Advertisement

ಇತರೆ ಎಂದು ನಮೂದಿಸಿ ದಂಡ ಸಂಗ್ರಹ

12:56 PM Sep 27, 2018 | Team Udayavani |

ಬೆಂಗಳೂರು: ದಂಡ ಸಂಗ್ರಹವಷ್ಟೇ ನಮ್ಮ ಕೆಲಸ. ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುವುದಲ್ಲ! ಇದು ಬೆಂಗಳೂರು ಜಲಮಂಡಳಿಯ ಧೋರಣೆ. ಏಕೆಂದರೆ ಮಳೆ ನೀರು ಕೊಯ್ಲು ವಿಧಾನ ಅಳವಡಿಸಿಕೊಳ್ಳದ ಕಟ್ಟಡದಾರರಿಂದ ಜಲಮಂಡಳಿಯು ದಂಡ ಸಂಗ್ರಹಿಸುತ್ತಿದೆ. ಆದರೆ ಈ ಕಾರಣಕ್ಕಾಗಿಯೇ ದಂಡ ವಿಧಿಸಲಾಗುತ್ತಿದೆ ಎಂಬುದಾಗಿ ಸ್ಪಷ್ಟವಾಗಿ ಮಾಸಿಕ ನೀರು ಬಳಕೆ ರಸೀದಿಯಲ್ಲಿ ನಮೂದಿಸದ ಕಾರಣ ಬಳಕೆದಾರರಲ್ಲಿ ಜಾಗೃತಿ ಮೂಡಿಲ್ಲ. ಈ ಕಾರಣದಿಂದ ಜಲಮಂಡಳಿಯು ದಂಡ ರೂಪದಲ್ಲಿ ಮಾಸಿಕ 2 ಕೋಟಿ ರೂ. ಆದಾಯ ಪಡೆಯುತ್ತಿದೆ. ಆದರೆ ಮಳೆ ನೀರನ್ನು ಸಂಗ್ರಹಿಸಿ ಭೂಮಿಯ ಅಂತರ್ಜಲಕ್ಕೆ ಮರುಪೂರಣ ಮಾಡುವ ಕಾರ್ಯಕ್ಕೆ ಜನರನ್ನು ಪ್ರೇರೇಪಿಸುವ ಕೆಲಸ ಆಗದಂತಾಗಿದೆ. ಹೀಗಾಗಿ ಅಂತರ್ಜಲ ವೃದ್ಧಿಯ ಉದ್ದೇಶವೇ ಇಲ್ಲದಂತಾಗಿದೆ.

Advertisement

ರಾಜಧಾನಿಯಲ್ಲಿ ಅಂತರ್ಜಲ ಪ್ರಮಾಣ ಇಳಿಮುಖವಾಗಿರುವ ಕಾರಣ, ಆಯ್ದ ನಿವೇಶನದಲ್ಲಿನ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ ಕಡ್ಡಾಯಗೊಳಿಸಿ ಸರ್ಕಾರ 2009ರಲ್ಲಿ ಕಾಯ್ದೆ ಜಾರಿಗೊಳಿಸಿತ್ತು. ಕಾಯ್ದೆ ಜಾರಿಯಾಗಿ 8 ವರ್ಷ ಕಳೆದರೂ ಪದ್ಧತಿ ಅಳವಡಿಕೆಗೆ ಸ್ಪಂಧನೆ ದೊರೆತಿಲ್ಲ. ಆ ಹಿನ್ನೆಲೆಯಲ್ಲಿ 2017ರ ಫೆಬ್ರವರಿಯಲ್ಲಿ ದಂಡ ಪ್ರಯೋಗಕ್ಕೆ ಸರ್ಕಾರ ನಿರ್ಧರಿಸಿತು. ಅದರಂತೆ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳದ ಕಟ್ಟಡಗಳನ್ನು ಪಟ್ಟಿ ಮಾಡಿದ ಜಲಮಂಡಳಿಯು ಆ ಕಟ್ಟಡಗಳ ನೀರು ಬಳಕೆ ಶುಲ್ಕದ ಜತೆಗೆ ದಂಡವನ್ನು ಸೇರಿಸಿ ವಸೂಲಿ ಮಾಡು ವ್ಯವಸ್ಥೆ ಜಾರಿಗೊಳಿಸಿದೆ.

