಬಾರಿಗೆ ಅಸಲಿ ಪರೀಕ್ಷೆ ಎದುರಾಗಿದೆ. 

ಎರಡು ಸ್ಮರಣೀಯ ವಿದೇಶಿ ಜಯ
ಇಶಾಂತ್‌ ಬೌಲಿಂಗ್‌ ದೃಶ್ಯ ಕಾವ್ಯ!

2-0 ಹಿನ್ನಡೆ, ಸತತ 16 ಪಂದ್ಯ ಗೆದ್ದ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಭಾರತ ದ್ರಾವಿಡ್‌ರ 93, ಸಚಿನ್‌ರ 71 ರನ್‌ ಸಹಾಯದಿಂದ 330 ರನ್‌ ಪೇರಿಸುತ್ತದೆ. 68ಕ್ಕೆ ನಾಲ್ಕು ವಿಕೆಟ್‌ ಪಡೆದ ಆರ್‌.ಪಿ.ಸಿಂಗ್‌ ಹಾಗೂ 63ಕ್ಕೆ 2 ವಿಕೆಟ್‌ ಪಡೆದ ಇರ್ಫಾನ್‌ ಪಠಾನ್‌ರಿಂದಾಗಿ 118 ರನ್‌ ಮುನ್ನಡೆ. ನೈಟ್‌ ವಾಚ್‌ಮನ್‌ ಇರ್ಫಾನ್‌ನ 46 ಹಾಗೂ ವಿವಿಎಸ್‌ರ ಅಮೋಘ ಆಟದ ಆಧಾರದಲ್ಲಿ ಕಾಂಗರೂಗೆ 413 ರನ್‌ ಗುರಿ. ಬಹುಶಃ ಟೆಸ್ಟ್‌ ಕ್ರಿಕೆಟ್‌ನ ಸ್ವಾದ ಏನು ಎಂಬುದನ್ನು ಅರಿಯಲು ಇಶಾಂತ್‌ ಶರ್ಮ ಅವರು ಮಾಡಿದ 9 ಸತತ ಓವರ್‌ಗಳ ಒಂದು ಸ್ಪೆಲ್‌ ಅನ್ನು ನೋಡಬೇಕು. ದ್ರಾವಿಡ್‌ಗೆ ಕೊನೆಗೂ ಸ್ಲಿಪ್‌ ಕ್ಯಾಚ್‌ ಕೊಟ್ಟ ಆಸೀಸ್‌ ನಾಯಕ ರಿಕಿ ಪಾಂಟಿಂಗ್‌ ಮರೆಯಲಾರರು. ಭಾರತಕ್ಕೆ 72 ರನ್‌ ವಿಜಯ!

ಲಾರ್ಡ್ಸ್‌ ಹಸಿರಲ್ಲಿ ಭುವಿಗೆ ಹಸಿವು!
2014ರ ಇಂಗ್ಲೆಂಡ್‌ ಸರಣಿಯ ಲಾರ್ಡ್ಸ್‌ ಟೆಸ್ಟ್‌ನಲ್ಲಿ 145ಕ್ಕೆ 7 ವಿಕೆಟ್‌ ಕಳೆದುಕೊಂಡ ಭಾರತಕ್ಕೆ ಅಜಿಂಕ್ಯ ರಹಾನೆ(103) ಹಾಗೂ ವೇಗಿ ಭುವನೇಶ್ವರ ಕುಮಾರ್‌(36) ಆಸರೆಯಾಗುತ್ತಾರೆ. 295ಕ್ಕೆ ಆಲೌಟ್‌. ಇಂಗ್ಲೆಂಡ್‌ 319. ಭುವಿಗೆ 2 ವಿಕೆಟ್‌. ಮತ್ತೆ ಭಾರತ 123ಕ್ಕೆ 4. ವಿಜಯ್‌ರ 95, ರವೀಂದ್ರ ಜಡೇಜಾರ 68 ಹಾಗೂ ಭುವಿಯ 52 ಇಂಗ್ಲೆಂಡ್‌ಗೆ 318 ಗುರಿ ನೀಡಲು ಸಾಕಾಗುತ್ತದೆ. ಇಶಾಂತ್‌ ಶರ್ಮರಿಂದ ಭಾರತದ ಖೆಡ್ಡಾ ಮಾಡಲು ರೂಪಿಸಿದ್ದ ಹಸಿರು ಪಿಚ್‌ನಲ್ಲಿ 74ಕ್ಕೆ 7 ವಿಕೆಟ್‌! ಆಂಗ್ಲರಿಗೆ 95 ರನ್‌ ಸೋಲು.

ಅಂಕಿ-ಅಂಶ
2016ರಲ್ಲಿ ಭಾರತದ ಸಾಧನೆ 
12 ಪಂದ್ಯ
9 ಗೆಲುವು
ಶೂನ್ಯ ಸೋಲು
3 ಡ್ರಾ

2017ರಲ್ಲಿ 
11 ಪಂದ್ಯ 
7 ಜಯ
1 ಸೋಲು
3 ಡ್ರಾ

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next