Advertisement

ತುರ್ತುಪರಿಸ್ಥಿತಿ ಜೈಲುವಾಸಿಗಳಿಗೆ ಸಿಗಲಿದೆ ಪಿಂಚಣಿ

11:56 PM Feb 18, 2020 | mahesh |

ಉಡುಪಿ: ತುರ್ತುಪರಿಸ್ಥಿತಿಯಲ್ಲಿ (1975-77) ಜೈಲುವಾಸ ಅನುಭವಿಸಿದವರಿಗೆ ರಾಜ್ಯದಲ್ಲೂ ಪಿಂಚಣಿ ಸಿಗುವ ಸಾಧ್ಯತೆ ಇದೆ. ಇಂದಿರಾ ಗಾಂಧಿಯವರು 1975ರ ಜೂ. 26ರಂದು ಘೋಷಿಸಿದ ತುರ್ತುಪರಿಸ್ಥಿತಿ 1977ರ ಜ. 18ರಂದು ಚುನಾವಣೆ ಘೋಷಣೆ ಮಾಡಿದಾಗ ತಹಬಂದಿಗೆ ಬಂದಿತಾದರೂ ಅಧಿಕೃತವಾಗಿ ಮುಕ್ತಾಯಗೊಂಡದ್ದು 1977ರ ಮಾ.23 ರಂದು. ಕಳೆದ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ತುರ್ತುಪರಿಸ್ಥಿತಿ ಜೈಲುವಾಸಿಗಳಿಗೆ ಪಿಂಚಣಿ ಕೊಡುವುದಾಗಿ ಹೇಳಿತ್ತು. ಹಾಗಾಗಿ ಪ್ರಸ್ತಾವನೆಗೆ ಜೀವ ಬಂದಿದೆ.

Advertisement

ಇದಕ್ಕಾಗಿ ದೇಶ ಮಟ್ಟದಲ್ಲಿ ಲೋಕ ತಂತ್ರ ಸೇನಾನಿ ಸಂಘ/ ಲೋಕತಂತ್ರ ಸೇನಾನಿ ಕ್ರಿಯಾ ಸಮಿತಿ ಕಾರ್ಯಾಚರಿಸುತ್ತಿದೆ. ಕರ್ನಾಟಕದಲ್ಲೂ ಇರುವ ಇದರ ರಾಜ್ಯ ಸಮಿತಿಯವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಕೊಟ್ಟಾಗ “ಸದ್ಯ ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರ ಕೊಡುವುದು ಮೊದಲ ಕರ್ತವ್ಯ. ಬಳಿಕ ಪರಿಶೀಲಿಸೋಣ’ ಎಂದಿದ್ದರು. ಇದೇ ಬಜೆಟ್‌ನಲ್ಲಿ ಇದಕ್ಕೆ ಹಣಕಾಸು ಒದಗಿಸುವ ಸಾಧ್ಯತೆ ಇದೆ. ಉಡುಪಿಯಲ್ಲಿ 20, ದ.ಕ.ದಲ್ಲಿ 154 ಮಂದಿ ತುರ್ತುಪರಿಸ್ಥಿತಿ ಮುಗಿದು 43 ವರ್ಷಗಳು ಸಂದ ಕಾರಣ ಜೈಲಿಗೆ ಹೋದವರ ಪಟ್ಟಿ ತಯಾರಿಸುವುದೇ ಕಷ್ಟದ ಕೆಲಸವಾಗಿತ್ತು. ಅಂತಿಮ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯಿಂದ 20 ಮತ್ತು ದ.ಕ. ಜಿಲ್ಲೆಯಿಂದ 154 ಹೆಸರು ಸೇರಿವೆ. ರಾಜ್ಯದಲ್ಲಿ ಸುಮಾರು 4,500 ಮಂದಿಯ ಹೆಸರುಗಳಣ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಇನ್ನಷ್ಟು ಹೆಸರುಗಳು ಸೇರಬಹುದು. ಒಂದು ಬಾರಿ ಜನರಿಗೆ ಗೊತ್ತಾದರೆ ಮತ್ತೆ ಹೆಸರು ಕೊಡಬಹುದು. ವಿಜಯಪುರ ಜಿಲ್ಲೆಯಿಂದ 300, ಬಾಗಲಕೋಟೆ ಜಿಲ್ಲೆಯಿಂದ 400, ದೊಡ್ಡಬಳ್ಳಾಪುರ ಒಂದು ತಾಲೂಕಿನಿಂದಲೇ 120 ಜನರ ಹೆಸರು ಸಿಕ್ಕಿದೆ ಎನ್ನುತ್ತಾರೆ ರಾಜ್ಯ ಸಂಘದ ಅಧ್ಯಕ್ಷ ಮಂಜುನಾಥ ಸ್ವಾಮಿಯವರು.

