Advertisement

ಅತಿಕಾರಿಬೆಟ್ಟು ಮಕ್ಕಳ ಗ್ರಾಮಸಭೆ

10:32 AM Nov 18, 2017 | |

ಮೂಲ್ಕಿ: ಅತಿಕಾರಿಬೆಟ್ಟು ಪಂಚಾಯತ್‌ ವ್ಯಾಪ್ತಿಯೊಳಗಿನ ಎರಡು ಮುಖ್ಯ ರಸ್ತೆಗಳ ಮಧ್ಯೆ ರೈಲು ಹಳಿ ಹಾದು ಹೋಗುತ್ತಿರುವುದರಿಂದ ಆಗುವ ತೊಂದರೆಯನ್ನು ಪರಿಗಣಿಸಿ ಮೇಲ್ಸೇತುವೆ ನಿರ್ಮಿಸಿಕೊಡಿ ಎಂದು ಶುಕ್ರವಾರ ಪಂಜಿನಡ್ಕ ಕೆ.ಪಿ.ಎಸ್‌.ಕೆ.ಸ್ಮಾರಕ ಶಾಲೆಯಲ್ಲಿ ಜರಗಿದ ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್‌ನ ಮಕ್ಕಳ ಗ್ರಾಮ ಸಭೆಯಲ್ಲಿ ಕೇಳಿಬಂದ ಆಗ್ರಹ ಎಲ್ಲರ ಗಮನ ಸೆಳೆಯಿತು.

Advertisement

ಕೊಲಕಾಡಿ ದೇವಸ್ಥಾನ ಸಮೀಪ ಹಾಗೂ ಅತಿಕಾರಿಬೆಟ್ಟು ಬಳಿಯ ಪನಿಕೆರೆ ರಸ್ತೆ ತಿರುವಿನಲ್ಲಿ ಹಳಿಗಳು ಹಾದುಹೋಗುತ್ತಿದ್ದು, ತಾಸುಗಟ್ಟಲೆ ಕಾಯಬೇಕಾಗುತ್ತದೆ. ಇಲ್ಲಿ ಅಪಘಾತಗಳೂ ಸಂಭವಿಸಿವೆ ಎಂದು ಕೆ.ಪಿ.ಎಸ್‌.ಕೆ. ವಿದ್ಯಾರ್ಥಿಗಳಾದ ಸ್ನೇಹಾ ಮತ್ತು ಶಶಿಕಿರಣ್‌ ಗಮನ ಸೆಳೆದರು.

ರೈಲು ಮೇಲ್ಸೇತುವೆ ಬಗ್ಗೆ ಬಂದಿರುವ ಪ್ರಶ್ನೆ ಅತ್ಯಂತ ಪ್ರಮುಖವಾದುದು. ಇಲ್ಲಿ ಸುಮಾರು ಅರ್ಧ ತಾಸು ಎಲ್ಲವೂ ಸ್ಥಗಿತ ಗೊಳ್ಳುತ್ತದೆ. ಇಲ್ಲಿ ಈವರೆಗೆ ದೊಡ್ಡ ಅನಾಹುತ ನಡೆದಿಲ್ಲ. ಆದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮೇಲ್ಸೇತುವೆ ಅಥವಾ ಕಿರು ರಸ್ತೆ ನಿರ್ಮಿಸಿಕೊಡಬೇಕು ಎಂದು ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪಕ್ಕದಲ್ಲಿ ಸಣ್ಣ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ರಸ್ತೆ ನಿರ್ಮಿ ‌ಲು ಸಾಧ್ಯ ಎಂದು ತಿಳಿಸಿದ್ದರೂ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಹಿರಿಯ ಸದಸ್ಯ ಮನೋಹರ್‌ ಕೋಟ್ಯಾನ್‌ ಹೇಳಿದರು. 

ಪಠ್ಯಪುಸ್ತಕ ಸಿಕ್ಕಿಲ್ಲ
ಶಾಲೆಗಳಲ್ಲಿ ಪರೀಕ್ಷೆ ನಡೆದಿದೆ. ಆದರೆ ಈ ವರೆಗೆ ಪಠ್ಯಪುಸ್ತಕ ಸಿಕ್ಕಿಲ್ಲ ಎಂಬ ದೂರಿಗೆ ಸೂಕ್ತ ಉತ್ತರ ನೀಡಲು ಅಧಿಕಾರಿಗಳು ಪರದಾಡಬೇಕಾಯಿತು.