ಹೀಗಾಗಿ ಬಿಲ್‌ನಲ್ಲಿ ದಂಡ ಮೊತ್ತವು “ಇತರೆ’ ಎಂದು ನಮೂದಾಗಿದೆ. ಆದರೆ, ಮಳೆ ನೀರು ಅಳವಡಿಸಿಕೊಳ್ಳದಿರುವುದಕ್ಕೆ ದಂಡ ಎಂದು ನಮೂದಾಗಿಲ್ಲ ಎಂಬುದು ಗ್ರಾಹಕರ ಆರೋಪ. ದಂಡ ಶೀರ್ಷಿಕೆ ಇಲ್ಲ: ಬಿಲ್‌ನಲ್ಲಿ ಇತರೆ ಎಂಬ ಕಾಲಂನಲ್ಲಿ ಸ್ವಾಧೀನಾನುಭವ ಪತ್ರ (ಒ.ಸಿ) ಹೊಂದಿರದಿದ್ದವರಿಗೆ ಹಾಗೂ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳದವರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ ರಸೀದಿಯಲ್ಲಿ ಇತರೆ ಎಂದಷ್ಟೇ ಉಲ್ಲೇಖೀಸಲಾಗಿದೆ. ಇನ್ನು ಬಿಲ್‌ನ ಅಂಚಿನಲ್ಲಿ ಇಂಗ್ಲಿಷ್‌ ಅಕ್ಷರಗಳಲ್ಲಿ ಚಿಕ್ಕದಾಗಿ “ಲೇವಿ ಚಾರ್ಜ್‌’ ಎಂದು ನಮೂದಿಸಲಾಗಿದೆ. ಇದರಿಂದಾಗಿ ಕಟ್ಟಡದಾರರಿಗೆ ತಾವು ಯಾವ ಕಾರಣಕ್ಕೆ ದಂಡ ಪಾವತಿಸುತ್ತಿದ್ದೇವೆ ಎಂಬುದೇ ಇಳಿಯದಾಗಿದೆ.

“ಇತರೆ’ ಎಂದು ನಮೂದಿಸುವ ಬದಲು ದಂಡ ಮತ್ತು ಅದು ಯಾವ ಕಾರಣಕ್ಕೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿದರೆ ಜನರಿಗೆ ಅನುಕೂಲ ಎನ್ನುತ್ತಾರೆ ಕೆ.ಆರ್‌.ಪುರ ನಿವಾಸಿ ನಾರಾಯಣಸ್ವಾಮಿ. ಈ ಕುರಿತು ಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬಿಲ್‌ ಸಿದ್ಧ ಮಾದರಿಯಾಗಿದ್ದು, ಹಾಗಾಗಿಯೇ ಕೆಳ ಭಾಗದಲ್ಲಿ ನಮೂದಿಸಲಾಗಿದೆ ಎನ್ನುತ್ತಾರೆ. ಆದರೆ, ಪ್ರತಿ ತಿಂಗಳು ಸುಮಾರು ಎರಡು ಕೋಟಿ ರೂ. ಆದಾಯ ದಂಡಲ್ಲಿಯೇ ಬಂದರೂ ಬಿಲ್‌ನಲ್ಲಿ ಹೊಸ ಕಾಲಂ ಸೇರಿಸಲು ಕಷ್ಟವಾಗುತ್ತದೆ ಎಂದು ಸಮಜಾಯಿಷಿ ನೀಡುತ್ತಾರೆ.

20 ಸಾವಿರ ಮನೆಗಳಿಗೆ ದಂಡ ವಿನಾಯ್ತಿ: ಕಳೆದ ಜುಲೈನಲ್ಲಿ 97,686 ಕಟ್ಟಡಗಳು ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳದೇ ದಂಡ ಪಾವತಿಸಿದ್ದವು. ಹಳೆಯ ಕಟ್ಟಡವೆಂಬುದು ಖಾತರಿಯಾದ ಹಿನ್ನೆಲೆಯಲ್ಲಿ 20 ಸಾವಿರ ಕಟ್ಟಡಗಳನ್ನು ದಂಡ ವ್ಯಾಪ್ತಿಯಿಂದ ಕೈಬಿಡಲಾಗಿದೆ. ಸದ್ಯ 75,042 ಕಟ್ಟಡಗಳಿಂದ ದಂಡ ಸಂಗ್ರಹಿಸಲಾಗುತ್ತಿದೆ. ನಿಯಮಾನುಸಾರ 2007ಕ್ಕೂ ಮೊದಲು 30ಗಿ40 ಚ. ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಾಣಗೊಂಡ ಕಟ್ಟಡಗಳಿವೆ ವಿನಾಯ್ತಿ ಇದೆ. ಆದರೆ ಇಂತಹ ಕಟ್ಟಡಗಳನ್ನು ಗುರುತಿಸುವುದು ಸವಾಲಾಗಿದ್ದರಿಂದ ದಂಡ ವಿಧಿಸುತ್ತಿತ್ತು. 

