ಜಮ್ಮು : ಕಳೆದ ವಾರ ಕಾಶ್ಮೀರ ಕಣಿವೆಯಲ್ಲಿ ಉಪ ಚುನಾವಣೆ ನಡೆದಿದ್ದ ಸಂದರ್ಭದಲ್ಲಿ ಭದ್ರತಾ ಪಡೆಗಳ ವಿರುದ್ಧ ಸಂಘರ್ಷಕ್ಕಿಳಿದಿದ್ದ ಪ್ರತಿಭಟನಕಾರರ ವಿರುದ್ಧ ಮಾನವ ಗುರಾಣಿಯನ್ನಾಗಿ ಜಮ್ಮು ಕಾಶ್ಮೀರದ ಪ್ರಜೆಯೊಬ್ಬನನ್ನು ತಮ್ಮ ಜೀಪಿಗೆ ಬಿಗಿದು ಕಟ್ಟಿ ಚಲಾಯಿಸುವ ಮೂಲಕ ಕ್ರೌರ್ಯ ಮೆರೆದಿದ್ದ ಭಾರತೀಯ ಸೇನೆಯ ವಿರುದ್ದ ಇದೀಗ ಎಫ್ಐಆರ್ ದಾಖಲಾಗಿದೆ.
ಪ್ರತಿಭಟನಕಾರರನ್ನು ನಿಭಾಯಿಸುವಾಗ ಅತ್ಯಂತ ಗರಿಷ್ಠ ಸಂಯಮವನ್ನು ತೋರುವಂತೆ ಸರಕಾರ ಸೇನೆಯನ್ನು ಕೇಳಿಕೊಂಡಿದೆ.
ವರದಿಗಳ ಪ್ರಕಾರ ಇಂದು ಸೋಮವಾರ ಜಮ್ಮು ಕಾಶ್ಮೀರ ಪೊಲೀಸರು ಸೇನೆಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿನ ತಮ್ಮ ಹುಟ್ಟೂರಿಗೆ ಭೇಟಿಕೊಡುವ ಸಂದರ್ಭದಲ್ಲಿ ಪ್ರತಿಭಟನಕಾರರ ವಿರುದ್ಧ ಗರಿಷ್ಠ ತೋರುವಂತೆ ಭದ್ರತಾ ಪಡೆಗಳಿಗೆ ಸಲಹಾ ಸೂಚನೆಯನ್ನು ನಿನ್ನೆ ಭಾನುವಾರವೇ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರ ಪ್ರಜೆಯೊಬ್ಬನನ್ನು ಭದ್ರತಾ ಪಡೆಗಳು ಪ್ರತಿಭಟನಕಾರರನ್ನು ನಿಭಾಯಿಸುವ ಮಾನವ ಗುರಾಣಿಯಾಗಿ ಬಳಸಿಕೊಳ್ಳಲು ಆತನನ್ನು ಜೀಪಿಗೆ ಕಟ್ಟಿ ಚಲಾಯಿಸಿದ ಅತ್ಯಮಾನುಷ ಪ್ರಕರಣದ ವಿಡಿಯೋ ಕಳೆದ ವಾರ ವೈರಲ್ ಆಗಿತ್ತು. ಅದಕ್ಕೆ ನಾಗರಿಕ ಸಮಾಜ ಹಾಗೂ ಸರಕಾರದಿಂದ ವ್ಯಾಪಕ ಖಂಡನೆ, ಪ್ರತಿಭಟನೆ ವ್ಯಕ್ತವಾಗಿತ್ತು.
ಮುಖ್ಯಮಂತಿರ ಮೆಹಬೂಬ ಮುಫ್ತಿ ಅವರು ಘಟನೆಯ ಬಗ್ಗೆ ರಾಜ್ಯ ಪೊಲೀಸರಿಂದ ವಿಸ್ತೃತ ವರದಿಯನ್ನು ಕೇಳಿದ್ದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಾನು ಖುದ್ದು ಈ ವಿಷಯವನ್ನು ಪರಾಮರ್ಶಿಸುವ ಭರವಸೆ ನೀಡಿದ್ದರು.