Advertisement

ಸವಾಯಿ ಗಂಧರ್ವ ಕಲಾಭವನ ಉದ್ಘಾಟನೆಗೆ ವಿದ್ಯುತ್‌ ಶಾಕ್‌?

04:57 PM Jun 07, 2018 | Team Udayavani |

ಹುಬ್ಬಳ್ಳಿ: ಕಳೆದ ಆರು ವರ್ಷಗಳಿಂದ ನವೀಕರಣದ ಹಣೆಪಟ್ಟಿ ಕಟ್ಟಿಕೊಂಡ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನ ಸಾರ್ವಜನಿಕ ಬಳಕೆಗೆ ಇಲ್ಲವಾಗಿದೆ. ಭವನದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಪಾಲಿಕೆ ಹಾಗೂ ಹೆಸ್ಕಾಂ ಅಧಿಕಾರಿಗಳ ಸಮನ್ವಯತೆ ಕೊರತೆ ಹಾಗೂ ವಿಳಂಬ ನೀತಿಯಿಂದ ಉದ್ಘಾಟನಾ ಭಾಗ್ಯ ಇಲ್ಲದಂತಾಗಿದೆ.

Advertisement

ನವೀಕರಣಕ್ಕಾಗಿ 2013ರಿಂದಲೇ ಭವನದ ಸಾರ್ವಜನಿಕ ಬಳಕೆ ಸ್ಥಗಿತಗೊಳಿಸಲಾಗಿತ್ತು. ಅಂದಾಜು 4 ಕೋಟಿ ರೂ.ವೆಚ್ಚದಲ್ಲಿ ನವೀಕರಣಗೊಳ್ಳುತ್ತಿರುವ ಭವನಕ್ಕೆ ವಿದ್ಯುತ್‌ ಸಂಪರ್ಕದ ಕಾರ್ಯವೇ ಉದ್ಘಾಟನೆಗೆ ಬಹುತೇಕ ಅಡ್ಡಿಯಾಗಿದೆ ಎಂದು ಹೇಳಲಾಗುತ್ತಿದೆ.

ಭವನದಲ್ಲಿ ಈಗಾಗಲೇ 475 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 6 ವಿವಿಐಪಿ ಆಸನಗಳು, 10 ವಿಐಪಿ ಆಸನಗಳನ್ನು ತರಿಸಲಾಗಿದೆ. ಇನ್ನುಳಿದಂತೆ ಭವನದಲ್ಲಿ ಕೇಂದ್ರೀಕೃತ ಹವಾ ನಿಯಂತ್ರಿತ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಇದಕ್ಕೆ ಬೇಕಾದ ಅಗತ್ಯ ಸಲಕರಣೆಗಳು ಬಂದಿದ್ದು ಅಳವಡಿಸಬೇಕಿದೆ. 200 ಕೆವಿ ಜನರೇಟರ್‌ ಬಂದಿದ್ದು ಅದರ ಅಳವಡಿಕೆ ಕೂಡಾ ಮಾಡಬೇಕಿದೆ.

ಭವನದಲ್ಲಿ ಕೆಳಭಾಗದಲ್ಲಿ 5 ಕೊಠಡಿಗಳು, ಮೇಲ್ಭಾಗದಲ್ಲಿ 1 ದೊಡ್ಡ ಹಾಲ್‌ ಹಾಗೂ 1ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಕೆಳಭಾಗದ ಎರಡು ಕೊಠಡಿಗಳು ಡೆಸ್ರಿಂಗ್‌ ಕೊಠಡಿಗಳಾಗಿದ್ದು, ಒಂದು ವಿವಿಐಪಿ ಕೊಠಡಿ ಇದೆ. ಕಲಾಭವನ ನವೀಕರಣಕ್ಕಾಗಿ ರಾಜ್ಯ ಸರಕಾರ ಪಾಲಿಕೆಗೆ ನೀಡುವ ವಿಶೇಷ ಅನುದಾನದಲ್ಲಿ 2ನೇ 100 ಕೋಟಿ ರೂ. ಅನುದಾನದಲ್ಲಿ 1.75 ಕೋಟಿ ಹಾಗೂ 3ನೇ 100 ಕೋಟಿ ರೂ. ಅನುದಾನದಲ್ಲಿ 1.5 ಕೋಟಿ ರೂ. ನೀಡಲಾಗಿದೆ. ಆರಂಭದಲ್ಲಿ ಕೆಲಸ ವಹಿಸಿಕೊಂಡಿದ್ದ ನಿರ್ಮಿತಿ ಕೇಂದ್ರ ತನ್ನ ಪಾಲಿನ ಕಾಮಗಾರಿ ಮುಕ್ತಾಯಗೊಳಿಸಿದೆ. ಬೆಂಗಳೂರಿನ ಕಲರ್‌ ವೈಬ್ರೇಷನ್‌ ಸಂಸ್ಥೆ ನಂತರದ ಕಾಮಗಾರಿ ಕೈಗೆತ್ತಿಕೊಂಡು ಆಸನ, ಹವಾ ನಿಯಂತ್ರಿತ ವ್ಯವಸ್ಥೆ, ಪ್ಲೋರಿಂಗ್‌, ಪ್ಲಾಸ್ಟರಿಂಗ್‌ ಹಾಗೂ ವಿದ್ಯುತ್‌ ಸೌಲಭ್ಯ ಅಳವಡಿಕೆ ಕಾರ್ಯ ನಡೆಸಬೇಕಿದೆ. ಇದರಲ್ಲಿ ಈಗಾಗಲೇ ಆಸನ ವ್ಯವಸ್ಥೆ ಹಾಗೂ ಸೌಂಡ್‌ ಸಿಸ್ಟಮ್‌ ವ್ಯವಸ್ಥೆ ಮಾಡಿದ್ದು, ಹವಾ ನಿಯಂತ್ರಿತ ಅಳವಡಿಸುವ ಕೆಲಸ ಬಾಕಿ ಇದೆ.

