Advertisement

ಆಯುಕ್ತರ ಕಚೇರಿಯಲ್ಲಿ ಬೊಂಬೆಗಳ ಬೆಡಗು

12:46 AM Oct 01, 2019 | Team Udayavani |

ಬೆಂಗಳೂರು: ಪೊಲೀಸರ ಬೂಟು, ಲಾಠಿ ಸದ್ದು ಕೇಳಿ ಬರುತ್ತಿದ್ದ ಸ್ಥಳದಲ್ಲಿಗ ದಸರಾ ಬೊಂಬೆಗಳ ಸಂಭ್ರಮ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಆಚರಣೆ ಗರಿಗೆದರಿದ್ದರೆ, ಇತ್ತ ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿಯೂ ದಸರಾ ಕಳೆಗಟ್ಟಿದೆ. ನಗರ ಪೊಲೀಸ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಗರ ಆಯುಕ್ತರ ಕಚೇರಿ ಆವರಣದಲ್ಲಿ ದಸರಾ ಆಚರಣೆಗೆ ಚಾಲನೆ ನೀಡಲಾಗಿದೆ.

Advertisement

ಇಡೀ ಕಚೇರಿ ಆವರಣ ಮಾವಿನ ತೋರಣ, ಬಾಳೆ ಗಿಡದ ಸ್ವಾಗತ ಕಮಾನು, ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಪ್ರವೇಶ ದ್ವಾರದ ಎಡಭಾಗದಲ್ಲಿ ನಿರ್ಮಿಸಿರುವ ಸುಂದರ ವೇದಿಕೆಯಲ್ಲಿ ನಾನಾ ರೀತಿಯ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರ ವೈಯಕ್ತಿಕ ಆಸಕ್ತಿಯಿಂದ ಕಚೇರಿಯಲ್ಲಿ ದಸರಾ ವೈಭವ ಮನೆಮಾಡಿದೆ. ನಟ, ಕಲಾವಿದ ಅರುಣ್‌ ಸಾಗರ್‌ ನೇತೃತ್ವದ ತಂಡ, ಬಣ್ಣ-ಬಣ್ಣದ ವಿವಿಧ ಪುಷ್ಪಗಳಿಂದ ಅಲಂಕರಿಸಿ, ಜಗಮಗಿಸುವ ದೀಪಾಲಂಕರದೊಂದಿಗೆ ವೇದಿಕೆ ನಿರ್ಮಿಸಿದೆ.

ಅಲ್ಲದೆ, ಇಡೀ ಮೈಸೂರು ದಸರಾ ಇತಿಹಾಸ ಬಿಂಬಿಸುವ, ಜಂಬೂ ಸವಾರಿ, ಆನೆಗಳು, ಕುದುರೆಗಳು, ಅರಮನೆ, ಖಾಸಗಿ ದರ್ಬಾರ್‌, ದಶಾವತಾರದ ಬೊಂಬೆಗಳು, ಹಳ್ಳಿ ಸೊಗಡು, ಮಹಾಭಾರತ, ಮಸೀದಿ, ಮದರ್‌ ತೆರೆಸಾ, ವಿಶ್ವದ ಹಾಸ್ಯಚಕ್ರವರ್ತಿ ಚಾರ್ಲಿ ಚಾಪ್ಲಿನ್‌, ದುರ್ಗೆ, ಸರಸ್ವತಿ, ಮಹಿಷಾಸುರ, ಗೌತಮಬುದ್ಧ, ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ, ಸ್ವಾಮಿ ವಿವೇಕಾನಂದ ಸೇರಿ ಸುಮಾರು 60ಕ್ಕೂ ಹೆಚ್ಚು ಮಾದರಿಯ ನೂರಾರು ಬೊಂಬೆಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ. ಕೆಲ ಪೊಲೀಸ್‌ ಸಿಬ್ಬಂದಿ ಕೂಡ ಸ್ವಇಚ್ಛೆಯಿಂದ ಬೊಂಬೆಗಳನ್ನು ತಂದು ಪ್ರದರ್ಶನದಲ್ಲಿ ಇರಿಸಿದ್ದಾರೆ.

ಹಬ್ಬದ ದಿನಗಳು ಸೇರಿ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ಪೊಲೀಸ್‌ ಸಿಬ್ಬಂದಿಯಲ್ಲಿ ಒಬ್ಬ ಕಲಾವಿದ, ಹಾಡುಗಾರ, ನಿರ್ದೇಶಕ, ಕವಿ, ಸಾಹಿತಿ ಇದ್ದಾನೆ. ಅಂತಹ ಮನಸ್ಸುಗಳಿಗೆ ಉತ್ತೇಜನ ನೀಡಲು ಕಚೇರಿ ಆವರಣದಲ್ಲಿ ದಸರಾ ಆಚರಣೆ ಮಾಡಲಾಗಿದೆ ಎನ್ನುತ್ತಾರೆ ಪ್ರದರ್ಶನದ ಉಸ್ತುವಾರಿ ಹೊತ್ತ ಅಧಿಕಾರಿಗಳು.

ಸಾರ್ವಜನಿಕರಿಗೆ ಅಚ್ಚರಿ: ತಮ್ಮ ಸಮಸ್ಯೆಗಳನ್ನು ಹೊತ್ತು ಸೋಮವಾರ ಕಚೇರಿ ಪ್ರವೇಶಿಸುತ್ತಿದ್ದ ಸಾರ್ವಜನಿಕರು ಅಚ್ಚರಿಯಿಂದಲೇ ದಸರಾ ಬೊಂಬೆಗಳನ್ನು ವೀಕ್ಷಿಸಿದರು. ದಸರಾ ಸಂಭ್ರಮ ಕಣ್ತಂಬಿಕೊಳ್ಳಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಯಿತು. ಜತೆಗೆ ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳಿದ್ದ ಪೊಲೀಸ್‌ ಸಿಬ್ಬಂದಿ ಕೂಡ ತಮ್ಮ ಕುಟುಂಬ ಸಮೇತ ಬಂದು ಬೊಂಬೆ ಪ್ರದರ್ಶನ ವೀಕ್ಷಿಸಿದರು. ಕೆಲ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಕಂಡುಬಂತು.

Advertisement

ಈ ಕುರಿತು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ಸದಾ ಕೆಲಸದ ಒತ್ತಡದಲ್ಲಿರುವ ಪೊಲೀಸರು ಈ ನಾಡಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ದಸರಾ ಹಬ್ಬ ಮಾತ್ರವಲ್ಲ, ಸಮವಸ್ತ್ರಧಾರಿ ಯೋಧರ ಹಬ್ಬ. ಹೀಗಾಗಿ ತಮ್ಮ ಸ್ನೇಹಿತರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ನಮ್ಮ ಇತರೆ ಪೊಲೀಸ್‌ ಸಿಬ್ಬಂದಿಗೆ ಸ್ಫೂರ್ತಿ ನೀಡಿದೆ. 9ದಿನವೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next