Advertisement

ಭೋವಿ ಸಮಾಜಕ್ಕೆ ಸೌಲಭ್ಯ ದೊರಕಿಸಿ  

04:39 PM Apr 18, 2022 | Niyatha Bhat |

ಶಿವಮೊಗ್ಗ: ಸಮಾಜದಲ್ಲಿ ಈಗಲೂ ಅವಕಾಶ ವಂಚಿತವಾದ ಹಿಂದುಳಿದ ಸಮಾಜ ನಮ್ಮದು. ನಿಮ್ಮ ಶಾದಿ ಭಾಗ್ಯ, ಅನ್ನ ಭಾಗ್ಯ. ಕ್ಷೀರ ಭಾಗ್ಯದ ಜತೆಗೆ ಕಾಯಕ ಭಾಗ್ಯವನ್ನು ಒದಗಿಸಿಕೊಟ್ಟರೆ, ಅವೆಲ್ಲವನ್ನೂ ನಾವೇ ದುಡಿದು ಕಂಡುಕೊಳ್ಳುತ್ತೇವೆ. ಸರ್ಕಾರ ಈ ನಿಟ್ಟಿನಲ್ಲಿ ಹಿಂದುಳಿದ ಭೋವಿ (ವಡ್ಡರ) ಸಮಾಜಕ್ಕೆ ಆದ್ಯತೆಯ ಮೇಲೆ ರಾಜಕೀಯ ಪ್ರಾತಿನಿಧ್ಯದ ಜೊತೆಗೆ ಆರ್ಥಿಕ ಸೌಲಭ್ಯಗಳನ್ನು ಘೋಷಣೆ ಮಾಡಬೇಕು ಎಂದು ಚಿತ್ರದುರ್ಗ ಭೋವಿ ಮಹಾ ಸಂಸ್ಥಾನದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

Advertisement

ಏ. 24 ರಂದು ಶಿವಮೊಗ್ಗದಲ್ಲಿಯೇ ನಡೆಯಲಿರುವ ಜಿಲ್ಲಾ ಭೋವಿ (ವಡ್ಡರ) ಸಮಾವೇಶ ಹಾಗೂ ಭೋವಿ ಭವನದ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೈದಾನದಲ್ಲಿ ಸಮಾರಂಭದ ವೇದಿಕೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿಗಳಿಂದ ಕೂಡಿದ ಭೋವಿ ಸಮಾಜ ನಗರೋತ್ಥಾನ, ನಾಗರಿಕತೆಯ ಸಮಾಜಕ್ಕೆ ಬಂಡೆಗಳನ್ನು ಒಡೆಯುವ ಮೂಲಕ ಮಹಲುಗಳನ್ನು ಕಟ್ಟುತ್ತಾ ಬಂದಿದೆ. ಗುರುಮನೆ- ಅರಮನೆ ಕಟ್ಟಿ ಕೊಟ್ಟ ಖ್ಯಾತಿಯೂ ಈ ಸಮಾಜಕ್ಕೆ ಇದೆ. ಆದರೆ ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಈ ಸಮಾಜ ಈಗಲೂ ಹಿಂದುಳಿದಿದೆ. ಈಗ ಸರ್ಕಾರಗಳಿಂದ ನಾವು ಎಲ್ಲಾ ಕ್ಷೇತ್ರಗಳಿಂದಲೂ ಪ್ರಾತಿನಿಧ್ಯ ಬಯಸಿ ಸಮಾವೇಶ ನಡೆಸುತ್ತಿದ್ದೇವೆ ಎಂದು ಸಮಾವೇಶದ ಉದ್ದೇಶದ ಕುರಿತು ವಿವರಿಸಿದರು.

ಭೋವಿ ಸಮಾಜವನ್ನು ಸಾಂಘಿಕ ಶಕ್ತಿಯಾಗಿ ರೂಪಿಸುವ ಮೂಲಕ ಸಮಾಜದ ಹಕ್ಕನ್ನು ಪಡೆಯಲು ಹಾಗೂ ಪ್ರಜ್ಞಾವಂತ ಸಮಾಜ ನಿರ್ಮಿಸಲು ಭೋವಿ ಸಮಾಜ ಸಂಕಲ್ಪ ಮಾಡಿದೆ. ಕೇವಲ ವಿದ್ಯಾರ್ಥಿ ನಿಲಯ, ಭವನ ನಿರ್ಮಾಣ ವನ್ನು ಏ.24 ರಂದು ಉದ್ಘಾಟಿಸದೆ ಭೋವಿ ಸಮಾಜದ ಉತ್ಸವನ್ನಾಗಿ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೇವಲ ಬಂದು ಹೋಗುವ ಸಮಾವೇಶವಾಗದೆ ಜಾಗೃತಿಯ ಸಮಾವೇಶವಾಗಿ ಈ ಕಾರ್ಯಕ್ರಮ ಹೊರಹೊಮ್ಮಬೇಕಿದೆ. ಔದ್ಯೋಗಿಕ ಸವಾಲುಗಳು ನಮ್ಮ ಮುಂದೆ ಇದೆ. ಶೇ. 90 ರಷ್ಟು ಯುವಕರು ನಿರುದ್ಯೋಗಿಗಾಗಿ ಖಾಲಿ ಕೈಯಲ್ಲಿ ಕುಳಿತಿದ್ದಾರೆ. ಆ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶವೂ ಈ ಸಮಾವೇಶಕ್ಕೆ ಇದೆ ಎಂದರು.

