Advertisement

ಪಶ್ಚಿಮಘಟ್ಟ ಪ್ರದೇಶಾಭಿವೃದ್ಧಿಗೆ ಪ್ರಾಧಿಕಾರ ಸ್ಥಾಪಿಸಿ

11:10 PM Jul 03, 2019 | Lakshmi GovindaRaj |

ಬೆಂಗಳೂರು: ಪಶ್ಚಿಮಘಟ್ಟಗಳು ಮತ್ತು ಅದರ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರ ಸಮಗ್ರ ಅಭಿವೃದ್ದಿಗಾಗಿ ಹೈದರಾಬಾದ್‌-ಕರ್ನಾಟಕ ಮಾದರಿಯಲ್ಲಿ ಸಂವಿಧಾನದ ಕಲಂ 371 (ಜೆ) ಅಡಿ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

Advertisement

ಒಂದು ಪ್ರದೇಶದ ಸಂರಕ್ಷಣೆ ಜತೆಗೆ ಸ್ಥಳೀಯ ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರುವುದು ಕೂಡ ಮುಖ್ಯ. ಇದಕ್ಕಾಗಿ ಸ್ಥಳೀಯರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೈದರಾಬಾದ್‌-ಕರ್ನಾಟಕ ಪ್ರದೇಶಾಭಿವೃದ್ಧಿ ಮಾದರಿಯಲ್ಲಿ “ಪಶ್ಚಿಮಘಟ್ಟ ಪ್ರದೇಶಾಭಿವೃದ್ಧಿ ಪ್ರಾಧಿಕಾರ’ ಸ್ಥಾಪಿಸಬೇಕು. ಅಲ್ಲದೆ, ಕಲಂ 371 (ಜೆ) ಅಡಿ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು.

ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಕಾರ್ಯಪಡೆಯ ಅಧ್ಯಯನ ಮತ್ತು ಶಿಫಾರಸುಗಳ ಅಂತಿಮ ವರದಿ ತಿಳಿಸಿದೆ. ಕುದುರೆಮುಖದಲ್ಲಿ ಪರಿಸರ ವಿವಿ: ಇದಲ್ಲದೆ, ಹೇರಳ ಅರಣ್ಯ ಸಂಪತ್ತನ್ನು ಒಳಗೊಂಡಿರುವ ಕುದುರೆಮುಖದಲ್ಲಿ ಅರಣ್ಯ ಮತ್ತು ಪರಿಸರ ಸಂಶೋಧನಾ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದೂ ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಹೇಳಿದೆ.

ಈಗಾಗಲೇ ಅಲ್ಲಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ನಿರ್ಮಿಸಿರುವ ಕಟ್ಟಡ ಇದೆ. ಇದನ್ನು ತೆರವುಗೊಳಿಸಲು ನ್ಯಾಯಾಲಯ ಸೂಚಿಸಿದೆ. ಆದರೆ, ಈ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು, ಅಲ್ಲಿ ಸಂಶೋಧನಾ ವಿವಿ ಸ್ಥಾಪಿಸಬೇಕು. ಇದರಿಂದಾಗಿ ಇಲ್ಲಿನ ಸಸ್ಯ, ಪ್ರಾಣಿ-ಪಕ್ಷಿ ಪ್ರಭೇದಗಳ ಬಗ್ಗೆ ಅರಿಯಲು ಅನುಕೂಲ ಆಗುತ್ತದೆ.

ಅಷ್ಟೇ ಅಲ್ಲ, ಭವಿಷ್ಯದಲ್ಲಿ ಈ ಪ್ರದೇಶವು ರಾಷ್ಟ್ರಮಟ್ಟದಲ್ಲಿ ಕೇಂದ್ರ ಬಿಂದು ಆಗಲಿದೆ. ಇದಕ್ಕೆ ಅನುಮತಿ ದೊರೆಯದಿದ್ದರೆ ಶಿವಮೊಗ್ಗ ಅಥವಾ ಚಿಕ್ಕಮಗಳೂರು ಅಥವಾ ಉತ್ತರ ಕನ್ನಡ ಜಿಲ್ಲೆಗಳ ಯಾವುದಾದರೂ ರಾಷ್ಟ್ರೀಯ ಉದ್ಯಾನವಲ್ಲದ ಕಾಯ್ದಿಟ್ಟ ಪ್ರದೇಶದಲ್ಲಿ ಉದ್ದೇಶಿತ ವಿವಿ ಸ್ಥಾಪಿಸಬೇಕು ಎಂದು ಸಲಹೆ ಮಾಡಿದೆ.

Advertisement

ಪರಿಸರ ಪ್ರವಾಸೋದ್ಯಮಕ್ಕೆ ವಿಶೇಷ ನೀತಿ ರೂಪಿಸಬೇಕು. ಅದರಡಿ ವಾಹನ ಸಂಚಾರವನ್ನು ನಿಯಂತ್ರಿಸಲು ತನಿಖಾಠಾಣೆ ಸ್ಥಾಪಿಸಿ, ಆಗಮನ-ನಿರ್ಗಮನಕ್ಕೆ ಸೂಕ್ತ ಸಮಯ ನಿಗದಿಪಡಿಸಬೇಕು. ನಿಗದಿತ ಸಮಯ ಮೀರಿ ಬರುವ ವಾಹನಗಳನ್ನು ತಡೆದು, ತಿರುಪತಿ ಮಾದರಿಯಲ್ಲಿ ದಂಡ ವಿಧಿಸುವ ವ್ಯವಸ್ಥೆ ಜಾರಿಗೊಳಿಸಬೇಕು.

