Advertisement

ಕೋವಿಡ್‌ 19 ವಿರುದ್ಧ ಹೋರಾಡಿ ಬದುಕು ರೂಪಿಸಿಕೊಳ್ಳಿ

05:17 AM May 23, 2020 | Lakshmi GovindaRaj |

ಮೈಸೂರು: ಕೋವಿಡ್‌ 19 ವಿರುದ್ಧ ಹೋರಾಡುತ್ತಲೇ ನಾವು ನಮ್ಮ ಬದುಕು ರೂಪಿಸಿಕೊಳ್ಳಬೇಕಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಕುವೆಂಪುನಗರದ ಕಲ್ಯಾಣ ಮಂಟಪವೊಂದರಲ್ಲಿ ಶಾಸಕ ಎಸ್‌.ಎ. ರಾಮದಾಸ್‌  ಏರ್ಪಡಿಸಿದ್ದ ಕ್ಷೇತ್ರದ ಜನತೆಗೆ ಆಯುಷ್‌ ಕಿಟ್‌ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಒಂದು ಸೂಕ್ಷ್ಮ ವೈರಾಣುವಿನಿಂದ ಮನುಷ್ಯನ ಜೀವನ ಶೈಲಿ, ಆಹಾರ ಪದ್ಧತಿ, ಚಿಂತನೆಯಲ್ಲಿ ಬದಲಾವಣೆಯಾಗಿದೆ.

Advertisement

ನಮ್ಮ  ಮೌಲ್ಯಗಳ ಬಗ್ಗೆ ಪುನರ್‌ ಚಿಂತನೆ ನಡೆಯುತ್ತಿದೆ. ಸಂಬಂಧಗಳು ಗಟ್ಟಿಗೊಳ್ಳುತ್ತಿವೆ. ಮಹಾಯುದ್ಧದಲ್ಲಿ ಸಾವನ್ನಪ್ಪಿದವರಿಗಿಂತ ಈ ಸಣ್ಣ ವೈರಸ್‌ನಿಂದ ಸತ್ತವರೆ ಹೆಚ್ಚು. ಈ ನಿಟ್ಟಿನಲ್ಲಿ ನಾವು ಅಗತ್ಯ ಮುಂಜಾಗ್ರತೆ ಕ್ರಮಗಳ ಜೊತೆಗೆ ವೈರಸ್‌ನ ಜೊತೆಗೆ ಬದುಕು ಸಾಗಿಸುವುದನ್ನು  ಕಲಿಯಬೇಕಿದೆ ಎಂದರು. ಆರಂಭದಲ್ಲಿ ಜಗತ್ತಿನ ಇತರೆ ರಾಷ್ಟ್ರಗಳು ಎಚ್ಚೆತ್ತುಕೊಳ್ಳವ ಮುನ್ನವೇ ಭಾರತದ ಪ್ರಧಾನಿ ಅಪಾಯ ಅರಿತು ದೇಶವನ್ನು ಲಾಕ್‌ಡೌನ್‌ ಹೇರಿದರು.

ನಮ್ಮ  ಪ್ರಧಾನಿಯವರು ತೆಗೆದುಕೊಂಡ ದಿಟ್ಟ ನಿಲುವುಗಳಿಂದ ಇತರೆ ದೇಶಗಳು ನಮ್ಮನ್ನುತಿರುಗಿ ನೋಡುವಂತಾಗಿದೆ. ನಮ್ಮಲ್ಲಿ ವೈರಾಣು ಹೆಚ್ಚು ಬಾಧಿಸದಿರುವುದಕ್ಕೆ ಕಾರಣ ನಮ್ಮ ದೇಶದ ಜನರಲ್ಲಿ ಇರುವ ರೋಗ ನಿರೋಧಕ ಶಕ್ತಿ. ಇದು  ನಮ್ಮ ಜೀವನ ಪದ್ಧತಿ, ಆಹಾರ ಕ್ರಮ, ಆಯುರ್ವೇಧ ಚಿಕಿತ್ಸಾ ವಿಧಾನಗಳಿಂದ ಬಂದಿದೆ. ಕೋವಿಡ್‌-19 ನಿಯಂತ್ರಣ ನಮ್ಮ ಕೈಯಲ್ಲಿದೆ. ನಾವು ಸಾರ್ವಜನಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತೇವೆ ಎಂಬುದು ಮುಖ್ಯ.

ಸಾಮಾಜಿಕ  ಅಂತರ, ಸ್ವತ್ಛತೆ ಕಾಪಾಡಿಕೊಳ್ಳಬೇಕು ಎಂದರು. ಕಳೆದ 20 ವರ್ಷದಲ್ಲಿ ಜಗತ್ತು ಆರ್ಥಿಕ ವಿಪತ್ತಿನಿಂದ ಎಷ್ಟು ನಷ್ಟ ಅನುಭವಿಸಿತ್ತೋ ಅಷ್ಟೇ ನಷ್ಟವನ್ನು ಕಳೆದ 3-4 ತಿಂಗಳಲ್ಲಿ ಕೋವಿಡ್‌ 19ದಿಂದ ಅನುಭವಿಸಿದೆ. ನಮ್ಮ ದೇಶದ ಆರ್ಥಿಕತೆಯನ್ನು ಸಾಹುಕಾರರು, ಶ್ರೀಮಂತರು ನಿರ್ಧರಿಸಲು ಅಸಾಧ್ಯ. ನಮ್ಮ ಆರ್ಥಿಕತೆ ದುಡಿಯುವ ವರ್ಗದ ಮೇಲೆ ಅವಲಂಬಿತ ವಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡ ದುಡಿಯುವ ವರ್ಗ, ರೈತರಿಗೆ ವಿಶೇಷ ಪ್ಯಾಕೇಜ್‌  ಷಿಸಿದೆ ಎಂದರು. ಕೋವಿಡ್‌ 19ವನ್ನು ಸಮರ್ಥವಾಗಿ ಎದುರಿಸಲು ಪೊಲೀಸ್‌ ಇಲಾಖೆ ಪಾತ್ರ ಮಹತ್ವದದ್ದು, ಇದರ ಜೊತೆಗೆ ವೈದ್ಯರು, ಅಧಿಕಾರಿಗಳ ಪಾತ್ರವನ್ನು ಸ್ಮರಿಸಬೇಕು.

ಕೋವಿಡ್‌ 19 ನಿಯಂತ್ರಸುವಲ್ಲಿ ಇಡೀ ರಾಜ್ಯಕ್ಕೆ ಮೈಸೂರು ಅನುಕರಣೀಯ. ಡೀಸಿ ಅಭಿರಾಂ ಜಿ. ಶಂಕರ್‌ ಇದಕ್ಕೆ  ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಬಳಿಕ ಕೇತ್ರದ 19 ವಾರ್ಡ್‌ಗಳಿಗೂ ತೆರಳಿ ಆಯುಷ್‌ ಕಿಟ್‌ ಗಳನ್ನು ವಿತರಣೆ ಮಾಡುವ ವಾಹನಗಳಿಗೆ ಸಚಿವದ್ವಯರು ಚಾಲನೆ ನೀಡಿದರು. ಸಚಿವ ಎಸ್‌.ಟಿ.ಸೋಮಶೇಖರ್‌, ಶಾಸಕ ಎಸ್‌.ಎ. ರಾಮದಾಸ್‌, ಮೇಯರ್‌ ತಸ್ನೀಂ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಡೀಸಿ ಅಭಿರಾಂ ಜಿ. ಶಂಕರ್‌, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಡಿಸಿಪಿ ಪ್ರಕಾಶ್‌ಗೌಡ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next