ತಲೆ ತಲಾಂತರದಿಂದಲೂ ಬಂಡೆ ಒಡೆಯುವುದು ಭೋವಿ ಸಮಾಜದ ಕುಲ ಕಸುಬು. ಈ ಬದುಕಿನಿಂದಲೂ ಈಗ ಯುವಕರು ವಂಚಿತರಾಗಿದ್ದಾರೆ. ಇದೇ ಕಾರಣಕ್ಕೆ ನಾವೀಗ ಉದ್ಯೋಗ ಮುಖ್ಯ ಎನ್ನುತ್ತಿದ್ದೇವೆ. ಕ್ಷೀರಭಾಗ್ಯ, ಅನ್ನಭಾಗ್ಯ, ಶಾದಿ ಭಾಗ್ಯದ ಜೊತೆಗೆ ನಮ್ಮ ಭೋವಿ ಸಮಾಜಕ್ಕೆ ಕಾಯಕ ಭಾಗ್ಯ ಕೊಡಿ ಎಂಬುದು ನಮ್ಮ ಬೇಡಿಕೆಯಾಗಿದೆ. ನಮಗೆ ಕಾಯಕ ಕೊಟ್ಟರೆ ಸರ್ಕಾರಕ್ಕೆ ಬೊಕ್ಕಸವೂ ತುಂಬಲಿದೆ ಎಂದರು.

Advertisement

ಕನಿಷ್ಠ 2 ಸಾವಿರ ಕೋಟಿ ರೂ. ಕೊಡಿ

ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಈಗಾಗಲೇ ನಾಲ್ಕೈದು ವರ್ಷಗಳೇ ಕಳೆದಿವೆ. ಆ ಕಾರಣ ಕೂಡಲೇ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಬೇಕಿದೆ. ಹಾಗೆಯೇ ಪರಿಶಿಷ್ಟ ಜಾತಿಯಲ್ಲಿ 101 ಪಂಗಡಗಳಿವೆ. ಅಷ್ಟು ಜಾತಿಗಳಿಗೂ ಸೇರಿ ಒಟ್ಟು 25 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಎತ್ತಿಡಲಾಗಿದೆ. ಆದರೆ ನಮಗೆ ಇದಕ್ಕಿಂತ ಮುಖ್ಯವಾಗಿ ಜನಸಂಖ್ಯೆಗೆ ತಕ್ಕಂತೆ ಅನುದಾನ ಮೀಸಲಿಟ್ಟರೆ ಒಳ್ಳೆಯದು. ಶೇ.15 ರಷ್ಟು ಭೋವಿ ಸಮಾಜವಿದೆ. ಈ ಸಮಾಜಕ್ಕೆ ಕನಿಷ್ಠ 1 ರಿಂದ 2 ಸಾವಿರ ಕೋಟಿ ರೂ. ಅನುದಾನ ನೀಡಬೇಕು. ಹಾಗೆಯೇ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಅವೆಲ್ಲವನ್ನೂ ಸಮಾವೇಶದ ಮೂಲಕ ಒತ್ತಾಯಿಸಲಿದ್ದೇವೆ ಎಂದರು.

ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದೆ. ಈ ಕಾರಣಕ್ಕೆ ನಮ್ಮ ಸಮಾಜಕ್ಕೆ ಜಾತಿ ಪ್ರಮಾಣ ಪತ್ರಗಳು ಸರಿಯಾಗಿ ಸಿಗಬೇಕು. ಸರಿಯಾದ ಫಲಾನುಭವಿಯನ್ನು ಗುರುತಿಸಬೇಕು. ಕೆಪಿಎಸ್‌ಸಿಲ್ಲಿ ಸಮಾಜದ ಪ್ರತಿನಿಧಿ ಇರಬೇಕು ಎಂಬುದು ಸಹ ನಮ್ಮ ಬೇಡಿಕೆಯಲ್ಲೊಂದಾಗಿದೆ. ಜೊತೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಿದ್ದರಾಮೇಶ್ವರ ಅಧ್ಯಾಯನ ಪೀಠ ಆರಂಭಿಸಲು ಸರ್ಕಾರಕ್ಕೆ ಒತ್ತಾಯ ಮಾಡಲಿದ್ದೇವೆ ಎಂದರು.

ಏ.24 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೋವಿ ಭವನ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲಿದ್ದು, ಒಟ್ಟು 25 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಸ್ವಾಮೀಜಿ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎನ್‌. ರವಿಕುಮಾರ್‌, ಪಾಲಿಕೆ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್‌ ಹೊನ್ನವಿಲೆ, ಕೃಷ್ಣಪ್ಪ, ಲೋಕೇಶ್‌, ಹರ್ಷ ಭೋವಿ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next