Advertisement

 ಜಾಗೃತಿ ಮೂಡಿಸಿದ ಅನ್ನದಾತ ವಿಮೋಚನೆ

06:08 PM Aug 24, 2018 | Team Udayavani |

ರಾಜ್ಯ ಸರಕಾರ, ದ.ಕ. ಜಿ.ಪಂ., ಕೃಷಿ ಇಲಾಖೆ ಬಂಟ್ವಾಳ ವತಿಯಿಂದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ-ಸಮಗ್ರ ಕೃಷಿ ಅಭಿಯಾನ ಪ್ರಯುಕ್ತ ತಾಲೂಕಿನ ವಿವಿಧೆಡೆ ಪ್ರದರ್ಶಿಸಲಾದ “ಅನ್ನದಾತ ವಿಮೋಚನೆ’ ಎಂಬ ಕಿರು ನಾಟಕ ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ.  ರೈತರೇ ದೇಶದ ಬೆನ್ನೆಲುಬು. ಆದರೆ ಅವರೇ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ರೈತರನ್ನು ಮುಕ್ತಿಗೊಳಿಸುವುದು ಹೇಗೆ ಎನ್ನುವ ಸಂದೇಶ ಸಾರುವ ಈ ಕಿರು ನಾಟಕ ರೈತರಿಗೆ ಮಾಹಿತಿಯೊಂದಿಗೆ ಜಾಗೃತಿ ಮೂಡಿಸುವ ಮುಖ್ಯ ಉದ್ದೇಶ ಹೊಂದಿ ಯಶಸ್ವಿಯಾಯಿತು. 

Advertisement

ಕಿರು ನಾಟಕದ ವಿಶೇಷತೆಯೆಂದರೆ ಇದರಲ್ಲಿ ಅಭಿನಯಿಸಿದವರು ಹವ್ಯಾಸಿ ಅಥವಾ ವೃತ್ತಿಪರ ನಾಟಕ ಕಲಾವಿದರಲ್ಲ. ಬದಲಾಗಿ ಯಕ್ಷಗಾನ ಕಲಾವಿದರು. ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಸರಪಾಡಿ ಅಶೋಕ ಶೆಟ್ಟಿ ಅವರ ನೇತೃತ್ವದಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದರು. ಕೃಷಿ ಕ್ಷೇತ್ರದಲ್ಲಿ ಪ್ರಸ್ತುತ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಮನೋಜ್ಞವಾಗಿ ತಿಳಿಯಪಡಿಸಿ ಅದನ್ನು ಬಗೆಹರಿಸುವ ಜತೆಗೆ ಪರಿಸರ ಮಾರಕ ಮತ್ತು ಮಣ್ಣಿನ ಸತ್ವ ಹೀರುವ ರಾಸಾಯನಿಕ ಗೊಬ್ಬರಗಳನ್ನು ವಿರೋಧಿಸಿ ಪರಿಸರ ಮತ್ತು ಮಣ್ಣಿನ ಸತ್ವ ಸಂರಕ್ಷಣೆಯೊಂದಿಗೆ ಕೃಷಿ ನಡೆಸಿದರೆ ಅನ್ನದಾತನ ಸಮಸ್ಯೆಗಳಿಗೆ ವಿಮೋಚನೆ ಎಂಬ ಸಂದೇಶವನ್ನು ನಾಟಕ ಸಾರಿದೆ. 

ರೈತನೊಬ್ಬ ಕೃಷಿಯಲ್ಲಿ ಸೋತು ಸಾಲಗಳಿಂದ ಕಂಗೆಟ್ಟು, ಪತ್ನಿಯಿಂದ ದೂಷಣೆಗೊಳಪಟ್ಟು ಆತ್ಮಹತ್ಯೆಗೆ ಮುಂದಾಗುವ ಮೊದಲು ಜನಪ್ರತಿನಿಧಿಯಲ್ಲಿ ತನ್ನ ಪರಿಸ್ಥಿತಿಯನ್ನು ವಿವರಿಸಿದಾಗ ಸಾಮಾಜಿಕ, ಪರಿಸರ ಹೋರಾಟಗಾರನ ಸಲಹೆಯಂತೆ ಪರಿಸರ ಮಾರಕ ರಾಸಾಯನಿಕ ಗೊಬ್ಬರ ಬಳಸದೆ ಕೃಷಿ ಕಾರ್ಯ ನಡೆಸುವುದು. ಪ್ರಾಕೃತಿಕ ಅಸಮತೋಲನವಾಗದಂತೆ ಅರಣ್ಯ ಸಂರಕ್ಷಣೆ ಮೊದಲಾದ ಧ್ಯೇಯಗಳ ಪ್ರತಿಜ್ಞೆ ನಡೆಸುವುದರೊಂದಿಗೆ ಕೃಷಿ ವಲಯದಲ್ಲಿ ರೈತರು ಅನುಸರಿಸಬೇಕಾದ ಮಾರ್ಗ, ಸಾವಯವ ಕೃಷಿ ಪದ್ಧತಿ, ಪರಿಸರ ಮಾಹಿತಿಯೊಂದಿಗೆ ಕೃಷಿಯಿಂದ ತನ್ನ ಹಾಗೂ ದೇಶದ ಅಭಿವೃದ್ಧಿ ಎಂಬ ಸಂದೇಶ ಕಿರು ನಾಟಕದಲ್ಲಿ ಮೂಡಿ ಬಂತು. ದೇಶ ಕಾಯುವ ಯೋಧ ಮತ್ತು ನಮಗಾಗಿ ಅನ್ನ ನೀಡುವ ರೈತ ಭಾರತಾಂಬೆಯ ಕಣ್ಣುಗಳಿದ್ದಂತೆ ಅವರನ್ನು ಗೌರವಿಸಬೇಕಾದುದು ಎಲ್ಲರ ಕರ್ತವ್ಯ ಎಂದು ಈ ಕಿರು ನಾಟಕದ ಮೂಲಕ ಹೇಳಲಾಯಿತು.

ಜನಪ್ರತಿನಿಧಿಯಾಗಿ ಕಡಬ ದಿನೇಶ್‌ ರೈ, ರೈತನಾಗಿ ಕೋಡಪದವು ದಿನೇಶ, ಮಡದಿಯಾಗಿ ಸುಂದರ ಬಂಗಾಡಿ, ಬ್ಯಾಂಕ್‌ ಮ್ಯಾನೇಜರ್‌ ಆಗಿ ಶಶಿಧರ ಬಾಚಕೆರೆ, ಪರಿಸರ, ಕೃಷಿಪರ ಹೋರಾಟಗಾರನಾಗಿ ಸರಪಾಡಿ ಅಶೋಕ ಶೆಟ್ಟಿ ಪಾತ್ರ ವಹಿಸಿದ್ದರು. ಸುಧಾಕರ ಮೂಡಬಿದಿರೆ ಸಂಗೀತ ನೀಡಿದ್ದರು.

ರತ್ನದೇವ್‌ ಪುಂಜಾಲಕಟ್ಟೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next