ಹಲವರು ಈಗಿಲ್ಲ
ರಾಜ್ಯದಲ್ಲಿ ಸುಮಾರು 9,000 ಜನರು ಜೈಲುವಾಸ ಅನುಭವಿಸಿದ್ದರು. ಅವರಲ್ಲಿ ಅರ್ಧಾಂಶ ಜನರು ನಿಧನ ಹೊಂದಿದ್ದರೆ, ಉಳಿದವರು ಒಂದೂರಿನಿಂದ ಇನ್ನೊಂದೂರಿಗೆ ಹೋಗಿದ್ದಾರೆ. ಉಡುಪಿಯ
ಡಾ| ವಿ.ಎಸ್‌. ಆಚಾರ್ಯ, ಅಮ್ಮುಂಜೆ ಲಕ್ಷ್ಮೀಕಾಂತ ನಾಯಕ್‌ ಈಗಾಗಲೇ, ದ.ಕ. ಜಿಲ್ಲೆಯ ಅಚ್ಯುತ ನಲ್ಲೂರಾಯ, ಗೋವಿಂದ ಭಟ್‌, ಎ.ಎಲ್‌.ಎನ್‌. ಶೆಣೈ ಮೊದಲಾದವರು ಇತ್ತೀಚೆಗೆ ನಿಧನ ಹೊಂದಿದ್ದು ಈಗ ಇರುವವರು ಕೆಲವೇ ಮಂದಿ. ಪಟ್ಟಿ ತಯಾರಿಸುವಾಗ ಕೆಲವರು “ನಮಗೆ ಪಿಂಚಣಿ ಬೇಡ. ನಾವು ಅನ್ಯಾಯ, ಅಸತ್ಯದ ವಿರುದ್ಧ ಹೋರಾಡಿದ್ದು’ ಎಂದು ಹೇಳಿದ್ದಾರೆ. “ನಿಮಗೆ ಬೇಡವಾದರೆ ಅಗತ್ಯವುಳ್ಳವರಿಗೆ ಈ ಹಣ ಕೊಡಿ’ ಎಂದು ಸಮಿತಿಯವರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಪಿಂಚಣಿ ಯೋಜನೆ ಪ್ರಸ್ತಾವ ದಲ್ಲಿರುವಾಗಲೇ ಕಮ್ಯುನಿಸ್ಟ್‌ ಆಡಳಿತವಿರುವ ಕೇರಳದಲ್ಲೂ ಇಂಥದ್ದೇ ಪ್ರಸ್ತಾವವಿದೆ. ಆದರೆ ಅದು ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದಿದ್ದು, ಕೇರಳದಲ್ಲಿ ಜೈಲುವಾಸ ಅನುಭವಿಸಿದವರು ಮೃತಪಟ್ಟಿದ್ದರೆ ಪತಿ/ಪತ್ನಿಗೆ ಪಿಂಚಣಿ ಸಿಗುವ ಪ್ರಸ್ತಾವನೆ ಇದೆ.

