Advertisement

Election: ಪಂಚ ರಾಜ್ಯಗಳಲ್ಲಿ ಪ್ರಚಾರದ್ದೇ ಅಬ್ಬರ

12:17 AM Nov 02, 2023 | Pranav MS |

ಪಂಚ ರಾಜ್ಯಗಳ ಚುನಾವಣೆಯ ಕಣ ರಂಗೇರುತ್ತಿದೆ. ಕಾಂಗ್ರೆಸ್‌, ಬಿಜೆಪಿ ಪ್ರಮುಖವಾಗಿ ಆಯಾ ಪಕ್ಷಗಳ ಆಡಳಿತ, ಪಕ್ಷಗಳ ನಿಲುವುಗಳನ್ನು ಮುಂದಿಟ್ಟು ಕೊಂಡು ಪ್ರತೀ ದಿನವೂ ಪರಸ್ಪರ ವಾಗ್ಧಾಳಿ ನಡೆಸುತ್ತಿದ್ದಾರೆ. ಬುಧವಾರ ಐದೂ ರಾಜ್ಯಗಳಲ್ಲಿ ನಡೆದ ಪ್ರಮುಖ ನಾಯಕರ ಪ್ರಚಾರದ ಝಲಕ್‌ ಇಲ್ಲಿದೆ.

Advertisement

ರಾಜಸ್ಥಾನ, ದೇಶಕ್ಕೆ ಕಾಂಗ್ರೆಸ್‌ ಹಿತ: ಗೆಹ್ಲೋಟ್‌
ಈ ತಿಂಗಳ 25ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆ ಕೇವಲ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಪ್ರಧಾನವಾದದ್ದು ಎಂದು ಕಾಂಗ್ರೆಸ್‌ ನಾಯಕ, ಸಿಎಂ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ. “ನಮ್ಮ ಪಕ್ಷ ರಾಜಸ್ಥಾನಕ್ಕೆ ಮಾತ್ರವಲ್ಲ, ದೇಶಕ್ಕೇ ಅಗತ್ಯವಾಗಿದೆ’ ಎಂದು ಜೈಪುರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಹೇಳಿಕೊಂಡ್ಡಾರೆ. “ನ.25ರಂದು ನಡೆಯಲಿರುವ ಮತದಾನದಲ್ಲಿ ನಮ್ಮ ಪಕ್ಷ ಜಯಗಳಿಸುವ ವಿಶ್ವಾಸವಿದೆ. ಅದು ರಾಜಸ್ಥಾನ ಮಾತ್ರವಲ್ಲ, ದೇಶದ ಭವಿಷ್ಯವನ್ನೇ ನಿರ್ಧರಿಸಲಿದೆ. ಹೀಗಾಗಿ ನಮ್ಮ ಪಕ್ಷದ ನಾಯಕರು ಒಗ್ಗಟ್ಟಾಗಿ ದುಡಿಯಬೇಕಾಗಿದೆ. ಟಿಕೆಟ್‌ ವಿತರಣೆಯಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ. ಎಂದರು. ಉ.ಪ್ರ.ದಲ್ಲಿ ಬುಲ್ಡೋಜರ್‌ ಬಳಕೆ ಮಾಡಿ, ಅಪರಾಧಿಗಳ ಮನೆ, ಆಸ್ತಿ ಧ್ವಂಸ ಮಾಡುವ ವ್ಯವಸ್ಥೆಯನ್ನು ಗೆಹ್ಲೋಟ್‌ ಟೀಕಿಸಿದರು.

“ದಲಿತರ ಮೇಲೆ ದೌರ್ಜನ್ಯ”
ಪ್ರಧಾನಿ ಮೋದಿಯವರ ರಾಜ್ಯ ಗುಜರಾತ್‌ ಸೇರಿದಂತೆ ಉತ್ತರ ಭಾರತದಾದ್ಯಂತ ದಲಿತರ ಮೇಲೆ ನಿರಂತರವಾಗಿ ಹಲ್ಲೆ ನಡೆಸಲಾಗುತ್ತಿದೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ದೂರಿದ್ದಾರೆ. ಆ ಭಾಗದಲ್ಲಿ ದಲಿತರ ಮೇಲೆ ದೌರ್ಜನ್ಯಗಳನ್ನು ನೋಡಿ ಯೇ ರಾಜ್ಯದಲ್ಲಿ ಅಂಥ ಸ್ಥಿತಿ ನಿರ್ಮಾಣ ಆಗಬಾರದು ಎಂದು ದಲಿತ ಬಂಧು ಯೋಜನೆ ಜಾರಿಗೊಳಿಸಿದ್ದಾಗಿ ಹೇಳಿದರು. ತೆಲಂ ಗಾಣದ ವಿವಿಧೆಡೆ ರ್ಯಾಲಿಗಳಲ್ಲಿ ಮಾತನಾಡಿದ ಅವರು ಮೋದಿ ಸರಕಾರದ ಗೊತ್ತು ಗುರಿ ಇಲ್ಲದ ಆರ್ಥಿಕ ನೀತಿಗಳಿಂದ ಎಲ್‌ಐಸಿ ಸೇರಿದಂತೆ ಸರಕಾರಿ ಸಂಸ್ಥೆಗಳನ್ನು ಮಾರಾಟ ಮಾಡುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಮೊದಲು ಶೇ.2 ಮತ ಗಳಿಸಿ: ರಾಹುಲ್‌
ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ಒಬಿಸಿ ಸಮುದಾಯದ ವ್ಯಕ್ತಿಯನ್ನು ಸಿಎಂ ಹುದ್ದೆಗೆ ಏರಿಸುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಯನ್ನು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ತೆಲಂಗಾಣದ ಕಲ್ವಾಕುರ್ತಿಯಲ್ಲಿ ಮಾತನಾಡಿದ ಅವರು ಬಿಜೆಪಿ ಮೊದಲು ಶೇ.2 ಮತಗಳನ್ನು ಪಡೆದುಕೊಳ್ಳಲಿ. ಆ ಮೇಲೆ ಸಿಎಂ ಹುದ್ದೆಗೆ ಯಾರನ್ನು ನೇಮಕ ಮಾಡುವ ಬಗ್ಗೆ ಚಿಂತಿಸಲಿ. ಮೋದಿ ಅಮೆರಿಕಕ್ಕೆ ತೆರಳಿ, ಅಲ್ಲಿ ಒಬಿಸಿ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆಯೂ ವಾಗ್ಧಾನ ಮಾಡುತ್ತಾರೆ ಎಂದು ಚಟಾಕಿ ಹಾರಿಸಿದ್ದಾರೆ.