ಇನ್ನುಳಿದಂತೆ ಹೊರಾಂಗಣ ಕಾಮಗಾರಿ ಪಡೆದಿರುವ ಸ್ಥಳೀಯ ಎಸ್‌ಜಿಐ ಸಂಸ್ಥೆಯು ಫೇವರ್ ಕಾಮಗಾರಿ, ಗೇಟ್‌ ಅಳವಡಿಸುವ ಕಾಮಗಾರಿ ಸೇರಿದಂತೆ ಎಲ್ಲ ಕಾಮಗಾರಿ ಭರದಿಂದ ಮಾಡುತ್ತಿದೆ. ಫೇವರ್ ಕಾಮಗಾರಿ ಕೊನೆ ಹಂತದಲ್ಲಿದ್ದು ಗೇಟ್‌ ಅಳವಡಿಸುವ ಕಾಮಗಾರಿ ಮುಕ್ತಾಯಗೊಳಿಸಲಾಗುವುದು ಎನ್ನುತ್ತಾರೆ ಸಿಬ್ಬಂದಿ.

Advertisement

ಕತ್ತಲಲ್ಲೇ ಉದ್ಘಾಟಿಸುತ್ತೇವೆ 
ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಕಲಾಭವನದ ಕಾಮಗಾರಿ ಎಲ್ಲವೂ ಮುಕ್ತಾಯಗೊಂಡಿದ್ದು ಉದ್ಘಾಟನೆಗೆ ಸಿದ್ಧಗೊಂಡಿದೆ. ಆದರೆ ಪಾಲಿಕೆ ಅಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳ ಸಮನ್ವಯ ಕೊರತೆಯಿಂದ ಇದುವರೆಗೂ ಭವನಕ್ಕೆ ವಿದ್ಯುತ್‌ ಅಳವಡಿಸುವ ಕೆಲಸ ಮಾಡಿಲ್ಲ. ಈ ಕುರಿತು ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅಂತಿಮವಾಗಿ ಅಧಿಕಾರಿಗಳಿಗೆ ಕತ್ತಲಲ್ಲೇ ಭವನ ಉದ್ಘಾಟಿಸಲಾಗುವುದು ಎಂದು ಎಚ್ಚರಿಕೆ ಸಹ ನೀಡಲಾಗಿದೆ. 
 ವೀರಣ್ಣ ಸವಡಿ, ಪಾಲಿಕೆ ಸದಸ್ಯ 

ಹೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ
ಈಗಾಗಲೇ ಸವಾಯಿ ಗಂಧರ್ವ ಕಲಾ ಭವನದ ಎಲ್ಲ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಸಣ್ಣ ಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಮುಖ್ಯವಾಗಿ ವಿದ್ಯುತ್‌ ಕನೆಕ್ಷನ್‌ ಆಗಬೇಕಿದ್ದು ಈ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಕೇಳಿಕೊಳ್ಳಲಾಗುವುದು. ಅತೀ ಶೀಘ್ರದಲ್ಲೇ ಭವನದ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು. 
 ಇಬ್ರಾಹಿಂ ಮೈಗೂರ, ಹು-ಧಾ
ಮಹಾನಗರ ಪಾಲಿಕೆ ಆಯುಕ್ತ 

ಭವನದ ಹೊರಭಾಗದ ಅಲ್ಪ ಸ್ವಲ್ಪ ಕೆಲಸ ಬಾಕಿ ಉಳಿದಿದ್ದು ಫೇವರಸ್‌ ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಒಂದು ಭಾಗದ ಗೇಟ್‌ ಅಳವಡಿಕೆ ಬಾಕಿ ಇದ್ದು ಕೂಡಲೇ ಆ ಕೆಲಸ ಮಾಡಲಾಗುವುದು. 
ಶಿವಯೋಗಿ ವಾಳದ,
ಸೈಟ್‌ ಇಂಜನಿಯರ್‌

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next