Advertisement

ಬ್ರೇಕ್‌ ವಾಟರ್‌ ಕಾಮಗಾರಿ ಫೆಬ್ರವರಿಯಲ್ಲಿ ಆರಂಭವಾಗುವ ನಿರೀಕ್ಷೆ

06:17 AM Jan 27, 2019 | |

ಸುರತ್ಕಲ್‌ : ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕುಳಾಯಿ ಜೆಟ್ಟಿ ನಿರ್ಮಾಣಕ್ಕೆ ಕೇಂದ್ರ, ರಾಜ್ಯ ಸರಕಾರ ಕೊನೆಗೂ ಮುಂದಡಿ ಇಟ್ಟಿದೆ. ಎನ್‌ಎಂಪಿಟಿ ಪಾಲುದಾರಿಕೆಯಲ್ಲಿ ಈ ಜೆಟ್ಟಿ ನಿರ್ಮಾಣಗೊಳ್ಳುತ್ತಿದ್ದು ಬ್ರೇಕ್‌ ವಾಟರ್‌ ಕಾಮಗಾರಿ ಪ್ರಥಮ ಹಂತದಲ್ಲಿ ನಡೆಯಲಿದೆ. ಇದರ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ.

Advertisement

ಅಂದಾಜು 165.6 ಕೋಟಿ ರೂ.(ಈಗಿನ ಹೆಚ್ಚುವರಿ ಮೊತ್ತ ಹೊರತು ಪಡಿಸಿ) ವೆಚ್ಚದಲ್ಲಿ ಕಿರು ಜೆಟ್ಟಿ ನಿರ್ಮಾಣ ಕಾರ್ಯ ನಡೆಯಲಿದೆ. ಕೇಂದ್ರ ಶೇ. 75, ನವಮಂಗಳೂರು ಬಂದರು ಶೇ. 20, ರಾಜ್ಯ ಸರಕಾರ ಶೇ. 5ರಷ್ಟು ಮೊತ್ತ ಭರಿಸಲಿದೆ. 124.4 ಕೋಟಿ ರೂ. ಕೇಂದ್ರ, 33.12 ಕೋಟಿ ರೂ. ಎನ್‌ಎಂಪಿಟಿ ನೀಡಲಿದ್ದು, ಉಳಿದ ಮೊತ್ತವನ್ನು ರಾಜ್ಯ ಸರಕಾರ ಭರಿಸಲಿದೆ. ಫೆಬ್ರವರಿಯಲ್ಲಿ ನವಮಂಗಳೂರು ಬಂದರು ಇದರ ನಿರ್ಮಾಣ ಕಾರ್ಯ ಆರಂಭಿಸುವ ನಿರೀಕ್ಷೆಯಿದೆ. ಈಗಾಗಲೇ ಸ್ಥಳೀಯ ಮೀನುಗಾರಿಕೆಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಜೆಟ್ಟಿ ಯಾವ ರೀತಿ ಇರಬೇಕೆಂಬುದನ್ನು ಅಂತಿಮಗೊಳಿಸಲಾಗಿದೆ.