ಎಲ್ಲದಕ್ಕೂ ಕಾಂಗ್ರೆಸ್‌ ಕಾರಣ
ದೇಶದ ಎದುರಿಸುವ ಪ್ರತೀ ಸಮಸ್ಯೆಗಳಿಗೆ ಕಾಂಗ್ರೆಸ್‌ ಪ್ರಧಾನ ಕಾರಣವಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದಾರೆ. ರಾಜಸ್ಥಾನದ ತಿಜಿರಾ ಎಂಬಲ್ಲಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಮುನ್ನ ಆಯೋಜಿಸಲಾಗಿದ್ದ ಬೃಹತ್‌ ರ್ಯಾಲಿಯಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶದ ಒಂದೊಂದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಯಾವ ರಾಜ್ಯ ದಲ್ಲಿ ಬಿಜೆಪಿ ಅಥವಾ ಮಿತ್ರ ಪಕ್ಷಗಳ ಸರಕಾರ ಇರುವಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ಹೇಳಿದ್ದಾರೆ. ರಾಜಸ್ಥಾನದಲ್ಲಿ ಸಿಎಂ ಅಶೋಕ್‌ ಗೆಹ್ಲೋಟ್‌ ತುಷ್ಟೀಕರಣ ನೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಎಷ್ಟು ದಿನಗಳ ವರೆಗೆ ಇಂಥ ನೀತಿಗಳು ಮುಂದುವರಿಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Advertisement

ಬಡವರಿಗೆ ಅಧಿಕಾರ ಕೊಡದ ಮೋದಿ: ಖರ್ಗೆ
ಪ್ರಧಾನಿ ಮೋದಿಯವರು ದೇಶದಲ್ಲಿರುವ ಬಡ ಜನರಿಗೆ ಯಾವುದೇ ಕಾರಣಕ್ಕೂ ಅಧಿಕಾರ ಸಿಗಬಾರದು ಎಂಬ ನಿಲುವನ್ನು ಹೊಂದಿದ್ದಾರೆ. ಹೀಗೆಂದು ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಛತ್ತೀಸ್‌ಗಢದ ಸುಕ್ಮಾದಲ್ಲಿ ಆಯೋಜಿಸ ಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವ ಕಾಂಗ್ರೆಸ್‌ ಬುಡ ಕಟ್ಟು ಸಮುದಾಯದವರ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸಿದೆ ಎಂದರು. ಮೋದಿಯವರು ಹೊಸ ಸಂಸತ್‌ ಭವನಕ್ಕೆ ಶಿಲಾನ್ಯಾಸ ನಡೆಸಿದಾಗ ರಾಷ್ಟ್ರಪತಿಯಾಗಿದ್ದ ರಾಮನಾಥ್‌ ಕೋವಿಂದ್‌ಅವರಿಗೆ ಆಹ್ವಾನ ನೀಡಿರಲಿಲ್ಲ ಎಂದರು.

ಮಣಿಪುರಕ್ಕೆ ಬೇಕಿದೆ ಹೃದಯದ ಮಾತುಕತೆ
ಈಶಾನ್ಯ ಮಣಿಪುರಕ್ಕೆ ಈಗ ಶಾಂತಿ ಮತ್ತು ನೆಮ್ಮದಿಯ ಅಗತ್ಯವಿದೆ. ಅದಕ್ಕಾಗಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಾಯ ಕರು ಒಟ್ಟಾಗಿ ಕುಳಿತು ಮಾತುಕತೆ ನಡೆಸಿ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಸಲಹೆ ಮಾಡಿದ್ದಾರೆ. ಮ್ಯಾನ್ಮಾರ್‌ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಮಿಜೋರಾಂನ ಹಲವು ಸ್ಥಳಗಳಲ್ಲಿ ಬುಧವಾರ ಅವರು ಚುನಾವಣ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದರು. “ಮಣಿಪುರದಲ್ಲಿ ಇರುವ ಎರಡು ಸಮುದಾಯಗಳಿಗೆ ಹಿಂಸೆ ತರವಲ್ಲ. ಎರಡೂ ಸಮುದಾಯಗಳ ಮುಖಂಡರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಯಾವುದೇ ಸಮಸ್ಯೆ ಪರಿಹಾರಕ್ಕೆ ಹಿಂಸೆ ಮಾರ್ಗಸೂಚಕ ಆಗಲಾರದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next