Advertisement

ಮಕ್ಕಳಿಗೆ ವಿಷ ಕುಡಿಸಿದ ತಂದೆ ರೈಲಿಗೆ ತಲೆಕೊಟ್ಟು ಸಾವು

10:49 PM Jan 03, 2020 | Team Udayavani |

ಕಲಬುರಗಿ: ತಂಪುಪಾನೀಯದಲ್ಲಿ ವಿಷ ಬೆರೆಸಿ ಇಬ್ಬರು ಹೆಣ್ಣು ಮಕ್ಕಳಿಗೆ ಕುಡಿಸಿ ಹತ್ಯೆ ಮಾಡಿದ ತಂದೆಯೋರ್ವ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿ ಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.

Advertisement

ಭೈರಂಪಳ್ಳಿ ತಾಂಡಾದ ಸಂಜೀವ ಕುಮಾರ ರಾಠೊಡ ಅಲಿಯಾಸ್‌ ಕುಮ್ಶೆಟ್ಟಿ (35) ಕೃತ್ಯವೆಸಗಿ ಆತ್ಮಹತ್ಯೆ ಮಾಡಿಕೊಂಡವ. ಗುರುವಾರ ರಾತ್ರಿ ಮಕ್ಕಳಾದ ರೋಹಿತಾ (4), ಪರ್ವಿತಾ (2)ಗೆ ವಿಷ ಕುಡಿಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೆಲಂಗಾಣದ ತಾಂಡೂರು ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಡಿಪ್ಲೋಮಾ ಇನ್‌ ಆಟೋಮೊಬೈಲ್ಸ್‌ ಮಾಡಿದ್ದ ಸಂಜೀವಕುಮಾರ, ಪತ್ನಿ ಮತ್ತು ಮಕ್ಕಳೊಂದಿಗೆ ಹೈದ್ರಾಬಾದ್‌ನಲ್ಲಿ ನೆಲೆಸಿದ್ದ. 2 ದಿನಗಳ ಹಿಂದೆ ಎಲ್ಲರೂ ಊರಿಗೆ ಬಂದಿದ್ದರು. ಪತ್ನಿ ಊರಾದ ಸಿದ್ದಪೂರ ತಾಂಡಾಕ್ಕೂ ಹೋಗಿದ್ದರು. ಅಲ್ಲಿಂದ ಇಬ್ಬರು ಮಕ್ಕಳನ್ನು ತನ್ನೊಂದಿಗೆ ಕರೆದುಕೊಂಡು ಬಂದಿದ್ದ ಸಂಜೀವಕುಮಾರ, ಕೀರು ನಾಯಕ ಎನ್ನುವರ ಹೊಲದಲ್ಲಿ ಮಕ್ಕಳಿಗೆ ಚಾಕಲೇಟ್‌ ನೀಡಿ,

ವಿಷ ಬೆರೆಸಿ ಕೋಲ್ಡ್‌ ಡ್ರಿಂಕ್ಸ್‌ ಕೊಟ್ಟಿದ್ದ. ಅದನ್ನು ಕುಡಿದ ಪುಟ್ಟ ಕಂದಮ್ಮಗಳು ಹೊಲದಲ್ಲೇ ಪ್ರಾಣ ಬಿಟ್ಟಿವೆ. ನಂತರ ಆತ ಅಲ್ಲಿಂದ ತಲೆಮರೆಸಿಕೊಂಡು ಸಂಬಂಧಿಕರಿಗೆ ಮೊಬೈಲ್‌ ಮೂಲಕ ತಾನು ಮಾಡಿದ ದುಷ್ಕೃತ್ಯ ಹೇಳಿಕೊಂಡಿದ್ದ. ವಿಷಯ ತಿಳಿದ ಮಿರಿಯಾಣ ಠಾಣೆ ಪೊಲೀಸರು ರಾತ್ರಿಯೇ ಮಕ್ಕಳ ಶವಗಳನ್ನು ಗುರುತಿಸಿ, ಆರೋಪಿಗಾಗಿ ಶೋಧ ನಡೆಸಿದ್ದರು. ಶುಕ್ರವಾರ ಬೆಳಗ್ಗೆ ಎಸ್ಪಿ ಮಾರ್ಟಿನ್‌ ಮಾರ್ಬನ್ಯಾಂಗ್‌ ಹಾಗೂ ಹಿರಿಯ ಅಧಿಕಾರಿಗಳು ತಾಂಡಾಕ್ಕೆ ತೆರಳಿ ಶೋಧ ಚುರುಕುಗೊಳಿಸಿದರು.

ಕೊನೆಗೆ ಪಕ್ಕದ ತೆಲಂಗಾಣದ ತಾಂಡೂರು ರೈಲ್ವೆ ನಿಲ್ದಾಣದ ಸಮೀಪ ಹಳಿ ಮೇಲೆ ಸಂಜೀವಕುಮಾರ ಹೆಣವಾಗಿದ್ದು ತಿಳಿದುಬಂದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಚಿಂಚೋಳಿಯ ಮಿರಿಯಾಣ ಠಾಣೆಯಲ್ಲಿ ಮಕ್ಕಳ ಹತ್ಯೆ ಸಂಬಂಧ ಮತ್ತು ತಾಂಡೂರು ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next