ಯಾವ ರೀತಿ ಇರಲಿದೆ?
ಸುಮಾರು 9.75 ಎಕ್ರೆ ಪ್ರದೇಶ ಈ ಜೆಟ್ಟಿ ನಿರ್ಮಾಣಕ್ಕೆ ಅಗತ್ಯವಿದ್ದು , ಮೀನುಗಾರಿಕೆ, ದೋಣಿಗಳ ನಿಲುಗಡೆಗೆ ಸಂಬಂಧಿಸಿದಂತೆ 3 ಮೀಟರ್‌ ಎತ್ತರ, 70 ಮೀಟರ್‌ ಉದ್ದ ಇರಲಿದೆ. ಏಲಂ ಸ್ಥಳ, ನೆಟ್ ದುರಸ್ತಿ ಕೇಂದ್ರ, ಮೀನುಗಳನ್ನು ವಾಹನಗಳಿಗೆ ತುಂಬಿಸಲು ಸ್ಥಳಾವಕಾಶ, ದೋಣಿ ದುರಸ್ತಿ, ಶೌಚಾಲಯ,ರೇಡಿಯೋ ಟವರ್‌ ಮತ್ತಿತರ ಮೂಲ ಸೌಕರ್ಯ ಒಳಗೊಂಡಿದೆ. ಜೆಟ್ಟಿಯ ದಕ್ಷಿಣ ಭಾಗದಲ್ಲಿ ಅಂದಾಜು 260 ಮೀಟರ್‌ ಬ್ರೇಕ್‌ ವಾಟರ್‌ ವ್ಯವಸ್ಥೆ, ಉತ್ತರ ಭಾಗದಲ್ಲಿ 760 ಮೀ. ಬ್ರೇಕ್‌ ವಾಟರ್‌ ವ್ಯವಸ್ಥೆ ಇರಲಿದೆ. ಜೆಟ್ಟಿ ನಿರ್ಮಾಣದಿಂದ ಕನಿಷ್ಠ 350 ದೋಣಿಗಳ ನಿಲುಗಡೆ ಮಾಡಬಹುದಾಗಿದೆ. ಸ್ಥಳೀಯ ದೋಣಿಗಳು ಈ ಭಾಗದ ಬ್ರೇಕ್‌ ವಾಟರ್‌ ಮೂಲಕವೇ ಕಡಲಿಗೆ ಇಳಿಯಬಹುದಾಗಿದೆ.

ಭದ್ರತಾ ವಲಯದ ಹೊರಭಾಗದಲ್ಲಿ ಜೆಟ್ಟಿ
ಮಳೆಗಾಲದಲ್ಲಿ ಮೀನುಗಾರರು ಹವಾಮಾನ ವೈಪರೀತ್ಯದಿಂದ ಅನಿವಾರ್ಯ ವಾಗಿ ನವಮಂಗಳೂರು ಬಂದರು ಒಳಗೆ ಹೋಗಬೇಕಾದ ಸ್ಥಿತಿ ಯಿದೆ. ಆದರೆ ಹೆಚ್ಚಿನ ಭದ್ರತೆ, ಬೃಹತ್‌ ಹಡಗುಗಳ ಆಗಮನ ಹೆಚ್ಚಳವಾದ ಬಳಿಕ ನೂರಾರು ಮೀನುಗಾರಿಕಾ ದೋಣಿಗಳ ಪ್ರವೇಶಕ್ಕೆ ಸಮಸ್ಯೆಯಾಗುತ್ತಿದೆ. ಇದರ ಜತೆಗೆ ನವಮಂಗಳೂರು ಬಂದರು ನಿರ್ಮಾಣಕ್ಕಾಗಿ ಭೂಮಿ ತ್ಯಾಗ ಮಾಡಿದ ನಿರ್ವಸಿತರಿಗೆ ಎನ್‌.ಎಂ.ಪಿ.ಟಿ. ಜೆಟ್ಟಿ ನಿರ್ಮಿಸಿಕೊಡುವ ಭರವಸೆಯನ್ನು 40 ವರ್ಷಗಳ ಹಿಂದೆಯೇ ನೀಡಿತ್ತು. ಇದಕ್ಕಾಗಿ ಹಲವಾರು ಹೋರಾಟಗಳೂ ನಡೆದಿದ್ದವು. ಇದೀಗ ಈ ಜೆಟ್ಟಿ ನಿರ್ಮಾಣದಲ್ಲಿ ಬಂದರು ಹಣಕಾಸು ಸಹಾಯ ನೀಡುತ್ತಿದೆ.

ವಿಳಂಬ ಯಾಕೆ?
ಈವರೆಗೆ ಕೇವಲ ಪ್ರಾಥಮಿಕ ಹಂತದಲ್ಲಿದ್ದ ಜೆಟ್ಟಿ ನಿರ್ಮಾಣ ಹಲವು ಮಜಲುಗಳನ್ನು ದಾಟಿ ಬಂದಿದೆ. ಕೇಂದ್ರದ ಸೆಂಟ್ರಲ್‌ ಇನ್‌ಸ್ಟಿಟ್ಯೂಟ್ ಆಫ್‌ ಕೋಸ್ಟಲ್‌ ಎಂಜಿನಿಯರಿಂಗ್‌ ಫಿಶರೀಸ್‌(ಸಿಐಸಿಇಎಫ್‌) ಸಂಸ್ಥೆ ಪರಿಶೀ ಲಿಸಿ ಬಳಿಕ ಆರ್ಥಿಕ ಕಾರ್ಯ ಸಾಧ್ಯತೆ, ಜೆಟ್ಟಿ ನಿರ್ಮಾಣಕ್ಕೆ ಗುರುತಿಸಿದ ಸ್ಥಳದಲ್ಲಿ ಮೀನುಗಾರಿಕೆ ಸಾಧ್ಯವೆ ಸಹಿತ ವಿವಿಧ ಅಂಶಗಳನ್ನು ಪರಿಗಣಿಸಿ ಬಳಿಕವೆ ಒಪ್ಪಿಗೆ ನೀಡಿದೆ.

