Advertisement

ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಚಿತ್ರ ಸಂಕಥನ ಕಾರ್ಯಕ್ರಮ

03:46 PM Jan 23, 2019 | |

ಮುಂಬಯಿ: ಕಲೆಗಾಗಿ ಕಲೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿಲ್ಲ. ಕಲಾವಿದ ಸರ್ವ ಕುತೂ ಹಲಿಯಾಗಿರಬೇಕು. ಸುತ್ತ ಲಿನ ಬದುಕನ್ನು ತೆರೆದ ಕಣ್ಣಿಂದ ನೋಡಿ ಬಣ್ಣ ಹಚ್ಚಿದರೆ ಒಳ್ಳೆಯ ಕಲಾಕೃತಿ ನಿರ್ಮಾಣವಾಗುತ್ತದೆ. ಕವಿ, ಸಾಹಿತಿ, ಚಿತ್ರಕಾರ ಯಾರೇ ಇರಲಿ ಆತ್ಮತƒಪ್ತಿಯಾಗುವಂತೆ ಕಾರ್ಯನಿರ್ವಹಿಸಬೇಕು. ಒಂದು ಬಗೆಯ ಧ್ಯಾನಸ್ಥ ಸ್ಥಿತಿ ಕಲಾವಿದನಿಗೆ ಅತೀ ಅಗತ್ಯ ಎಂಬುದಾಗಿ ಪ್ರಸಿದ್ಧ ಕಲಾವಿದ ದೇವುದಾಸ್‌ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

Advertisement

ಜ. 12 ರಂದು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಆಯೋಜಿಸಿದ್ದ ವೃತ್ತಿ ಬದುಕಿನ ಐವತ್ತರ ಸಂಭ್ರಮ ಕಾರ್ಯಕ್ರಮ ಚಿತ್ರ ಸಂಕಥನದಲ್ಲಿ ಪಾಲ್ಗೊಂಡು ಮಾತನಾಡಿ,  ನಾನು ಕಾರ್ಮಿಕ ಕಲಾವಿದ. ಮುಂಬಯಿಯಲ್ಲಿ  ಬೆಳೆದ ನಾನು ಎಲ್ಲ ಕಷ್ಟ ನಷ್ಟಗಳನ್ನು ಕಂಡಿದ್ದೇನೆ. ಯಾವುದೇ ಕಲಾವಿದನಿಗೆ ಬೇಕಾದುದು ಸಹೃದಯ ಮನಸ್ಸುಗಳ ಸಹಕಾರ, ಪ್ರೋತ್ಸಾಹಕವಾಗಿದೆ  ಎಂದು ನುಡಿದು, ಜರ್ಮನ್‌ ಮೂಲದ ಕಂಪೆನಿಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾ ತಾನು ಕಲಾವಿದನಾಗಿ ಬೆಳೆದು ಬಂದ ಬಗೆಯನ್ನು ಅವರು ವಿವರಿಸಿದರು. ಇವತ್ತು ದೇಶ  ವಿದೇಶಗಳ ಪ್ರಸಿದ್ಧ ಗ್ಯಾಲರಿಗಳಲ್ಲಿ ನನ್ನ ಚಿತ್ರಗಳಿವೆ. ಪ್ರಸಿದ್ಧ ಕಲಾವಿದರಾದ ಕೆ. ಕೆ. ಹೆಬ್ಟಾರ್‌, ಹುಸೇನ್‌ ಅವರಿಂದ ತೊಡಗಿ ಎಲ್ಲ ಕಲಾವಿದರನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಕಲಾವಿದನಿಗೆ ಬದ್ಧತೆ ಬೇಕು ಎಂಬುದಾಗಿ ಚಿತ್ರಗಳನ್ನು ಅರ್ಥಮಾಡುವ ಪರಿಯನ್ನು ವಿವರಿಸಿದರು.

