Advertisement

ಲಂಚದ ಆರೋಪ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಲಿಂಗರಾಜು ಅಮಾನತು

07:40 PM Mar 05, 2021 | Team Udayavani |

ಬೆಂಗಳೂರು : ಸಾರ್ವಜನಿಕರು ಮತ್ತು ಸ್ಟೋನ್ ಕ್ರಷರ್ ಮಾಲೀಕರಿಗೆ ಲಂಚದ ಬೇಡಿಕೆ ಇಟ್ಟು,  ಅನಗತ್ಯವಾಗಿ  ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಬಿ.ಎಂ.ಲಿಂಗರಾಜು ಅವರನ್ನು ಅಮಾನತು ಮಾಡಲಾಗಿದೆ.

Advertisement

ಇದೇ ಆರೋಪದ ಮೇಲೆ ಎರಡು ವಾರಗಳ ಹಿಂದೆಯಷ್ಟೇ ಫಯಾಜ್ ಅಹಮ್ಮದ್ ಖಾನ್ ಎಂಬ ಭೂ ವಿಜ್ಞಾನಿಯನ್ನು ಸೇವೆಯಿಂದ ಅಮಾನತುಪಡಿಸಲಾಗಿತ್ತು. ಪ್ರಸ್ತುತ  ಬಿ.ಎಂ.ಲಿಂಗರಾಜು ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿ ಮತ್ತು  ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಮೇಲೆ ಆರೋಪ ಕೇಳಿಬಂದಿದ್ದರಿಂದ ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು.

ಈ ಹಿಂದೆ ಬಾಗಲಕೋಟೆ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಸ್ಟೋನ್ ಕ್ರಷರ್ ಮಾಲೀಕರು ಮತ್ತು ಸಾರ್ವಜನಿಕರಿಂದ  ಲಂಚಕಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ  ಎದುರಿಸುತ್ತಿದ್ದರು.

ಗಣಿ ಮತ್ತು  ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಯವರು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿದ ವೇಳೆ ಬಿ.ಎಂ.ಲಿಂಗರಾಜು ಅವರ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಸಾರ್ವಜನಿಕರು ಮತ್ತು ಸ್ಟೋನ್ ಕ್ರಷರ್ ಮಾಲೀಕರು ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವರು ಇಲಾಖಾ ತನಿಖೆಗೆ ಆದೇಶ ಮಾಡಿದ್ದರು. ಲಿಂಗರಾಜು ವಿರುದ್ಧ ತನಿಖೆ ನಡೆಸಿದ ವೇಳೆ ಗುಲ್ಬರ್ಗ ಜಿಲ್ಲೆ, ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್‍ನಿಂದ ಹೆಚ್ಚುವರಿ ರಾಜಧನ ಪಡೆದಿರುವುದು ಸಾಬೀತಾಗಿದೆ.

Advertisement

ಇದೇ ರೀತಿ  ಸುರಕ್ಷಿತ ವಲಯದ ಅಂತರ ಕಡಿಮೆಯಿದೆ ಎಂದು ನವೀಕರಣ ಅರ್ಜಿಯನ್ನು ತಿರಸ್ಕರಿಸಿ  ಕೆ.ಎಸ್.ಕಂಕಲೆ ಎಂಬುವರಿಂದ

₹ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಜಯದೇವ ಸ್ಟೋನ್ ಕ್ರಷರ್ ಅವರಿಂದ ಕ್ರಷರ್ ಘಟಕದ ನವೀಕರಣವನ್ನು, ಸುರಕ್ಷಿತವಲ್ಲದ ಕಾರಣ ನವೀಕರಣಕ್ಕೆ  ಸಾಕಷ್ಟು ಸತಾಯಿಸಿ ದೊಡ್ಡ ಮಟ್ಟದ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಹ ತನಿಖೆಯಲ್ಲಿ ಗೊತ್ತಾಗಿದೆ.

