Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹನ್ನೊಂದಂಶ ಹೊಸ ಯೋಜನೆ

01:20 PM Feb 23, 2018 | Team Udayavani |

ಹುಣಸೂರು: ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಮುಂಜಾನೆ ಮಿಸ್ಡ್ ಕಾಲ್‌, ರಾತ್ರಿ ಊಟ, ಟೀವಿ ಚಾಲನ್‌,ರೇಡಿಯೋ ಮೂಲಕವೂ ಪಾಠ, ವಿದ್ಯಾರ್ಥಿಗಳ ದತ್ತು, ರಸಪ್ರಶ್ನೆ, ಓಪನ್‌ ಎಗ್ಸಾಮ್‌ ಹೀಗೆ ಹನ್ನೊಂದಂಶದ ಕಾರ್ಯಕ್ರಮ ಆಯೋಜಿಸುವ ಮೂಲಕ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನಕ್ಕೇರಲು ಉತ್ಸುಕತೆಯಿಂದ ತಾಲೂಕು ಶಿಕ್ಷಣ ಇಲಾಖೆ ಮುಂದಡಿ ಇಟ್ಟಿದೆ.

Advertisement

ಯೋಜನೆ ಏನು: ಶಿಕ್ಷಕರಿಗೆ ತರಬೇತಿ, ವಿಷಯ ತಜ್ಞರಿಂದ ಮಾದರಿ ಪ್ರಶ್ನೆಪತ್ರಿಕೆಗಳ ಬುಕ್‌ಲೆಟ್‌ ತಯಾರಿಸಲಾಗಿದೆ. ವಿಶೇಷ ತರಗತಿಗಳು, ಓಪನ್‌ಎಗ್ಸಾಮ್‌, ವಿಶ್ವಾಸ ಕಿರಣ, ರಸಪ್ರಶ್ನೆ, ಮನೆ-ಮನೆ ಭೇಟಿ, ವಿದ್ಯಾರ್ಥಿಗಳ ದತ್ತು, ಪ್ರಾರ್ಥನೆ ವೇಳೆ ಮಾಹಿತಿ, ಚಾನಲ್‌-ರೇಡಿಯೋ ಮೂಲಕ ಮಾಹಿತಿ ನೀಡುವ ವಿನೂತನ ಯೋಜನೆ ರೂಪಿಸಿದೆ.

ವಿಶ್ವಾಸ ಕಿರಣ: ಮೊದಲು ತಾಲೂಕಿನ 63 ಶಾಲೆಗಳ ಕಲಿಕೆಯಲ್ಲಿ ಹಿಂದುಳಿದಿರುವ 1100 ವಿದ್ಯಾರ್ಥಿಗಳನ್ನು ಗುರುತಿಸಿದ್ದು, ಈ ಮಕ್ಕಳಿಗೆ ನಿತ್ಯ ಒಂದುಗಂಟೆ ಹೆಚ್ಚುವರಿ ತರಗತಿ ನಡೆಸಲಾಗುತ್ತಿದೆ. ಅಲ್ಲದೆ ಅತೀ ಹಿಂದುಳಿದ 380 ವಿದ್ಯಾರ್ಥಿಗಳಿಗೆ ಈಗಾಗಲೇ ಪ್ರತಿ ಭಾನುವಾರ ನುರಿತ ಶಿಕ್ಷಕರಿಂದ ವಿಶೇಷ ತರಗತಿ ನಡೆಸಲಾಗಿದೆ.

ಮಾದರಿ ಪ್ರಶ್ನೆಪತ್ರಿಕೆ: ವಿಷಯವಾರು ಶಿಕ್ಷಕರಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಕೊಡಿಸಿ, ಆನಂತರ ಆಯ್ದ ಶಿಕ್ಷಕರನ್ನೊಳಗೊಂಡು ವಿಷಯವಾರು ಮಾದರಿ ಪ್ರಶ್ನೆಪತ್ರಿಕೆ ತಯಾರಿಸಿ ಪ್ರತಿಶಾಲೆಗೆ ವಿತರಿಸಲಾಗಿದೆ, ಈ ಪ್ರಶ್ನೆಪತ್ರಿಕೆಯನ್ನು ಸತತ ಅಭ್ಯಾಸ ಮಾಡಿದಲ್ಲಿ ಖಂಡಿತಾ ತೇರ್ಗಡೆ ಹೊಂದುವುದರಲ್ಲಿ ಅನುಮಾನವಿಲ್ಲ.

ಓಪನ್‌ ಎಗ್ಸಾಮ್‌: ವಿದ್ಯಾರ್ಥಿಗಳಲ್ಲಿ ಓದಿನ ನೆನಪು ಇರುವಂತೆ ಪುಸ್ತಕ ನೋಡಿ ಉತ್ತರ ಬರೆಯುವ ಓಪನ್‌ಎಗ್ಸಾಮ್‌ ಮಾದರಿಯನ್ನು ಸಹ ಮಾಡಿಸಲಾಗುತ್ತಿದೆ, ಇದರಿಂದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮನೋಭಾವ ಬೆಳೆಯಲಿದೆ. ಈಗಾಗಲೇ ಜಿಲ್ಲಾ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆ ನಡೆಸಿದ್ದು, ಇದರಲ್ಲಿ ಶೇ.85 ಫ‌ಲಿತಾಂಶ ಬಂದಿದೆ. ಇದರ ಆಧಾರದ ಮೇಲೆ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು.