ದೇವುದಾಸ ಶೆಟ್ಟಿ ಅವರು ನಿಜವಾದ ಅರ್ಥದಲ್ಲಿ ಕಲೋಪಾಸಕರು. ಕಳೆದ ಐದು ದಶಕದಲ್ಲಿ ಅವರು ಬಣ್ಣದ ಲೋಕದಲ್ಲಿ ತಲ್ಲೀನರಾಗಿದ್ದಾರೆ. ಮುಂಬಯಿಯಲ್ಲಿ ನೆಲೆಸಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೆ. ಕೆ. ಹೆಬ್ಟಾರ, ಎನ್‌. ಸಿ. ದೇಸಾಯಿ ಅವರ ಸಾಲಿನಲ್ಲಿ ದೇವುದಾಸ ಶೆಟ್ಟಿ ಅವರ ಹೆಸರೂ ನಿಲ್ಲುತ್ತದೆ. ಕಲೆಯ ಹೆಸರಿನಲ್ಲಿ ಗಿಮಿಕ್‌ ಮಾಡುವುದನ್ನು ಅವರು ಸಹಿಸುವುದಿಲ್ಲ. ದೇವುದಾಸ ಶೆಟ್ಟಿ ಅವರದು ಹೋರಾಟದ ಬದುಕು. ತಮ್ಮನ್ನು ತಾವು ರೂಪಿಸಿಕೊಂಡು  ದೇಶ ವಿದೇಶಗಳಲ್ಲಿ ನೂರಾರು ಚಿತ್ರ ಕಲಾಪ್ರದರ್ಶನಗಳನ್ನು ಕಂಡಿರುವುದು ಸಾಮಾನ್ಯ ಸಂಗತಿಯಲ್ಲ. ನಮ್ಮಲ್ಲಿ ಕಲಾ ಸಾಹಿತ್ಯ ಕಡಿಮೆ. ತಮ್ಮ ಬಣ್ಣದ ಲೋಕದ ಒಳಹೊರಗನ್ನು ದೇವುದಾಸ ಶೆಟ್ಟಿ ಅವರು ಅಕ್ಷರರೂಪಕ್ಕಿಳಿಸಿದ್ದಾರೆ. ಅವರ ಚಿತ್ರಗಳನ್ನು ಅರ್ಥಮಾಡಿಕೊಳ್ಳಲು ಈ ಬರವಣಿಗೆ ಪೂರಕವಾಗಿದೆ. ಒಳ್ಳೆಯ ಕಲೆಗಾರನಿಗೆ ಇರಬೇಕಾದ ಬದ್ಧತೆ ಇರುವ ಅಪೂರ್ವ ಕಲಾವಿದ ದೇವುದಾಸ ಶೆಟ್ಟಿ ಎಂಬುವುದಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು ದೇವುದಾಸ ಶೆಟ್ಟಿ ಅವರ ಕಲಾ ಸಾಧನೆಯನ್ನು ಕೊಂಡಾಡಿದರು.

ಇದೇ ಸಂದರ್ಭದಲ್ಲಿ ಡಾ|  ಮಂಜುನಾಥ್‌, ಮಂಜುನಾಥಯ್ಯ, ಡಾ| ಮರಿಯಪ್ಪ ನಾಟೇಕರ್‌, ಗೋಪಾಲ ತ್ರಾಸಿ, ಡಾ| ಮಮತಾ ರಾವ್‌, ಮನೋಹರ ಕುಲಕರ್ಣಿ, ಮಿತ್ರಾ ವೆಂಕಟ್ರಾಜ್‌, ಬಿ. ಬಾಲಚಂದ್ರರಾವ್‌, ಶ್ಯಾಮಲಾ ಮಾಧವ್‌ ಮೊದಲಾದವರ ಪ್ರಶ್ನೆಗಳಿಗೆ ಉತ್ತರಿಸಿದ ದೇವುದಾಸ ಶೆಟ್ಟಿ ಅವರು ಕಲೆಯನ್ನು ಪ್ರೋತ್ಸಾಹಿಸುವ  ಪ್ರಯತ್ನ ಇನ್ನಷ್ಟು ನಡೆಯಬೇಕು. ಕನ್ನಡ ವಿಭಾಗ ಕಲಾವಿದರಿಗೂ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ನುಡಿದರು.

ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ| ವಿಶ್ವನಾಥ ಕಾರ್ನಾಡ್‌ ಹಾಗೂ ಕಲಾವಿದ ಜಯ ಸಾಲ್ಯಾನ್‌ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ದೇವುದಾಸ ಶೆಟ್ಟಿ ಅವರು ರಚಿಸಿದ ವಿವಿಧ ಚಿತ್ರಗಳನ್ನು ಪ್ರದರ್ಶಿಸಲಾಯಿತು. ನ್ಯಾಯಮೂರ್ತಿ ಜಸ್ಟೀಸ್‌ ಬಿ. ಎನ್‌. ಶ್ರೀಕೃಷ್ಣ, ಚಂದ್ರಶೇಖರ ಪಾಲೆತ್ತಾಡಿ ಅವರು ದೇವುದಾಸ ಶೆಟ್ಟಿ ಅವರನ್ನು ಶಾಲುಹೊದೆಸಿ, ಗ್ರಂಥ ಗೌರವ ನೀಡಿ ಸತ್ಕರಿಸಿದರು. ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next