Advertisement

ಇಳಿದಿಲ್ಲ ಪ್ರತಿಭಟನೆಯ ಕಾವು

12:36 AM Dec 11, 2020 | mahesh |

ಬೆಂಗಳೂರು/ ಹೊಸದಿಲ್ಲಿ: ಈ ವಾರದ ಆರಂಭದಿಂದಲೂ ರಾಜ್ಯವು ವಿವಿಧ ರೀತಿಯ ಜನಾ ಕ್ರೋಶಕ್ಕೆ ಸಾಕ್ಷಿಯಾಗಿದೆ. ಒಂದೆಡೆ ಅನ್ನದಾತರು ಕೇಂದ್ರದ ಕೃಷಿ ಕಾಯ್ದೆ, ರಾಜ್ಯದ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ವಿರೋಧಿಸಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೂಂದೆಡೆ ಸಾರಿಗೆ ನೌಕರರು ತಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕೆಂದು ಆಗ್ರಹಿಸಿ ವಿಧಾನ ಸೌಧ ಮುತ್ತಿಗೆಗೆ ಯತ್ನಿಸಿದ್ದಾರೆ. ಈಗ ಆಯುರ್ವೇದ ವೈದ್ಯ ರಿಗೆ ಶಸ್ತ್ರಚಿಕಿತ್ಸೆಯ ಅವಕಾಶ ನೀಡಿರು ವುದನ್ನು ಖಂಡಿಸಿ ಅಲೋಪತಿ ವೈದ್ಯರು ದೇಶವ್ಯಾಪಿ ಪ್ರತಿಭಟನೆಗೆ ಮುಂದಾಗಿದ್ದಾರೆ.

Advertisement

ಇಂದು ಖಾಸಗಿ ಆಸ್ಪತ್ರೆ ಒಪಿಡಿ ಬಂದ್‌
ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ಶುಕ್ರವಾರ ಮುಷ್ಕರಕ್ಕೆ ಕರೆ ನೀಡಿದ್ದು, ಹೊರರೋಗಿ ವಿಭಾಗ (ಒಪಿಡಿ)ದ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಯ ಲಿದೆ. 27 ಸಾವಿರಕ್ಕೂ ಹೆಚ್ಚು ಐಎಂಎ ನೋಂದಾಯಿತ ವೈದ್ಯರು ಭಾಗವಹಿಸಲಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಸೇವೆಗಳು ದೊರೆಯಲಿವೆ.

ಸಾರಿಗೆ ನೌಕರರಿಂದ ಇಂದು ಮತ್ತೆ ಬಂದ್‌
ಸಾರಿಗೆ ನೌಕರರನ್ನು ಸರಕಾರಿ ನೌಕರರು ಎಂದು ಪರಿಗಣಿಸುವುದರ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಸಾವಿರಾರು ಸಂಖ್ಯೆಯಲ್ಲಿ ನೌಕರರು ವಿಧಾನಸೌಧ ಮುತ್ತಿಗೆಗೆ ಯತ್ನಿಸಿದರು. ಆದರೆ ಅವರನ್ನು ಅರ್ಧದಲ್ಲೇ ತಡೆದ ಪೊಲೀಸರು ಹಲವರನ್ನು ವಶಕ್ಕೆ ಪಡೆ ದರು. ಧರಣಿ ನಿರತ ನೌಕರರ ಬಂಧನ ಖಂಡಿಸಿ ಶುಕ್ರವಾರ ಕೂಡ ಎಲ್ಲ ನಿಗಮಗಳ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಾರಿಗೆ ನೌಕರರ ಸಂಘದ ಮುಖಂಡ ಆನಂದ್‌ ತಿಳಿಸಿದ್ದಾರೆ. ಆದರೆ ಬಸ್‌ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿ: ಮುಂದುವರಿದ ರೈತರ ಪ್ರತಿಭಟನೆ
ಕೃಷಿ ಕಾಯ್ದೆ ವಾಪಸ್‌ ಪಡೆಯುವಂತೆ ಆಗ್ರಹಿಸಿ ದಿಲ್ಲಿ ಗಡಿಯಲ್ಲಿ ನಡೆಯುತ್ತಿರುವ ಅನ್ನದಾತರ ಪ್ರತಿಭಟನೆ ಮುಂದುವರಿದಿದೆ. ಸರಕಾರ ಬೇಡಿಕೆ ಈಡೇರಿಸದಿದ್ದರೆ ರೈಲು ತಡೆ ನಡೆಸುವುದಾಗಿ ರೈತ ಸಂಘಟನೆಗಳು ಎಚ್ಚರಿಸಿವೆ. ಇನ್ನೊಂದೆಡೆ ಸರಕಾರದ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದ ಬೆನ್ನಲ್ಲೇ ಗುರುವಾರ ಮಾತನಾಡಿರುವ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಸರಕಾರದ ಪ್ರಸ್ತಾವನೆಯನ್ನು ಮತ್ತೂಮ್ಮೆ ಪರಿಶೀಲಿಸಿ, ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿಪಡಿಸಿ ಎಂದು ಕೋರಿದ್ದಾರೆ. ಆದರೆ ಕಾಯ್ದೆಯನ್ನು ವಾಪಸ್‌ ಪಡೆಯುವ ನಿರ್ಧಾರ ತೆಗೆದುಕೊಳ್ಳುವ ವರೆಗೂ ಸರಕಾರದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ರೈತರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next