Advertisement

Chikkamagaluru: ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

06:02 PM Oct 28, 2024 | Team Udayavani |

ಚಿಕ್ಕಮಗಳೂರು: ಮನುಷ್ಯರಂತೆ ಮೂಖ ಪ್ರಾಣಿಗಳಲ್ಲೂ ಭಾವನೆಗಳಿವೆ. ಅವು ಕಷ್ಟ, ಸುಖ, ದುಃಖಗಳಲ್ಲಿ ಒಂದಾಗುತ್ತವೆ. ತಮ್ಮ ಮೂಕ ಭಾಷೆಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ ಎನ್ನುವುದನ್ನು ಕೇಳಿದ್ದೇವೆ. ಕೆಲವೊಂದು ಸಂದರ್ಭಗಳಲ್ಲಿ ನೋಡಿದ್ದೇವೆ. ಮನೆಯಲ್ಲಿ ಪ್ರೀತಿಯಿಂದ ಸಾಕಿದ ನಾಯಿ ಮನೆಯಲ್ಲಿನ ಸದಸ್ಯರ ಸಾವು ಸಂಭವಿಸಿದಾಗ ಅವುಗಳು ಮೂಕವೇದನೆಯನ್ನು ವ್ಯಕ್ತಪಡಿಸಿದ ಎಷ್ಟೋ ಘಟನೆಗಳು ನಮ್ಮ ಕಣ್ಣಮುಂದಿದೆ. ಹಾಗೆಯೇ ಇಲ್ಲೊಂದು ರೋಚಕ ಕತೆ ಇದೆ.

Advertisement

ಕಾಡಾನೆಯೊಂದು ಮರಣ ಹೊಂದಿದ್ದು, ಮರಣ ಹೊಂದಿದ ಆನೆಯ ಕಳೇಬರವನ್ನು ನೋಡಲು ದೂರದಿಂದ ಆನೆಗಳ ಹಿಂಡೂ ಬಂದಿವೆ. ಇಂತಹದೊಂದು ಘಟನೆ ನಡೆದಿರುವುದು ಭದ್ರ ಅಭಯಾರಣ್ಯ ವ್ಯಾಪ್ತಿಯಲ್ಲಿನ ಹೆಬ್ಬೆ ವಲಯದಲ್ಲಿ. ಕಾಡಾನೆಗಳು ಮೃತಪಟ್ಟ ಆನೆಯ ಕಳೇಬರ ಸಮೀಪ ಕೆಲಕಾಲ ಇದ್ದು ನಂತರ ತೆರಳಿರುವ ದೃಶ್ಯದ ಪೋಟೋಗಳು ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಮನುಷ್ಯರಂತೆ ಮೂಕ ಪ್ರಾಣಿಗಳಿಗೂ ಭಾವನೆಗಳಿವೆ. ಸಂಬಂಧದ ಬೆಲೆ ತಿಳಿಸಿದೆ ಎನ್ನುವುದನ್ನು ಈ ಪೋಟೋಗಳು ಸಾರಿ ಸಾರಿ ಹೇಳುತ್ತಿದೆ.

ಆಧುನಿಕ ಜೀವನ ಭರಾಟೆಯಲ್ಲಿ ಮನುಷ್ಯ ಮನುಷ್ಯತ್ವವನ್ನು ಕಳೆದುಕೊಳ್ಳುತ್ತಿದ್ದಾನೆ. ಆದರೆ, ಭಾವನಾತ್ಮಕ ಗುಣಗಳನ್ನು ಮೂಖ ಪ್ರಾಣಿಗಳು ಇಂದಿಗೂ ಜೀವಂತವಾಗಿರಿಸಿಕೊಂಡಿವೆ. ತಮ್ಮ ಜತೆಯಲ್ಲಿ ಬೆಳೆದ ಕಾಡಾನೆಯೊಂದು ಮೃತಪಟ್ಟಿದ್ದು, ದೂರದಲ್ಲಿ ಎಲ್ಲೋ ಇದ್ದ ಕಾಡಾನೆಗಳ ಹಿಂದು ಅಲ್ಲಿಗೆ ಆಗಮಿಸಿ ನಮನ ಸಲ್ಲಿಸಿರುವುದು ಅಚ್ಚರಿ ಎನಿಸಿವೆ. ಕ್ಯಾಮಾರಾದಲ್ಲಿ ಸೆರೆಯಾಗಿರುವ ಪೋಟೋಗಳು ಮನಕಲಕುವಂತಿವೆ.

