Advertisement

24ಕ್ಕೆ ಕೇಂದ್ರದ ವಿರುದ್ಧ ರೈತರ ಪ್ರತಿಭಟನೆ

10:15 PM Oct 21, 2019 | Team Udayavani |

ಚಾಮರಾಜನಗರ: ಭಾರತ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದದ ಮೂಲಕ ದೇಶದ ಕೃಷಿ ವಲಯವನ್ನು ತೆರಿಗೆ ಮುಕ್ತ ವ್ಯಾಪಾರ ವಲಯಕ್ಕೆ ಸೇರಿಸಲು ಮುಂದಾಗಿದ್ದು, ಇದನ್ನು ವಿರೋಧಿಸಿ ಭಾರತಾದ್ಯಂತ ರೈತ ಸಂಘಟನೆಗಳಿಂದ ಗುರುವಾರ ಪ್ರತಿಭಟನೆ ನಡೆಯಲಿದೆ. ರೈತ ಸಂಘದಿಂದ ನಗರದಲ್ಲೂ ಅಂದು ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಮಹೇಶ್‌ ಪ್ರಭು ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಮಾತುಕತೆ ನಡೆಸಿದ್ದು, ಯಾವುದೇ ಕಾರಣಕ್ಕೂ ಈ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಒತ್ತಾಯಿಸಿ, ಅಂದು ಬೆಳಗ್ಗೆ 11ಕ್ಕೆ ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಹೊರಟು ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಲಾಗುವುದು ಎಂದರು.

ನಮ್ಮ ಕೃಷಿಗೆ ಕಂಟಕ: ಮುಂದುವರೆದ ದೇಶಗಳಲ್ಲಿ ಕೃಷಿಗೆ ಹೆಚ್ಚಿನ ಸಹಾಯಧನ ನೀಡುವುದರಿಂದ ಹಾಗೂ ಯಾಂತ್ರಿಕ ಬೇಸಾಯ ಇರುವುದಿಂದ ಕಡಿಮೆ ಬೆಲೆಗೆ ಕೃಷಿ, ಹೈನುಗಾರಿಕೆ ಉತ್ಪನ್ನಗಳನ್ನು ತೆರಿಗೆ ಇಲ್ಲದೇ ಭಾರತಕ್ಕೆ ತಂದು ಸುರಿ ಮಾರುಕಟ್ಟೆ ಮಾಡುವುದದರಿಂದ ನಮ್ಮ ದೇಶಕ ಕೃಷಿ, ಹೈನುಗಾರಿಕೆ ನಷ್ಟಕ್ಕೆ ಸಿಲುಕಿ, ಉದ್ಯೋಗ ಕಡಿತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೈನುಗಾರಿಕೆ ಕ್ಷೇತ್ರಕ್ಕೆ ಅಪಾಯ: ಚೀನಾ ಜಪಾನ್‌ ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ ಸೇರಿ ಇತರ 15 ರಾಷ್ಟ್ರಗಳದೊಂದಿಗೆ ಭಾರತ ಸರ್ಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಕುರಿತು ಮಾತುಕತೆ ನಡೆಸುತ್ತಿದೆ. ನವೆಂಬರ್‌ ಒಳಗೆ ಮಾತುಕತೆ ಮುಕ್ತಾಯವಾಗಲಿದೆ. ಭಾರತದ ರೈತರನ್ನು ಇನ್ನೊಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸಲಾಗುತ್ತಿರುವುದನ್ನು ನಾವು ಒಪ್ಪುವುದಿಲ್ಲ. ಇದರಿಂದ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವೇ ಇಲ್ಲವಾಗುತ್ತದೆ. ಹೀಗಾಗಿ ಅನೇಕ ದೇಶಗಳ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ಮಾರಲು ಬರುತ್ತವೆ. ಇದರಿಂದಾಗಿ ದೇಶಕ‌ ಕೋಟ್ಯಂತರ ಸಣ್ಣ ರೈತರ ಸ್ಥಿತಿ ಶೋಚನೀಯವಾಗಲಿದೆ. ಅಲ್ಲದೇ ಹೈನುಗಾರಿಕೆ ಕ್ಷೇತ್ರ ಅಪಾಯಕ್ಕೆ ಸಿಲುಕಲಿದೆ ಎಂದು ಅವರು ಹೇಳಿದರು.

ಆರ್‌ಸಿಇಪಿಯನ್ನು ವಿರೋಧಿಸಿ: ಬೀಜ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಹೆಚ್ಚಿನ ಅಧಿಕಾರವನ್ನು ಪಡೆಯುತ್ತವೆ. ಬೀಜಗಳನ್ನು ರಕ್ಷಿಸಿ, ಸಂಗ್ರಹಿಸುವ ರೈತರು ಅಪರಾಧಿಗಳಾಗುತ್ತಾರೆ. ಆದ್ದರಿಂದ ಆರ್‌ಸಿಇಪಿಯನ್ನು ದೇಶದ ಎಲ್ಲರೂ ವಿರೋಧಿಸಬೇಕು. ಆಯಾ ರಾಜ್ಯ ಸರ್ಕಾರಗಳನ್ನು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

Advertisement

ಡೀಸಿ ಕಚೇರಿ ಮುಂಚೆ ಧರಣಿ: ತಮ್ಮ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿರುವುದು ರೈತರು ಮಾತ್ರವಲ್ಲ. ದೇಶದ ಆಹಾರ ಸಾರ್ವಭೌಮತ್ವವೂ ಅಪಾಯದಲ್ಲಿದೆ. ಹಾಗಾಗಿ ಈ ನೀತಿಯನ್ನು ವಿರೋಧಿಸಿ ಅ.24ರಂದು ನಗರದ ಪ್ರವಾಸಿ ಮಂದಿರದಿಂದ ಬೆಳಗ್ಗೆ 11ಕ್ಕೆ ರೈತರು ಮೆರವಣಿಗೆ ಹೊರಟು, ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಅಲ್ಲಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವರಾಮು, ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು, ಕಾರ್ಯಾಧ್ಯಕ್ಷ ಶಾಂತಮಲ್ಲಪ್ಪ, ಚಿನ್ನಸ್ವಾಮಿ ಗೌಂಡರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next