Advertisement

ಅನಿಲ ಸೋರಿಕೆಯಿಂದ ಸ್ಫೋಟ: ಮಕ್ಕಳಿಗೆ ಗಾಯ

05:59 AM Feb 27, 2019 | Team Udayavani |

ಬೆಂಗಳೂರು: ವಿದ್ಯುತ್‌ ತಂತಿ ಅಳವಡಿಸುವ ಕಾಮಗಾರಿ ವೇಳೆ ಗೃಹಬಳಕೆ ಅನಿಲ ಪೂರೈಕೆಗೆ ಅಳವಡಿಸಿರುವ ಗೇಲ್‌ ಕಂಪನಿಯ ಅನಿಲ ಪೈಪ್‌ ಸ್ಫೋಟಗೊಂಡು ಅಣ್ಣ-ತಂಗಿ ಗಾಯಗೊಂಡ ಘಟನೆ ಪರಪ್ಪನ ಅಗ್ರಹಾರದ ಮುನೇಶ್ವರ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

Advertisement

ರೋಹನ್‌ (11), ಗಗನ (9) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದ ತೀವ್ರತೆಗೆ ಶ್ರೀನಿವಾಸ್‌ (42) ಎಂಬುವರ ಮನೆ ಸಂಪೂರ್ಣ ಹಾನಿಗೀಡಾಗಿದೆ ಹಾಗೂ ಎರಡು ಕಾರುಗಳು ಹಾನಿಗೀಡಾಗಿವೆ ಎಂದು ಪೊಲೀಸರು ಹೇಳಿದರು.

ಮುನೇಶ್ವರ ಲೇಔಟ್‌ನಲ್ಲಿ ಗೇಲ್‌ ಕಂಪನಿ ಅನಿಲ ಪೂರೈಕೆ ಪೈಪ್‌ಲೈನ್‌ ಅಳವಡಿಸಿದ್ದು, ಶ್ರೀನಿವಾಸ್‌ ಅನಿಲ ಸಂಪರ್ಕ ಪಡೆದಿದ್ದಾರೆ. ಇವರ ಮನೆ ಮುಂಭಾಗವೇ ಬೆಸ್ಕಾಂ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಭೂಮಿಯಲ್ಲಿ ವಿದ್ಯುತ್‌ ತಂತಿ ಅಳವಡಿಸುವಾಗ ಅನಿಲ ಪೈಪ್‌ ಒಡೆದು ಗ್ಯಾಸ್‌ ಸೋರಿಕೆಯಾಗಿದೆ. ಸೋರಿಕೆಯಾದ ಅನಿಲ ಶ್ರೀನಿವಾಸ್‌ ಅವರ ಮನೆಯ ಶೌಚಾಲಯದ ಮೂಲಕ ಇಡೀ ಮನೆ ಆವರಿಸಿದೆ.

ಗಾಬರಿಗೊಂಡ ಶ್ರೀನಿವಾಸ್‌ ಮತ್ತು ಪತ್ನಿ ಮನೆಯಿಂದ ಹೊರ ಬಂದಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಸ್ಫೋಟ ಸಂಭವಿಸಿದೆ. ಸ್ಫೋಟದ ವೇಳೆ ಸಿಡಿದ ಕೆಲ ವಸ್ತುಗಳು ತಗುಲಿ ರಸ್ತೆಯಲ್ಲಿ ಆಟವಾಡುತ್ತಿದ್ದ ರೋಹನ್‌ ಮತ್ತು ಗಗನಾ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದರು. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next