ಮುಲಾಯಂರಿಂದ ಆರಂಭ, ಪಿಣರಾಯಿ ಪ್ರಸ್ತಾವ
ತುರ್ತುಪರಿಸ್ಥಿತಿಯ ಜೈಲುವಾಸಿಗಳಿಗೆ ಪಿಂಚಣಿ ಪ್ರಸ್ತಾವ ಕೇಳಿಬರುತ್ತಲೇ ಇದು ಆರೆಸ್ಸೆಸ್‌, ಬಿಜೆಪಿಯವರ ಪ್ರಯತ್ನ ಎಂಬ ಚಿತ್ರಣ ಕಣ್ಣೆದುರು ಬರುವುದು ಸಹಜ. ಆದರೆ ಇದನ್ನು ಆರಂಭಿಸಿದ್ದೇ ಆರೆಸ್ಸೆಸ್‌, ಬಿಜೆಪಿಯ ಕಟ್ಟಾ ವಿರೋಧಿಯಾಗಿದ್ದ ಮುಲಾಯಂ ಸಿಂಗ್‌ ಯಾದವ್‌; 2005ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದರು. ಆಗ ಆರಂಭಿಕ ಪಿಂಚಣಿ ಮೊತ್ತ ಮಾಸಿಕ 10,000 ರೂ. ಅನಂತರ ಅವರ ಮಗ ಇದನ್ನು ಏರಿಸಿದರು. ಈಗ 12,000 ರೂ. ಸಿಗುತ್ತಿದೆ. ಬಳಿಕ ಮಧ್ಯಪ್ರದೇಶ, ಝಾರ್ಖಂಡ್‌, ರಾಜಸ್ಥಾನ, ಹಿಮಾಚಲಪ್ರದೇಶ, ಬಿಹಾರ, ಪಂಜಾಬ್‌, ಛತ್ತೀಸ್‌ಗಢ, ಉತ್ತರಾಂಚಲ, ಮಹಾರಾಷ್ಟ್ರ ಮೊದಲಾದ 13 ರಾಜ್ಯಗಳಲ್ಲಿ ಆರಂಭಗೊಂಡಿತು. ಇತ್ತೀಚಿಗೆ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಸರಕಾರ ಬದಲಾದಾಗ ಪಿಂಚಣಿ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಛತ್ತೀಸ್‌ಗಢದಲ್ಲಿ 25,000 ರೂ., ಗುಜರಾತಿನಲ್ಲಿ 12,000 ರೂ., ಬಿಹಾರ, ಝಾರ್ಖಂಡ್‌ನ‌ಲ್ಲಿ 5,000 ರೂ., ಮಹಾರಾಷ್ಟ್ರದಲ್ಲಿ 10,000 ರೂ. ದೊರೆಯುತ್ತಿದೆ. ಕರ್ನಾಟಕದಲ್ಲಿ ಕನಿಷ್ಠ 10,000 ರೂ. ಪಿಂಚಣಿ ನೀಡಲು ಬೇಡಿಕೆ ಸಲ್ಲಿಸಲಾಗಿದೆ.

Advertisement

ತುರ್ತುಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಎಲ್ಲರಿಗೂ ಪಿಂಚಣಿ ಸಿಗಬೇಕು. ಅವರಿಗೆಲ್ಲ ಈಗ 60 ವರ್ಷ ದಾಟಿದೆ. ಎಷ್ಟೋ ಜನರಿಗೆ ವೃದ್ಧಾಪ್ಯದಲ್ಲಿ ಔಷಧಕ್ಕೂ ಹಣವಿಲ್ಲ. ಅಂತಹ ಅರ್ಹರಿಗೆ ಸಿಗಲೇಬೇಕು. ನಾವು ಪಟ್ಟಿ ಸಲ್ಲಿಸಿದ್ದೇವೆ. ಆಗ ಜೈಲುವಾಸ ಅನುಭವಿಸಿದವರ ತಂಡವನ್ನು ಸರಕಾರ ರಚಿಸಿ ಆ ಸಮಿತಿ ಪಿಂಚಣಿಗೆ ಅರ್ಹರಾದವರ ಹೆಸರುಗಳನ್ನು ಶಿಫಾರಸು ಮಾಡಬಹುದು ಎಂದು ಸಲಹೆ ಕೊಟ್ಟಿದ್ದೇವೆ.
– ಮಂಜುನಾಥಸ್ವಾಮಿ, ಅಧ್ಯಕ್ಷರು, ಕರ್ನಾಟಕ ಲೋಕತಂತ್ರ ಸೇನಾನಿ ಸಂಘ, ಬೆಂಗಳೂರು

ನಾವು ಜಿಲ್ಲಾವಾರು ಮಾಹಿತಿ ಕೊಟ್ಟಿದ್ದೇವೆ. ಕೆಲವರು ಪಿಂಚಣಿಗಾಗಿ ಹೋರಾಟ ಮಾಡಿದ್ದಲ್ಲ, ಪಿಂಚಣಿ ಬೇಡವೆನ್ನುತ್ತಿದ್ದಾರೆ. ಬೇಡವಾದವರು ಯಾರಿಗೂ ದಾನ ಕೊಡಬಹುದು. ಕಷ್ಟದಲ್ಲಿರುವವರಿಗೆ ಪಿಂಚಣಿ ಸಿಗಬೇಕೆಂಬುದು ನಮ್ಮ ಆಶಯ.
– ನಾರಾಯಣ ಗಟ್ಟಿ, ರಾಜ್ಯ ಉಪಾಧ್ಯಕ್ಷರು, ಮಂಗಳೂರು,
– ಚಂದ್ರಶೇಖರ್‌, ಜಿಲ್ಲಾ ಕಾರ್ಯದರ್ಶಿ, ಉಡುಪಿ, ಲೋಕತಂತ್ರ ಸೇನಾನಿ ಸಂಘ

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next