ಪಂಜಿನಡ್ಕದಲ್ಲಿ ಕಸವನ್ನು ರಸ್ತೆ ಬದಿ ಎಸೆಯಲಾಗುತ್ತಿದ್ದು, ಕ್ರಮ ಕೈಗೊಳ್ಳಿ ಎಂದಾಗ, ‘ನಮ್ಮ ಕಸ ನಮ್ಮ ಜವಾಬ್ದಾರಿ’
ಎಂದು ಸರಕಾರವೇ ಹೇಳಿದೆ. ಸಿಕ್ಕಸಿಕ್ಕಲ್ಲಿ ಕಸ ಬಿಸಾಡುವವರಿಗೆ ತಿಳಿವಳಿಕೆ ನೀಡಿ. ಪ್ರತಿ ಮನೆಯಲ್ಲೂ ಕಸದ ಕುರಿತು ಜಾಗೃತಿ ಮೂಡಬೇಕು ಎಂಬ ಉತ್ತರ ಸಿಕ್ಕಿತು.

Advertisement

ಮಕ್ಕಳ ಹಕ್ಕುಗಳನ್ನು ಗೌರವಿಸಿ
ನಂದಾ ಪಾಯಸ್‌ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಮಕ್ಕಳ ಹಕ್ಕುಗಳನ್ನು ಹೆತ್ತವರು ಗೌರವಿಸಬೇಕು. ಮಕ್ಕಳನ್ನು ಪ್ರೀತಿ ಹಾಗೂ ಉತ್ತಮ ಸಂಸ್ಕಾರ ಕೊಟ್ಟು ಬೆಳೆಸಿ. ಅವರ ಪ್ರತಿಭೆ ಅನಾವರಣಕ್ಕೆ ಸಹಾಯ ಮಾಡಿ ಎಂದರು. ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ದೌರ್ಜನ್ಯಗಳ ಬಗ್ಗೆಯೂ ಮಾಹಿತಿ ನೀಡಿದರು.

ನಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯುವ ಅವಕಾಶ
ಅಧ್ಯಕ್ಷತೆ ವಹಿಸಿದ್ದ ಅತಿಕಾರಿ ಬೆಟ್ಟು ಸರಕಾರಿ ಹಿ.ಪ್ರಾಥಮಿಕ ಶಾಲೆಯ ನಾಯಕಿ ಸಾಕ್ಷಿ ಮಾತನಾಡಿ, ಮಕ್ಕಳ ಗ್ರಾಮ ಸಭೆಯ ಮೂಲಕ ನಮ್ಮ ಸಮಸ್ಯೆಗಳನ್ನು ಆಡಳಿತದ ಮುಂದೆ ತರಲು ಪೂರಕ ಕ್ರಮಗಳು ಆಗುತ್ತಿವೆ ಎಂದರು.

ಆಡಳಿತ ಯಂತ್ರ ಜಾಗೃತಗೊಂಡಿದೆ
ಜಿ.ಪಂ. ಸದಸ್ಯ ವಿನೋದ್‌ ಬೊಳ್ಳೂರು ಮಾತನಾಡಿ, ಮಕ್ಕಳ ಪ್ರಶ್ನೆಗಳು ಆಡಳಿತ ಯಂತ್ರವನ್ನು ಜಾಗೃತಗೊಳಿಸಿದೆ ಬಾಲ್ಯದಲ್ಲಿ ಕಾನೂನು ಮತ್ತು ಆಡಳಿತೆಯ ಬಗ್ಗೆ ಮಕ್ಕಳಿಗೆ ಇರುವ ತಿಳಿವಳಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಜಿಲ್ಲಾ ಪಂಚಾಯತ್‌ನಲ್ಲೂ ಮಕ್ಕಳ ಪ್ರಶ್ನೆಗಳನ್ನು ಪ್ರತಿಧ್ವನಿಸಲು ಪ್ರಯತ್ನಿಸುವೆ ಎಂದರು. ಕೊಲಕಾಡಿಯ ಕೆ.ಪಿಎಸ್‌.ಕೆ. ಶಾಲೆಯ ಸೂರಜ್‌ ಕಾರ್ಯಕ್ರಮ ನಿರ್ವಹಿಸಿದರು. ನಿರೀಕ್ಷಾ ಸ್ವಾಗತಿಸಿ, ದೀಕ್ಷಾ ವಂದಿಸಿದರು. 

