Advertisement

ಕಾರಂಜಿ ಕೆರೆ ಆವರಣದಲ್ಲಿ ಹಬ್ಬದ ಸಂಭ್ರಮ

08:36 PM Dec 16, 2019 | Lakshmi GovindaRaj |

ಮೈಸೂರು: ಮೈಸೂರು ಚಾಮರಾಜೇಂದ್ರ ಮೃಗಾಲಯ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ ಇದೇ ಮೊದಲ ಬಾರಿಗೆ ಕಾರಂಜಿ ಕೆರೆ ಹಬ್ಬ ಆಯೋಜಿಸುವ ಮೂಲಕ ಕರೆಯ ಮಹತ್ವ ಸಾರಲಾಯಿತು.

Advertisement

ಎರಡು ದಿನ ಕಾಲ ಕಾರಂಜಿ ಕೆರೆ ಹಬ್ಬ: ಕಳೆದ ಬಾರಿ ನೀರಿಲ್ಲದೇ ಸಂಪೂರ್ಣ ಬತ್ತಿ ಹೋಗಿದ್ದ ಕೆರೆಗೆ ಚಾಮುಂಡಿ ಬೆಟ್ಟದಿಂದ ಮಳೆ ನೀರು ಕಾರಂಜಿ ಕೆರೆಗೆ ಸೇರುವ ವ್ಯವಸ್ಥೆ ಮಾಡಲಾಗಿತ್ತು. ನಂತರ ಉತ್ತಮ ಮಳೆಯಾದ್ದರಿಂದ ಕೆರೆ ತುಂಬಿತ್ತು. ಈ ಹಿನ್ನೆಲೆ ಪರಿಸರ ಸಂರಕ್ಷಣೆಗೆ ಕೆರೆಯ ಪಾತ್ರವೇನು?, ಅದನ್ನು ರಕ್ಷಿಸುವ ಮತ್ತು ಮಹತ್ವ ತಿಳಿಸುವ ಉದ್ದೇಶದಿಂದ ಮೈಸೂರು ಚಾಮರಾಜೇಂದ್ರ ಮೃಗಾಲಯ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರ ಎರಡು ದಿನಗಳ ಕಾಲ ಕಾರಂಜಿ ಕೆರೆ ಹಬ್ಬ ಆಯೋಜಿಸಿದೆ.

ಕೆರೆ ಉತ್ಸವಕ್ಕೆ ಮೇಯರ್‌ ಪುಷ್ಪಲತಾ ಚಾಲನೆ: ಕಾರಂಜಿ ಕೆರೆ ಆವರಣದಲ್ಲಿ ನಡೆದ ಕೆರೆ ಉತ್ಸವಕ್ಕೆ ಮೇಯರ್‌ ಪುಷ್ಪಲತಾ ಜಗನಾಥ್‌ ಚಾಲನೆ ನೀಡಿದರು. ಪಾಲಿಕೆ ಸದಸ್ಯರಾದ ಛಾಯಾ ಮತ್ತು ರೂಪ ಇವರಿಗೆ ಸಾಥ್‌ ನೀಡಿದರು. ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯಕಾರ್ಯದರ್ಶಿ ಬಿ.ಪಿ.ರವಿ ಹಾಗೂ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಅವರು ಹಬ್ಬದಲ್ಲಿ ಭಾಗವಹಿಸಿದವರಿಗೆ ಕಾರಂಜಿ ಕೆರೆ ಇತಿಹಾಸ, ಪರಿಸರದಲ್ಲಿ ಕೆರೆಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

ಕೆರೆ ಜೀವವೈವಿಧ್ಯ ತಾಣ: ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ನಿರ್ದೇಶಕ ಡಾ.ಇಂದ್ರೇಶ್‌ ಅವರು ಕವನದ ಮೂಲಕ ಕೆರೆ, ಪರಿಸರ ಸಂರಕ್ಷಣೆ ಹಾಗೂ ಸ್ವತ್ಛತೆ ಬಗ್ಗ ಕವಿತೆ ವಾಚನ ಮಾಡಿ, ಕೆರೆ ಜೀವವೈವಿಧ್ಯ ತಾಣವಾಗಿದ್ದು, ಇತ್ತೀಚೆಗೆ ನಶಿಸುತ್ತಿವೆ. ಕೆರೆಯ ಮಹತ್ವ ಮತ್ತು ಅವುಗಳ ಅಗತ್ಯಗಳ ಬಗ್ಗೆ ಜನತೆಗೆ ತಿಳಿಸಿಕೊಡುವ ಉದ್ದೇಶದಿಂದ ಮೃಗಾಲಯವು ಕಾರಂಜಿ ಕೆರೆಯನ್ನು ಅಭಿವೃದ್ಧಿಪಡಿಸಿ ಕೆರೆ ಹಬ್ಬವನ್ನು ಮಾಡುತ್ತಿದೆ. ಇಂತಹ ಹಬ್ಬಗಳು ಎಲ್ಲಾ ಕೆರೆಗಳಿಗೂ ವಿಸ್ತರಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

