Advertisement

ವಲಸೆ ಮಕ್ಕಳಿಗೆ ಶಿಕ್ಷಣ ಖಾತರಿ: ಸರ್ಕಾರದಿಂದ ನೀತಿ ಜಾರಿ

10:54 PM Dec 23, 2019 | Lakshmi GovindaRaj |

ಬೆಂಗಳೂರು: ರಾಜ್ಯದ ವಲಸೆ ಮಕ್ಕಳು ಹಾಗೂ ವಲಸೆ ಕಾರ್ಮಿಕರ ಮಕ್ಕಳ ಪ್ರಾಥಮಿಕ ಶಾಲಾ ಶಿಕ್ಷಣದ “ಖಾತರಿ’ಗೆ ಮುದ್ರೆ ಒತ್ತಿರುವ ರಾಜ್ಯ ಸರ್ಕಾರ, ಇದಕ್ಕಾಗಿ ಸಮಗ್ರ ನೀತಿ ಜಾರಿಗೆ ತಂದಿದೆ. ಈ ಮೂಲಕ ವಲಸೆ ಹಾಗೂ ಶಾಲೆಯಿಂದ ದೂರ ಉಳಿದ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ “ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 ಹಾಗೂ “ಕರ್ನಾಟಕ ಮಕ್ಕಳ ಕಡ್ಡಾಯ ಹಾಗೂ ಉಚಿತ ಶಿಕ್ಷಣ ಹಕ್ಕು ನಿಯಮಗಳು-2012’ರ ಅನುಷ್ಠಾನದಲ್ಲಿ ಇದ್ದ ಕ್ಲಿಷ್ಟಕರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.

Advertisement

ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಕಾನೂನು ಹೋರಾಟ ಹಾಗೂ ಹೈಕೋರ್ಟ್‌ ಮಧ್ಯ ಪ್ರವೇಶಿಸಿ ಗಡುವು ನೀಡಿದ್ದರ ಪರಿಣಾಮ ಆರ್‌ಟಿಇ ಕಾಯ್ದೆ ಅನುಷ್ಠಾನ ಕುರಿತ “ವಲಸೆ ಮಕ್ಕಳು ಹಾಗೂ ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣ ನೀತಿ-2019’ನ್ನು ಸರ್ಕಾರ ಜಾರಿಗೆ ತಂದಿದೆ. ಈ ನೀತಿಯಿಂದಾಗಿ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗುವ ವಲಸೆ ಮಕ್ಕಳು ಹಾಗೂ ವಲಸೆ ಕಾರ್ಮಿಕರ ಮಕ್ಕಳನ್ನು ಶಾಲಾ ಶಿಕ್ಷಣದ ಮುಖ್ಯ ವಾಹಿನಿಗೆ ತರಲು ಸಾಧ್ಯವಾಗಲಿದೆ.

ಸಂವಿಧಾನದ ಆಶಯ ಹಾಗೂ ಆರ್‌ಟಿಇ ಕಾಯ್ದೆ ಮೂಲ ತತ್ವದಂತೆ 6ರಿಂದ 14 ವರ್ಷದ ಯಾವೊಬ್ಬ ಮಗು ಶಿಕ್ಷಣದಿಂದ ವಂಚಿತನಾಗಬಾರದು. ಮುಖ್ಯವಾಗಿ ಆರ್ಥಿಕವಾಗಿ ದುರ್ಬಲರಾದ ಹಾಗೂ ಅವಕಾಶ ವಂಚಿತ ವರ್ಗದ ಮಕ್ಕಳಿಗೆ ಶಿಕ್ಷಣದಲ್ಲಿ ತಾರತಮ್ಯ ಮಾಡಬಾರದು. ಆರ್‌ಟಿಇ ಕಾಯ್ದೆಯ “ಅವಕಾಶ ವಂಚಿತ ವರ್ಗದ ಮಕ್ಕಳು’ ಎಂಬ ವರ್ಗದ ವ್ಯಾಪ್ತಿಗೆ ವಲಸೆ ಮಕ್ಕಳನ್ನು ತಂದು ಈ ನೀತಿ ಜಾರಿಗೆ ತರಲಾಗಿದೆ.

ವಲಸೆ ಮಕ್ಕಳಿಗೆ ಸಂಬಂಧಿಸಿದಂತೆ ಆರ್‌ಟಿಇ ಕಾಯ್ದೆ-2009ರ ಅನುಷ್ಠಾನದಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಶಾಲಾ ಶಿಕ್ಷಣದಿಂದ ಅವಕಾಶ ವಂಚಿತ ಎಲ್ಲ ವಲಸೆ ಮಕ್ಕಳು, ವಲಸೆ ಕಾರ್ಮಿಕರ ಮಕ್ಕಳು ಅಥವಾ ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತಂದು ಶಾಲಾ ಶಿಕ್ಷಣ ಕೊಡಿಸುವುದು ಈ ನೀತಿಯ ಮುಖ್ಯ ಉದ್ದೇಶ. ಸರ್ಕಾರದಿಂದ ನೀತಿ ಜಾರಿಗೆ ತರಲಾಗಿದೆ.

ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ನೀತಿಯ ಅನುಷ್ಠಾನದ ಹೊಣೆ ಹೊತ್ತ ಸರ್ವ ಶಿಕ್ಷ ಅಭಿಯಾನದ ಯೋಜನಾ ನಿರ್ದೇಶಕ ಎಂ.ಟಿ. ರೇಜು ಹೇಳಿದ್ದಾರೆ. ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಡಿ.9ರಂದು ಅಂತಿಮ ನೀತಿ ಪ್ರಕಟಿಸಿದ್ದು, ಇದರಲ್ಲಿ ಶಿಕ್ಷಣ ಇಲಾಖೆ ಜೊತೆಗೆ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಕಂದಾಯ ಆರೋಗ್ಯ ಇಲಾಖೆಗಳು ಒಳಗೊಂಡಂತೆ ನೀತಿಯ ಅನುಷ್ಠಾನಕ್ಕೆ ಪ್ರತಿಯೊಂದು ಇಲಾಖೆಗಳಿಗೆ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ. ಸಾರ್ವಜನಿಕ ಸಹಭಾಗಿತ್ವದ ಉದ್ದೇಶದಿಂದ ನಾಗರಿಕ ಸಂಘ-ಸಂಸ್ಥೆಗಳಿಗೂ ಹೊಣೆಗಾರಿಕೆ ನೀಡಲಾಗಿದೆ. ಎಲ್ಲ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನೀತಿಯ ಅನುಷ್ಠಾನದ ಮೇಲ್ವಿಚಾರಣೆ ವಹಿಸಲಿದ್ದು, ಇಲಾಖೆಗಳ ನಡುವಿನ ಗೊಂದಲ-ಸಮಸ್ಯೆಗಳ ಪರಿಹಾರಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡಲಿದೆ.

ಉದ್ಯೋಗ ಅರಸಿ ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ವಲಸೆ ಹೋಗುವ ಹಾಗೂ ಬರುವ ಕುಟುಂಬಗಳ ಪೋಷಕರ ಮಕ್ಕಳ ಶಿಕ್ಷಣ, ಆರೋಗ್ಯ, ಮೂಲಭೂತ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ “ಅಂತರರಾಜ್ಯ ವಲಸೆ ಮಹಳೆಯರು (ಉದ್ಯೋಗ ನಿಯಂತ್ರಣ ಮತ್ತು ಸೇವೆಗಳ ಸ್ಥಿತಿಗತಿ) ಕಾಯ್ದೆ-1979, “ಗುತ್ತಿಗೆ ಕಾರ್ಮಿಕರು (ನಿಯಂತ್ರಣ ಮತ್ತು ರದ್ದತಿ) ಕಾಯ್ದೆ-1970,

“ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ನಿಯಂತ್ರಣ) ಕಾಯ್ದೆ-1996, “ಕನಿಷ್ಠ ವೇತನ ಕಾಯ್ದೆ-1948′ “ಬಾಲ ನ್ಯಾಯ (ಮಕ್ಕಳ ಅರೈಕೆ ಮತ್ತು ಸಂರಕ್ಷಣೆ) ಕಾಯ್ದೆ, “ಜೀತ ಪದ್ದತಿ ನಿಷೇಧ ಕಾಯ್ದೆ-1976′, ಆರ್‌ಟಿಇ ಕಾಯ್ದೆ-2009′, ಅನೈತಿಕ ಸಾಗಾಣಿಕೆ (ತಡೆಗಟ್ಟುವಿಕೆ) ಕಾಯ್ದೆ-1956 ಹಾಗೂ ಪೋಕ್ಸೋ ಕಾಯ್ದೆಯಡಿಯ ವಲಸೆ ಮಕ್ಕಳ ಶಿಕ್ಷಣದ ಕಾನೂನು ಅವಕಾಶಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಲು ಈ ನೀತಿಯಿಂದ ಸಾಧ್ಯವಾಗಲಿದೆ.

ವಲಸೆ ಮಕ್ಕಳು ಹಾಗೂ ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣ ನೀತಿ-2019 ಅನ್ನು ಜಾರಿಗೆ ತರಲಾಗಿದೆ. ಅದರ ಅನುಷ್ಠಾನಕ್ಕೆ ತನ್ನದೇ ಆದ ಸಮಯಾವಕಾಶ ಬೇಕಾಗುತ್ತದೆ. ನೀತಿಯು ಸದ್ಯ ಅನುಷ್ಠಾನದ ಹಾದಿಯಲ್ಲಿದೆ.
-ಡಾ. ಕೆ.ಜಿ. ಜಗದೀಶ್‌, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next