Advertisement

ರಸ ಪ್ರಶ್ನೆ: ಶಾಲೆಯಲ್ಲಿ ಪ್ರತಿ ಶನಿವಾರ ರಸಪ್ರಶ್ನೆ ಸ್ಪರ್ಧೆ ನಡೆಯುವುದು, ಅಲ್ಲದೆ ನಿತ್ಯದ ಪ್ರಾರ್ಥನೆ ವೇಳೆ ಎರಡರಿಂದ ಹತ್ತು ವಿಷಯವಾರು ಪ್ರಶ್ನೆಯನ್ನು ವಿದ್ಯಾರ್ಥಿಗಳೇ ಕೇಳಿ ಉತ್ತರ ಪಡೆಯುವುದರಿಂದ ಸಾಕಷ್ಟು ಪ್ರಭಾವ ಬೀರಲಿದೆ.

ಮನೆ-ಮನೆ ಭೇಟಿ: ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಯನ್ನು ಶಿಕ್ಷಕರು ದತ್ತು ತೆಗೆದುಕೊಳ್ಳುವುದು, ಅವರ ಓದಿನ ಮೇಲೆ ನಿಗಾ ಇಡಲು ಮನೆಗೆ ಭೇಟಿ ಕೊಡುವುದು, ಮಿಸ್ಡ್ಕಾಲ್‌ ನೀಡುವುದು. ರಾತ್ರಿ-ಮುಂಜಾನೆ ಓದುವಂತೆ ಪ್ರೇರೇಪಿಸಲು ಬಾಲಕರಿಗೆ ಶಾಲೆಯಲ್ಲೇ ಊಟ ಸಹಿತ ಅವಕಾಶ ಕಲ್ಪಿಸುವುದು ಯೋಜನೆ ಉದ್ದೇಶ.

ಸಂವಾದ: ಪ್ರತಿ ಶಾಲೆಯಲ್ಲೂ ಪೋಷಕರ ಸಭೆ ನಡೆಸಿ ಮಕ್ಕಳ ಪ್ರಗತಿಯನ್ನು ಪರಾಮರ್ಶಿಸಿ ಸಲಹೆ ನೀಡಿರುವುದಲ್ಲದೆ, ತಾವೇ ಎಲ್ಲ ಶಾಲೆಗಳಿಗೂ ತೆರಳಿ ಮಕ್ಕಳೊಂದಿಗೆ ಸಂವಾದ ನಡೆಸಿ ಶಿಕ್ಷಣದ ಮಹತ್ವವನ್ನು ತಿಳಿಸಿ, ಅವರಲ್ಲಿ ವಿಶ್ವಾಸ ಮೂಡಿಸಿ ಪರೀಕ್ಷೆಗೆ ಸನ್ನದ್ಧರನ್ನಾಗಿಸುವುದಾಗಿದೆ.

ಚಾನಲ್‌ ಮೂಲಕ ಪಾಠ: ನುರಿತ ಶಿಕ್ಷಕರಿಂದ ಇಂಗ್ಲಿಷ್‌, ಗಣಿತ,ವಿಜಾnನ ವಿಷಯಗಳ ರೆಕಾರ್ಡಿಂಗ್‌ ಮಾಡಿಸಿ, ನಗರದ ಇ-ಚಾನಲ್‌ ಮೂಲಕ ಮಾರ್ಚ್‌ 22ರ ವರೆಗೆ  ನಿತ್ಯ ರಾತ್ರಿ 7 ರಿಂದ 8ರ ವರೆಗೆ ಬಿತ್ತರಿಸಲಾಗುವುದು. ಅಲ್ಲದೆ ನಿತ್ಯ ಮಧ್ಯಾಹ್ನ 2.30ರಿಂದ3.05ರವರೆಗಿನ ರೇಡಿಯೋ ಮೂಲಕ ಪಾಠವನ್ನೂ ಕೇಳಿಸಲು ಕ್ರಮವಹಿಸಲಾಗಿದೆ.

ಸಿ.ಸಿ.ಕ್ಯಾಮರಾ ಕಣ್ಗಾವಲು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ. 23 ರಿಂದ ಏ. 6 ವರೆಗೆ ನಡೆಯಲಿದ್ದು, 32 ಸರಕಾರಿ ಶಾಲೆಗಳ 2558, ಅನುದಾನಿತ 429 ಹಾಗೂ ಖಾಸಗಿ ಶಾಲೆಗಳ 823 ಸೇರಿದಂತೆ ಒಟ್ಟಾರೆ 3810 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಎಲ್ಲ ಪರೀûಾ ಕೇಂದ್ರಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗುವುದು.

ಕಳೆದ ಸಾಲಿನಲ್ಲಿ ಶೇ 76.91 ಫ‌ಲಿತಾಂಶ ಗಳಿಸಿ ಜಿಲ್ಲೆಗೆ ಮೂರನೇ ಹಾಗೂ ರಾಜ್ಯಕ್ಕೆ 79 ನೇ ಸ್ಥಾನಗಳಿಸಿತ್ತು. ಈ ಬಾರಿ ಮೊದಲ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡು ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಇಒ ರೇವಣ್ಣ “ಉದಯವಾಣಿಗೆ’ ಮಾಹಿತಿ ನೀಡಿದರು.

* ಸಂಪತ್‌ಕುಮಾರ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next