Advertisement

Budget: ಗ್ಯಾರಂಟಿ ಕನಸಿಗೆ ಕಸರತ್ತು ಸಿದ್ದರಾಮಯ್ಯ ಸಮತೋಲನ ಬಜೆಟ್‌

10:56 PM Jul 07, 2023 | Team Udayavani |

ದಾಖಲೆಯ ಹದಿನಾಲ್ಕನೆಯ ಬಾರಿಗೆ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರೀಕ್ಷೆಯಂತೆಯೇ ಐದು ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅದರ ಜಾರಿಗಾಗಿಯೇ 52 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಪ್ರಕಟಿಸಿದ್ದಾರೆ. ಈಗಾಗಲೇ ಆಡಳಿತಾರೂಡ ಕಾಂಗ್ರೆಸ್‌ ಸರಕಾರ ಹೇಳಿಕೊಂಡಿರುವಂತೆ ಪ್ರತೀ ವರ್ಷ 1.30 ಕೋಟಿ ಕುಟುಂಬಗಳಿಗೆ ನೆರವಾಗಲಿದೆ. ನಾಲ್ಕು ಸಾರಿಗೆ ನಿಗಮಗಳ ಬಸ್‌ನಲ್ಲಿ ಮಹಿಳೆಯರಿಗೆ ಪ್ರಯಾಣಕ್ಕಾಗಿ ಇರುವ ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವ ನಿಧಿಗಳಿಗೆ ಪೂರಕವಾಗಿ ಇರುವ ಆರ್ಥಿಕ ಸಂಪನ್ಮೂಲಗಳನ್ನು ನೀಡುವುದಾಗಿಯೂ ಹೇಳಿದ್ದಾರೆ.

Advertisement

ಸಿದ್ದರಾಮಯ್ಯನವರ 14ನೇ ಬಜೆಟ್‌ ಅನ್ನು ಸೂಕ್ಷ್ಮವಾಗಿ ಅವಲೋಕಿಸುವುದಾದರೆ ಜನರಿಗೆ ನೇರವಾಗಿ ಹೊರೆಯಾಗಿದೆ ಎಂದು ಹೇಳುವಂಥ ಅಂಶಗಳು ಕಂಡುಬರುವುದಿಲ್ಲ. ಮುಖ್ಯಮಂತ್ರಿಯವರು ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿರುವಂತೆ ಖರ್ಚುಗಳನ್ನು ಮಿತಿಗೊಳಿಸಿ, ತೆರಿಗೆ ಸೋರಿಕೆ ತಡೆಗಟ್ಟಿ ವಿತ್ತೀಯ ಸಂಪನ್ಮೂಲವನ್ನು ಸಂಗ್ರಹಿಸುವ ಮೂಲಕ ವಾಗ್ಧಾನ ಮಾಡಿರುವ ಅಂಶಗಳಲ್ಲಿ ಕೊರತೆಯಾಗಿದೆ ಎಂದು ಯಾರೂ ಬೆಟ್ಟು ಮಾಡಿ ತೋರಿಸುವ ಪ್ರಯತ್ನ ಮಾಡದಂತೆ ಶ್ರಮಿಸಿದ್ದಾರೆ ಎಂದು ಹೇಳಲು ಅಡ್ಡಿ ಇಲ್ಲ.

ಹಿಂದಿನ ಸರಕಾರದ ಅವಧಿಯಲ್ಲಿ ಜಿಎಸ್‌ಡಿಪಿ 2022-23ನೇ ಸಾಲಿನಲ್ಲಿ ಶೇ.7.9, 2021-22ನೇ ಸಾಲಿನಲ್ಲಿ ಶೇ.11 ಬೆಳವಣಿಗೆ ಕಂಡಿತ್ತು ಎಂಬ ಅಂಶವನ್ನು ಕೇಂದ್ರ ಸರಕಾರದ ಸಾಂಖ್ಯಿಕ ಸಚಿವಾಲಯದ ವರದಿಯನ್ನು ಉಲ್ಲೇಖೀಸಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿ ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರಕಾರ ಪತನಗೊಂಡು ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಅನಂತರದ ವರ್ಷಗಳಲ್ಲಿನ ಕೈಗಾರಿಕೆ, ಸೇವಾ ವಲಯದಲ್ಲಿ ಸೂಕ್ತ ಸಾಧನೆ ಮಾಡಲು ವಿಫ‌ಲವಾಗಿದೆ ಎಂದು ಮುಖ್ಯಮಂತ್ರಿ ಬಜೆಟ್‌ ಭಾಷಣದಲ್ಲಿ ಉಲ್ಲೇಖೀಸಿದ್ದಾರೆ.