ಪುಟಾಣಿಗಳಿಗೆ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆ: ಕೆರೆ ಹಬ್ಬ ಅಂಗವಾಗಿ ಪುಟಾಣಿ ಮಕ್ಕಳಿಗೆ ಪ್ರಾಣಿ ಹಾಗೂ ಪ್ರಕೃತಿ ಆಧಾರಿತ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆ ಆಯೋಜಿಸಲಾಗಿತ್ತು. ಜೊತೆಗೆ ಕಾರಂಜಿ ಕೆರೆಯಲ್ಲಿ ಸೆರೆ ಹಿಡಿಯಲಾದ ಛಾಯಾಚಿತ್ರಗಳ ಸ್ಪರ್ಧೆ, ಪರಿಸರ ಮತ್ತು ಕೆರೆ ಸಂರಕ್ಷಣೆ ಬಗ್ಗೆ ಚಿತ್ರಕಲೆ ಹಾಗೂ ರೇಖಾ ಚಿತ್ರ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಹಾಗೂ ಕೆರೆಯ ಮಹತ್ವವನ್ನು ತಿಳಿಸಿಕೊಡಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕರೆ, ನದಿ, ಬೆಟ್ಟ, ಗುಡ್ಡ ಸೇರಿದಂತೆ ಪರಿಸರವನ್ನು ಹಾಳೆಯ ಮೇಲೆ ಹಿಡಿದಿಡುವ ಪ್ರಯತ್ನ ಮಾಡಿದರು.

Advertisement

ಮಾನವ ಕೇಂದ್ರಿತ ಅಭಿವೃದ್ಧಿ ಪರಿಸರಕ್ಕೆ ಮಾರಕ: ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ಪರಿಸರ ಸಂರಕ್ಷಣೆಗೆ ಕೆರೆ ಸಂರಕ್ಷಣೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಮುನುಷ್ಯ ಸುಸ್ಥಿರ ಅಭಿವೃದ್ಧಿ ಬಿಟ್ಟು ಮಾನವ ಕೇಂದ್ರಿತ ಅಭಿವೃದ್ಧಿಯತ್ತ ಒಲವು ತೋರುತಿದ್ದಾನೆ. ಇದು ಪರಿಸರಕ್ಕೆ ಮಾರಕವಾಗಲಿದೆ ಎಂದರು.

ಕೆರೆಗಳನ್ನು ಸಂರಕ್ಷಣೆ ಮಾಡಿ: ಪ್ರತಿನಿತ್ಯ ದೂರದ ಬೆಂಗಳೂರಿಗೆ ಕುಡಿಯುವ ನೀರನ್ನು ಪಂಪ್‌ ಮಾಡಿ, ಪ್ರಕೃತಿ ವಿರುದ್ಧವಾಗಿ ಸಾಗಣೆ ಮಾಡುತ್ತಿದ್ದೇವೆ. ಅಷ್ಟು ದೂರ ನೀರನ್ನು ಪಂಪ್‌ ಮಾಡಲು ಎಷ್ಟು ವಿದ್ಯುತ್‌ ಬೇಕು. ಎಷ್ಟು ವರ್ಷ ಹೀಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು, ಇದು ಪ್ರಕೃತಿಗೆ ವಿರುದ್ಧ ಪ್ರಕ್ರಿಯೆ. ನಾವು ದೇಶದಲ್ಲಿ ಕೆರೆಗಳನ್ನು ಸಂರಕ್ಷಣೆ ಮಾಡಿದ್ದರೆ, ಅಂತರ್ಜಲ ಮಟ್ಟದ ಹೆಚ್ಚಿಸಿಕೊಳ್ಳಬಹುದಾಗಿತ್ತು. ಈಗ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ ಎಂದರು.

ನಾಗರಹೊಳೆ ಮತ್ತು ಬಂಡೀಪುರದಲ್ಲಿ ರಸ್ತೆ ಮಾಡಬೇಕೆಂಬ ಪ್ರಸ್ತಾಪ ಮುನ್ನಲೆಗೆ ಬಂದಿತು. ಆದರೆ ಇಲ್ಲಿ ರಸ್ತೆ ಅಭಿವೃದ್ಧಿಗೊಳಿಸಿದರೆ, ಅಲ್ಲಿನ ಏಷ್ಯಾದ ಆನೆ, ಹುಲಿ ಹಾಗೂ ಜೀವ ಸಂಕುಲದ ಕಥೆಯೇನು ಎಂದು ಪ್ರಶ್ನಿಸಿ ಇವೆಲ್ಲವೂ ಮಾನವ ಕೇಂದ್ರಿತ ಚಟುವಟಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

48 ಲಕ್ಷ ಮಂದಿ ಪ್ರವಾಸಿಗ ಭೇಟಿ: ಅಜಿತ್‌ ಕುಲಕರ್ಣಿ ಮಾತನಾಡಿ, 2004ರಲ್ಲಿ ಕೆರೆಯನ್ನು ಮೃಗಾಲಯ ವ್ಯಾಪ್ತಿಗೆ ತರಲಾಯಿತ. ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕೆರೆ ಉದ್ಘಾಟಿಸಿದರು. ಉಚಿತ ಪ್ರವೇಶದ ಬದಲು ಪ್ರವೇಶ ದರ ನಿಗದಿ ಪಡಿಸಲಾಯಿತು. ಅಂದಿನಿಂದ 48 ಲಕ್ಷ ಪ್ರವಾಸಿಗರು ಕೆರೆಗೆ ಭೇಟಿ ನೀಡಿದ್ದಾರೆ. ಇದರಿಂದ 9 ಕೋಟಿ ರೂ. ಆದಾಯ ಬಂದಿದ್ದು, ಈ ಹಿಂದೆ ಇದಕ್ಕೆ ವಾಕಿಂಗ್‌ ಪಾತ್‌ ಇರಲಿಲ್ಲ. ಕೆರೆ ಪುನರ್‌ಜೀವನದ ಅನುದಾನ 1.17 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next