Advertisement

ಗೋಕಾಕ ಜಿಲ್ಲೆಯಾಗೋ ತನಕ ಹೋರಾಟ

01:06 PM Apr 08, 2022 | Team Udayavani |

ಗೋಕಾಕ: ಬೆಳಗಾವಿ ಜಿಲ್ಲಾ ವಿಭಜನೆ ಕುರಿತಂತೆ ಅಪ್ರಬುದ್ಧ ಹೇಳಿಕೆ ನೀಡುವ ಮೂಲಕ ಗೋಕಾಕ ತಾಲೂಕಿನ ಜನರ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಸಚಿವ ಉಮೇಶ ಕತ್ತಿ ಅವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಚಿವರಿಗೆ ಮುಖ್ಯಮಂತ್ರಿಗಳು ತಾಕೀತು ಮಾಡಬೇಕು. ಗೋಕಾಕನ್ನು ನೂತನ ಜಿಲ್ಲಾ ಕೇಂದ್ರವನ್ನಾಗಿ ಕೂಡಲೇ ಘೋಷಿಸುವಂತೆ ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮಿಗಳು ಸರ್ಕಾರವನ್ನು ಆಗ್ರಹಿಸಿದರು.

Advertisement

ಗುರುವಾರ ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿಯು ಇಲ್ಲಿನ ಬಸವೇಶ್ವರ ವೃತ್ತದ ಬಳಿ ಗೋಕಾಕ ಜಿಲ್ಲೆಗಾಗಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ಸಚಿವ ಉಮೇಶ ಕತ್ತಿ ಅವರ ಬೇಜವಾಬ್ದಾರಿ ಹೇಳಿಕೆಯಿಂದಾಗಿ ತಾಲೂಕಿನ ಜನರು ಉಗ್ರವಾಗಿ ಹೋರಾಟ ನಡೆಸಬೇಕಾಗುತ್ತದೆ. ಗೋಕಾಕ ಜಿಲ್ಲೆಯಾಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.

ಜೆ.ಎಚ್‌. ಪಟೇಲ್‌ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸಿ ಅಧಿಸೂಚನೆ ಹೊರಡಿಸಿದ್ದರು. ಅಲ್ಲದೇ ಆ ಸಂದರ್ಭದಲ್ಲಿ ಗೋಕಾವಿ ನಾಡಿನ ಜನತೆ ವಿಜಯೋತ್ಸವವನ್ನು ಕೂಡ ಆಚರಿಸಿದ್ದೆವು. ಆದರೆ ಕೆಲವರ ಕುತಂತ್ರದಿಂದ ಅಧಿಸೂಚನೆ ತಡೆ ಹಿಡಿಯಲಾಯಿತು.

ನಂತರ ಈ ಹಿಂದಿನ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಾಗ ಬೆಳಗಾವಿ ವಿಭಜನೆ ಸದ್ಯಕ್ಕಿಲ್ಲವೆಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಆದರೀಗ ಸಚಿವ ಉಮೇಶ ಕತ್ತಿ ಅವರು ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಮೂರು ಕಂದಾಯ ಉಪವಿಭಾಗ ಕೇಂದ್ರಗಳನ್ನೇ ಜಿಲ್ಲಾ ಕೇಂದ್ರಗಳನ್ನಾಗಿ ಪರಿವರ್ತಿಸುವಂತೆ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಯಾವ ದೃಷ್ಟಿಕೋನದಿಂದ ಹೇಳಿಕೆ ನೀಡಿದ್ದಾರೋ ನಮಗಂತೂ ಗೊತ್ತಾಗುತ್ತಿಲ್ಲ.

Advertisement

ಈ ಹಿಂದಿನ ಎಲ್ಲ ಮೂರೂ ಆಯೋಗಗಳು ಗೋಕಾಕನ್ನು ಹೊಸ ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಆಗಿನ ಸರ್ಕಾರಗಳಿಗೆ ಶಿಫಾರಸು ಕೂಡ ಮಾಡಿವೆ. ಎಲ್ಲ ದೃಷ್ಟಿಯಿಂದಲೂ ಆಡಳಿತಾತ್ಮಕವಾಗಿ ಗೋಕಾಕ ಜಿಲ್ಲೆಯಾಗಲು ಅರ್ಹವಿದೆ. ಇದನ್ನರಿಯದ ಉಮೇಶ ಕತ್ತಿ ಬಾಲಿಶತನದ ಹೇಳಿಕೆ ನೀಡಿದ್ದಾರೆ. ಗೋಕಾಕನ್ನು ಜಿಲ್ಲೆ ಮಾಡಿದರೆ ಅದರಲ್ಲಿ ಹುಕ್ಕೇರಿಯನ್ನೂ ಸಹ ಸೇರ್ಪಡೆ ಮಾಡಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ರಚನೆಗೆ ಜಾರಕಿಹೊಳಿ ಸಹೋದರರು ಮನಸ್ಸು ಮಾಡಲಿ: ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರ ಪ್ರಾಬಲ್ಯವಿದೆ. ಅವರು ಮನಸ್ಸು ಮಾಡಿದರೆ ಗೋಕಾಕನ್ನು ಹೊಸ ಜಿಲ್ಲೆಯನ್ನಾಗಿ ಮಾಡುವ ತಾಕತ್ತು ಅವರಿಗಿದೆ. ಸರ್ಕಾರದಲ್ಲಿ ತಮ್ಮದೇಯಾದ ವೈಯಕ್ತಿಕ ವರ್ಚಸ್ಸು, ಪ್ರಭಾವ ಹೊಂದಿರುವ ಜಾರಕಿಹೊಳಿ ಸಹೋದರರು ಮನಸ್ಸು ಮಾಡಿ ತಾಲೂಕಿನ ಬಹು ವರ್ಷಗಳ ಪ್ರಮುಖ ಬೇಡಿಕೆಯನ್ನು ಈಡೇರಿಸಲಿ. ಗೋಕಾಕನ್ನು ಹೊಸ ಜಿಲ್ಲೆಯನ್ನಾಗಿ ಮಾಡಲಿ ಎಂದು ಸ್ವಾಮಿಗಳು ಆಶಿಸಿದರು.

