Advertisement

Grant: 15ನೇ ಹಣಕಾಸು ಆಯೋಗ ಅನುದಾನದಡಿ ರಾಜ್ಯಕ್ಕೆ 2,637 ಕೋ. ರೂ.

12:35 AM Oct 01, 2024 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ 15ನೇ ಹಣಕಾಸು ಆಯೋಗದ ಅನುದಾನದಡಿ 2,637 ಕೋಟಿ ರೂ. ನಿಗದಿಪಡಿಸಿದ್ದು, ಈ ಪೈಕಿ 2,241.45 ಕೋಟಿ ರೂ. (ಶೇ. 85)ಗಳನ್ನು ಗ್ರಾಮ ಪಂಚಾಯತ್‌ಗೆ, 263.70 ಕೋಟಿ ರೂ. (ಶೇ. 10)ಗಳನ್ನು ತಾಲೂಕು ಪಂಚಾಯತ್‌ಗಳಿಗೆ ಹಾಗೂ 131.85 ಕೋಟಿ ರೂ. (ಶೇ. 5)ಗಳನ್ನು ಜಿ.ಪಂ.ಗಳಿಗೆ ನಿಗದಿಪಡಿಸಿದೆ.

Advertisement

ಈ ಅನುದಾನ ಬಳಕೆ ಬಗ್ಗೆ ಷರತ್ತು ವಿಧಿಸಿರುವ ಆಯೋಗವು, ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿದೆ. ಅಷ್ಟೇ ಅಲ್ಲದೆ, ಅನುದಾನ ಬಳಕೆಗೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಪ್ರಮಾಣಪತ್ರ (ಯುಸಿ) ಸಲ್ಲಿಸುವಂತೆಯೂ ಕಟ್ಟಪ್ಪಣೆ ಮಾಡಿದೆ.

ಶೇ. 60 ನಿರ್ಬಂಧಿತ ಅನುದಾನ
ಪ್ರತೀ ಗ್ರಾಮ ಪಂಚಾಯತ್‌ಗಳು 2,241.45 ಕೋಟಿ ರೂ.ಗಳಲ್ಲಿ ಶೇ. 60ರಷ್ಟು ನಿರ್ಬಂಧಿತ ಅನುದಾನವಾಗಿರಲಿದ್ದು ಶೇ. 40 ಮೂಲ ಅನುದಾನವಾಗಿರಲಿದೆ. ಮೂಲ ಅನುದಾನವನ್ನು ಯಾವುದೇ ಕಾರಣಕ್ಕೂ ಪಂಚಾಯತ್‌ ಸಿಬಂದಿಯ ವೇತನ ಪಾವತಿ ಅಥವಾ ಕಚೇರಿಯ ಇತರ ವೆಚ್ಚಗಳಿಗೆ ಬಳಸುವಂತಿಲ್ಲ. ನಿರ್ಬಂಧಿತ ಅನುದಾನವನ್ನು ಗ್ರಾಮಾಂತರ ಪ್ರದೇಶದ ನೈರ್ಮಲೀಕರಣ ಸೇವೆ ಉತ್ತಮಗೊಳಿಸುವಿಕೆ, ಬಯಲು ಬಹಿರ್ದೆಸೆಮುಕ್ತ ಸ್ಥಿತಿಯ ಸುಸ್ಥಿರತೆ ಕಾಯ್ದುಕೊಳ್ಳುವಿಕೆ, ನೀರು ಸರಬ ರಾಜು, ಮಳೆ ನೀರು ಕೊಯ್ಲು, ನೀರು ಮರುಬಳಕೆ ಸೇರಿ ಇನ್ನಿತರ ಕಾಮಗಾರಿಗಳಿಗೆ ಬಳಸಬಹುದು ಎಂದು ಆಯೋಗ ಸೂಚಿಸಿದೆ.

ಒಂದು ವೇಳೆ ಮಳೆ ನೀರು ಕೊಯ್ಲುನಂತಹ ಯೋಜನೆಗಳು ಅನುಷ್ಠಾನಗೊಂಡಿದ್ದರೆ, ಆ ಅನುದಾನವನ್ನು ನಿಗದಿತ ಮಾರ್ಗಸೂಚಿಯಡಿ ಬೇರೆ ಕಾಮಗಾರಿಗೆ ಬಳಸಬಹುದು. ಲಭ್ಯ ಅನುದಾನದಡಿ ಶೇ. 5ರಷ್ಟನ್ನು ವಿಶೇಷಚೇತನರಿಗೆ ಸಂಬಂಧಿಸಿದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದು ವೈಯಕ್ತಿಕ ಸವಲತ್ತು ನೀಡುವಂತಿಲ್ಲ ಎಂದು ಷರತ್ತು ವಿಧಿಸಿದೆ.

ಯಾವುದಕ್ಕೆ ಬಳಕೆ?
ವಿದ್ಯುತ್‌ ಬಿಲ್‌ ಕಡಿಮೆ ಮಾಡಲು ಸೌರ ವಿದ್ಯುತ್‌ ಅಳವಡಿಸಲು ಮೂಲ ಅನುದಾನ ಬಳಸಿಕೊಳ್ಳಬಹುದು.
* ಕೃಷಿ, ತೋಟಗಾರಿಕೆ, ರೇಷ್ಮೆ ಬಳೆಗಳ ಉತ್ಪಾದನೆ ಹೆಚ್ಚಿಸಬಹುದಾದ ಸರಕಾರಿ ಕಾರ್ಯಕ್ರಮಗಳಿಗೆ ಉಪಯೋಗಿಸಬಹುದು.
* ಬಡತನ ನಿರ್ಮೂಲನೆಗಾಗಿ ಎನ್‌ಆರ್‌ಎಲ್‌ಎಂ ಮತ್ತು ಸಂಜೀವಿನಿ ಯೋಜನೆ ಜತೆಗೆ ಸೇರಿಸಿ ಅನುಷ್ಠಾನ ಮಾಡಬಹುದು.
* ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ, ಮತ್ತೆ ಶಾಲೆಗೆ ಸೇರಿಸುವ ಕಾರ್ಯ, ಗ್ರಂಥಾಲಯ, ವಾಚನಾಲಯಗಳ ನಿರ್ವಹಣೆ. ಸರಕಾರಿ ಶಾಲೆ, ಅಂಗನವಾಡಿ ಶೌಚಾಲಯ ನಿರ್ಮಾಣ.
* ಆರೋಗ್ಯ ಇಲಾಖೆಯ ಪಿಎಚ್‌ಸಿ, ಸಿಎಚ್‌ಸಿ, ಉಪಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬಹುದು.
* ಸಾಂಕ್ರಾಮಿಕ ರೋಗ ತಡೆ, ಪಶು ವೈದ್ಯ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿ ಇತ್ಯಾದಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next