ಶೋಷಿತ ವರ್ಗಗಳು, ಅಲ್ಪಸಂಖ್ಯಾಕ ಸಮುದಾಯ, ಹಿಂದುಳಿದ ವರ್ಗಗಳಿಗೆ ಈ ಬಾರಿ ಹೆಚ್ಚಿನ ಅನುದಾನ ಮೀಸಲಾಗಿ ಇರಿಸಿರುವುದು ಸ್ತುತ್ಯಾರ್ಹವೇ ಆಗಿದೆ. ಎಸ್‌ಸಿಎಸ್‌/ಟಿಎಸ್‌ಪಿಗೆ 34,294 ಕೋ. ರೂ.ಗಳನ್ನು ಮೀಸಲಾಗಿ ಇರಿಸಿದ್ದಾರೆ ಸಿದ್ದರಾಮಯ್ಯ. ಪ.ಜಾ., ಪ.ವರ್ಗದ ವಿದ್ಯಾರ್ಥಿಗಳಿಗೆ ಜಗತ್ತಿನ 250ರ ಒಳಗಿನ ರ್‍ಯಾಂಕಿಂಗ್‌ನಲ್ಲಿರುವ ವಿ.ವಿ.ಗಳಲ್ಲಿ ಅಧ್ಯಯನ ನಡೆಸಲು 36 ಕೋಟಿ ರೂ. ಅನುದಾನ ನೀಡಿದ್ದಾರೆ. ಇದರಿಂದ ಈ ಸಮುದಾಯಗಳಿಗೆ ನೆರವಾಗಲಿದೆ.

ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಕೇಂದ್ರ ಸ್ಥಗಿತಗೊಳಿಸಿರುವ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಮುಂದುವರಿಸಲು 60 ಕೋಟಿ ರೂ. ಅನುದಾನ, ಕರ್ನಾಟಕ ಕ್ರಿಶ್ಚಿಯನ್‌ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ., ನನೆಗುದಿಗೆ ಬಿದ್ದಿರುವ 126 ಶಾದಿ ಮಹಲ್‌ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ 54 ಕೋಟಿ ರೂ. ನೀಡುವ ಬಗ್ಗೆ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

Advertisement

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಅಲ್ಪಾವಧಿ ಸಾಲದ ಮಿತಿಯನ್ನು 5 ಲಕ್ಷ ರೂ.ಗೆ ಏರಿಕೆ, ಮಧ್ಯಮಾವಧಿ, ದೀರ್ಘಾವಧಿ ಸಾಲದ ಮಿತಿ 15 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. 100 ಕೋಟಿ ರೂ. ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆ ಮರುಜಾರಿಯಾಗಲಿದೆ. ಗ್ಯಾರಂಟಿಗಳಿಗೆ ಹಣ ಒದಗಿಸುವ ಭರದಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರದ ಅನುದಾನ, ವಿತ್ತೀಯ ನೆರವು ಕಡಿಮೆಯಾಗಬಹುದು ಎಂಬ ಶಂಕೆಗೆ ತೆರೆ ಎಳೆದಿರುವ ಮುಖ್ಯಮಂತ್ರಿ, ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯ ಕಾಲೇಜು ಸ್ಥಾಪನೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಕಲಬುರಗಿಯ ವೈದ್ಯ ಕಾಲೇಜಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ತಾಯಿ-ಮಗು ಆಸ್ಪತ್ರೆ ಸ್ಥಾಪನೆ, ಮೈಸೂರು, ಕಲಬುರಗಿ, ಬೆಳಗಾವಿ ಜಿಲ್ಲೆಗಳಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಇರುವಷ್ಟು ನೆರವು ಕೊಟ್ಟಿದ್ದಾರೆ.

ರಾಜಧಾನಿ ಬೆಂಗಳೂರಿನ ವರ್ಚಸ್ಸು ವೃದ್ಧಿ ಮಾಡುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಸದ್ಯ 70 ಕಿ.ಮೀ. ದೂರ ಇರುವ ಮೆಟ್ರೋ ರೈಲು ಜಾಲವನ್ನು 176 ಕಿ.ಮೀ.ಗೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಘೋಷಿಸಿದ್ದಾರೆ. ಮೂರನೇ ಹಂತದಲ್ಲಿ ಹೆಬ್ಟಾಳದಿಂದ ಸರ್ಜಾಪುರ ವರೆಗೆ ಮೆಟ್ರೋ ಕಾಮಗಾರಿಗಾಗಿ 37 ಕಿ.ಮೀ. ಉದ್ದದ ಯೋಜನೆಗೆ 15 ಸಾವಿರ ಕೋಟಿ ರೂ. ಪ್ರಸ್ತಾವನೆ ಮಂಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಬಜೆಟ್‌ ಎಲ್ಲ ನಿರೀಕ್ಷೆಗಳನ್ನು ಮೀರಿದೆ ಮತ್ತು “ಸರ್ವ ಜನಾಂಗದ ಶಾಂತಿಯ ತೋಟ’ ಕರ್ನಾಟಕ ಎಂಬ ಕವಿವಾಣಿಯ ಆಶಯದ ಸಾಕಾರಕ್ಕೆ ಇನ್ನಷ್ಟು ಇಂಬು ಕೊಡುವ ಪ್ರಯತ್ನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next