ಚಿಣ್ಣರ ದರ್ಶನಕ್ಕೆ ಪ್ರೋತ್ಸಾಹ ನೀಡಬೇಕು. ಕೋರ್‌ ಏರಿಯಾದಲ್ಲಿ ವಾಹನಗಳನ್ನು ಬಿಡಬಾರದು. ಜತೆಗೆ, ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಜೆಸಿಬಿ, ಹಿಟ್ಯಾಚಿ, ಬೋರ್‌ವೆಲ್‌ ಡ್ರಿಲ್ಲರ್‌ಗಳಂತಹ ಬೃಹತ್‌ ಯಂತ್ರೋಪಕರಣಗಳಿಗೆ ಮತ್ತು ಅರಣ್ಯ ಇಲಾಖೆಯ ಎಲ್ಲ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್‌ ಅಳವಡಿಸಬೇಕು.

ಆಯಾ ಕಾರ್ಯವ್ಯಾಪ್ತಿಯ ಅರಣ್ಯಾಧಿಕಾರಿಗಳ ನಿರಕ್ಷೇಪಣಾ ಪತ್ರ ಪಡೆದು, ಕಾಮಗಾರಿಗಳನ್ನು ನಿರ್ಮಿಸಲು ಕಡ್ಡಾಯಗೊಳಿಸುವ ನಿಯಮ ರೂಪಿಸಬೇಕು. ಪಶ್ಚಿಮಘಟ್ಟಗಳಲ್ಲಿ ಕಾಮಗಾರಿ ವೇಳೆ ನಡೆಯುವ ಮರಗಳ ಕಡಿತಲೆಯ ವಿಡಿಯೋ ಚಿತ್ರೀಕರಣ ಕಡ್ಡಾಯಗೊಳಿಸಬೇಕು.

ಗುತ್ತಿಗೆದಾರರು ಗಮನಕ್ಕೆ ತರದೆ, ಮರಗಳ ಮಾರಣಹೋಮ ಮಾಡಿದ್ದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಟಿಂಬರ್‌, ರೆಸಾರ್ಟ್‌, ಮರಳು, ಕ್ರಷರ್‌ ಮಾಫಿಯಾಗಳನ್ನು ಹತ್ತಿಕ್ಕುವ ಅವಶ್ಯಕತೆ ಇದೆ. ಈ ಅಕ್ರಮಗಳ ಮೇಲೆ ವಿಶೇಷ ನಿಗಾ ಇಡಬೇಕಿದೆ ಎಂದು ಕಾರ್ಯಪಡೆ ಹೇಳಿದೆ.

ವರದಿ ಸ್ವೀಕರಿಸಿ ಮಾತನಾಡಿದ ಅರಣ್ಯ ಸಚಿವ ಸತೀಶ ಜಾರಕಿಹೊಳಿ, “ಉತ್ತಮ ವರದಿಯನ್ನು ಕಾರ್ಯಪಡೆ ಸಲ್ಲಿಸಿದೆ. ಇದನ್ನು ಪರಿಶೀಲಿಸಿ, ಅರಣ್ಯ ರಕ್ಷಣೆಗೆ ಪೂರಕವಾಗಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದರು.

ಈ ವೇಳೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್‌ ಮಿಶ್ರಾ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್‌ಸಿಂಗ್‌ ಮತ್ತಿತರರು ಇದ್ದರು.

ಮಹಶೀರ್‌ಗೆ “ರಾಜ್ಯ ಮೀನು’ ಗರಿ?: ಅಳಿವಿನಂಚಿನಲ್ಲಿರುವ ಮಹಶೀರ್‌ ಮೀನನ್ನು “ರಾಜ್ಯ ಮೀನು’ ಎಂದು ಘೋಷಿಸುವಂತೆ ಪಶ್ಚಿಮಘಟ್ಟ ಕಾರ್ಯಪಡೆ ಶಿಫಾರಸು ಮಾಡಿದೆ. ಕಾವೇರಿ ನದಿ ಪಾತ್ರದಲ್ಲಿ ಕಂಡು ಬರುವ “ಮಹಶೀರ್‌ ಮೀನು’ ರಾಜ್ಯದ್ದಾಗಿದೆ. ಆದರೆ, ಇತ್ತೀಚೆಗೆ ಇದು ಅಳಿವಿನಂಚಿನಲ್ಲಿರುವುದು ಕಂಡು ಬಂದಿದೆ. ಅದರ ರಕ್ಷಣೆಗಾಗಿ “ರಾಜ್ಯ ಮೀನು’ ಎಂದು ಘೋಷಿಸುವಂತೆ ಕಾರ್ಯಪಡೆ ಸಲಹೆ ಮಾಡಿದೆ.

ಅದೇ ರೀತಿ, ರಾಜ್ಯದಲ್ಲಿ ಯಥೇತ್ಛವಾಗಿರುವ ಜೇನು ನೊಣಗಳನ್ನು “ರಾಜ್ಯ ಕೀಟ’ ಎಂದು ಘೋಷಿಸಿ, ಜೇನು ಸಾಕಾಣಿಕೆಯನ್ನು ಪ್ರೋತ್ಸಾಹಿಸಬೇಕು. ಅಲ್ಲದೆ, ಕಡಲತೀರಗಳಲ್ಲಿ ಕಾಂಡ್ಲಾ ಅವಳಿಗಳ ನೆಡುತೋಪು ನಿರ್ಮಿಸಿ, ಸ್ವಾಭಾವಿಕವಾಗಿ ಕಂಡು ಬರುವ ಕಡಲಾಮೆ, ನವಿಲು ಮುಂತಾದ ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನಗಳನ್ನಾಗಿ ಪರಿವರ್ತಿಸಬೇಕು ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next