ಲಿಂಗರಾಜು ಅವರಿಗೆ ದೊಡ್ಡ ಮಟ್ಟದ ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ  ಬ್ಯಾಂಕ್‍ನಿಂದ ಸಾಲ ಪಡೆದು ಆಸ್ತಿಪಾಸ್ತಿ ಮಾರಾಟ ಮಾಡಿ ಗುತ್ತಿಗೆದಾರರು ಆತ್ಮಹತ್ಯೆಗೆ ಪ್ರಯತ್ನಿಸಿರುವುದು ರುಜುವಾತಾಗಿದೆ.

ಅಧಿಕೃತ ಖನಿಜ ಪರಾವನಿಗೆ ಇಲ್ಲದೆ ಕಟ್ಟಡ ಕಲ್ಲು,ಕಲ್ಲಿನ ಸಾಗಾಣಿಕೆ, ದಾಸ್ತಾನು ಮಾಡಿರುವ ಜಯದೇವ ಸ್ಟೋನ್ ಕ್ರಷರ್ ಇವರಿಗೆ ನೋಟಿಸ್ ಜಾರಿ ಮಾಡಿ ಲಿಂಗರಾಜು ₹ 13.17 ಲಕ್ಷ ದಂಡ ಪಾವತಿಸಲು ನೋಟಿಸ್ ಜಾರಿ ಮಾಡಿದ್ದರು.

ಜಯದೇವ ಸ್ಟೋನ್ ಕ್ರಷರ್‍ನ್ನು ರದ್ದು ಮಾಡಿ ದುಬಾರಿ ದಂಡ ವಿಸಿರುವ ಕ್ರಮವನ್ನು ಪ್ರಾದೇಶಿಕ ಆಯುಕ್ತರು ರದ್ದುಪಡಿಸಿರುವುದು ಲಿಂಗರಾಜು ಕರ್ತವ್ಯ ಲೋಪಕ್ಕೆ ಮತ್ತೊಂದು ಸಾಕ್ಷಿ.

ವೆಂಕಟೇಶ್ವರ ಸ್ಟೋನ್ ಕ್ರಷರ್ಸ್ ಅವರ ದೂರು ಅರ್ಜಿಯನ್ನು ಅವಲೋಕಿಸಿದಾಗ ಕ್ರಷರ್ ನವೀಕರಣ ಮಾಡುವಾಗ ಲಿಂಗರಾಜು ಸತಾಯಿಸಿರುವುದು, ಮುಂದಿನ ಪರಾವನಗಿಯನ್ನು ನ್ಯಾಯಲಯದಿಂದಲೇ ಪಡೆಯಿರಿ ಎಂದು ಸೂಚನೆ ಕೊಟ್ಟಿದ್ದರು.

ಈ ಸಂಬಂಧ ಶ್ರದ್ದಾನಂದ ಸ್ಟೋನ್ ಕ್ರಷರ್ಸ್ ಅವರು ಉಚ್ಛ ನ್ಯಾಯಾಲಯದ ಮೊರೆ ಹೋಗಿ ಕ್ರಷರ್‍ನ್ನು ರದ್ದುಪಡಿಸಿದ ಆದೇಶವನ್ನು ಪ್ರಾದೇಶಿಕ ಆಯುಕ್ತರು ರದ್ದುಪಡಿಸಿ ಕಾನೂನು ಬದ್ದವಾಗಿ ಕ್ರಮ ಜರುಗಿಸಲು ನಿರ್ದೇಶನ ನೀಡಿದ್ದರು.

ಇದೇ ರೀತಿ  ಹಲವಾರು ಸ್ಟೋನ್ ಕ್ರಷರ್ ಮಾಲೀಕರಿಂದ ಲಂಚ ನೀಡಲು ಆಮಿಷವೊಡ್ಡಿದ್ದು ತನಿಖೆಯಿಂದ ಗೊತ್ತಾಗಿದೆ. ಈವೆಲ್ಲವನ್ನು ಪರಿಗಣಿಸಿ ಉಪನಿರ್ದೇಶಕ ಬಿ.ಎಂ.ಲಿಂಗರಾಜು ಅವರನ್ನು ಸೇವೆಯಿಂದ ಅಮಾನತು ಪಡಿಸಲಾಗಿದೆ.

ಅಮಾನತು ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next