ಗೋಕಾಕ ಜಿಲ್ಲೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ವಾಮಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ ಪ್ರಭಾಶುಗರ ನಿರ್ದೇಶಕ ಮಹಾದೇವಪ್ಪ ಭೋವಿ, ಹಿರಿಯ ನ್ಯಾಯವಾದಿ ಬಿ.ಆರ್‌. ಕೊಪ್ಪ, ವಕೀಲರ ಸಂಘದ ಮಾಜಿ ಅಧ್ಯಕ್ಷ ಶಶಿಧರ ದೇಮಶೆಟ್ಟಿ ಮಾತನಾಡಿ, ಗೋಕಾಕ ಜಿಲ್ಲೆಯನ್ನಾಗಿ ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಸಚಿವ ಉಮೇಶ ಕತ್ತಿ ಅವರು ಜಿಲ್ಲಾ ರಚನೆ ಬಗ್ಗೆ ಅವಿವೇಕದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಅವರಿಗೆ ವಾರ್ನ್ ಮಾಡಬೇಕು. ಗೋಕಾಕ ಜಿಲ್ಲಾ ರಚನೆ ಕೈ ಬಿಟ್ಟರೆ ಅಹಿತಕರ ಘಟನೆಗಳು ನಡೆಯಬಹುದು. ಇದಕ್ಕೆ ಸರ್ಕಾರ ಹಾಗೂ ಉಮೇಶ ಕತ್ತಿ ಅವರೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಮುಖಂಡರುಗಳು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ರಾಷ್ಟ್ರೀಯ ಬಿಜೆಪಿ ಓಬಿಸಿ ಕಾರ್ಯಕಾರಣಿ ಸದಸ್ಯ ಎಲ್‌.ಟಿ. ತಪಸಿ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ವಕೀಲರ ಸಂಘದ ಉಪಾಧ್ಯಕ್ಷ ವಾಯ್‌.ಕೆ. ಕೌಜಲಗಿ, ರೈತ ಸಂಘಟನೆಯ ಭೀಮಶಿ ಗದಾಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಮುಖಂಡರಾದ ಅಬ್ಟಾಸ ದೇಸಾಯಿ, ಶಂಕರ ಬಿಲಕುಂದಿ, ಕೆಂಚನಗೌಡ ಪಾಟೀಲ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸ್ಥಾಯಿ ಸಮೀತಿ ಅಧ್ಯಕ್ಷ ಸಿದ್ದಪ್ಪ ಹುಚ್ಚರಾಯಪ್ಪಗೋಳ, ದಲಿತ ಮುಖಂಡ ರಮೇಶ ಸಣ್ಣಕ್ಕಿ, ಕಿರಣ ಡಮಾಮಗರ, ಬಸವರಾಜ ಖಾನಪ್ಪನವರ, ಪವನ ಮಹಾಲಿಂಗಪೂರ, ಲಕ್ಷ್ಮೀ ಪಾಟೀಲ, ಕರುಣಾ ಗರುಡಕರ ಸೇರಿದಂತೆ ನಗರಸಭೆ ಸದಸ್ಯರು, ಅರಭಾವಿ ಹಾಗೂ ಗೋಕಾಕ ಕ್ಷೇತ್ರಗಳ ಹಲವು ಪ್ರಮುಖರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಪ್ರತಿಭಟನಾಕಾರರು ಬಸವೇಶ್ವರ ವೃತ್ತದ ಸುತ್ತಲು ಮಾನವ ಸರಪಳಿ ನಿರ್ಮಿಸಿ ಅರಣ್ಯ ಸಚಿವ ಉಮೇಶ ಕತ್ತಿ ವಿರುದ್ಧ ಪ್ರತಿಭಟನೆ ನಡೆಸಿದರು. ಗೋಕಾಕನ್ನು ಜಿಲ್ಲೆಯನ್ನಾಗಿ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡರು.

ಗೋಕಾಕ ತಹಶೀಲ್ದಾರ ಗ್ರೇಡ್‌-2 ಲಕ್ಷ್ಮಣ ಭೋವಿ ಮೂಲಕ ಮುಖ್ಯಮಂತ್ರಿಗಳಿಗೆ ಜಿಲ್ಲಾ ರಚನೆ ಕುರಿತು ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next