ಭದ್ರಾ ಅಭಯಾರಣ್ಯದ ಮುತ್ತೋಡಿ ಹೆಬ್ಬೆ ವಲಯದಲ್ಲಿ ಫೆಬ್ರವರಿ ತಿಂಗಳಲ್ಲಿ ಕಾಡಾನೆಯೊಂದು ಮೃತಪಟ್ಟಿತ್ತು. ಅರಣ್ಯ ಇಲಾಖೆ ಆನೆಯ ಮರಣೋತ್ತರ ಪರೀಕ್ಷೆ ನಡೆಸಿತ್ತು. ಅರಣ್ಯ ಕಾಯ್ದೆಯಂತೆ ಮೃತಪಟ್ಟ ಆನೆಯನ್ನು ಸುಡುವಂತಿಲ್ಲ ಮತ್ತು ಮಣ್ಣಿನಲ್ಲಿ ಹೂತು ಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ಆನೆಯ ಕಳೇಬರವನ್ನು ಅರಣ್ಯದಲ್ಲಿ ಹಾಗೆಯೇ ಬಿಟ್ಟು ಬರಲಾಗಿತ್ತು.

Advertisement

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆನೆಯ ಕಳೇಬರ ಬಿಟ್ಟು ಬರುವ ವೇಳೆ ಆನೆಯ ಕಳೇಬರ ಡಿ ಕಂಪೋಸ್ ಹೇಗೆ ಆಗುತ್ತದೆ. ಹಾಗೂ ಯಾವ ಯಾವ ಪ್ರಾಣಿಗಳು ಕಳೇಬರವನ್ನು ಭಕ್ಷಿಸುತ್ತವೆ ಎಂದು ತಿಳಿಯುವ ಉದ್ದೇಶದಿಂದ ಟ್ರ್ಯಾಪ್ ಕ್ಯಾಮಾರ ಅಳವಡಿಸಿದ್ದರು. ಕೆಲ ದಿನಗಳ ನಂತರ ಕ್ಯಾಮಾರ ಪರಿಶೀಲಿಸಿದಾಗ ಆನೆಯ ಕಳೇಬರದ ಹತ್ತಿರಕ್ಕೆ 17 ಕಾಡಾನೆಗಳು ಬಂದಿದ್ದು, ಕಳೇಬರದ ಸುತ್ತ ತಿರುಗಾಡುತ್ತಿರುವ ದೃಶ್ಯ ಸೆರೆಯಾಗಿದೆ. ಒಂದು ವಂಶದ ಆನೆಗಳು ವರ್ಷಕೊಮ್ಮೆ ಒಂದು ಕಡೆ ಸೇರುತ್ತವೆ. ಆನೆಗಳು ಮೃತಪಟ್ಟರೇ ಉಳಿದ ಆನೆಗಳು ಹುಡುಕಿಕೊಂಡು ಬರುತ್ತವೆ ಎಂದು ಹಿಂದಿನವರು ಹೇಳುತ್ತಿದ್ದರು. ಈಗ ಅದು ನಿಜವಾಗಿದೆ. ಒಟ್ಟಾರೆ ಮನುಷ್ಯರಂತೆ ಪ್ರಾಣಿಗಳು ಭಾನವೆ ಮತ್ತು ಸಂಬಂಧಗಳಿಗೆ ಬೆಲೆ ಕೊಡುತ್ತವೆ ಎನ್ನುವುದು ಟ್ರ್ಯಾಪ್ ಕ್ಯಾಮಾರ ಸೆರೆಯಾಗಿರುವ ದೃಶ್ಯಗಳು ಸಾಕ್ಷೀಕರಿಸುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next