Advertisement

ಚುನಾವಣೆ ಎಫೆಕ್ಟ್: ಬಸ್‌ ದರ ದುಪ್ಪಟ್ಟು

06:45 AM May 11, 2018 | |

ಬೆಂಗಳೂರು/ಮಂಗಳೂರು:ದೂರದ ಊರಿನಲ್ಲಿ ವಾಸ್ತವ್ಯದಲ್ಲಿದ್ದ ಮಂದಿ ಚುನಾವಣೆ ಸಮಯದಲ್ಲಿ ಮತದಾನಕ್ಕಾಗಿ ತಮ್ಮ ಊರುಗಳಿಗೆ ಬರುವುದು ಸಾಮಾನ್ಯ. ಆದರೆ ಮತದಾನ ಮಾಡಲೆಂದು ಊರಿಗೆ ಹೊರಟ ಮಂದಿ ಖಾಸಗಿ ಬಸ್‌ ನಲ್ಲಿ ಆಗಮಿಸಲು ಸಾಮಾನ್ಯ ದಿನಗಳಲ್ಲಿ ಇದ್ದ ದರಕ್ಕಿಂತ ದುಪ್ಪಟ್ಟು ಪಾವತಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದ. ಕನ್ನಡ ಮತ್ತು ಉಡುಪಿ ಜಿಲ್ಲೆಯ ಅನೇಕ ಮಂದಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ಮತದಾನಕ್ಕೆಂದು ಶುಕ್ರವಾರ ಊರಿಗೆ ಆಗಮಿಸಲು ಅನೇಕ ಮಂದಿ ಬಸ್‌ ಟಿಕೆಟ್‌ ಗಾಗಿ ಪರದಾಡುತ್ತಿದ್ದಾರೆ. ಖಾಸಗಿ, ಸರಕಾರಿ ಬಸ್‌ ಗಳಲ್ಲಿ ಈಗಾಗಲೇ ಟಿಕೆಟ್‌ ಮಾರಾಟವಾಗಿದ್ದು, ಒಂದೆರಡು ಹೆಚ್ಚುವರಿ ಬಸ್‌ ಗಳು ಮಾತ್ರ ಬಸ್‌ ಬುಕ್ಕಿಂಗ್‌ ವೆಬ್‌ ಸೈಟ್‌ನಲ್ಲಿ ನಮೂದಾಗಿದೆ, ಉಳಿದ ಹೆಚ್ಚುವರಿ ಬಸ್‌ಗಳ ವಿವರ ಲಭ್ಯವಿಲ್ಲ.

Advertisement

ಸ್ಲೀಪರ್‌ ಬಸ್‌ ಪ್ರಯಾಣಕ್ಕೆ ಒಬ್ಬರಿಗೆ 2,000 ರೂ!
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವ ಖಾಸಗಿ ಸ್ಲೀಪರ್‌ ಬಸ್‌ನಲ್ಲಿ ಒಬ್ಬರು ಪ್ರಯಾಣಿಕನಿಗೆ 600 ರೂ.ನಿಂದ 700 ರೂ.ವರೆಗೆ ದರ ಇರುತ್ತದೆ. ಆದರೆ ಚುನಾವಣೆಯ ಸಂಬಂಧ ಸೀಟುಗಳ ಬೇಡಿಕೆ ಹೆಚ್ಚಿರುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಊರಿಗೆ ಆಗಮಿಸುವುದರಿಂದ ಖಾಸಗಿ ಬಸ್‌ ದರ ಕೂಡ ದುಪ್ಪಟ್ಟು ಆಗಿದೆ. ಕೆಲ ಖಾಸಗಿ ಸ್ಲೀಪರ್‌ ಬಸ್‌ಗಳಲ್ಲಿ ಒಬ್ಬ ಪ್ರಯಾಣಿಕನಿಗೆ ಈಗ 2000 ರೂ. ನಿಗದಿಯಾಗಿದೆ. ಕರಾವಳಿಗೆ ಬರುವ ಬಹುತೇಕ ಸ್ಲೀಪರ್‌ ಖಾಸಗಿ ಬಸ್‌ ಗಳಲ್ಲಿ ಸಿಂಗಲ್‌ ಸ್ಲೀಪರ್‌ ಸೀಟುಗಳು ಈಗಾಗಲೇ ಬುಕ್‌ ಆಗಿವೆ.