Advertisement

ಈ ಸುದೀರ್ಘ‌ ಪ್ರಕ್ರಿಯೆ ಬಳಿಕ ಆದೇಶ ಪತ್ರ ಇದೀಗ ರಾಜ್ಯ ಸರಕಾರಕ್ಕೆ ಎರಡು ವರ್ಷಗಳ ಹಿಂದೆಯೇ ಬಂದಿದ್ದು, ನಿರ್ಮಾಣ ಕಾರ್ಯ ಆರಂಭಿಸಲು ಸ್ಥಳೀಯಾಡಳಿತದಲ್ಲಿ ಪ್ರಾಥಮಿಕ ದಾಖಲೆಗಳು, ಅನುಮತಿ ಮತ್ತಿತರ ಕಾನೂನಾತ್ಮಕ ಪ್ರಕ್ರಿಯೆ ಮುಗಿದ ಬಳಿಕ ಇದೀಗ ಆರಂಭಗೊಳ್ಳುತ್ತಿದೆ.

ಆದೇಶ ಪತ್ರ ಬಂದಿದೆ
ಕುಳಾಯಿ ಮೀನುಗಾರಿಕಾ ಕಿರು ಜೆಟ್ಟಿ ಹಲವು ವರ್ಷಗಳಿಂದ ಪ್ರಸ್ತಾವನೆಯಲ್ಲಿತ್ತು. ಇದೀಗ ಸಮಗ್ರ ಅಧ್ಯಯನದ ಬಳಿಕ ನಿರ್ಮಾಣಕ್ಕೆ ಆದೇಶ ಪತ್ರ ಬಂದಿದೆ. ಈ ಹಿಂದೆ ನಿರ್ಧರಿಸಿದಂತೆ ಕೇಂದ್ರ, ಎನ್‌ಎಂಪಿಟಿ, ರಾಜ್ಯ ಸರಕಾರ ಪಾಲುದಾರಿಕೆಯಲ್ಲಿ ನಿರ್ಮಾಣವಾಗಲಿದೆ. ಇದರಿಂದ ಸ್ಥಳೀಯ ಮೀನುಗಾರರಿಗೆ ಅನುಕೂಲವಾಗಲಿದೆ.
– ಕೃಷ್ಣಬಾಬು
ಎನ್‌ಎಂಪಿಟಿ ಚೇಯರ್‌ಮನ್‌

ಸಂತಸವಾಗಿದೆ
ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿರುವುದು ಸಂತಸವನ್ನುಂಟು ಮಾಡಿದೆ. ಕೂಳೂರು ಕುಳಾಯಿ, ತಣ್ಣೀರುಬಾವಿ, ಕೋಡಿಕಲ್‌, ಪಣಂಬೂರು ಮೊಗವೀರ ಮಹಾಸಭಾದವರಿಗೆ ಇದರ ಪ್ರಯೋಜನ ಲಭಿಸಬೇಕು. ನಮ್ಮ ಜಾಗವನ್ನು ಬಂದರಿಗಾಗಿ ತ್ಯಾಗ ಮಾಡಿ ಬಂದಿದ್ದೇವೆ. ಇದಕ್ಕೆ ನಾವು ಸರಕಾರದ ಮೇಲೆ ಸತತ ಒತ್ತಡ ಹೇರಿದ್ದೇವೆ. 
– ಮೋಹನ್‌ ಕೋಡಿಕಲ್‌
 ಅಧ್ಯಕ್ಷರು, ನಾಲ್ಕುಪಟ್ಣ ಬಂದರು ನಿರ್ವಸಿತರ ಮಹಾಸಭಾ

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next