Advertisement

ಎರಡು ತಿಂಗಳಿನಿಂದೀಚೆಗೆ ಮಾಲೀಕರು ತಮ್ಮ ಕಟ್ಟಡ 2007ಕ್ಕೂ ಮೊದಲೇ ನಿರ್ಮಾಣವಾಗಿತ್ತು ಎಂಬುದಕ್ಕೆ ಪೂರಕ ದಾಖಲೆ ಸಲ್ಲಿಸಿದ ಹಿನ್ನೆಲೆಯಲ್ಲಿ 20,000 ಕಟ್ಟಡಗಳನ್ನು ದಂಡ ವ್ಯಾಪ್ತಿಯಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ನೀರು ಕೊಯ್ಲು ಸುಲಭ ಪ್ರತಿ ತಿಂಗಳು ಬಿಲ್‌ನ ಅರ್ಧದಷ್ಟು ದಂಡ ಪಾವತಿಸುವುದಕ್ಕಿಂತ ಕಟ್ಟಡಕ್ಕೆ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವುದು ಸುಲಭವಾಗಿದ್ದು, ಎರಡು ಸರಳ ಮಾದರಿಗಳಿವೆ. ಮನೆಯ ತಾರಸಿಯಲ್ಲಿ ಸಂಗ್ರಹವಾಗುವ ಮಳೆ ನೀರು ಸಂಪ್‌ಗೆ ಹರಿಯುವಂತೆ ಕೊಳವೆ ಅಳವಡಿಸುವುದು. ಜತೆಗೆ ನೀರಿನ ಶುದ್ಧತೆ ಕಾಪಾಡಲು ಫಿಲ್ಟರ್‌ ಅಳವಡಿಸಿಕೊಳ್ಳುವುದು ಅಥವಾ
ನೇರವಾಗಿ ಅಂತರ್ಜಲ ಸೇರುವಂತೆ ಇಂಗುಗುಂಡಿ ನಿರ್ಮಿಸಿ ಕೊಳವೆ ಸಂಪರ್ಕ ಕಲ್ಪಿಸುವ ಮಾದರಿಗಳಿವೆ.

ದಂಡ ಪ್ರಮಾಣ ಹೇಗೆ?
ಗೃಹ ಬಳಕೆ ಸಂಪರ್ಕಕ್ಕೆ ನೀರು ಬಳಕೆ ಶುಲ್ಕದ ಶೇ.50ರಷ್ಟು ಹಾಗೂ ಗೃಹೇತರ ಸಂಪರ್ಕಕ್ಕೆ ನೀರು ಬಳಕೆ ಶುಲ್ಕದ ಶೇ.100ರಷ್ಟು ದಂಡ ವಿಧಿಸಲಾಗುತ್ತಿದೆ. ಆ ಮೂಲಕ ಪ್ರತಿ ತಿಂಗಳು ದಂಡದ ರೂಪದಲ್ಲಿ ಮಂಡಳಿಗೆ ಕೋಟ್ಯಂತರ ರೂ.ಆದಾಯ ಸಂಗ್ರಹವಾಗುತ್ತಿದೆ. ಕಳೆದ ಆಗಸ್ಟ್‌ನಲ್ಲಿ 2.45 ಕೋಟಿ ರೂ. ದಂಡ ವಿಧಿಸಲಾಗಿದ್ದು, 2017ರ ಫೆಬ್ರವರಿಯಿಂದ ಈವರೆಗೆ ದಂಡ ರೂಪದಲ್ಲಿ 35 ಕೋಟಿ ರೂ. ಸಂಗ್ರಹವಾಗಿದೆ.

ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಲಿ ಎಂಬ ಕಾರಣಕ್ಕೆ ದಂಡ ವಿಧಿಸಲಾಗುತ್ತಿದೆ. ಆದರೆ ಈ ಬಗ್ಗೆ ರಸೀದಿಯಲ್ಲಿ ಸ್ಪಷ್ಟವಾಗಿ ನಮೂದಾಗಿಲ್ಲ ಎಂಬುದು ಗಮನಕ್ಕೆ ಬಂದಿರಲಿಲ್ಲ. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಬಿಲ್‌ನಲ್ಲಿ ದಂಡದ ಕಾಲಂ ನಮೂದಿಸಲು ಕ್ರಮ ಕೈಗೊಳ್ಳಲಾಗುವುದು. 
ತುಷಾರ್‌ ಗಿರಿನಾಥ್‌, ಜಲಮಂಡಳಿ ಅಧ್ಯಕ್ಷ

ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳದಿರುವುದಕ್ಕೆ ದಂಡ ಎಂದು ಬಿಲ್‌ನಲ್ಲಿ ನಮೂದಿಸಿಲ್ಲ. ಹೀಗಾಗಿ ಜನರಿಗೆ ಯಾವ ಕಾರಣಕ್ಕೆ ದಂಡ ಎಂಬುದು ತಿಳಿಯುತ್ತಿಲ್ಲ. ನಮೂದಿಸಿದಾಗ ಮಾತ್ರ ದಂಡ ಪಾವತಿಯಿಂದ ವಿನಾಯ್ತಿ ಪಡೆಯಲು ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುತ್ತಾರೆ.
 ಚಂದ್ರಮೌಳಿ,  ಜಲಮಂಡಳಿ ಗುತ್ತಿಗೆದಾರ

Advertisement

Udayavani is now on Telegram. Click here to join our channel and stay updated with the latest news.

Next