Advertisement
ಸಿದ್ದರಾಮಯ್ಯನವರ 14ನೇ ಬಜೆಟ್ ಅನ್ನು ಸೂಕ್ಷ್ಮವಾಗಿ ಅವಲೋಕಿಸುವುದಾದರೆ ಜನರಿಗೆ ನೇರವಾಗಿ ಹೊರೆಯಾಗಿದೆ ಎಂದು ಹೇಳುವಂಥ ಅಂಶಗಳು ಕಂಡುಬರುವುದಿಲ್ಲ. ಮುಖ್ಯಮಂತ್ರಿಯವರು ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿರುವಂತೆ ಖರ್ಚುಗಳನ್ನು ಮಿತಿಗೊಳಿಸಿ, ತೆರಿಗೆ ಸೋರಿಕೆ ತಡೆಗಟ್ಟಿ ವಿತ್ತೀಯ ಸಂಪನ್ಮೂಲವನ್ನು ಸಂಗ್ರಹಿಸುವ ಮೂಲಕ ವಾಗ್ಧಾನ ಮಾಡಿರುವ ಅಂಶಗಳಲ್ಲಿ ಕೊರತೆಯಾಗಿದೆ ಎಂದು ಯಾರೂ ಬೆಟ್ಟು ಮಾಡಿ ತೋರಿಸುವ ಪ್ರಯತ್ನ ಮಾಡದಂತೆ ಶ್ರಮಿಸಿದ್ದಾರೆ ಎಂದು ಹೇಳಲು ಅಡ್ಡಿ ಇಲ್ಲ.
Related Articles
Advertisement
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಅಲ್ಪಾವಧಿ ಸಾಲದ ಮಿತಿಯನ್ನು 5 ಲಕ್ಷ ರೂ.ಗೆ ಏರಿಕೆ, ಮಧ್ಯಮಾವಧಿ, ದೀರ್ಘಾವಧಿ ಸಾಲದ ಮಿತಿ 15 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. 100 ಕೋಟಿ ರೂ. ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆ ಮರುಜಾರಿಯಾಗಲಿದೆ. ಗ್ಯಾರಂಟಿಗಳಿಗೆ ಹಣ ಒದಗಿಸುವ ಭರದಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರದ ಅನುದಾನ, ವಿತ್ತೀಯ ನೆರವು ಕಡಿಮೆಯಾಗಬಹುದು ಎಂಬ ಶಂಕೆಗೆ ತೆರೆ ಎಳೆದಿರುವ ಮುಖ್ಯಮಂತ್ರಿ, ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯ ಕಾಲೇಜು ಸ್ಥಾಪನೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಕಲಬುರಗಿಯ ವೈದ್ಯ ಕಾಲೇಜಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ತಾಯಿ-ಮಗು ಆಸ್ಪತ್ರೆ ಸ್ಥಾಪನೆ, ಮೈಸೂರು, ಕಲಬುರಗಿ, ಬೆಳಗಾವಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಇರುವಷ್ಟು ನೆರವು ಕೊಟ್ಟಿದ್ದಾರೆ.
ರಾಜಧಾನಿ ಬೆಂಗಳೂರಿನ ವರ್ಚಸ್ಸು ವೃದ್ಧಿ ಮಾಡುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಸದ್ಯ 70 ಕಿ.ಮೀ. ದೂರ ಇರುವ ಮೆಟ್ರೋ ರೈಲು ಜಾಲವನ್ನು 176 ಕಿ.ಮೀ.ಗೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಘೋಷಿಸಿದ್ದಾರೆ. ಮೂರನೇ ಹಂತದಲ್ಲಿ ಹೆಬ್ಟಾಳದಿಂದ ಸರ್ಜಾಪುರ ವರೆಗೆ ಮೆಟ್ರೋ ಕಾಮಗಾರಿಗಾಗಿ 37 ಕಿ.ಮೀ. ಉದ್ದದ ಯೋಜನೆಗೆ 15 ಸಾವಿರ ಕೋಟಿ ರೂ. ಪ್ರಸ್ತಾವನೆ ಮಂಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಬಜೆಟ್ ಎಲ್ಲ ನಿರೀಕ್ಷೆಗಳನ್ನು ಮೀರಿದೆ ಮತ್ತು “ಸರ್ವ ಜನಾಂಗದ ಶಾಂತಿಯ ತೋಟ’ ಕರ್ನಾಟಕ ಎಂಬ ಕವಿವಾಣಿಯ ಆಶಯದ ಸಾಕಾರಕ್ಕೆ ಇನ್ನಷ್ಟು ಇಂಬು ಕೊಡುವ ಪ್ರಯತ್ನ ಮಾಡಿದ್ದಾರೆ.