ಕೆಂಗೇರಿ: “ಪರಿಸರವನ್ನು ಸಂರಕ್ಷಣೆ ಮಾಡಬೇಕಿದ್ದ ಸರ್ಕಾರ, ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ ಧೋರಣೆ ತಳೆದಿದ್ದಾರೆ. ಹೀಗಾಗಿ ಪರಿಸರ ಸಮಸ್ಯೆಗಳು ಹೆಚ್ಚಾಗಿ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ,” ಎಂದು ಪತ್ರಕರ್ತ ಹಾಗೂ ಪರಿಸರವಾದಿ ನಾಗೇಶ್ ಹೆಗ್ಡೆ ಕಳವಳ ವ್ಯಕ್ತಪಡಿಸಿದ್ದಾರೆ.
“ನಾಗರಿಕ ಸಂಘರ್ಷ ಸಮಿತಿ’, “ಹಿರಿಯ ನಾಗರಿಕ ವೇದಿಕೆ’ ಹಾಗೂ ಕೆಂಗೇರಿ ಉಪನಗರದ ಸುತ್ತಮುತ್ತಲಿನ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಕೆಂಗೇರಿ ಉಪನಗರದ ಹೊಸಕೆರೆ ಉಳಿಸಿ’ ಜಾಥಾ ಹಾಗೂ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಪರಿಸರದ ಸಂರಕ್ಷಣೆ ಆಗದಿದ್ದರೆ ಮುಂದೆ ಎದುರಾಗಬಹುದಾದ ಎಲ್ಲ ಸಮಸ್ಯೆಗಳಿಗೆ ನಾವೆಲ್ಲರೂ ಹೊಣೆಗಾರರಾಗಬೇಕಾ ಗುತ್ತದೆ.
ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸುವುದು ನಾಗರಿಕರ ಜವಾಬ್ದಾರಿ. ನಮ್ಮ ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡಿರುವ ಕೆರೆಕುಂಟೆಗಳನ್ನು ಉಳಿಸಿ ಅಭಿವೃದ್ಧಿಪಡಿಸಿ ಅಂತರ್ಜಲ ಹೆಚ್ಚಿಸುವ ಕೆಲಸಕ್ಕೆ ಜನತೆ ಕೈಹಾಕಬೇಕು,”ಎಂದು ಮನವಿ ಮಾಡಿದರು.
ನಾಗರಿಕ ಸಂಘರ್ಷ ವೇದಿಕೆಯ ಡಾ.ವಿಷ್ಣುಸಭಾಹಿತ್ ಮಾತನಾಡಿ “ಹೆಚ್ಚಿನ ನೀರು ಸಂಗ್ರಹವಾಗುತ್ತಿದ ಹೊಸಕೆರೆಹಳ್ಳಿ ಕೆರೆ ಇಂದು ಪೂರ್ಣಪ್ರಮಾಣದಲ್ಲಿ ಬತ್ತಿಹೋಗಿದೆ. ಹೀಗಾಗಿ ಸುತ್ತಮುತ್ತಲ ಅಂರ್ಜಲ ಮಟ್ಟ ಕುಸಿದಿದೆ. ಅಧಿಕಾರಿಗಳು ಇನ್ನು 15 ದಿನಗಳಲ್ಲಿ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಕೆರೆ ಅಭಿವೃದ್ಧಿಪಡಿಸುವುಂತೆ ಆಗ್ರಹಿ ಹೋರಾಟಗಾರರು ಬಿಡಿಎ ಹಾಗೂ ಬಿ.ಡಬ್ಲೂ.ಎಸ್ಎಸ್ಬಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪಾಲಿಕೆ ನಾಮನಿರ್ದೇಶಿತ ಸದಸ್ಯ ಜಿ.ವಿ.ಸುರೇಶ್, ತಾ.ಪಂ.ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ, ಕಾಂಗ್ರೆಸ್ನ ಮುಖಂಡ ರವಿರಬ್ಬಣ್ಣ, ಸತೀಶ್, ಪ್ರಭಾಕರ್,
ಅನುಪಮಾ ಪಂಚಾಕ್ಷರಿ, ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಯರಾಂ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರೊ.ಫಾರೂಕ್ ಪಾಷಾ ಹಾಗೂ ನೂರಾರು ಸಂಖ್ಯೆಯ ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗಹಿಸಿದ್ದರು.