Advertisement

ಕಾಂಗ್ರೆಸ್‌ ನಾಯಕರ ವಿರುದ್ಧ ಎಫ್ಐಆರ್‌

07:30 AM Jun 30, 2020 | Lakshmi GovindaRaj |

ಬೆಂಗಳೂರು: ಪೆಟ್ರೋಲ್‌- ಡೀಸೆಲ್‌ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ನಾಯಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಎಫ್ಐಆರ್‌ ದಾಖಲಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ. ರಾಜ್ಯದಲ್ಲಿ ಕೋವಿಡ್‌ 19 ಸೋಂಕು ಹಿನ್ನೆಲೆಯಲ್ಲಿ ಪ್ರತಿ ಭಟನೆ, ರ್ಯಾಲಿಗೆ ನಿರ್ಬಂಧ ವಿಧಿಸಲಾಗಿದೆ. ಜನರು ಗುಂಪು ಗೂಡುವುದು, ಕಾರ್ಯಕ್ರಮ ಮಾಡುವುದು ನಿಷೇಧ.

Advertisement

ಆದರೂ ಕಾಂಗ್ರೆಸ್‌ ನಾಯಕರು ನಿಯಮ ಉಲ್ಲಂಘಿಸಿ ಸೈಕಲ್‌ ಜಾಥಾ, ಪ್ರತಿಭಟನೆ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌ ನಾಯಕರ ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ. ಆದರೂ ನಿಯಮ ಉಲ್ಲಂಘಿಸಲಾಗಿದೆ. ಅವರಿಗೂ  ಸಾಮಾಜಿಕ ಜವಾಬ್ದಾರಿ ಇರಬೇಕು. ಇಂತಹ ಸಂದರ್ಭದಲ್ಲಿಯೂ ನೂರಾರು ಜನರ ಜತೆ ರಸ್ತೆಗಿಳಿದು ಯಾವ ಸಂದೇಶ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.

ಸವದಿ ಆಕ್ರೋಶ: ದೇಶಾದ್ಯಂತ ಸವಾಲಾಗಿರುವ ಕೋವಿಡ್‌ 19 ವಿರುದ್ಧ ಸಾಮಾಜಿಕ ಆಂತರ ಕಾಯ್ದುಕೊಂಡು ಹೋರಾಡುತ್ತಿರುವ ಸಂಕಷ್ಟ ಸಮಯದಲ್ಲಿ ಕಾಂಗ್ರೆಸ್‌ ಚುನಾವಣಾ ರ್ಯಾಲಿ ರೀತಿಯಲ್ಲಿ ಸೈಕಲ್‌ ಜಾಥಾ ನಡೆಸಿರುವುದು  ಖಂಡನೀಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿ, ಕಾಂಗ್ರೆಸ್‌ ಮುಖಂಡರು ಬೆಂಗಳೂರಿನಲ್ಲಿ ಸಾವಿರಾರು ಮಂದಿ ಕಾರ್ಯಕರ್ತರ ಜತೆ ರ್ಯಾಲಿ ನಡೆಸಿ ಕಾನೂನು ಭಂಗ ಮಾಡಿದ್ದಾರೆ.

ಕಾಂಗ್ರೆಸ್‌ನ ಈ ಕ್ರಮ ಸಾರ್ವಜನಿಕರ ಜೀವದ ಜತೆ ಚೆಲ್ಲಾಟದಂತಿದೆ. ಕೋವಿಡ್‌ 19ದಂತಹ ಅಪಾಯಕಾರಿ ಸೋಂಕು ವ್ಯಾಪಕವಾಗುತ್ತಿರುವುದನ್ನು ತಡೆಗಟ್ಟಲು ಸರ್ಕಾರ ಸಕಲ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್‌ ಪಕ್ಷವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸಹಕಾರ ನೀಡುವುದು ಬಿಟ್ಟು ಅಮಾಯಕರ ಆರೋಗ್ಯಕ್ಕೆ ಸಂಚಕಾರ ತಂದಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next