ಕೆ.ಎಸ್‌.ಆರ್‌.ಟಿ.ಸಿ.ಯಲ್ಲಿಯೂ ಅದೇ ಕಥೆ
ಕೆ.ಎಸ್‌.ಆರ್‌.ಟಿ.ಸಿ. ಬಸ್‌ಗಳಲ್ಲಿ ಕೂಡ ಆಸನಗಳು ಬಹುತೇಕ ಬುಕ್ಕಿಂಗ್‌ ಆಗಿದ್ದು, ಬಸ್‌ ದರದಲ್ಲೂ ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಐರಾವತ ಬಸ್‌ ನಲ್ಲಿ ಮಂಗಳೂರಿಗೆ ಆಗಮಿಸಲು ಒಬ್ಬರಿಗೆ ಸುಮಾರು 753 ರೂ. ಇತ್ತು. ಆದರೆ, ಮೇ 11ರಂದು ಅದರ ದರ 819 ರೂ.ಗೆ ಏರಿಕೆಯಾಗಿದೆ. ಅದರಂತೆಯೇ ಎಸಿ ಸ್ಲೀಪರ್‌ ಬಸ್‌ ನಲ್ಲಿ ಒಬ್ಬರಿಗೆ 902 ರೂ ಇತ್ತು, 982 ರೂ.ಗೆ ಏರಿಕೆಯಾಗಿದೆ ಚುನಾವಣೆಯ ಸಲುವಾಗಿ ಕೆ.ಎಸ್‌.ಆರ್‌.ಟಿ.ಸಿ. ಬೆಂಗಳೂರಿನಿಂದ ಮಂಗಳೂರಿಗೆ ಈಗಾಗಲೇ ಹೆಚ್ಚುವರಿ ಬಸ್‌ ಓಡಿಸಲು ನಿರ್ಧರಿಸಿದೆ. ಚುನಾವಣೆ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಡುವ ಹೆಚ್ಚುವರಿ ಬಸ್‌ಗಳಲ್ಲಿ ಹೆಚ್ಚಿನ ಹೆಚ್ಚಿನವು ರವಿವಾರ ಪುನಃ ಬೆಂಗಳೂರಿಗೆ ತೆರಳಲಿವೆ. 

ಬೇಸಗೆ ರಜೆ ಪರಿಣಾಮ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಇರುವುದರಿಂದ ಅನೇಕ ಮಂದಿ ದೂರದ ಊರುಗಳಿಗೆ ಪ್ರವಾಸಕ್ಕೆಂದು ತೆರಳುತ್ತಾರೆ. ಆದ್ದರಿಂದ ಸಾಮಾನ್ಯ ದಿನಕ್ಕೆ ಹೋಲಿಕೆ ಮಾಡಿದರೆ ಬಸ್‌ ಗಳಲ್ಲಿ ಹೆಚ್ಚು ರಶ್‌ ಇರುತ್ತದೆ. ಅಲ್ಲದೆ ಈ ಬಾರಿ ಮತದಾನ ಶನಿವಾರ ಆದುದರಿಂದ ರವಿವಾರ ವಾರದ ರಜೆ ದೂರದ ಊರಿನಲ್ಲಿರುವ ಹೆಚ್ಚಿನ ಮಂದಿ ಮತದಾನಕ್ಕೆಂದು ಆಗಮಿಸುತ್ತಿದ್ದಾರೆ. ಇದರಿಂದಾಗಿ ಬಸ್‌ಗಳಂತೆಯೇ ರೈಲಿನಲ್ಲಿಯೂ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next