ಅತಿಕಾರಿ ಬೆಟ್ಟು ಪಂಚಾಯತ್‌ ಅಧ್ಯಕ್ಷೆ ಶಾರದಾ ವಸಂತ್‌ ಅವರು ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡಿದರು. ಅಂಗನವಾಡಿ ಮೇಲ್ವಿಚಾರಕಿ ನಾಗರತ್ನಾ ಪ್ರಮುಖ ಮಾಹಿತಿಗಳನ್ನು ನೀಡಿದರು. ಆರೋಗ್ಯ ನಿರೀಕ್ಷಕ ಪ್ರದೀಪ್‌ ಡಿ’ ಸೋಜಾ, ಪಂಚಾಯತ್‌ ಸದಸ್ಯರಾದ ಮನೋಹರ್‌ ಕೋಟ್ಯಾನ್‌, ಕಲಾವತಿ ಮತ್ತು ದಯಾನಂದ ಕೋಟ್ಯಾನ್‌ ಉಪಸ್ಥಿತರಿದ್ದರು. ಕಾರ್ಯದರ್ಶಿ ಯೋಗೀಶ್‌ ನಾನಿಲ್‌ ನಡವಳಿಕೆಗಳನ್ನು ದಾಖಲಿಸಿಕೊಂಡರು. ಪಿಡಿಒ ಹರಿಶ್ಚಂದ್ರ ಅವರು ಪಂಚಾಯತ್‌ ಮೂಲಕ ಸಿಗಬಹುದಾದ ಪರಿಹಾರಗಳನ್ನು ತಿಳಿಸಿದರು. ಶಿಕ್ಷಣ ಇಲಾಖೆಯ ನೀತಾ ತಂತ್ರಿ, ಜಿಲ್ಲಾ ಮಕ್ಕಳ ಶಿಕ್ಷಣ ಸಮಾಲೋಚಕಿ ಪ್ರತಿಮಾ ಕೆ., ಮುಖ್ಯ ಶಿಕ್ಷಕರಾದ ಪ್ರಾಥಮಿಕ ಅಂಬರೀಶ್‌ ಮತ್ತು ಪ್ರೌಢ ಶಾಲೆಯ ನಾಗಭೂಷಣ ರಾವ್‌ ವೇದಿಕೆಯಲ್ಲಿದ್ದರು.

ಪುರುಷರಿಗೂ ಬೇಕು ಇಲಾಖೆ!
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದೆ. ಆದರೆ ಪುರುಷರಿಗೆ ಪ್ರತ್ಯೇಕ ಇಲಾಖೆ ಯಾಕಿಲ್ಲ ಎಂದು ವಿದ್ಯಾರ್ಥಿ ಸೂರಜ್‌ ಪ್ರಶ್ನಿಸಿದಾಗ ಸಭೆಯಲ್ಲಿ ಕರತಾಡನದ ಸ್ಪಂದನ ಸಿಕ್ಕಿತು. ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೇ ಹೆಚ್ಚು ಸಮಸ್ಯೆ ಇರುವುದರಿಂದ ಅವರಿಗಾಗಿ ಪ್ರತ್ಯೇಕ ಇಲಾಖೆಯನ್ನು ಆರಂಭಿಸಿರಬಹುದು ಎಂಬ ಉತ್ತರ ಸಿಕ್ಕಿತು.

ಮಕ್ಕಳ ಕಳ್ಳತನ
ಮಕ್ಕಳ ಕಳವು ಮತ್ತು ಅವರ ಮೇಲಿನ ದೌರ್ಜನ್ಯ ಬಗ್ಗೆ ಪೊಲೀಸರು ನಮಗೆ ಹೇಗೆ ಸಹಾಯ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೂಲ್ಕಿ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ ಸ್ಟೆಬಲ್‌ ಗುರುರಾಜ್‌ ಜಾಧವ್‌, ಮಕ್ಕಳು ಬುದ್ಧಿವಂತರಾಗಬೇಕು ಮತ್ತು ಅಪರಿ ಚಿತರು ಕೊಡುವ ತಿಂಡಿ ಗಳನ್ನು ಪಡೆಯಬಾರದು. ಒಬ್ಬೊಬ್ಬರಾಗಿ ರಸ್ತೆಯಲ್ಲಿ ಹೋಗಬೇಡಿ. ನಿಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ನೇರವಾಗಿ ಪೊಲೀಸರಿಗೆ ದೂರು ನೀಡಿ. ಮನೆ ಮತ್ತು ಸ್ನೇಹಿತರ ದೂರವಾಣಿ ಸಂಖ್ಯೆಯನ್ನು ಸದಾ ನೆನಪಿಟ್ಟುಕೊಳ್ಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next